Advertisement

ಕನಿಷ್ಟ ವೇತನ-ಉದ್ಯೋಗ ಭದ್ರತೆ ಕಲ್ಪಿಸಲು ಆಗ್ರಹ

04:34 PM Jun 16, 2019 | Naveen |

ಚಿತ್ರದುರ್ಗ: ಕನಿಷ್ಠ ವೇತನ, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನೆ ಕೆಲಸ ಮಾಡುವ ನೂರಾರು ಮಹಿಳೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಅಖೀಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಹಾಗೂ ಕೊನ್‌ ಫೆಡರೇಶನ್‌ ಆಫ್‌ ಫ್ರೀ ಟ್ರೇಡ್‌ ಯೂನಿಯನ್ಸ್‌ ಆಫ್‌ ಇಂಡಿಯಾ ನೇತೃತ್ವದಲ್ಲಿ ದಾವಣಗೆರೆ ರಸ್ತೆಯ ಯೂನಿಯನ್‌ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮನೆ ಕೆಲಸ ಮಾಡುವ ಮಹಿಳೆಯರಲ್ಲಿ ಕೆಲವರು ಡೊಳ್ಳು ಬಾರಿಸಿದರೆ, ಇನ್ನು ಕೆಲವರು ಭಜನೆ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಬಳಿ ತೋಡಿಕೊಂಡರು.

ಮನೆ ಕೆಲಸ ಮಾಡುವ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಮನೆ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಇಂದಿಗೂ ಜೀವನ ಭದ್ರತೆಯಿಲ್ಲದಂತಾಗಿದೆ. ಇಪಿಎಫ್‌, ಪಿಎಫ್‌, ಕನಿಷ್ಠ ವೇತನ ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ವಾರಕ್ಕೊಂದು ರಜೆ ನೀಡಬೇಕು. ವೇತನ ಸಹಿತ ರಜೆ ಘೋಷಣೆ ಮಾಡಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು. ಕೆಲವು ಮನೆಗಳಲ್ಲಿ ನಡೆಯುವ ದೌರ್ಜನ್ಯವನ್ನು ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೆ ಅನೇಕ ಬಾರಿ ಮನವಿ ನೀಡಿದ್ದರೂ ಇದುವರೆರೆಗೂ ಪ್ರಯೋಜನವಾಗಿಲ್ಲ. ಸರ್ಕಾರ ನಿರ್ಲಕ್ಷ್ಯ ಮಾಡಿದ್ದರಿಂದ ಈಗ ಹೋರಾಟಕ್ಕೆ ಮುಂದಾಗಿದ್ದೇವೆ. ಈಗಲೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಮನೆ ಕೆಲಸ ಮಾಡುತ್ತಿರುವ ಮಹಿಳೆಯರಾದ ನಿಶಾ, ಗಂಗಮ್ಮ, ಶಾರದಾ, ಅರ್ಚನಾ, ಮಂಜುಳಾ, ಸರಿತಾ, ಲಕ್ಷ್ಮೀ, ಯಶೋದಾ, ವಿನೋದಾ, ಶೋಭಾ, ರೇಖಾ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next