Advertisement

ಡೆಂಘೀ-ಚಿಕೂನ್‌ಗುನ್ಯಾ ತಡೆಗೆ ಶ್ರಮಿಸಿ

11:18 AM May 14, 2020 | Naveen |

ಚಿತ್ರದುರ್ಗ: ಡೆಂಘೀ, ಚಿಕೂನ್‌ಗುನ್ಯಾ ಪ್ರಕರಣಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿವೆ. ಸೊಳ್ಳೆಗಳಿಂದ ಹರಡುವ ಈ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ರೋಗ ತಡೆಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲರೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದೇವೆ. ಹಾಗಂತ ಜನರಿಗೆ ಮಾರಕವಾಗಬಹುದಾದ ರೋಗಗಳ ನಿಯಂತ್ರಣಕ್ಕೆ ನಿರ್ಲಕ್ಷ್ಯ ಬೇಡ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 438 ಡೆಂಘೀ, 196 ಚಿಕೂನ್‌ಗುನ್ಯಾ ಹಾಗೂ 9 ಮಲೇರಿಯಾ ಪ್ರಕರಣ ಪತ್ತೆಯಾಗಿವೆ. ಕಳೆದ ವರ್ಷ ಏಪ್ರಿಲ್‌ ಅಂತ್ಯಕ್ಕೆ 17 ಡೆಂಘೀ, 22 ಚಿಕೂನ್‌ಗುನ್ಯಾ ಪ್ರಕರಣಗಳು ಕಂಡುಬಂದಿದ್ದವು. ಆದರೆ ಈ ವರ್ಷ ಏಪ್ರಿಲ್‌ ಅಂತ್ಯಕ್ಕೆ 124 ಡೆಂಘೀ, 54 ಚಿಕೂನ್‌ಗುನ್ಯಾ, 3 ಮಲೇರಿಯಾ ವರದಿಯಾಗಿದೆ. ಚಿತ್ರದುರ್ಗ ತಾಲೂಕೊಂದರಲ್ಲೇ 91 ಡೆಂಘೀ, 42 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆಯಾಗಿದೆ ಎಂದರು.

ಹೈರಿಸ್ಕ್ ಏರಿಯಾಗಳಲ್ಲಿ ಕ್ರಮ: ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆ, ಮಾರುತಿನಗರ, ಬಡಾಮಕಾನ್‌, ದರ್ಜಿ ಕಾಲೋನಿ, ಜೋಗಿಮಟ್ಟಿ ರಸ್ತೆ, ಮುನ್ಸಿಪಲ್‌ ಕಾಲೋನಿ, ರೇಲ್ವೆಸ್ಟೇಷನ್‌, ಕಾಮನಬಾವಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ರಾಜೇಂದ್ರನಗರ, ಈದ್ಗಾ ಮೊಹಲ್ಲಾ, ವಿಜಯನಗರ, μಲ್ಟರ್‌ಹೌಸ್‌, ರಾಮದಾಸ್‌ ಕಾಂಪೌಂಡ್‌, ಪ್ರಸನ್ನ ಟಾಕೀಸ್‌ ಏರಿಯಾ, ನೆಹರು ನಗರ, ಚೋಳುಗುಡ್ಡ, ಮಂಡಕ್ಕಿಬಟ್ಟಿ, ಕೋಳಿ ಬುರುಜನಹಟ್ಟಿ, ಗ್ರಾಮಾಂತರ ಪ್ರದೇಶಗಳಾದ ಕಾಸವರಹಟ್ಟಿ, ಗುಡ್ಡದರಂಗವ್ವನಹಳ್ಳಿ, ಬೆಳಗಟ್ಟ, ಪಂಡರಹಳ್ಳಿ, ದೊಡ್ಡಸಿದ್ದವ್ವನಹಳ್ಳಿ, ಕ್ಯಾಸಾಪುರ ಗಳನ್ನು ಹೈರಿಸ್ಕ್ ಏರಿಯಾಗಳೆಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಸಾರ್ವಜನಿಕರು ಸರಿಯಾದ ಕ್ರಮದಲ್ಲಿ ನೀರನ್ನು ಸಂಗ್ರಹಿಸಿ ಇಡುತ್ತಿಲ್ಲ. ಈ ಏರಿಯಾಗಳಲ್ಲಿ ಕೈಗೊಂಡ ಲಾರ್ವಾ ಸಮೀಕ್ಷೆ ಸಂದರ್ಭದಲ್ಲಿ ಪ್ರತಿ 100 ಮನೆಗಳ ಪೈಕಿ 10 ರಿಂದ 15 ಮನೆಗಳಲ್ಲಿ ಈಡಿಸ್‌ ಸೊಳ್ಳೆಗಳ ಲಾರ್ವಾ ಪತ್ತೆಯಾಗಿದೆ ಎಂದು ಕೀಟಜನ್ಯ ರೋಗ ನಿಯಂತ್ರಣಾ  ಧಿಕಾರಿ ಡಾ| ಜಯಮ್ಮ ಮಾಹಿತಿ ನೀಡಿದರು.

ಈ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ನಗರಸಭೆಯಿಂದ ವಾರ್ಡ್‌ವಾರು ನೀರು ಪೂರೈಕೆ ಮಾಡುವ ದಿನ ಪ್ರಕಟಿಸಿ ಅದರಂತೆಯೇ ನೀರು ಸರಬರಾಜು ಮಾಡಬೇಕು. ಹೀಗಾದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೆಚ್ಚಿನ ನೀರು ಸಂಗ್ರಹಿಸುವುದನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಕಾರಿಗಳು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.

2025ರ ವೇಳೆಗೆ ದೇಶವನ್ನು ಮಲೇರಿಯಾ ಮುಕ್ತವನ್ನಾಗಿಸುವ ಗುರಿ ಇದೆ. ಜಿಲ್ಲೆಯಲ್ಲಿ ಈ ವರ್ಷ 3 ಮಲೇರಿಯಾ ಪ್ರಕರಣ ವರದಿಯಾಗಿದ್ದು, ಬೇರೆ ರಾಜ್ಯದಿಂದ ಜಿಲ್ಲೆಗೆ ವಲಸೆ ಬಂದ ಕಾರ್ಮಿಕರಲ್ಲಿ ಮಲೇರಿಯಾ ಪತ್ತೆಯಾಗಿದೆ. ಅಲ್ಲದೆ ಕಳೆದ ವರ್ಷ ಹೊರ ಜಿಲ್ಲೆಗಳಿಂದ ಬಂದಂತಹ ಕಾರ್ಮಿಕರು, ವಲಸಿಗರಲ್ಲಿ ಆನೆಕಾಲು ರೋಗ ಪತ್ತೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 839 ಜನರ ರಕ್ತ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಇದರಲ್ಲಿ 9 ಜನರಲ್ಲಿ ಈ ರೋಗ ಇರುವುದು ದೃಢಪಟ್ಟಿತ್ತು. ಅಲ್ಲದೆ ಮೆದುಳು ಜ್ವರದ 2 ಪ್ರಕರಣಗಳು ಕೂಡ ವರದಿಯಾಗಿದ್ದವು. ಇದಕ್ಕೆ ಕಾರಣವಾಗುವ ಹಂದಿಗಳನ್ನು ನಗರ, ಪಟ್ಟಣ ಪ್ರದೇಶದಿಂದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ನಗರಸಭೆಗಳಿಗೆ ಪತ್ರ ಬರೆದು ತಿಳಿಸಿದ್ದರೂ ನಗರಸಭೆಯಿಂದ ಈ ಕಾರ್ಯ ಆಗಿಲ್ಲ. ಇನ್ನಾದರೂ ಹಂದಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಡಾ| ಜಯಮ್ಮ ಒತ್ತಾಯಿಸಿದರು. ಡಿಎಚ್‌ಒ ಡಾ| ಪಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌ ಮತ್ತಿತರರು ಭಾಗವಹಿಸಿದ್ದರು.

Advertisement

ಆರೋಗ್ಯ ಇಲಾಖೆ, ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಗ್ರಾಪಂ, ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ, ಗುಂಡಿಗಳಲ್ಲಿ ಮಳೆ ನೀರು ಅಥವಾ ಯಾವುದೇ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
ವಿನೋತ್‌ ಪ್ರಿಯಾ,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next