Advertisement

ದಡ ಸೇರಿಸಿದ ಮೋದಿ ಅಲೆ-ಯುವ ಮತದಾರರು

03:27 PM May 24, 2019 | Naveen |

ಚಿತ್ರದುರ್ಗ: ಟಿಕೆಟ್ ಘೋಷಣೆಯಾದಾಗಿನಿಂದಲೂ ಅನೇಕ ಅಡ್ಡಿ-ಆತಂಕ ಎದುರಿಸುತ್ತಲೇ ಬಂದ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಕೊನೆಗೂ ಜಯದ ನಗು ಬೀರಿದ್ದಾರೆ. ಅಭ್ಯರ್ಥಿ ಹೊರಗಿನವರು, ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ನ್ಯಾಯಮೂರ್ತಿ ಸದಾಶಿವ ವರದಿ ಜಾರಿಗೆ ಮುಂದಾಗಿದ್ದರು ಎಂಬಿತ್ಯಾದಿ ವಿರೋಧ ಕಟ್ಟಿಕೊಂಡಿದ್ದರು. ಈಗ ಗೆಲುವಿನ ಮುಂದೆ ಆ ಸಂಗತಿಗಳೆಲ್ಲ ಗೌಣವಾಗಿವೆ. ಲೋಕಸಭೆ ಚುನಾವಣೆ ಘೋಷಣೆಯಾದಾಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಆರಂಭದಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಹೆಸರು ಕೇಳಿ ಬಂದಿತ್ತು. ಆದರೆ ಬಿಜೆಪಿ ವರಿಷ್ಠರು ಮಾದಿಗ ಸಮುದಾಯದ ದಲಿತ ಅಸ್ಪ್ರಶ್ಯ ಎಡಗೈ ಅಭ್ಯರ್ಥಿಗೆ ಟಿಕೆಟ್ ನೀಡಿದರು. ಮೈತ್ರಿಕೂಟ ಹಾಗೂ ಬಿಜೆಪಿ ಅಭ್ಯರ್ಥಿಗಳು ಮಾದಿಗ ಸಮುದಾಯದವರಾಗಿರುವುದರಿಂದ ಮತ ವಿಭಜನೆ ಆತಂಕ ಎದುರಾಗಿತ್ತು. ಆದರೆ ಅದನ್ನು ಮೀರಿ ಮಾದಿಗ ಸಮುದಾಯದ ಮತಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ನಾರಾಯಣಸ್ವಾಮಿ ಯಶಸ್ವಿಯಾಗಿದ್ದಾರೆ.

Advertisement

ಚುನಾವಣೆಗೆ ಕೆಲವೇ ದಿನಗಳಿರುವಾಗ ಪ್ರಧಾನಿ ಮೋದಿ ಚಿತ್ರದುರ್ಗದಲ್ಲಿ ವಿಜಯ ಸಂಕಲ್ಪ ರ್ಯಾಲಿ ನಡೆಸಿದರು. ತಮ್ಮ ವಾಕ್ಚಾತುರ್ಯದಿಂದ ಜಿಲ್ಲೆಯ ಮತದಾರರನ್ನು ಸೆಳೆದರು. ಅಲ್ಲದೆ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದು ಕೂಡ ಬಿಜೆಪಿ ಅಭ್ಯರ್ಥಿ ಗೆಲುವಿಗೆ ವರವಾಯಿತು. ಚಿತ್ರದುರ್ಗ ಲೋಕಸಭಾ ಕ್ಷೇತ್ರ, ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಐವರು ಬಿಜೆಪಿ ಶಾಸಕರು ಇದ್ದಾರೆ. ಅವರೆಲ್ಲರೂ ಬಿಜೆಪಿ ಗೆಲ್ಲಿಸಲೇಬೇಕೆಂದು ಪಣ ತೊಟ್ಟು ಪ್ರಯತ್ನ ಮಾಡಿದ್ದರಿಂದ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಕಮಲ ಅರಳುವಂತಾಗಿದೆ. ಯುವ ಮತದಾರರು ಜಾತಿ, ಮತ, ಧರ್ಮ ಭೇದವಿಲ್ಲದೆ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದರು. ಇದು ಕೂಡ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ನಾರಾಯಣಸ್ವಾಮಿ ಸದ್ದುಗದ್ದಲವಿಲ್ಲದೆ ದಲಿತ ಮತಗಳ ವಿಭಜನೆ ಮಾಡಿ ಮೇಲ್ಜಾತಿಯ ಮತಗಳನ್ನು ತಮ್ಮದಾಗಿಸಿಕೊಂಡಿದ್ದರಿಂದ ಗೆಲುವು ಸಾಧಿಸುವಂತಾಯಿತು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next