Advertisement

ಸರ್ಕಾರಿ ಶಾಲೆ ಉಳಿವಿಗೆ ಮುಂದಾಗಿ

04:36 PM Feb 26, 2020 | Naveen |

ಚಿತ್ರದುರ್ಗ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಒತ್ತು ನೀಡಿದ್ದಾರೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರ ಕೂಡಾ ಸರ್ಕಾರಿ ಶಾಲೆಗಳ ಉಳಿವಿಗೆ ಗಮನಹರಿಸಬೇಕಾಗಿದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಗೊಡಬನಾಳ್‌ ಗ್ರಾಮದ ಗೆಳೆಯರ ಬಳಗದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಸುಂದರವಾದ ಕಟ್ಟಡ, ಆಟದ ಮೈದಾನ, ಆಟೋಟ, ಪ್ರತಿಭಾವಂತ ಶಿಕ್ಷಕರನ್ನು ಸರ್ಕಾರ ನೀಡಿದಾಗ ಮಾತ್ರ ಕನ್ನಡ ಶಾಲೆಗಳು ಉಳಿಯುತ್ತವೆ. ದಾಸ ಸಾಹಿತ್ಯ, ಪಂಪ, ರನ್ನ ಇನ್ನೂ ಸಾಹಿತ್ಯದಲ್ಲಿ ಉಳಿದುಕೊಂಡಿದ್ದಾರೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿದ್ದರೂ ಕನ್ನಡವನ್ನು ಓದುವವರೇ ಇಲ್ಲದಂತಾಗಿದ್ದಾರೆ ಎನ್ನುವುದು ನೋವಿನ ಸಂಗತಿ. ಎಲ್ಲಾ ಶಿಕ್ಷಕರು, ಅಧ್ಯಾಪಕರು ಹಾಗೂ ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವಂತಾಗಬೇಕು ಎಂದರು.

ವಿದ್ಯಾರ್ಥಿಗಳ ಕೈಯಲ್ಲಿ ಕಂಪ್ಯೂಟರ್‌, ಮೊಬೈಲ್‌ ಇದೆ ಎಂದರೆ ಜ್ಞಾನ ಸಿಗಬಹುದು. ಅದೇ ರೀತಿ ಹಾಳಾಗುವ ಸಾಧ್ಯತೆಯೂ ಇದೆ. ಮೊಬೈಲ್‌ ನಿಂದ ಅಪಾಯವಿದೆ ಎನ್ನುವುದನ್ನು ತಂದೆ-ತಾಯಿಗಳು ಅರ್ಥ ಮಾಡಿಕೊಳ್ಳಬೇಕು. ಯುವಕ-ಯವತಿಯರು ಮೊಬೈಲ್‌ನಿಂದಲೇ ದಾರಿ ತಪ್ಪುತ್ತಿದ್ದಾರೆ ಎನ್ನುವುದರ ಕಡೆಗೆ ಪೋಷಕರು ಜಾಗೃತಿ ವಹಿಸಬೇಕೆಂದು ತಿಳಿಸಿದರು.

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಗೆಳೆಯರ ಬಳಗದಿಂದ ಆರಂಭವಾದ ಕೆಟಿಪಿ ಕಾನ್ವೆಂಟ್‌ ಶಾಲೆಯಲ್ಲಿ ಓದಿದ ಅನೇಕರು ದೊಡ್ಡ ಅಧಿಕಾರಿಗಳಾಗಿದ್ದಾರೆ. ಒಬ್ಬ ಐಎಎಸ್‌ ಮತ್ತೊಬ್ಬ ಕೆಎಎಸ್‌ ಅ ಧಿಕಾರಿಯಾಗಿರುವುದು ಹೆಮ್ಮೆಯ ಸಂಗತಿ. ಬಡವರ ಮಕ್ಕಳು ಓದಿ ಒಳ್ಳೆಯ ಹುದ್ದೆಯಲ್ಲಿದ್ದಾರೆ ಎಂದು ಶ್ಲಾಘಿಸಿದರು.

ರಾಷ್ಟ್ರಪತಿಗಳಾಗಿದ್ದ ಅಬ್ದುಲ್‌ ಕಲಾಂ, ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಕೂಡ ಬಡ ಕುಟುಂಬದಿಂದ ಬಂದವರು. ಚಹಾ‌ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಇವರೆಲ್ಲಾ ಇಂದಿನ ಮಕ್ಕಳಿಗೆ ಮಾದರಿಯಾಗಬೇಕು. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ಕೊಡಬೇಕು. ವ್ಯವಸಾಯ, ವ್ಯಾಪಾರ ವಹಿವಾಟು ನಡೆಸಲು ಶಿಕ್ಷಣ ಬೇಕು, ಹಾಗಾಗಿ ಶಿಕ್ಷಣವೇ ನಿಜವಾದ ಆಸ್ತಿ ಎಂದು ಅಭಿಪ್ರಾಯಪಟ್ಟರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಶಾಲೆಗಳ ಅವಶ್ಯಕತೆಯಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರೌಢಶಾಲೆ ಮಕ್ಕಳಿಗೆ ಸೈಕಲ್‌ ನೀಡಿರುವುದರಿಂದ ನಿಜವಾಗಿಯೂ ಮಕ್ಕಳಿಗೆ ಅನುಕೂಲವಾಗಿದೆ. ಸರ್ಕಾರ ಎಷ್ಟೇ ಸೌಲಭ್ಯಗಳನ್ನು ನೀಡಿದರೂ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರುತ್ತಿಲ್ಲ.

ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಹಾಗಾಗಿ ಮಕ್ಕಳಿಗೆ ಶಿಕ್ಷಣದ ಕೊರತೆಯಿದೆ. ಶಿಕ್ಷಣದ ಜೊತೆ ಮಕ್ಕಳನ್ನು ಕ್ರೀಡೆಯಲ್ಲಿಯೂ ತೊಡಗಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಮುನ್ನಡೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ. ಸಮಯ ಕಾಯಕಕ್ಕೆ ಯಾರು ಹೆಚ್ಚಿನ ಮಹತ್ವ ಕೊಡುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಹನುಮಲಿ ಷಣ್ಮುಖಪ್ಪ, ಭೀಮಸಮುದ್ರದ ಬಿ.ಟಿ. ಪುಟ್ಟಪ್ಪ, ಗೆಳೆಯರ ಬಳಗದ ಅಧ್ಯಕ್ಷ ಕೆ.ಜೆ. ಶಂಕರ್‌, ಕಾರ್ಯದರ್ಶಿ ಜ್ಯೋತಿಪ್ರಕಾಶ್‌, ಉಪಾಧ್ಯಕ್ಷ ಎಚ್‌.ಜಿ. ಮಲ್ಲಿಕಾರ್ಜುನ್‌, ಪದಾ ಧಿಕಾರಿಗಳಾದ ಎಂ.ಸಿ.ಸಿದ್ದಲಿಂಗಪ್ಪ, ಕೆ.ಎಸ್‌. ಶಿವಕುಮಾರ್‌, ಕೆ.ಎಸ್‌. ರಾಜು, ಎಪಿಎಂಸಿ ಅಧ್ಯಕ್ಷ ಡಿ.ಎಸ್‌. ಶಶಿಧರ ಮತ್ತಿತರರು ವೇದಿಕೆಯಲ್ಲಿದ್ದರು. ಇದೇ ವೇಳೆ ಗ್ರಾಮದ ಕ್ರೀಡಾಪಟು ವಡಕಲ್‌ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಚಟ್ನಳ್ಳಿ ಮಹೇಶ್‌ 25ನೇ ವರ್ಷದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next