Advertisement

ನೀರಿನ ಏಳು ಸುತ್ತಿನ ಕೋಟೆ; ಜಲ ದುರ್ಗಾಸ್ತಮಾನ

12:37 PM Apr 01, 2017 | |

 ಇಡೀ ರಾಜ್ಯದಲ್ಲಿ ಬರಗಾಲ ಎದುರು ನಿಂತಿರುವಾಗ ಈ ಚಿತ್ರದುರ್ಗದ ಕೋಟೆ ಊರಲ್ಲಿ ಬಳಸುವ ನೀರಿನ ವ್ಯಥೆಯೇ ಇಲ್ಲ. ಏಕೆಂದರೆ ಹಲವಾರು ದಶಕಗಳ ಹಿಂದೆಯೇ, ಭೂಮಿ ಅಂತರಾಳದಲ್ಲಿ ನೀರ ರಸ್ತೆಗಳನ್ನು ನಿರ್ಮಿಸಿಹೋಗಿದ್ದಾರೆ. ಇಲ್ಲಿರುವ ಹೊಂಡ, ಕೆರೆಗಳು ಸಹಬಾಳ್ವೆಯಿಂದ ಇರುವುದೇ ಇವತ್ತು ನೀರ ನೆಮ್ಮದಿ ಹಿಂದಿನ ಗುಟ್ಟು. 

Advertisement

ನೂರು ವರ್ಷದಲ್ಲಿ 66 ವರ್ಷಗಳ ಸುದೀರ್ಘ‌ ಬರ ಕಂಡಿರುವ, ಕಳೆದ ಹತ್ತು ವರ್ಷಗಳಲ್ಲಿ ಆರು ವರ್ಷಗಳ ಕಾಲ ನಿರಂತರ ತೀವ್ರ ಬರ ಅನುಭವಿಸಿ, ಎಲ್ಲೆಡೆ ನೀರಿನ ಕೊರತೆ ಕಾಡುತ್ತಿದ್ದರೂ ಕೋಟೆ ನಗರದಲ್ಲಿ ಇಂದಿಗೂ ನೀರಿನ ಸಮಸ್ಯೆ ಕಾಡಿಲ್ಲ. ಇಲ್ಲಿಂದ ಸುತ್ತಮುತ್ತಲ ರೈತರ ತೋಟಗಳಿಗೆ ನಿತ್ಯ ಸಾವಿರಾರು ಟ್ಯಾಂಕರ್‌ ನೀರುಣಿಸಲಾಗುತ್ತಿದೆ. ಕೋಟೆಯೊಳಗಿನ ಜಲಸಂಗ್ರಹಣಾ ವ್ಯವಸ್ಥೆ ಅದ್ಭುತ. ಒಂದೊಂದು ಜಲ ಸಂಗ್ರಹಗಾರದಿಂದ ಮತ್ತೂಂದು ಜಲ ಸಂಗ್ರಹಗಾರಕ್ಕೆ ನೀರು ಹರಿಯುವ ವಿಧಾನ ಇಂದಿನ ತಂತ್ರಜಾnನಕ್ಕೆ ಸವಾಲೇ ಸವಾಲು.

ಕೋಟೆ ಮೇಲ್ಭಾಗದಲ್ಲಿ ಹತ್ತಾರು ಜಲ ಸಂಗ್ರಹಣಾ ವ್ಯವಸ್ಥೆಯಿದೆ.  ಕೋಟೆ ನೆತ್ತಿಯ ಮೇಲೆ ಬಿದ್ದ ನೀರು ಅಲ್ಲಿನ ಕಲ್ಲು ಬಂಡೆ ಕೊರಕಲು, ಅಗಳು, ಹೊಂಡದಲ್ಲಿ ಸಂಗ್ರಹವಾಗಿ ಇತರೆ ಜಲ ಸಂಗ್ರಹಾರಗಳಿಗೆ ಅಂತರ್ಮುಖೀಯಾಗಿ ಹರಿಯುತ್ತದೆ. ಕೋಟೆ ನೆತ್ತಿಯಿಂದ ಕೆಳಗಿನ ಹಂತದ ಹೊಂಡಗಳಿಗೆ ಬೃಹತ್‌ ಕಲ್ಲು ಬಂಡೆಗಳಿಂದ ಆವೃತ್ತವಾಗಿ ಸಂತೇಹೊಂಡ, ಸಿಹಿ ನೀರು ಹೊಂಡ, ಕೆರೆ, ಕಟ್ಟೆ ಬಾವಿ, ಕಂದಕಗಳಿಗೆ ನೀರು ಓಡುತ್ತದೆ.

 ನೀರು ಹರಿವಿಗೆ ಮಾಡಲಾದ ಕಾಲುವೆಯಂಥ ಒಳರಚನೆಗಳನ್ನೂ ಕಾಣಬಹುದು. ಕೆರೆ, ಕಟ್ಟೆ, ಒಡ್ಡು, ಹೊಂಡ, ಅಗಳುಗಳಿಗೆ ಕೋಟೆಯ ಸುತ್ತಮುತ್ತಲಿನ ಇತರೆ ಗುಡ್ಡ ಬೆಟ್ಟಗಳಿಂದ ಹರಿದು ಬರುವ ನೀರು ಸೇರಿ ಸಮೃದ್ಧ ಜಲಾಗಾರ ನಿರ್ಮಾಣ ಮಾಡಲಾಗಿದೆ. ನೀರು ಹರಿಯುವ ಅಂತರ್ಮುಖೀ ಕಾಲುವೆಗೆ (ಕಂದಕ)ಕಲ್ಲು, ಕಸ, ಕಡ್ಡಿ, ಘನ ತ್ಯಾಜ್ಯ ಸೇರದಂತೆ, ಕೊಳಚೆ ನೀರು ಒಳ ಸೇರಿದಂತೆ ನೀರು ಮಲಿನಗೊಳ್ಳದಂತೆ ಭೂಮಿಯೊಳಗೆ ವಿನ್ಯಾಸ ಮಾಡಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಗಂಡು ಮೆಟ್ಟಿದ ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ ಜಲಕ್ಷಾಮದಿಂದ ನಲುಗದಂತೆ, ನೀರಿನ ಬವಣೆ ನೀಗಿಸುವ ಕಾರ್ಯ ಮಾಡಲಾಗಿದೆ. ನೀರಿನ ಬವಣೆ ಕಾಡದಂತೆ ಕೆರೆ, ಕಟ್ಟೆ, ಒಡ್ಡು, ಅಗಳು, ಹೊಂಡ, ನಾಲಾ ನಿರ್ಮಾಣ ಮಾಡಿ ಜಲಕ್ರಾಂತಿಯನ್ನೇ ಮಾಡಿದ್ದಾರೆ. ಅವರ ಜಲ ಸಾಕ್ಷರತೆಯಿಂದಾಗಿ ಜನರ ಮತ್ತು ಭೂಮಿಯ ಜಲದಾಹ ನೀಗಿಸಿ ಜಲದ ಬವಣೆ ಕಾಡದಂತೆ ಮಾಡಿದ ಕಾರ್ಯದಿಂದ ಕೋಟೆ ನಾಡಿನ ಜನತೆಗೆ ನೀರಿನ ಸಮಸ್ಯೆ ಕಾಡುತ್ತಿಲ್ಲ. 

Advertisement

ಮದಕರಿ ನಾಯಕರ ಕ್ರಿ.ಶ 1549-1779ರಲ್ಲಿನ ಆಳ್ವಿಕೆಯ ಕಾಲದ ಜಲಸಾಕ್ಷರತೆ ಸರ್ವ ಕಾಲಕ್ಕೂ ಮನ್ನಣೆ ನೀಡುವಂತಾಗಿದೆ. ಬಿದ್ದ ಮಳೆ ನೀರಿನ ಹನಿ ಪೋಲಾಗದಂತೆ ನೀರಿನ ಮರುಪೂರಣಕ್ಕೆ ಅಗತ್ಯ ವೈಜಾnನಿಕ ಕ್ರಮ ಅನುಸರಿಸಲಾಗಿದೆ. ಯಾವ ಪ್ರತಿಪಲಾಪೇಕ್ಷೆ ಇಲ್ಲದೆ ನಾಳಿನ ಪೀಳಿಗೆಗಾಗಿ ಮಾಡಿದ ಜಲ ಕ್ರಾಂತಿ ಇಂದು ಜಲಸಾಕ್ಷರತೆ ಮೂಡಿಸುವಂತಿದೆ. 

ಜಲ ವಿನ್ಯಾಸ ರಚನೆ

ಹೊಂಡದಿಂದ ಹೊಂಡಕ್ಕೆ, ಅಗಳಿನಿಂದ ಅಗಳಿಗೆ, ಒಡ್ಡಿನಿಂದ ಒಡ್ಡಿಗೆ ಏಕೆ ಇಡೀ ಕೋಟೆ, ಕೊತ್ತಲುಗಳಲ್ಲಿನ ಹೊಂಡಗಳ ನೀರು ಹರಿಯುವ ಲಿಂಕ್‌ ಕೊಂಡಿಗಳನ್ನು ಊಹೆಗೂ ನಿಲುಕದಂತೆ ರಚನೆ ಮಾಡಲಾಗಿದೆ. ವೈಜಾnನಿಕ ತಂತ್ರಜ್ಞರು ಇಲ್ಲದ ಕಾಲದಲ್ಲಿ ಅಂತರ್ಜಲ ಮಟ್ಟಕ್ಕೆ ಯಾವುದೇ ತೊಂದರೆಯಾಗದಂತೆ ವಿಶ್ವದ ಯಾವುದೇ ಜಲ ವಿನ್ಯಾಸಗಾರನ ಕಲ್ಪನೆಗೂ ಮೀರಿದಂತೆ ಮೇಲ್ಮೆ„ ಜಲ ಸಂಪನ್ಮೂಲ ಹಾಗೂ ಅಂತರ್ಜಲ ಸಂಪನ್ಮೂಲದ ಸಮರ್ಪಕ ಬಳಕೆ ಮತ್ತು ಮಾರ್ಗೊàಪಾಯಗಳನ್ನು ಮಾಡಿರುವುದು ಹಲವು ಸಂಶೋಧನೆಗೆ ಎಡೆ ಮಾಡಿಕೊಟ್ಟಿವೆ. 

ಗುಡ್ಡ, ಬೆಟ್ಟಗಳ ಮೇಲ್ಮೆ„ನಲ್ಲಿ ಜನ್ಮ ತಾಳುವ ಜಲ ಸಂಪನ್ಮೂಲ ಸಂಗ್ರಹದ ವಿನ್ಯಾಸ, ರಚನೆ ಯಾರಿಗೂ ನಿಲುಕುತ್ತಿಲ್ಲ. ಅದರ ನಿರ್ವಹಣೆಯಂತೂ ಶೂನ್ಯ. ಸಂಪೂರ್ಣ ಸ್ವಾಯತ್ತವಾಗಿ ಅಂತರ್ಗತವಾಗಿ ಹರಿಯುವ ನೀರಿನ ಮೂಲ ಕಂಡು ಹಿಡಿಯಲು ಜಲ ತಜ್ಞರು ಹೆಣಗಬೇಕಾಗಿದೆ. ಜಲಗರ್ಭಶಾಸ್ತ್ರಜ್ಞರೇ ತಲೆಕೆಡಿಸಿಕೊಳ್ಳಬೇಕಾದಂತಹ ವಿನ್ಯಾಸ ಇದಾಗಿದೆ. 

ಜಲ ಹವಾಮಾನ ತಜ್ಞ ವಿಜಾnನಿಗಳು, ನದಿ ಪರಿಸರ ಜಾnನಿಗಳು, ಪರಿಸರ ಅರ್ಥಶಾಸ್ತ್ರಜ್ಞರು, ಕೃಷಿಶಾಸ್ತ್ರ ತಜ್ಞರು ಇರದ 15-16ನೇ ಶತಮಾನದಲ್ಲಿ ವಿಸ್ಮಯಗೊಂಡಿರುವ ಕೋಟೆ ಜಲ ಸಂಪನ್ಮೂಲ ರಕ್ಷಣಾ ಯೋಜನೆ ರೂಪಿಸಿ ನಿರಂತರ ನೀರಿನ ದಾಹ ತಣಿಸಲು ನೀರೊದಗಿಸುತ್ತಿರುವುದು ಅದ್ಭುತಗಳಲ್ಲೊಂದು ಎಂದರೆ ತಪ್ಪಾಗದು.

ಚಿತ್ರದುರ್ಗಕ್ಕೆ ಆಗಮಿಸುವ ಅಸಂಖ್ಯಾತ ಪ್ರವಾಸಿಗರಿಗೆ ತಿಳಿದಿರುವುದು ಇಲ್ಲಿಯ ಇತಿಹಾಸ ಪ್ರಸಿದ್ಧ ಏಳು ಸುತ್ತಿನ ಕಲ್ಲಿನಕೋಟೆ. ಪ್ರವಾಸಿಗರಿಗೆಲ್ಲಾ ಕೋಟೆಯೊಂದೆ ಚಿರಪರಿಚಿತ. ಆದರೆ ದುರ್ಗದ ಒಳಹೊಕ್ಕಿ, ಸುತ್ತ ಮುತ್ತ ಕಣ್ಣಾಡಿಸಿ, ಒಳಗಣ್ಣಿನಿಂದ ನೋಡಿದಾಗಲೇ ತಿಳಿಯುವುದು ಇದರ ನಿಜವಾದ ಜಲ ಸಂರಕ್ಷಣೆ ಸಂಕೀರ್ಣ. ಮೇಲ್ನೋಟಕ್ಕೆ ಮದಕರಿ ನಾಯಕರ ಜಲ ಸಂರಕ್ಷಣೆ ಕಾರ್ಯ ಶತ್ರುಗಳಿಂದ ಕೋಟೆ ರಕ್ಷಣೆ ಮಾಡುವ ಕಾರ್ಯ ಎಂದು ತಿಳಿದರೂ ದುರ್ಗದ ಜಲ ಸಂರಕ್ಷಣೆ ಮತ್ತು ಸಂಗ್ರಹದ ಸಹಜ ಸಂಕೀರ್ಣವು ಇಲ್ಲಿನ ಇತಿಹಾಸದಷ್ಟೇ ವಿಶಾಲವಾದದ್ದು. ಇಲ್ಲಿ ಸುತ್ತಿದಷ್ಟು ಸ್ಥಳ, ಕೆದಕಿದಷ್ಟು ಇತಿಹಾಸದ ಜಲ ಕುರುಹುಗಳು ಲಭ್ಯವಾಗುತ್ತವೆ. ಕಣ್ಣಾಯಿಸಿದಷ್ಟು ಚಿನ್ಮೂಲಾದ್ರಿ ಗಿರಿಶಿಖರಗಳ ಸಾಲುಗಳು, ಏಷ್ಯಾ ಖಂಡದಲ್ಲೇ ಅತ್ಯಂತ ವೇಗವಾಗಿ ಗಾಳಿ ಬೀಸುವ ಎರಡನೇ ಸ್ಥಾನ ಇಲ್ಲಿನ ಜೋಗಿಮಟ್ಟಿ ಗಿರಿಧಾಮಕ್ಕಿದೆ. ಕೋಟೆಯ ಭದ್ರತೆಗಾಗಿಯೇ ನಿರ್ಮಿಸಿಕೊಂಡ ಬೃಹತ್‌ ಬುರುಜು ಬತೇರಿ, ಅಗಳುಗಳು ಆಗಿನ ಕಾವಲು ಪಡೆಗಳ ಅತ್ಯಂತ ಆಯಕಟ್ಟಿನ ಸ್ಥಳಗಳು. ಇಂತಹ ಬುರುಜು ಬತೇರಿಗಳೆಲ್ಲವು ಇಂದಿಗೂ ಜೀವಂತ ಸ್ಮಾರಕಗಳಾಗಿವೆ. ಶತ್ರುಗಳ ಆಕ್ರಮಣ ತಡೆಯುವ ಸಲುವಾಗಿಯೇ ಕೋಟೆಯ ತಡೆಗೋಡೆಗಳು ಮತ್ತು ಇದರ ಮುಂಭಾಗದ ಐತಿಹಾಸಿಕ ಅಗಳುಗಳು (ಹೊಂಡ/ಕಾಲುವೆಗಳು) ಅಚ್ಚಳಿಯದೆ ಸ್ಥಳೀಯ ಇತಿಹಾಸದ ಸೊಗಡನ್ನು ಉಳಿಸಿಕೊಂಡಿವೆ. 

ಕರವರ್ತಿ ದೇವಸ್ಥಾನ
ಕೋಟೆಯ ಪ್ರಮುಖ ರಸ್ತೆಯಿಂದ ನೇರವಾಗಿ ದಕ್ಷಿಣ ದಿಕ್ಕಿನತ್ತ ಸಾಗಿದರೆ, ಪ್ರವಾಸಿಗರಿಗಾಗಿ ಮತ್ತೂಷ್ಟು ಮುಖಗಳು ಅರಳಿ ನಿಲ್ಲುತ್ತವೆ.  ಕೋಟೆ ಮೂಲೆಯ ತಡೆಗೋಡೆಯಲ್ಲಿ ಪ್ರತಿಷ್ಟಾಪಿಸಲಾಗಿರುವ ಪುರಾತನ ಕಾಲದ ಕೋಟೆ ಆಂಜನೇಯನ ದೇಗುಲ, ಕೋಟೆಯ ಇಕ್ಕೆಲಗಳಲ್ಲೂ ಆಂಜನೇಯನ ಪ್ರತಿಷ್ಟಾಪನೆಗೆ ಕಾರಣ ಮತ್ತು ಉದ್ದೇಶಗಳ ಕುರಿತು ಮಾಹಿತಿ ಲಭಿಸುವಂತಾಗಬೇಕು. ಹಾಗೇ ಮುಂದೆ ಸಾಗಿದರೆ ಕೋಟೆ ತಡೆಗೋಡೆಯ ಶಿಲಾದ್ವಾರದ ಪರಿಚಯ ಮತ್ತು ಸಮೀಪದ ಕರವರ್ತಿàಶ್ವರ ದೇವಾಲಯದ ಮಹತ್ವ ಅದ್ಭುತ. ದೇವಸ್ಥಾನದ ಮುಂದಿನ ದೇವಳದ ಪುಷ್ಕರಣಿಯಲ್ಲಿ ಎಂದೂ ಬತ್ತಿಹೋಗದ ನೀರಿನ ಮಹತ್ವ ಪ್ರವಾಸಿಗರಿಗೆ ಪರಿಚಯವಾಗುತ್ತದೆ . ಇದೇ ಪುಷ್ಕರಣಿಯಿಂದ ಜಿನುಗುವ ನೀರು, ಮಡಿವಾಳರಿಗೆ ಬದುಕು ನೀಡಿ ಅಗಸನಕಟ್ಟೆ ಎಂಬ ಖ್ಯಾತಿಗೆ ಪಡೆದಿದೆ. ಅಷ್ಟೇ ಅಲ್ಲದೆ ಈ ಸ್ಥಳದಲ್ಲಿ ಸಾಕಷ್ಟು ಚಿತ್ತಾಕರ್ಷಕ ಕಲ್ಲುಬಂಡೆಗಳು ಸಹಜ ಒಡಮೂಡಿವೆ. ಈ ಅಗಸನಕಟ್ಟೆ ಇರುವುದು ಇದೇ ಕರವರ್ತಿàಶ್ವರ ದೇಗುಲದ ಎದುರಿನಲ್ಲಿ.  ಇದರ ಪಕ್ಕದಲ್ಲೇ ಐತಿಹಾಸಿಕ ಅಗಳುಗಳ ರಾಜ ಕಾಲುವೆಗಳು ಗೋಚರಿಸುತ್ತವೆ.

ಐತಿಹಾಸಿಕ ರಾಮದೇವರ ಒಡ್ಡು

ಇದರ ಪಕ್ಕದಲ್ಲಿರುವುದೆ ಐತಿಹಾಸಿಕ ಕಲ್ಲಿನ ಕಟ್ಟಡಗಳಿಂದ ಆವೃತಗೊಂಡಿರುವ ಒಡ್ಡು (ಹೊಂಡ).  ದುರ್ಗದ ರಾಜ ಅರಸುಗಳ ಕಾಲದಲ್ಲಿ ಸ್ಥಳೀಯವಾಗಿ ನೀರಿನ ಸಂಗ್ರಹಣೆಗಾಗಿ ನಿರ್ಮಿಸಿಕೊಂಡಿರುವ ಜಲಸಂಗ್ರಹಗಾರ ಹೊಂಡವಿದು. ಇದನ್ನು ಸ್ಥಳೀಯರು ಬಹಳ ಹಿಂದಿನಿಂದಲೂ ಒಡ್ಡು ಎಂದು ಕರೆದಿರುವುದರಿಂದ ಈಗಲೂ ಅದೇ ಹೆಸರಿನಿಂದಲೇ ಈ ಹೊಂಡವನ್ನು ಗುರುತಿಸಲಾಗುತ್ತದೆ. ಒಡ್ಡಿನ ಹಿಂಬದಿಯಲ್ಲಿರುವುದೇ ಜೋಡಿ ಬತೇರಿಗಳ ಸಾಲು ತಡೆಗೋಡೆಗಳು ಮತ್ತು ಬುರುಜುಗಳು. ಈ ಸಾಲು ತಡೆಗೋಡೆಗಳು ಹಾಗೂ ಬುರುಜು ಬತೇರಿಯ ಆಯಕಟ್ಟಿನ ಸಮೂಹವನ್ನೇ ಹೊಂಡದ ನೀರಿನ ಸಂಗ್ರಹಣೆಗಾಗಿ ಆಯ್ದುಕೊಳ್ಳಲಾಗಿದೆ. ಮಳೆ ನೀರಿನ ಜೊತೆಗೆ ಸಮೀಪದ ತಿಮ್ಮಣ್ಣನಾಯಕನ ಕೆರೆ ನೀರು ಈ ಒಡ್ಡಿಗೆ ಬಂದು ಸೇರುವಂತೆ ಅಂದೇ ರಾಜಕಾಲುವೆಗಳು ನಿರ್ಮಾಣಗೊಂಡಿವೆ. ಒಡ್ಡು ತುಂಬಿದಾಗ ನೀರು ಹೊರಹಾಯಲು ಒಂದು ಸಣ್ಣ ಶಿಲಾದ್ವಾರನ್ನೂ ಈ ಹೊಂಡಕ್ಕೆ ನಿರ್ಮಿಸಲಾಗಿದೆ. ಕೋಡಿ ಬಿದ್ದ ನೀರು ಅಗೋಚರವೆಂಬಂತೆ ಪಕ್ಕದ ಕಾಲುವೆಯ ಮುಖಾಂತರ ಕರವರ್ತಿàಶ್ವರ ದೇಗುಲದ ಮುಂಭಾಗದಲ್ಲಿನ ಅಗಳನ್ನು ಸಂಗಮಿಸುತ್ತದೆ. ಯಾವುದೇ ತಂತ್ರಜಾnನವಿಲ್ಲದ ಕಾಲದಲ್ಲಿಯೇ ನಿರ್ಮಾಣಗೊಂಡಂತಹ ಐತಿಹಾಸಿಕ ಪುಷ್ಕರಣಿಗಳು ಇಂದು ಜನತೆ ನೀರಿನ ದಾಹ ತೀರಿಸುತ್ತಿವೆ. ಕೋಟೆ ವ್ಯಾಪ್ತಿಯಲ್ಲಿ ತಂಪಾದ ವಾತಾವರಣ ನಿರ್ಮಾಣ ಉದ್ದೇಶ, ಸೈನಿಕರು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೋಟೆ ರಕ್ಷಣೆ-ಐತಿಹಾಸಿಕ ಏಳು ಸುತ್ತಿನ ಕೋಟೆಯನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಪಾಳೆಗಾಗರರು ಕೋಟೆ ಕೆಳಭಾಗ ಸೇರಿದಂತೆ ಸುತ್ತ ಮುತ್ತ ಹಲವಾರು ಒಡ್ಡು(ಅಗಳು), ಹೊಂಡಗಳನ್ನು ನಿರ್ಮಿಸಿದ್ದಾರೆ. ಕೋಟೆ ಕೆಳಭಾಗದಲ್ಲಿರುವ ಸುಣ್ಣದ ಗುಮ್ಮಿ ಬಳಿ ಇರುವ ಅಗಳೇರಿಯಾ, ಕೋಟೆಗೆ ಹೊಂದಿಕೊಂಡಂತಿರುವ ಕೋಟೆ ಮುಂಭಾಗದ ಅಗಳು (ಹೊಂಡ), ಬರಗೇರಮ್ಮ ದೇವಸ್ಥಾನದ ಸಮೀಪ ಇರುವ ಸಿಹಿ ನೀರಿನ ಹೊಂಡ, ತಿಮ್ಮಣ್ಣ ನಾಯಕನ ಕೆರೆ ಮತ್ತು ಸುತ್ತ ಮುತ್ತಲಿರುವ ಅಗಳುಗಳನ್ನು ನಿರ್ಮಿಸಿ ಕೋಟೆ ರಕ್ಷಣೆಗೆ ಒತ್ತು ನೀಡಿದ್ದಾರೆ. ಈ ಎಲ್ಲ ಅಗಳುಗಳು 30-40 ಅಡಿ ಆಳಕ್ಕಿದ್ದು ಮಳೆಗಾಲದಲ್ಲಿ ಬೀಳುವ ಮಳೆಯಿಂದ ಭರ್ತಿಯಾಗುತ್ತವೆ. ಇದರಿಂದ ಅಂತರ್ಜಲ ವೃದ್ಧಿ, ಕೋಟೆಯಲ್ಲಿ ತಂಪು ವಾತಾವರಣ ನಿರ್ಮಾಣ ಆಗುವುದರ ಜೊತೆಯಲ್ಲಿ ಇಷ್ಟೊಂದು ಆಳದ ಅಗಳುಗಳನ್ನು ಶತ್ರುಗಳು ಸುಲಭವಾಗಿ ದಾಟಿ ಕೋಟೆ ಆಕ್ರಮಿಸಲು ಅಸಾಧ್ಯವೇ. 

ಇದು ಜಲಸಂರಕ್ಷಣೆ ಒಂದೇ ಕಾರಣ ಇರಲಿಕ್ಕಿಲ್ಲ. ಏಕೆಂದರೆ ಕೋಟೆ ಸುತ್ತ ಮುತ್ತ ಸಾಕಷ್ಟು ಅಗಳುಗಳನ್ನು ಪಾಳೆಗಾರರು ನಿರ್ಮಿಸಿದ್ದಾರೆ. ಇದು ಕೋಟೆ ಹೊರಾಂಗಣ ಚಿತ್ರಣವಾದರೆ, ಐತಿಹಾಸಿಕ ಕೋಟೆ ಒಳಾಂಗಣದಲ್ಲೂ ಸಾಕಷ್ಟು ಹೊಂಡಗಳನ್ನು ನಿರ್ಮಿಸಲಾಗಿದೆ. ಕೋಟೆಯೊಳಗಿನ ಹೃದಯ ಭಾಗದಲ್ಲಿರುವ ಗೋಪಾಲಸ್ವಾಮಿ ಹೊಂಡ,  ಅಕ್ಕ ತಂಗಿ ಹೊಂಡ, ತಣ್ಣೀರು ದೋಣೆ, ಒಬಕೆ ಓಬ್ಬವ್ವನ ಕಿಂಡಿ ಪಕ್ಕದ  ಮುಖಾಂತರ ಸಿಹಿನೀರು ಹೊಂಡ ಸೇರುತ್ತದೆ. ಸಿಹಿ ನೀರು ಹೊಂಡ ಭರ್ತಿಯಾದ ನಂತರ ಸಂತೆ ಹೊಂಡ, ಮಲ್ಲಾಪುರ ಕೆರೆ, ಗೋನೂರು ಕೆರೆಗೆ ಸೇರುವ ಅದ್ಬುತ ಪರಿಕಲ್ಪನೆಯೊಂದಿಗೆ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲದಲ್ಲಿ ನಿರ್ಮಾಣವಾದ ಜಲ ಮೂಲದ ವ್ಯವಸ್ಥೆ ಇದಾಗಿದೆ. ಚಿತ್ರದುರ್ಗದ ಕೋಟೆ ಒಳಗೆ ಮತ್ತು ಹೊರಗೆ ಇಷ್ಟೇಲ್ಲ ಹೊಂಡಗಳು ಇರುವುದರಿಂದ ಗಂಗಾವತರಣ ನಿರಂತರ. ಬಿಸಿಲ ನಾಡಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದರೂ ಐತಿಹಾಸಿಕ ನಗರಿಯಲ್ಲಿ ತಣ್ಣನೆಯ ತಂಗಾಳಿ ನಿರಂತರ ಬೀಸುತ್ತದೆ.

  ದುರ್ಗದ ಸುತ್ತಳತೆ 35 ಮೈಲಿ ಎನ್ನುವ ಅಂದಾಜಿದೆ. ಹೆಚ್ಚು ಕಡಿಮೆ 700 ಎಕರೆಯಷ್ಟು ಈ ಕೋಟೆ ಸುತ್ತುವರಿದಿದೆ. ಹಾಗೇ ನೋಡಿದರೆ 12 ವರ್ಷ ಘೋರ ಬರ ಬಂದರೂ ಇಲ್ಲಿನ ಗೋಪಾಲಸ್ವಾಮಿ ಹೊಂಡ ಬತ್ತಿಲ್ಲ. ಒಂದು ಕಾಲದಲ್ಲಿ ಇದನ್ನು ಹುಲಿಯ ಬಾವಿ ಅಂತಲೂ ಕರೆಯುತ್ತಿದ್ದದ್ದು ಇದೇ ಕಾರಣಕ್ಕೆ. ಇವತ್ತಿಗೂ ಹೆಚ್ಚಾ ಕಡಿಮೆ ಕೋಟೆಯಲ್ಲಿ 18 ಹೊಂಡಗಳಿವೆ. ಇವೆಲ್ಲದರಿಂದ ನೀರು ಮಲ್ಲಾಪುರದ ಕೆರೆಗೆ ಹೇಗೆ ಹೋಗುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಹೀಗೆ ಕೋಟೆ ಊರಿನ ಭೂಮಿಯೊಳಗಿನ ನೀರ ಹರಿವನ್ನು ಯಾರೂ ನೋಡಿಲ್ಲ. ನೋಡುವ ಪ್ರಯತ್ನವೂ ಮಾಡಿಲ್ಲ. 

ನೀರೂ ಮಾಫಿಯಾ
ಇಷ್ಟೆಲ್ಲ ವೈಜಾnನಿಕ ವಿಧಾನಗಳಲ್ಲಿ ಜಲ ಸಂರಕ್ಷಣೆ ಮಾಡಿರುವುದರಿಂದ ಇಂದಿಗೂ ಕೊಳವೆ ಬಾವಿಗಳಲ್ಲಿ ನೀರು ಬತ್ತಿಲ್ಲ. ಚಿತ್ರದುರ್ಗ ತಾಲೂಕು ಸುತ್ತ ಮುತ್ತಲ ಹಳ್ಳಿಗಳ ರೈತರ ಜಮೀನುಗಳ ಕೊಳವೆ ಬಾವಿಗಳು ಬತ್ತಿ ಹೋಗಿ ತೋಟಗಳು ಒಣಗುತ್ತಿದ್ದು ಈಗ ಒಣಗುತ್ತಿರುವ ಅಡಿಕೆ, ತೆಂಗಿನ ತೋಟಗಳಿಗೆ ಇಲ್ಲಿಂದ ನಿತ್ಯ ಸಾವಿರಾರು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಂದೊಂದು ಬಡಾವಣೆಯಲ್ಲಿ ಮನೆಗಾಗಿ ಕೊಳವೆ ಬಾವಿ ಕೊರೆಸಿದ್ದ ನಿವಾಸಿಗಳೀಗ ಹತ್ತಾರು ಟ್ಯಾಂಕರ್‌ ವಾಹನಗಳಿಗೆ ನೀರು ತುಂಬಿಸಿಕೊಟ್ಟು ರೈತರ ತೋಟಗಳಿಗೆ ನೀರು ಹರಿಸಲಾಗುತ್ತಿದೆ. ಟ್ಯಾಂಕರ್‌ ಮೂಲಕ ನೀರು ಹರಿಸುವುದೇ ಒಂದು ಮಾಫಿಯಾ ಆಗಿ ಬೆಳೆದು ನಿಂತಿದೆ.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next