Advertisement

ಪ್ರಪಂಚದಲ್ಲೀಗ ಬಿಜೆಪಿಯೇ ದೊಡ್ಡ ಪಕ್ಷ

03:29 PM Sep 11, 2019 | Team Udayavani |

ಚಿತ್ರದುರ್ಗ: ಭಾರತೀಯ ಜನತಾ ಪಕ್ಷದ ಸದಸ್ಯರ ಸಂಖ್ಯೆ 17 ಕೋಟಿ ತಲುಪಿದ್ದು, ಜಗತ್ತಿನಲ್ಲಿ ಇಷ್ಟು ಸದಸ್ಯರಿರುವ ಮತ್ತೂಂದು ಸಂಘಟನೆ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಹೇಳಿದರು.

Advertisement

ನಗರದ ಕ್ರೀಡಾ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಾಂಸ್ಥಿಕ ಚುನಾವಣೆ ಪೂರ್ವಸಿದ್ಧತಾ ಸಭೆ ಹಾಗೂ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮಿತ್‌ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ಮೊದಲು ಬಿಜೆಪಿ ಸದಸ್ಯರ ಸಂಖ್ಯೆ 3 ಕೋಟಿ ಇತ್ತು. ಕಳೆದ ಸದಸ್ಯತ್ವ ಅಭಿಯಾನದಲ್ಲಿ ಇದು 11 ಕೋಟಿ ತಲುಪಿ ಜಗತ್ತಿನ ನಂ.1 ಸಂಘಟನೆಯಾಗಿದೆ. ಈ ವರ್ಷ 5.81 ಕೋಟಿ ಸದಸ್ಯರ ನೋಂದಣಿ ಆಗಿದ್ದು, ನಮ್ಮ ದೇಶದ ಯಾವ ಪಕ್ಷಗಳೂ ಇಷ್ಟೊಂದು ಸದಸ್ಯರನ್ನು ಹೊಂದಿಲ್ಲ ಎಂದರು.

ರಾಜ್ಯದಲ್ಲಿ ಸಂಘಟನಾ ಪರ್ವ ಶುರುವಾಗಿದ್ದು, ಸೆ. 30 ರೊಳಗಾಗಿ ರಾಜ್ಯದ 58 ಸಾವಿರ ಬೂತ್‌ಗಳ ಅಧ್ಯಕ್ಷರ ನೇಮಕ ಆಗಬೇಕಿದೆ. ನಂತರ 300 ಮಂಡಲ ಅಧ್ಯಕ್ಷರು, ಆನಂತರ ಜಿಲ್ಲಾಧ್ಯಕ್ಷರ ಚುನಾವಣೆ ನಡೆಯಬೇಕಿದೆ. ಡಿಸೆಂಬರ್‌ನಲ್ಲಿ ರಾಜ್ಯ ಘಟಕಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ಅರುಣ್‌ಕುಮಾರ್‌, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಮಹೇಶ್‌ ಟೆಂಗಿನಕಾಯಿ ಹಾಗೂ ನಾನು ಸೇರಿದಂತೆ 6 ಜನರ ತಂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದರು.

ಪ್ರತಿ ಬೂತ್‌ನಲ್ಲಿ ಇಬ್ಬರು ಸಕ್ರಿಯ ಸದಸ್ಯರಾಗಬೇಕು. ಸಕ್ರಿಯ ಸದಸ್ಯರಾಗಲು 25 ಹೊಸಬರನ್ನು ಸದಸ್ಯರನ್ನಾಗಿ ಮಾಡಬೇಕು. ಸಕ್ರಿಯ ಸದಸ್ಯರು ಬೂತ್‌ ಅಧ್ಯಕ್ಷರಾಗಲಿದ್ದಾರೆ. ಇವರು ಮಂಡಲ ಅಧ್ಯಕ್ಷರಿಗೆ ಮತ ಚಲಾಯಿಸುವರು. ಇದೇ ವೇಳೆ ರಾಜ್ಯಾದ್ಯಂತ ಕಾಶ್ಮೀರದ 370ನೇ ವಿಧಿ ರದ್ದು ಮಾಡಿದ ಕುರಿತಾಗಿ ಜಾಗೃತಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.

Advertisement

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗದಿಂದ ನೆರೆ ಸಂತ್ರಸ್ತರಿಗಾಗಿ 9 ಲೋಡ್‌ ಪರಿಹಾರ ಸಾಮಗ್ರಿ ಕಳಿಸಿದ್ದೇವೆ. 7 ಲಕ್ಷಕ್ಕಿಂತ ಹೆಚ್ಚು ಧನಸಹಾಯ ಮಾಡಿದ್ದೇವೆ. ಈ ಹಿಂದಿನ ಸರ್ಕಾರಗಳು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ಮಾಡಿದ್ದವು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ತಾರತಮ್ಯ ಆಗಿದ್ದ ಕ್ಷೇತ್ರಗಳಿಗೆ 25 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ನೆರೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಠಿತವಾದರೂ ಪರವಾಗಿಲ್ಲ, ನೆರೆ ಸಂತ್ರಸ್ತರಿಗೆ ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.

ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರಿನ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ಡಿಪಿಆರ್‌ ಮಾಡಿತ್ತು. ಆದರೆ ಸಮ್ಮಿಶ್ರ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್‌ ಸರ್ಕಾರಗಳು ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಮಾತ್ರ ಕಾಮಗಾರಿ ಮಾಡಿದ್ದವು. ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದರು.

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌, ಮುಖಂಡರಾದ ಲಿಂಗಮೂರ್ತಿ, ಸಿದ್ದೇಶ್‌ ಯಾದವ್‌, ಬದರೀನಾಥ್‌, ರತ್ನಮ್ಮ, ಜಯಪಾಲಯ್ಯ, ಮುರಳಿ, ಮಲ್ಲಿಕಾರ್ಜುನ್‌ ಮತ್ತಿತರರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next