Advertisement

ಚಿಣ್ಣರ ಬಿಂಬ ಮೀರಾ ಭಾಯಂದರ್‌- ವಿರಾರ್‌:ಸಾಂಸ್ಕೃತಿಕ ಉತ್ಸವ 

12:09 PM Sep 28, 2017 | Team Udayavani |

ಮುಂಬಯಿ: ಎಳೆಯ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಮೂಡಿಸುವ ಕಾರ್ಯದಲ್ಲಿ ನಾವು ತೊಡಗಬೇಕು. ಈ ನಿಟ್ಟಿನಲ್ಲಿ ಕಳೆದ ಒಂದು ದಶಕಕ್ಕಿಂತಲೂ ಅಧಿಕ ಕಾಲದಿಂದ ಮುಂಬಯಿಯಲ್ಲಿ ಚಿಣ್ಣರ ಬಿಂಬವು ವಿನೂತನ ರೀತಿಯ ಕ್ರಾಂತಿಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ನಾಡಿನ ಆಚಾರ, ವಿಚಾರಗಳು, ಸಂಸ್ಕೃತಿ-ಸಂಸ್ಕಾರಗಳು ಮರೆಯಾಗುತ್ತಿರುವುದನ್ನು ಮನಗಂಡ ಚಿಣ್ಣರ ಬಿಂಬವು ಪ್ರಕಾಶ್‌ ಭಂಡಾರಿ ಅವರ ನೇತೃತ್ವದಲ್ಲಿ ಮಕ್ಕಳಿಗೆ ಅದರ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಚಿಣ್ಣರ ಬಿಂಬದ ಪ್ರಯೋಜನವನ್ನು ಜಾತಿ, ಮತ, ಧರ್ಮ ಎಣಿಸದೆ ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು. ಇಂತಹ ಸಾಂಸ್ಕೃತಿಕ ಉತ್ಸವಗಳಿಂದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಲಭಿಸಿದಂತಾಗುತ್ತದೆ ಎಂದು ವಸಾಯಿಯ ಅಶೋಕ್‌ ಇಂಡಸ್ಟ್ರೀಸ್‌ನ ಅಶೋಕ್‌ ಶೆಟ್ಟಿ ಪೆರ್ಮುದೆ ಅವರು ಅಭಿಪ್ರಾಯಪಟ್ಟರು.

Advertisement

ಸೆ. 24ರಂದು ಬೆಳಗ್ಗೆ 9ರಿಂದ ಭಾಯಂದರ್‌ ಪೂರ್ವ, ನವಘರ್‌ರೋಡ್‌ನ‌ಲ್ಲಿರುವ ಮದರ್‌ ಮೇರಿಸ್‌ ಇಂಗ್ಲಿಷ್‌ ಹೈಸ್ಕೂಲ್‌ನ ಉತ್ಸವ್‌ ಸಭಾಗೃಹದಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ಮೀರಾ ಭಾಯಂದರ್‌-ವಸಾಯಿ- ನಲಸೋಪರ- ವಿರಾರ್‌ ಪ್ರಾದೇಶಿಕ ಶಾಖೆಗಳ ಸಾಂಸ್ಕೃತಿಕ ಉತ್ಸವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಜೀವನದಲ್ಲಿ ಸಾಂಸ್ಕೃತಿಕವಾಗಿ ಸಮೃದ್ಧತೆಯನ್ನು ಮೈಗೂಡಿಸಿಕೊಂಡು ಪ್ರಾದೇಶಿಕವಾಗಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತರಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯನ್ನು ಮೂಲ ಬೇರನ್ನು ಉಳಿಸುವಂತೆ ಮಾಡುತ್ತದೆ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಾಯಿ ಜೀವದಾನಿ ಡೆವಲಪರ್ನ ಲಯನ್‌ ಕೆ. ಟಿ. ಶಂಕರ್‌ ಅವರು ಮಾತನಾಡಿ, ಮುಂಬಯಿ ಮತ್ತು ಉಪನಗರಗಳಲ್ಲಿ ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯಲು ಒಂದು ಸೂಕ್ತ ವೇದಿಕೆ ಚಿಣ್ಣರ ಬಿಂಬದಿಂದ ಸಿಕ್ಕಿದೆ. ಇದರಲ್ಲಿ ಕಲಿತ ಚಿಣ್ಣರ ಪ್ರತಿಭೆಯನ್ನು ಕಂಡಾಗ ಆನಂದವಾಗುತ್ತಿದೆ. ಈ ಸಂಸ್ಥೆಯನ್ನು ಪೋಷಿಸುವ ಕಾರ್ಯ ತುಳು- ಕನ್ನಡಿಗರಿಂದಾಗಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಭಾಯಂದರ್‌ ಸೈಂಟ್‌ ಆ್ಯಗ್ನೆಸ್‌ ಹೈಸ್ಕೂಲ್‌ನ
ಕಾರ್ಯಾಧ್ಯಕ್ಷ ಅರುಣ್‌ ರೈ ಅವರು ಮಾತನಾಡಿ, ಮಕ್ಕಳಿಂದ, ಮಕ್ಕಳಿಗಾಗಿ ಮಕ್ಕಳಿಂದಲೇ ಸ್ಥಾಪನೆಗೊಂಡ ಸಂಸ್ಥೆ ಚಿಣ್ಣರ ಬಿಂಬವಾಗಿದೆ. ಚಿಣ್ಣರ ಬಿಂಬದ ರೂವಾರಿಗಳ ಕನಸು ಇಂದು ಸಾಕಾರಗೊಂಡಿದೆ ಎಂದರೆ ತಪ್ಪಾಗಲಾರದು. ನಿಸ್ವಾರ್ಥವಾಗಿ ಮಾಡುತ್ತಿರುವ ಇಂತಹ ಸೇವೆ ನಿಜವಾಗಿಯೂ ಶ್ಲಾಘನೀಯ ಎಂದರು.

ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ಚಿಣ್ಣರ ಬಿಂಬವು ಇಷ್ಟೊಂದು ಎತ್ತರಕ್ಕೆ ಏರಲು ಚಿಣ್ಣರು ಹಾಗೂ ಪಾಲಕರ ಶ್ರಮ ಕಾರಣವಾಗಿದೆ. ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಗಳನ್ನು ಸಲ್ಲಿಸುತ್ತಿದ್ದೇನೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಬಹುಮಾನ ಪಡೆಯುವುದು ಮುಖ್ಯವಲ್ಲ. ಮಕ್ಕಳ ಪ್ರತಿಭೆಯನ್ನು ಪೋಷಿಸುವ ಕಾರ್ಯದಲ್ಲಿ ಚಿಣ್ಣರ ಬಿಂಬವು ತೊಡಗಿದ್ದು, ಇದಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ಹೇಳಿದರು.

Advertisement

ಸಮಾರಂಭದ ವೇದಿಕೆಯಲ್ಲಿ ಮೀರಾರೋಡ್‌ ಹೊಟೇಲ್‌ ಉದ್ಯಮಿ ಶಿವರಾಮ ಶೆಟ್ಟಿ, ಚಿಣ್ಣರ ಬಿಂಬ ಮೀರಾ ಭಾಯಂದರ್‌-ವಸಾಯಿ-ನಲಸೋಪರ- ವಿರಾರ್‌ ಪ್ರಾದೇಶಿಕ ಶಾಖೆಯ ಮುಖ್ಯಸ್ಥೆ ಪೂರ್ಣಿಮಾ ಪೂಜಾರಿ, ವಿವಿಧ ಶಿಬಿರಗಳ ಮುಖ್ಯಸ್ಥರಾದ ಸುಕನ್ಯಾ ಸಫಲಿಗ, ವಿನಯಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾದ ಮಮತಾ ಭಂಡಾರಿ, ವಿಶಾಲಕ್ಷ್ಮೀ ಶೆಟ್ಟಿ, ಭಜನೆ ಶಿಕ್ಷಕಿಯರಾದ ಸರೋಜಿನಿ ಪೂಜಾರಿ, ಶಾಂತಾ ಆಚಾರ್ಯ, ಶಿಬಿರಗಳ ಶಿಕ್ಷಕಿಯರಾದ ಮಲ್ಲಿಕಾ ಶೆಟ್ಟಿ, ಸುಲೋಚನಾ ಶೆಟ್ಟಿ, ಸುರೇಖಾ ಮೂಲ್ಯ, ಅನಸೂಯಾ ಕೋಟ್ಯಾನ್‌, ಮಮತಾ ಶೆಟ್ಟಿ, ಮಂಜುಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಅತಿಥಿ-ಗಣ್ಯರನ್ನು ಚಿಣ್ಣರು ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಖೆಯ ಚಿಣ್ಣರ ಬಿಂಬದ ಮಕ್ಕಳಿಗೆ ಭಜನೆ, ಭಾಷಣ, ಭಾವಗೀತೆ, ಏಕಪಾತ್ರಾಭಿನಯ, ಛದ್ಮವೇಷ, ಜಾನಪದ ನೃತ್ಯ ಹಾಗೂ ಸಮೂಹ ಗಾನ ಸ್ಪರ್ಧೆಗಳು ನಡೆದವು. ಪಾಲಕರಿಗೆ ಚರ್ಚಾಕೂಟವನ್ನು ಆಯೋಜಿಸಲಾಗಿತ್ತು. ಶಾಖೆಯ ವಿದ್ಯಾರ್ಥಿ ಗಳಾದ ಅಶ್ರಿತಾ ಕೊಠಾರಿ, ಹಸ್ತಾ ಶೆಟ್ಟಿ, ಶ್ರೀರಕ್ಷಾ ಶೆಟ್ಟಿ, ಸುವಿಧಾ ಶೆಟ್ಟಿ ಅವರು ಕ್ರಮವಾಗಿ ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷೀ ಶೆಟ್ಟಿ ಅವರು ವಂದಿಸಿದರು. ಸೌಮ್ಯಾ ಶೆಟ್ಟಿ, ಸುಜಾತಾ ಶೆಟ್ಟಿ, ಆಶಾಲತಾ ಕೊಠಾರಿ, ಸುಚರಿತಾ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಕರ್ನಾಟಕ ಸರಕಾರ ಬೆಂಗಳೂರು ನಿರ್ದೇಶಕ ಎನ್‌. ಆರ್‌. ವಿಶುಕುಮಾರ್‌  ಇವರ ಪ್ರಾಯೋಜಕತ್ವದಲ್ಲಿ ನಡೆದ ಸಮಾರಂಭದಲ್ಲಿ ತುಳು-ಕನ್ನಡಿಗರು, ಸಂಸ್ಥೆಯ ರೂವಾರಿಗಳು, ಆಡಳಿತ ಮಂಡಳಿಯವರು, ಕಾರ್ಯಕಾರಿ ಸಮಿತಿಯ, ವಿವಿಧ ಉಪ ವಿಭಾಗಗಳ ಪದಾಧಿಕಾರಿಗಳು, ಕಾರ್ಯಕರ್ತರು, ಪಾಲಕ-ಪೋಷಕರು, ಶಿಕ್ಷಕರು, ಚಿಣ್ಣರು ಅಧಿಕ ಸಂಖ್ಯೆಯಲ್ಲಿ  ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next