Advertisement

ಚೀನ ಕುತಂತ್ರ: ಭಾರತವನ್ನು ಸುತ್ತುವರಿಯಲು ಡ್ರ್ಯಾಗನ್‌ ಪ್ಲಾನ್‌

04:35 AM Jul 14, 2017 | Team Udayavani |

ಹೊಸದಿಲ್ಲಿ: ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್‌, ಮಾಲ್ದೀವ್ಸ್‌ ಮತ್ತು ಸೂಡಾನ್‌ನಲ್ಲಿ ಒಂದಿಲ್ಲೊಂದು ನೆಪಗಳನ್ನು ಕೊಟ್ಟು ನೌಕಾ ನೆಲೆಗಳನ್ನು ಸ್ಥಾಪಿಸಿಕೊಂಡಿರುವ ಚೀನ, ಈಗ ಆಫ್ರಿಕಾದ ಪಶ್ಚಿಮದಲ್ಲಿರುವ ಜಿಬೋಟಿಯಲ್ಲಿ ಸೇನಾ ನೆಲೆ ಮಾಡಿಕೊಂಡು ಭಾರತದ ಭದ್ರತೆಗೆ ಆತಂಕ ತರುವ ಪ್ರಯತ್ನ ಮಾಡುತ್ತಿದೆ. ಹಣಕಾಸಿನ ನೆರವು ಎಂಬ ನೆಪದಲ್ಲಿ ಸೂಡಾನ್‌ ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ನೌಕಾ ನೆಲೆ ಮತ್ತು ಸಬ್‌ಮೆರಿನ್‌ಗಳನ್ನು ನಿಲ್ಲಿಸುವ ನೆಲೆಗಳನ್ನು ಮಾಡಿಕೊಂಡಿದೆ. ವಿಚಿತ್ರವೆಂದರೆ, ಈ ಎಲ್ಲ ನೆಲೆಗಳು ಭಾರತವನ್ನು ಸುತ್ತುವರಿದಿವೆ. ಈಗ ಹಿಂದೂ ಮಹಾಸಾಗರದ ಇನ್ನೊಂದು ಅಂಚಿನಲ್ಲಿರುವ ಆಫ್ರಿಕಾದ ಜಿಬೋಟಿಯಲ್ಲಿ ಇದೇ ಮೊದಲ ಬಾರಿಗೆ ಸೇನೆ ನಿಯೋಜಿಸಿರುವ ಅದು, ಭಾರತದ ವಿರುದ್ಧ ವ್ಯೂಹಾತ್ಮಕ ಕಾರ್ಯತಂತ್ರ ಹೆಣೆದಿದೆ. ವಿಶೇಷವೆಂದರೆ, ಇದು ಚೀನದ ಮೊದಲ ವಿದೇಶಿ ಸೇನಾ ನೆಲೆಯಾಗಿದೆ. ಚೀನದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿದ್ದು, ಚೀನದ ಝಾನ್‌ಜಿಯಾಂಗ್‌ನಿಂದ ಸಮರ ನೌಕೆಗಳನ್ನು ಕಳಿಸಲಾಗಿದೆ ಎಂದು ಹೇಳಿದೆ. ಜಿಬೋಟಿ ಹಿಂದೂ ಸಾಗರದ ವಾಯವ್ಯ ಭಾಗದ ತುದಿಯಲ್ಲಿದ್ದು, ಭಾರತಕ್ಕೆ ತಲೆನೋವಾಗಲಿದೆ. ಇಥಿಯೋಪಿಯಾ, ಎರಿಟೇರಿಯಾ, ಸೊಮಾಲಿಯಾ ಮಧ್ಯೆ ಇರುವ ಪುಟಾಣಿ ದ್ವೀಪರಾಷ್ಟ್ರ ಇದಾಗಿದ್ದು, ಆಯಕಟ್ಟಿನ ಸ್ಥಳದಲ್ಲಿದೆ. ಇಲ್ಲಿ ಸರಕು ಸಾಗಣೆ ವ್ಯವಸ್ಥೆ ಹೊಂದಿರುವುದಾಗಿ ಚೀನ ಹೇಳಿದರೂ ಅದನ್ನು ನಂಬುವಂತೆ ಭಾರತವಿಲ್ಲ.

Advertisement

ಶಸ್ತ್ರಾಸ್ತ್ರ  ಖರೀದಿಗೆ ಸೇನೆಗೆ ಸ್ವಾತಂತ್ರ್ಯ: ಪಾಕ್‌ ಕಿರಿಕ್‌, ಸಿಕ್ಕಿಂನಲ್ಲಿ ಚೀನ ಸೇನೆಗೆ ಎದುರಾಗಿ ನಿಂತಿರುವಂತೆಯೇ, ಕಿರು ಯುದ್ಧಗಳಿಗೆ ಶಸ್ತ್ರಾಸ್ತ್ರ ಖರೀದಿಗಾಗಿ ಭಾರತೀಯ ಸೇನೆಗೆ ಸ್ವಾತಂತ್ರ್ಯ ನೀಡಲಾಗಿದೆ. ಇದಕ್ಕಾಗಿ ವಿಶೇಷ ಹಣಕಾಸು ಅನುಕೂಲ ಕಲ್ಪಿಸಲಾಗಿದ್ದು, ಸೆೇನೆ ಸುಮಾರು 46 ಬಗೆಯ ಶಸ್ತ್ರಾಸ್ತ್ರ, 10 ಬಗೆಯ ಶಸ್ತ್ರಾಸ್ತ್ರಗಳ ಬಿಡಿಭಾಗಗಳು ಇತ್ಯಾದಿಗಳನ್ನು ತಾನೇ ಖರೀದಿಸಬಹುದು. ಸುಮಾರು 40 ಸಾವಿರ ಕೋಟಿ ರೂ. ವೆಚ್ಚ ಮಾಡುವ ಸ್ವಾತಂತ್ರ್ಯ ಇರಲಿದೆ. ಇದಕ್ಕೂ ಹೊರತಾದುವುಗಳಿಗೆ ಬಜೆಟ್‌ ಅನುಮೋದನೆ, ಕೇಂದ್ರದ ಅನುಮತಿ ಬೇಕಾಗುತ್ತದೆ. ತಕ್ಷಣದಲ್ಲಿ ಯುದ್ಧ ಪರಿಸ್ಥಿತಿ ಉದ್ಭವಿಸಿದಲ್ಲಿ ಸೇನೆಗೆ ನೆರವಾಗಲು ಕೇಂದ್ರ ಈ ಕ್ರಮ ಕೈಗೊಂಡಿದೆ.

ದ್ವಿಪಕ್ಷೀಯವಾಗಿಯೇ ಪರಿಹಾರ: ಕಾಶ್ಮೀರ ಸಮಸ್ಯೆ ಪರಿಹರಿಸಲು ಪಾಕ್‌-ಭಾರತ ಮಧ್ಯೆ ರಚನಾತ್ಮಕ ಪಾತ್ರ ವಹಿಸುತ್ತೇವೆ ಎಂದಿದ್ದ ಚೀನದ ಮಾತುಗಳನ್ನು ಭಾರತ ತಿರಸ್ಕರಿಸಿದೆ. ನಾವು ಏನಿದ್ದರೂ, ದ್ವಿಪಕ್ಷೀಯವಾಗಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ.

ಬಾಂಗ್ಲಾಕ್ಕೆ ಚೀನ ಜಲಾಂತರ್ಗಾಮಿ: ನೆರೆಯ ಬಾಂಗ್ಲಾದೇಶ ಚೀನದಿಂದ ಜಲಾಂತರ್ಗಾಮಿಗಳ ಖರೀದಿಗೆ ಯೋಜಿಸಿದೆ. 1200 ಕೋಟಿ ರೂ. ವೆಚ್ಚದಲ್ಲಿ 2 ಜಲಾಂತರ್ಗಾಮಿ ಖರೀದಿ ನಡೆಯಲಿದ್ದು, ಇದರಿಂದ ನೆರೆಹೊರೆಯ ದೇಶಗಳಿಗೆ ಏನೂ ಸಮಸ್ಯೆಯಿಲ್ಲ. ನಮ್ಮ ಸಾರ್ವಭೌಮತೆ ರಕ್ಷಿಸಲು ಮಾಡುವ ಕ್ರಮ ಇದಾಗಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ.

ಅಮೆರಿಕಕ್ಕೂ ಚೀನಾತಂಕ: ಜಿಬೋಟಿಯಲ್ಲಿ ಚೀನ ತನ್ನ ಸೇನಾ ನೆಲೆ ಸ್ಥಾಪಿಸಿರುವುದು ಏಷ್ಯಾದ ದೇಶಗಳಿಗಷ್ಟೇ ಅಲ್ಲ, ಅಮೆರಿಕದ ಆತಂಕಕ್ಕೂ ಕಾರಣವಾಗಿದೆ. ಜಿಬೋಟಿ ಅಂತಾರಾಷ್ಟ್ರೀಯ ಸೇನಾ ನೆಲೆಯಾಗಿದ್ದು, ಇಲ್ಲಿ ಅಮೆರಿಕ ಸೇರಿದಂತೆ ಪ್ರಮುಖ ದೇಶಗಳ ನೆಲೆಗಳಿವೆ. ಅಲ್ಲದೆ ಚೀನ ಸ್ಥಾಪನೆ ಮಾಡಿರುವ ಸೇನಾ ನೆಲೆ ಅಮೆರಿಕದ ನೆಲೆಯಿಂದ ಕೇವಲ 6 ಕಿ.ಮೀ.ಗಳ ಅಂತರದಲ್ಲಿದೆ. ಹೀಗಾಗಿ, ಈ ಎರಡೂ ದೇಶಗಳ ತಿಕ್ಕಾಟಕ್ಕೂ ಜಿಬೋಟಿ ಕಾರಣವಾಗಬಹುದು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕ ಸೇನಾ ಪಡೆಯ ವಕ್ತಾರರು, ಈಗಾಗಲೇ ಜಿಬೋಟಿಯ ಸ್ಥಳೀಯ ಸರಕಾರಕ್ಕೆ ತಮ್ಮ ಆತಂಕ ವ್ಯಕ್ತಪಡಿಸಲಾಗಿದೆ ಎಂದಿದ್ದಾರೆ. ವಿಶೇಷವೆಂದರೆ ಜಿಬೋಟಿಯಲ್ಲಿ ಈಗಾಗಲೇ ಅಮೆರಿಕ, ಫ್ರಾನ್ಸ್‌, ಜಪಾನ್‌, ಸೌದಿ ಅರೆಬಿಯಾದ ಸೇನಾ ನೆಲೆಗಳಿವೆ. ಇದೀಗ ಚೀನ ಕೂಡ ಇಲ್ಲೇ ಸೇನಾ ನೆಲೆ ಮಾಡಿದ್ದು, ನಾವು ಹಿಂದೂ ಮಹಾಸಾಗರದ ಮೇಲೆ ಕಣ್ಣಿಡುವ ಸಲುವಾಗಿ ಮಾಡಿದ್ದಲ್ಲ, ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಸಲುವಾಗಿ ಇಲ್ಲಿಗೆ ಬಂದಿದ್ದೇವೆ ಎಂದಿದೆ.

Advertisement

ಭಾರತದ ಕಳವಳಕ್ಕೆ ಹಲವು ಕಾರಣಗಳೇನು?
1. ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕೆ ಹತ್ತಿರದ ಪ್ರದೇಶ ಜಿಬೋಟಿ. ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಪ್ರದೇಶ. ಇದೇ ಕಾರಣಕ್ಕೆ ಈ ಭಾಗದಲ್ಲಿ ವಿಶ್ವದ ವಿವಿಧ ದೇಶಗಳು ಸೇನಾನೆಲೆ ಹೊಂದಿವೆ. ಈಗಾಗಲೇ ಬಾಂಗ್ಲಾ, ಶ್ರೀಲಂಕಾದಲ್ಲಿ ನೌಕಾ ಸೇನೆಯ ಕಾರ್ಯ ಚಟುವಟಿಕೆ ವಿಸ್ತರಣೆಗೆ ಚೀನ ಯತ್ನಿಸುತ್ತಿದ್ದು, ಅದೂ ಸಫ‌ಲವಾದರೆ ಭಾರತವನ್ನು ಸುತ್ತುವರಿದಂತೆ ಆಗಲಿದೆ.

2. ಕಳೆದೆರಡು ತಿಂಗಳಿಂದ ಹಿಂದೂ ಮಹಾಸಾಗರದಲ್ಲಿ ಚೀನದ ಯುದ್ಧ ಹಡಗುಗಳು, ಜಲಾಂತರ್ಗಾಮಿಗಳ ಓಡಾಟ ಹೆಚ್ಚಾಗಿರುವುದನ್ನು ಭಾರತದ ನೌಕಾಪಡೆ ಪತ್ತೆಹಚ್ಚಿದೆ.

3. ಭಾರತ ಅಮೆರಿಕ, ಜಪಾನ್‌ಗಳೊಂದಿಗೆ ನಡೆಸುತ್ತಿರುವ ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಪರ್ಯಾಯವಾಗಿ ಚೀನ ಈ ಭಾಗದಲ್ಲಿ ತನ್ನ ಬಾಹುಳ್ಯ ವಿಸ್ತರಣೆಗೆ ಪ್ರಯತ್ನಿಸುತ್ತಿದೆ.

4. ಹಿಂದೂ ಮಹಾಸಾಗರ ಪ್ರದೇಶ ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖವಾಗಿದೆ. ಭಾರತಕ್ಕೆ ಮಧ್ಯಪ್ರಾಚ್ಯದಿಂದ ಇದೇ ಮಾರ್ಗ ದಲ್ಲಿ ತೈಲ ಪೂರೈಕೆಯಾಗುತ್ತದೆ. ಇದನ್ನು ತಡೆದರೆ, ಭಾರತದ ಸ್ಥಿತಿ ಸಂಕಷ್ಟದ್ದು.

5. ಜಿಬೋಟಿಯೊಂದಿಗೆ ಮುಂದಿನ ದಿನಗಳಲ್ಲಿ ಪಾಕ್‌, ಬಾಂಗ್ಲಾ, ಶ್ರೀಲಂಕಾಗಳಲ್ಲಿ ಚೀನ ತನ್ನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಬಹುದು.

ಚೀನ ಮೇಲೆ ಭಾರತದ ಕಣ್ಣು!
ಭಾರತ ಚೀನವನ್ನು ಉದ್ದೇಶದಲ್ಲಿಟ್ಟುಕೊಂಡು ತನ್ನ ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಇಬ್ಬರು ಅಣ್ವಸ್ತ್ರ ತಜ್ಞರು ಹೇಳಿದ್ದಾರೆ. ಡಿಜಿಟಲ್‌ ನಿಯತಕಾಲಿಕೆ ‘ಆಫ್ಟರ್‌ ಮಿಡ್‌ನೈಟ್‌’ನ ಜುಲೈ-ಆಗಸ್ಟ್‌ ಸಂಚಿಕೆಯಲ್ಲಿ ಈ ಬಗ್ಗೆ ‘ಇಂಡಿಯನ್‌ ನ್ಯೂಕ್ಲಿಯರ್‌ ಫೋರ್ಸಸ್‌ 2017’ ಹೆಸರಿನ ಲೇಖನವೊಂದನ್ನು ತಜ್ಞರಾದ ಹನ್ಸ್‌ ಎಮ್‌ ಕ್ರಿಸ್ಟೆನ್‌ಸೆನ್‌ ಮತ್ತು ರಾಬರ್ಡ್‌ ಎಸ್‌ ನಾರಿಸ್‌ ಅವರು ಬರೆದಿದ್ದು, ಅಣ್ವಸ್ತ್ರಗಳ ಆಧುನೀಕರಣದೊಂದಿಗೆ ದಕ್ಷಿಣ ಭಾರತದಿಂದ ಚೀನದ ಎಲ್ಲ ಭಾಗಗಳನ್ನೂ ತಲುಪುವ ಕ್ಷಿಪಣಿಯನ್ನು ಭಾರತ ತಯಾರಿಸುತ್ತಿದೆ ಎಂದು ಹೇಳಿದ್ದಾರೆ.  ಭಾರತದ ಬಳಿ 150ರಿಂದ 200ರಷ್ಟು ಅಣ್ವಸ್ತ್ರ ಸಿಡಿತಲೆಗಳನ್ನು ತಯಾರಿಸಲು ಬೇಕಾದಷ್ಟು ಪ್ಲುಟೋನಿಯಂ ಇದ್ದು, ಆದರೆ 120ರಿಂದ 130ರಷ್ಟು ಸಿಡಿತಲೆಗಳನ್ನು ಅದು ತಯಾರಿಸಿರಬಹುದು ಎಂದು ಲೇಖನದಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next