Advertisement

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

09:10 PM May 11, 2021 | Team Udayavani |

ಬೆಂಗಳೂರು: ಕಳೆದ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ಅತಿಹೆಚ್ಚು ಬಾಲ್ಯವಿವಾಹ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದವು. ಈಗ ಮತ್ತೆ ಸರ್ಕಾರ ಮನೆಯಲ್ಲೇ ಮದುವೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಇನ್ನಷ್ಟು ಬಾಲ್ಯ ವಿವಾಹ ಪ್ರಕರಣ ನಡೆಯುವ ಸಾಧ್ಯತೆಯಿದೆ.

Advertisement

ಬಾಲ್ಯ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇದರ ತಡೆಗೆ ಅನೇಕ ರೀತಿಯ ಪ್ರಯತ್ನಗಳನ್ನು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಆದರೂ, ಅರಿವಿನ ಕೊರತೆ, ಹೆಣ್ಣು ಮನೆಯಲ್ಲಿದ್ದರೆ ಭವಿಷ್ಯದ ಆತಂಕ, ಮುಂದೆ ಹುಡುಗನನ್ನು ಹುಡುಕುವುದು ಕಷ್ಟ, ಆರ್ಥಿಕ ಪರಿಸ್ಥಿತಿ.. ಹೀಗೆ ಹಲವು ಕಾರಣಕ್ಕಾಗಿ ಇಂದಿಗೂ ಬಾಲ್ಯ ವಿವಾಹ ನಡೆಯುತ್ತಲೇ ಇವೆ. ಹಾಗೆಯೇ ಬಾಲ್ಯ ವಿವಾಹ ತಡೆದು, ಬಾಲಕ ಅಥವಾ ಬಾಲಕಿಯನ್ನು ರಕ್ಷಿಸುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿದೆ. ಆದರೂ ಪಾಲಕ, ಪೋಷಕರು ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯವಿವಾಹ ಮಾಡುತ್ತಿದ್ದಾರೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಗಳು ತಿಳಿಸಿವೆ.

190 ಬಾಲ್ಯ ವಿವಾಹ ನಿಲ್ಲಿಸಲಾಗಿತ್ತು: ಲಾಕ್‌ಡೌನ್‌ ಪರಿಸ್ಥಿತಿ ಅನೇಕ ಆತಂಕಗಳನ್ನು ಸೃಷ್ಟಿಸಿರುವ ಜತೆಗೆ ಬಾಲ್ಯವಿವಾಹ ಪ್ರಕರಣವೂ ಹೆಚ್ಚಾಗುವಂತೆ ಮಾಡಿದೆ. 2020ರ ಮಾರ್ಚ್‌ನಿಂದ ಮೇ ಅಂತ್ಯದ ವರೆಗೆ ರಾಜ್ಯಾದ್ಯಂತ 1,016 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿತ್ತು. ಇದರಲ್ಲಿ ಕೆಲವೊಂದನ್ನು ಅಧಿಕಾರಿಗಳು ತಡೆದಿದ್ದಾರೆ. ಇನ್ನು ಕೆಲವು ಪ್ರಕರಣದಲ್ಲಿ ಪಾಲಕ, ಪೋಷಕ ಅಥವಾ ವಧು-ವರನ ಮೇಲೂ ಪ್ರಕರಣ ದಾಖಲಾಗಿದೆ.

ಈ ಅವಧಿಯಲ್ಲಿ ಚಾಮರಾಜನಗರದಲ್ಲಿ 12, ಚಿಕ್ಕಬಳ್ಳಾಪುರದಲ್ಲಿ 15, ಧಾರವಾಡದಲ್ಲಿ 23, ಕೋಲಾರದಲ್ಲಿ 13, ತುಮಕೂರಿನಲ್ಲಿ 16, ಮೈಸೂರಿನಲ್ಲಿ 11 ಸೇರಿ ರಾಜ್ಯಾದ್ಯಂತ 190 ಬಾಲ್ಯ ವಿವಾಹ ಪ್ರಕರಣಗಳನ್ನು ಪತ್ತೆ ಹಚ್ಚಿ ತಡೆಯಲಾಗಿದೆ ಎಂದು ಚೈಲ್ಡ… ಹೆಲ್ಪ್ಲೈನ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನೂ ಓದಿ :ಯಾದಗಿರಿಗೆ ಇಸ್ರೇಲ್‌ ನಿಂದ ಬಂತು ಆಕ್ಸಿಜನ್ ಉತ್ಪಾದಿಸುವ ಘಟಕದ ಬೃಹತ್ ಕಂಟೇನರ್

Advertisement

ತುರ್ತು ಸಭೆ: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ. ಮನೆಯಲ್ಲೇ ಮದುವೆಗೆ ಅವಕಾಶ ನೀಡಿದೆ. ಇಂತಹ ಸಂದರ್ಭಗಳಲ್ಲಿ ಬಾಲ್ಯ ವಿವಾಹ ಹೆಚ್ಚು ನಡೆಯುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳಿಗೂ ಮಾಹಿತಿ ಇರುವುದಿಲ್ಲ. ಹೀಗಾಗಿ ಮುಂದೆ ನಡೆಯಬಹುದಾದ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ತುರ್ತು ಸಭೆ ಕರೆದಿದ್ದೇವೆ. ಅಗತ್ಯ ಚರ್ಚೆ ನಡೆಸಿ, ಸರ್ಕಾರ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ಒದಗಿಸಲಿದ್ದೇವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಡಾ. ಆಂಥೋಣಿ ಸಬಾಸ್ಟಿನ್‌ ವಿವರ ನೀಡಿದರು.

ಆತಂಕ ಹೆಚ್ಚಿದೆ, ಅರಿವೂ ಅಗತ್ಯ
ಲಾಕ್‌ಡೌನ್‌ ಸಂದರ್ಭದಲ್ಲಿ ಊರು, ಕೇರಿಗಳಲ್ಲಿ 16ರಿಂದ 18ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತದೆ. ಇದರಿಂದ ಹೆಣ್ಣುಮಗುವಿನ ಶೈಕ್ಷಣಿಕ ಭವಿಷ್ಯವೂ ಹಾಳಾಗುತ್ತದೆ. ಹೀಗಾಗಿ ಪಾಲಕ, ಪೋಷಕರಿಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ. ಚೈಲ್ಡ್ ಹೆಲ್ಪ್ ಲೈನ್‌ ಬಾಲ್ಯ ವಿವಾಹದ ಕರೆಗಳು ಬರಲು ಆರಂಭವಾಗಿದೆ. ಆತಂಕವಂತೂ ಇದ್ದೇ ಇದೆ ಎಂದು ಚೈಲ್ಡ್ ರೈಟ್ಸ್‌ ಟ್ರಸ್ಟ್‌ ನಿರ್ದೇಶಕ ನಾಗಸಿಂಹ ಜಿ.ರಾವ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಮಾರ್ಗಸೂಚಿ ಪರಿಷ್ಕರಿಸಲು ಮನವಿ
ಬೆಂಗಳೂರು: ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಮನೆಯಲ್ಲೇ ಮದುವೆ ಮಾಡಿ ಎಂಬ ಸರ್ಕಾರದ ಮಾರ್ಗಸೂಚಿಯಿಂದ ಬಾಲ್ಯ ವಿವಾಹ ಹೆಚ್ಚಾಗುವ ಸಾಧ್ಯತೆಯಿದ್ದು, ಅದನ್ನು ಪರಿಷ್ಕರಿಸಬೇಕೆಂದು ಚೈಲ್ಡ್ ರೈಟ್ಸ್‌ ಟ್ರಸ್ಟ್‌ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಮಾಡಿದೆ. ಮದುವೆಗೆ ಹಾಜರಾಗುವವರಿಗೆ ನೀಡಲಾಗುವ ಪಾಸ್‌ಗಳ ಮೇಲೆ ಬಾಲ್ಯ ವಿವಾಹ ಕಾನೂನು ಬಾಹಿರ-ಮಕ್ಕಳ ರಕ್ಷಣೆಗೆ ಕರೆ ಮಾಡಿ ಚೈಲ್ಡ್‌ ಲೈನ್‌ 1098ಗೆ ಈ ಮಾಹಿತಿಗಳನ್ನು ಪ್ರಕಟಿಸಬೇಕೆಂದು ಟ್ರಸ್ಟ್‌ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next