Advertisement

ಅನಾಥರಿಗೆ ಸಂಜೀವಿನಿಯಾದ ನಿರಾಶ್ರಿತರ ಕೇಂದ್ರ

01:11 PM Apr 30, 2020 | Naveen |

ಚಿಕ್ಕಮಗಳೂರು: ಇಲ್ಲಿಗೆ ಭೇಟಿ ನೀಡಿದ್ರೆ ಮನಸ್ಸು ಭಾರವಾಗುತ್ತೆ. ಒಬ್ಬೊಬ್ಬರ ಕಣ್ಣೀರಿನ ಕಥೆ ಮನ ಕಲಕುತ್ತೆ. ಜೀವನವೆಂದ್ರೆ ಇಷ್ಟೇನಾ ಅನಿಸಿ ಬಿಡುತ್ತೆ. ಹೌದು… ನಗರದ ನಿರಾಶ್ರಿತರ ಕೇಂದ್ರದಲ್ಲಿ ಒಂದು ಸುತ್ತು ಹೊಡೆದರೆ ಇಂತಹದ್ದೊಂದು ಭಾವ ಮೂಡೋದು ಸತ್ಯ.

Advertisement

ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ವಿಧಿಸಿದ್ದು ನೆಲೆ ಇಲ್ಲದವರಿಗೆ ನೆಲೆ ಕಲ್ಪಿಸಿಕೊಡುವ ಉದ್ದೇಶದಿಂದ ನಗರದ ಎಐಟಿ ಕಾಲೇಜು ಸಮೀಪದ ಡಾ|ಬಿ.ಆರ್‌.ಅಂಬೇಡ್ಕರ್‌ ವಸತಿ ನಿಲಯದಲ್ಲಿ ನಿರಾಶ್ರಿತರ ಕೇಂದ್ರ ತೆರೆದಿದ್ದು ಇಲ್ಲಿ ಆಶ್ರಯ ಪಡೆದಿರುವವರದ್ದು ಒಂದೊಂದು ಕಥೆ. ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಅನೇಕರು ದೆಹಲಿ, ಮಧ್ಯಪ್ರದೇಶ, ತಮಿಳುನಾಡು ಹೀಗೆ ದೇಶದ ವಿವಿಧ ರಾಜ್ಯಗಳಿಗೆ ಸೆರಿದವರು. ಕೆಲವರು ಆರೋಗ್ಯವಂತರು. ಮತ್ತೆ ಕೆಲವರು ಬುದ್ಧಿಮಾಂದ್ಯರು, ಅಂಗವಿಕಲರು. ಅವರ ತಂದೆ-ತಾಯಿ ಸ್ಥಿತಿವಂತರಾಗಿದ್ದರೂ ಹೆತ್ತವರಿಗೆ ಹೊರೆ ಎನಿಸಿದಾಗ ರೈಲು ಹತ್ತಿಸಿ ಕಳುಹಿಸಿ ಬಿಡುತ್ತಾರೆ. ರೈಲು ಎಲ್ಲಿ ಬಂದು ನಿಲ್ಲುತ್ತೋ ಅದೇ ರೈಲು ಸ್ಟೇಷನ್ನೇ ಅವರ ಮನೆಯಾಗುತ್ತದೆ. ಹೀಗೆ ಬಂದವರೇ ಹೆಚ್ಚು ಎನ್ನುತ್ತಾರೆ ಮಲೆನಾಡು ಕ್ರೈಸ್ತ ಅಭಿವೃದ್ಧಿ ಸಂಘ ಹಾಗೂ ನಿರಾಶ್ರಿತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರೂಬೆನ್‌ ಮೊಸಸ್‌.

ತಮಿಳುನಾಡಿನಿಂದ ಬಂದ ಅಜೇಯ್‌ ಮೂರ್ನಾಲ್ಕು ತಿಂಗಳಿಂದ ನಗರದ ರೈಲ್ವೆ ಸ್ಟೇಷನ್‌ ನಲ್ಲೇ ಆಶ್ರಯ ಪಡೆದುಕೊಂಡಿದ್ದ. ಲಾಕ್‌ಡೌನ್‌ ಆದ ನಂತರ ಆತನನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆತರಲಾಯಿತು. ಮೊದಲು ಬಂದಾಗ ಮಾತೇ ಆಡುತ್ತಿರಲಿಲ್ಲ, ಸ್ಟ್ರೋಕ್‌ ಆದಂತೆ ಆಗಿತ್ತು. ಆ ನಂತರ ಆತನನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಯಿತು. ಈಗ ಸುಧಾರಿಸಿಕೊಂಡಿದ್ದಾನೆ. ಊರಿಗೆ ಹೋಗ್ತಿàಯಾ ಅಂದರೆ, ಊರಿಗೆ ಹೋಗಲ್ಲ ಇಲ್ಲೇ, ಕೆಲಸ ಮಾಡ್ತೇನೆ ಅಂತಾನೆ. ಆತನಿಗೆ ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಬರೋದಿಲ್ಲ ಅಂತಾರೆ ರೂಬಿ. ಬಾಬು ಎಂಬಾತನಿಗೆ ಮಾತು ಬರಲ್ಲ. ಅಪ್ಪನ ಹೇಸ್ರು ಕೇಳಿದ್ರೇ ಪಪ್ಪಾ ಅಂತಾನೆ. ಅಮ್ಮನ ಹೆಸರು ಕೇಳಿದ್ರೆ ಅಮ್ಮಿ ಅಂತಾನೆ. ತನ್ನ ಕುಟುಂಬ ನೆನೆದು ಬಿಕ್ಕಿಬಿಕ್ಕಿ ಅಳ್ತಾನೆ. ಇವನು ನಿರಂತರವಾಗಿ ಡ್ಯಾನ್ಸ್‌ ಮಾಡ್ತಾನೆ. ಎಲ್ಲಾ ಭಾಷೆಯ ಹಾಡಿಗೂ ಸ್ಟೆಪ್‌ ಹಾಕ್ತಾನೆ. ಇಂತವರನ್ನು ಲಾಕ್‌ಡೌನ್‌ ಮುಗಿದ ಮೇಲೆ ಬೀದಿಗೆ ಬಿಟ್ರೆ ಮತ್ತೆ ಅದೇ ಭಿಕ್ಷೆ ಬೇಡುವ ಹಾದಿ ಹಿಡೀತಾರೆ. ಬೇರೆ ವ್ಯವಸ್ಥೆ ಮಾಡಿ ನೆಲೆ ಕಲ್ಪಿಸುತ್ತೇವೆ ಎನ್ನುತ್ತಾರೆ ರೂಬೆನ್‌ ಮೊಸಸ್‌.

ಮಧ್ಯಪ್ರದೇಶದ ಮಿತನ್‌ ಎಂಬ ಯುವಕನ ಕೈಮೇಲೆ ಈತ ಅನಾಥ ಎಂದು ಹಚ್ಚೆ ಹಾಕಿದ್ದಾರೆ. ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ಆತನನ್ನು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿದ್ದೇವೆ. ಇವರಿಗೆಲ್ಲ ತಮ್ಮ ನಿತ್ಯಕರ್ಮಗಳನ್ನು ತಾವೇ ನಿಭಾಯಿಸುವುದನ್ನು ಹೇಳಿಕೊಡುತ್ತೀದ್ದೇವೆ. ಮೂರ್ನಾಲ್ಕು ತಿಂಗಳು ಪ್ರಾಕ್ಟೀಸ್‌ ಮಾಡಿಸಿದ್ರೆ ಸರಿಯಾಗ್ತಾರೆ ಎಂಬುದು ರೂಬೆನ್‌ ಅವರ ಅಭಿಪ್ರಾಯ. ಕೆಎಸ್‌ಆರ್‌ಟಿಸಿ ನಿವೃತ್ತ ನಿರ್ವಾಹಕ ವೆಂಕಟೇಶಯ್ಯ ಎನ್ನುವವರು ಚಿಕ್ಕಮಗಳೂರು ನಗರದವರೇ. ತಿಂಗಳಿಗೆ ಒಂದು ಸಾವಿರ ರೂ. ಪೆನ್ಷನ್‌ ಬರುತ್ತೆ. ಯಾವುದೋ ಕಾರಣ ಮನೆಬಿಟ್ಟು ಬಂದಿದ್ದಾರೆ.

ಮನೆಗೆ ಹೋಗ್ತೀರಾ ಅಂದ್ರೆ ಹೋಗಲ್ಲ ಅಂತಾರೇ.. ಲಾಕ್‌ಡೌನ್‌ ಮುಗಿದ ನಂತರ ಅವರನ್ನು ವೃದ್ಧಾಶ್ರಮಕ್ಕೆ ಬಿಡುವ ಬಗ್ಗೆ ಚಿಂತನೆ ಮಾಡಲಾಗಿದೆ. ಜಿಲ್ಲೆಗೆ ಕೆಲಸ ಅರಸಿ ಬಂದ ಕುಟುಂಬವೊಂದು ಲಾಕ್‌ಡೌನ್‌ನಿಂದ ಊರು ಸೇರಲು ಆಗದೇ ಸಂತೆ ಮೈದಾನದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅವರನ್ನು ನಿರಾಶ್ರಿತ ಕೇಂದ್ರಕ್ಕೆ ಕರೆತರಲಾಯಿತು. ಈ ದಂಪತಿಗೆ ಚಿಕನ್‌ ಸೆಂಟರ್‌ವೊಂದರಲ್ಲಿ ಕೆಲಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಮಕ್ಕಳನ್ನು ಬಾಲಮಂದಿರಕ್ಕೆ ಬಿಟ್ಟು ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

Advertisement

ಕೊರೊನಾ ವೈರಸ್‌ ತಡೆಯಲು ಸರ್ಕಾರ ಲಾಕ್‌ಡೌನ್‌ ವಿಧಿಸಿ ಎಲ್ಲವನ್ನು ಮುಚ್ಚಿಬಿಟ್ಟಿತು. ಆದರೆ, ಬೀದಿಯೇ ಮನೆ, ಭಿಕ್ಷೆಯೇ ಮೃಷ್ಠಾನ ಅನ್ನುವ ಜೀವಗಳಿಗೆ ದಾರಿ ಕಾಣದಂತಾಯಿತು. ಆಗ ಇವರ ನೆರವಿಗೆ ಬಂದಿದ್ದೇ ನಿರಾಶ್ರಿತ ಕೇಂದ್ರ. ಕಳೆದೊಂದು ತಿಂಗಳಿಂದ ಇವರ ಸೇವೆ ಮಾಡುತ್ತಿರುವ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ರೂಬಿ, ಸಹನ, ಫ್ರಾನ್ಸಿಸ್‌, ಸಿಲ್ವಸ್ಟರ್‌, ರೋನಿ, ಸಂಜು, ಜನೆಟ್‌, ಜೋಸಫ್‌, ಪ್ಯಾಟ್ರಿಕ್‌, ಜನ್ನಿಫರ್‌, ಯುವಸಹಾಯ ಹಸ್ತದ ಕಾರ್ತಿಕ್‌ ಜೆ.ಚೆಟ್ಟಿಯಾರ್‌, ತನೋಜ್‌, ಶಿವಕುಮಾರ್‌, ಸಂದೇಶ, ಭರತ್‌, ಪ್ರಜ್ವಲ್‌, ಗುರು ಇವರ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ.

ನಿರಾಶ್ರಿತರ ಸೇವೆ ಮಾಡುತ್ತಿರುವ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ಯುವ ಸಹಾಯ ಹಸ್ತ ತಂಡದ ಸದಸ್ಯರು ಇವರ ಜೀವನಕ್ಕೆ ನೆಲೆ ಕಲ್ಪಿಸಿಕೊಡಬೇಕು. ಚಿಕ್ಕಮಗಳೂರು ನಗರವನ್ನು ಭಿಕ್ಷುಕ ಮುಕ್ತ ನಗರ ಮಾಡಬೇಕು ಎಂದು ಪಣತೊಟ್ಟಿದ್ದು, ಇವರ ನಿಸ್ವಾರ್ಥ ಸೇವೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿ 47 ಜನ ಆಶ್ರಯ ಪಡೆದುಕೊಂಡಿದ್ದಾರೆ. ಬುಧವಾರ ಸಹ ಹೊಸ ಅತಿಥಿ ಕೇಂದ್ರ ಸೇರಿದ್ದಾನೆ. ಈತನ ಹೆಸರು ಮುಖೇಶ್‌ ನಗರದ ರೈಲ್ವೆ ನಿಲ್ದಾಣದಲ್ಲಿ ಆಶ್ರಯ ಪಡೆದುಕೊಂಡಿದ್ದ. ಪಾರ್ಥೇನಿಯಂ ಸೊಪ್ಪನ್ನು ಪೇಂಟ್‌ ಡಬ್ಬದಲ್ಲಿ ಬೇಯಿಸಿ ತಿನ್ನುತ್ತಿದ್ದ ಈತನನ್ನು ಕರೆತಂದು ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next