Advertisement

Chikkamagaluru; ವಿಡಿಯೋ ವೈರಲ್ ಆದ ಅಪಘಾತದ ಹಿಂದೆ ಅಡಗಿದೆ ಪ್ರೇಮ್ ಕಹಾನಿ!

08:09 PM Aug 18, 2023 | Team Udayavani |

ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತದ ಹಿಂದೆ ಪ್ರೇಮ್ ಕಹಾನಿ ಅಡಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

Advertisement

ಅಪಘಾತದಲ್ಲಿ ಬೈಕ್ ಕಾರಿನಡಿಗೆ ಸಿಲುಕಿ ಬೆಂಕಿ ಬರುತ್ತಿದ್ದ ವೇಳೆ ಸ್ಥಳೀಯರು ನೋಡಿ ಕೂಗಿದಾಗ ಕಾರು ನಿಲ್ಲಿಸಿದಂತೆ ಮಾಡಿ, ಕಾರಿನೊಂದಿಗೆ ಚಾಲಕ ಪರಾರಿಯಾಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣದ ಹಿಂದೆ ಬಿದ್ದ ಪೊಲೀಸರಿಗೆ ಇದರ ಹಿಂದೆ ಪ್ರೇಮ್ ಕಹಾನಿ ಅಡಗಿರುವುದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ಅಂಕಿತ್ ಮತ್ತು ನಕುಲ್ ಸ್ನೇಹಿತರಾಗಿದ್ದು, ಹುಡುಗಿಯ ವಿಚಾರಕ್ಕೆ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಆ.14 ರ ಮಧ್ಯರಾತ್ರಿ ನಕುಲ್‌ನನ್ನು ಮಾತನಾಡಬೇಕೆಂದು ನರಿಗುಡ್ಡೆನಹಳ್ಳಿ ಸರ್ಕಲ್ ಬಳಿ ಅಂಕಿತ್ ಕರೆಸಿಕೊಂಡಿದ್ದಾನೆ. ಈ ನಕುಲ್ ಬರುತ್ತಿದ್ದಂತೆ ಆತನ ಬೈಕ್‌ಗೆ ಕಾರು ಗುದ್ದಿಸಿದ್ದಾನೆ. ಬೈಕ್ ಕಾರಿನ ಅಡಿಯಲ್ಲಿ ಸಿಲುಕಿದ್ದು, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಬೈಕ್‌ಗೆ ಬೆಂಕಿ ಹತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಗುತ್ತಿದ್ದಂತೆ ಕಾರನ್ನು ನಿಲ್ಲಿಸಿದಂತೆ ಮಾಡಿ ಮತ್ತೊಂದು ಮಗ್ಗಲಲ್ಲಿ ಕಾರು ತಿರುಗಿಸಿಕೊಂಡು ಅಂಕಿತ್ ಹೋಗಿದ್ದಾನೆ.

ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಿಲ್ಲಾದ್ಯಂತ ವೈರಲ್ ಆಗಿತ್ತು. ಬೈಕ್‌ನಲ್ಲಿದ್ದ ನಕುಲ್‌ಗೆ ಗಂಭೀರ ಗಾಯಗಳಾಗಿದ್ದು, ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಹಿಂದೆ ಬಿದ್ದ ಪೊಲೀಸರು ಕಾರು ಚಾಲನೆ ಮಾಡುತ್ತಿದ್ದ ಅಂಕಿತ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಹಿಂದೆ ಕೊಲೆಗೆ ಸಂಚು ರೂಪಿಸಲಾ ಗಿತ್ತು. ಬೈಕ್‌ಗೆ ಕಾರು ಗುದ್ದಿಸಿ ನಕುಲ್‌ನನ್ನು ಕೊಲೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು ಬೆಳಕಿಗೆ ಬಂದಿದೆ. ಹುಡುಗಿಯ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಕಳೆದ ಕೆಲವು ತಿಂಗಳ ಹಿಂದೆ ಜಗಳವಾಗಿದೆ. ಇದೇ ಜಿದ್ದು ಇಟ್ಟುಕೊಂಡಿದ್ದ ಅಂಕಿತ್ ಬೈಕ್‌ಗೆ ಕಾರು ಗುದ್ದಿಸಿ ನಕುಲ್‌ನನ್ನು ಕೊಲೆ ಮಾಡುವ ಉದ್ದೇಶ ದಿಂದ ಕೃತ್ಯ ನಡೆಸಿದ್ದಾನೆಂಬುದು ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಕಿತ್‌ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next