Advertisement

ಬೆಳಗಲಿಲ್ಲ ಬೆಳವಾಡಿ; ರಂಗಪ್ಪನ ಕಣ್ಣೀರ ಕೋಡಿ

12:13 PM Jun 19, 2019 | Team Udayavani |

ಎಸ್‌.ಕೆ. ಲಕ್ಷ್ಮೀಪ್ರಸಾದ್‌
ಚಿಕ್ಕಮಗಳೂರು:
ದುಡಿದು ಕುಟುಂಬ ನಿರ್ವಹಿಸಬೇಕಾದ ಗಂಡಸರಿಗೆಲ್ಲ ಅನಾರೋಗ್ಯ. ಇಡೀ ಕುಟುಂಬಕ್ಕೆ ಮಹಿಳೆಯರೇ ಜೀವನಾಧಾರ. ಮನೆ ತುಂಬ ಜನ. ಮಹಿಳೆಯರು ದುಡಿದರೇ ಎರಡು ಹೊತ್ತಿನ ಊಟ ಇಲ್ಲವಾದಲ್ಲಿ ಉಪವಾಸ.

Advertisement

ಇದು ಸಿಎಂ ಕುಮಾರಸ್ವಾಮಿ ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ತಾಲೂಕಿನ ಬೆಳವಾಡಿ ಗ್ರಾಮದ ರಂಗಪ್ಪ ಅವರ ಮನೆಯ ಸದ್ಯದ ಸ್ಥಿತಿ.

ಕುಮಾರಸ್ವಾಮಿ ಅವರು ರಂಗಪ್ಪ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ವೇಳೆ ಮನೆಯವರಿಗೆ ಹಲವು ಭರವಸೆ ನೀಡಿದ್ದರು. ಇದರಿಂದ ತಮ್ಮ ಕಷ್ಟದ ಬದುಕು ಕೊನೆಗಾಣಬಹುದು ಎಂದು ಕನಸು ಕಂಡಿದ್ದ ರಂಗಪ್ಪನ ಕುಟುಂಬ ಇಂದಿಗೂ ಕಣೀ¡ರಲ್ಲೇ ಕೈ ತೊಳೆಯುತ್ತಿದೆ.

ರಂಗಪ್ಪ ಅವರ ಮಗ ಈಶ್ವರ್‌ ಸೀಮೆಎಣ್ಣೆ ವ್ಯಾಪಾರ ಮಾಡುತ್ತಿದ್ದರು. ತೀವ್ರ ಅನಾರೋಗ್ಯದಿಂದ ನರಳುತ್ತಿದ್ದರು. ಅವರ ಅನಾರೋಗ್ಯದ ವಿಚಾರ ಕೇಳಿದ ಕುಮಾರಸ್ವಾಮಿ, ಈಶ್ವರ್‌ ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಜೀವನೋಪಾಯಕ್ಕಾಗಿ ಅಂಗಡಿ ತೆರೆಯಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿ 5 ಸಾವಿರ ರೂ. ಕೊಟ್ಟಿದ್ದರು. ಅದಾದ ನಂತರ ರಂಗಪ್ಪ ಅವರ ಕುಟುಂಬದವರು ಹಲವು ಬಾರಿ ಜೆಡಿಎಸ್‌ ಮುಖಂಡರುನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅನಾರೋಗ್ಯದಿಂದ ನರಳುತ್ತಿದ್ದ ಈಶ್ವರ್‌ ಅವರನ್ನು ಹಾಸನದ ಮಂಜುನಾಥೇಶ್ವರ ಆಯುರ್ವೇದಿಕ್‌ ಕಾಲೇಜಿಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ 2007ರಲ್ಲಿ ಮೃತಪಟ್ಟರು.

ಅದಾದ ನಂತರ ಈಶ್ವರ್‌ ಅವರ ಸಹೋದರ ರವಿಕುಮಾರ ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗಷ್ಟೆ ಅವರೂ ಮಹಡಿ ಮೇಲಿನಿಂದ ಬಿದ್ದು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

Advertisement

ಮನೆ ತುಂಬ ಜನ: ಈ ಮನೆಯಲ್ಲಿ ರಂಗಪ್ಪ ಅವರ ಪತ್ನಿ ವಯೋವೃದ್ಧೆ ತಿಮ್ಮಮ್ಮಳೇ ಹಿರಿಯರಾಗಿದ್ದಾರೆ. ರಂಗಪ್ಪ ತಿಮ್ಮಮ್ಮ ಅವರ ಮಗಳಿಗೆ ಮದುವೆಯಾಗಿದ್ದರೂ ಆಕೆ ಪತಿಯೊಂದಿಗೆ ಇವರ ಮನೆಯಲ್ಲಿಯೇ ನೆಲೆಸಿದ್ದಾರೆ. ಆಕೆಯ ಪತಿಗೂ ಆರೋಗ್ಯ ಸರಿ ಇಲ್ಲ. ಅವರ ಇಬ್ಬರು ಮಕ್ಕಳು ಹಾಗೂ ತಿಮ್ಮಮ್ಮಳ ಮೊದಲ ಮಗಳ ಪುತ್ರಿಯೂ ಚಿಕ್ಕ ವಯಸ್ಸಿನಿಂದಲೂ ಇಲ್ಲಿಯೇ ಬೆಳೆದಿದ್ದಾಳೆ.

ಕುಮಾರಸ್ವಾಮಿಯವರು ಇವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ತಿಮ್ಮಮ್ಮಳ ಮೊಮ್ಮಗಳು ಶಿಲ್ಪಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಆಕೆಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಈಗ ಆಕೆ ಬಿ.ಕಾಂ ಪೂರ್ಣಗೊಳಿಸಿದ್ದಾಳೆ. ಕೆಲಸಕ್ಕಾಗಿ ಹಲವು ಬಾರಿ ಜೆಡಿಎಸ್‌ ಮುಖಂಡರನ್ನು ಭೇಟಿ ಮಾಡಿ ಸಿಎಂ ನೀಡಿದ್ದ ಭರವಸೆ ಬಗ್ಗೆ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಮನೆಯ ಗಂಡಸರೆಲ್ಲ ಅನಾರೋಗ್ಯದಿಂದ ಬಳಲುತ್ತಿದ್ದು, ತಿಮ್ಮಮ್ಮಳ ಮಗಳು ಹಾಗೂ ಮೊಮ್ಮಗಳು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ.

ಗ್ರಾಮದಲ್ಲೂ ಆಗಿಲ್ಲ ಕೆಲಸ: ಕುಮಾರಸ್ವಾಮಿಯವರು ವಾಸ್ತವ್ಯ ಮಾಡಿದ್ದ ಮನೆಯವರಿಗಷ್ಟೇ ಅಲ್ಲ ಗ್ರಾಮಕ್ಕೂ ಸಹ ಯಾವುದೇ ಉಪಯೋಗವಾಗಿಲ್ಲ. ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಎಂಬ ಕಾರಣದಿಂದ ಗ್ರಾಮ ಪಂಚಾಯತ್‌ನಿಂದ ಸುಮಾರು 2 ಲಕ್ಷ ರೂ. ವೆಚ್ಚ ಮಾಡಿ ಸಿದ್ಧತೆ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಹಾಗೂ ಅವರೊಂದಿಗೆ ಬಂದಿದ್ದ ಅಧಿಕಾರಿಗಳಿಗೆ ಸ್ನಾನ ಇತ್ಯಾದಿಗಳಿಗಾಗಿ ಗ್ರಾಮ ಪಂಚಾಯತ್‌ನಿಂದಲೇ ಸಾವಿರಾರು ರೂ. ಖರ್ಚು ಮಾಡಿ ಬಕೆಟ್, ಟವೆಲ್, ಸೋಪು, ಪೇಸ್ಟ್‌ ಇನ್ನಿತರೆ ವಸ್ತುಗಳನ್ನು ಖರೀದಿಸಲಾಗಿತ್ತು. ಇಡೀ ಗ್ರಾಮವನ್ನು ತಳಿರು ತೋರಣ, ದೀಪಗಳಿಂದ ಅಲಂಕರಿಸಲಾಗಿತ್ತು ಎಂದು ಜನ ನೆಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next