Advertisement

ಪ್ರತ್ಯಂಗೀರಾ ಹೋಮಕ್ಕೆ ಸಿಎಂ ಪೂರ್ಣಾಹುತಿ

06:05 AM Dec 08, 2018 | Team Udayavani |

ಶೃಂಗೇರಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕುಟುಂಬದವರು ಶೃಂಗೇರಿಯಲ್ಲಿ ಕೈಗೊಂಡಿದ್ದ ಪ್ರತ್ಯಂಗೀರಾ ಹೋಮ ಶುಕ್ರವಾರ ಸಂಪನ್ನಗೊಂಡಿತು.ಕುಮಾರಸ್ವಾಮಿ ಹಾಗೂ ಸಚಿವ ಎಚ್‌.ಡಿ.ರೇವಣ್ಣ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.

Advertisement

ಮೈತ್ರಿ ಸರಕಾರದ ಸ್ಥಿರತೆ, ಸುಸೂತ್ರ ವಿಧಾನಸಭಾ ಅಧಿವೇಶನ, ಸಂಪುಟ ವಿಸ್ತರಣೆ, ಅಪರೇಷನ್‌ ಕಮಲಕ್ಕೆ ತಡೆ ಹಾಗೂ ಶತ್ರು
ಸಂಹಾರಕ್ಕಾಗಿ ಹೋಮ ನಡೆಸಲಾಗಿತ್ತು. ಈ ಹಿಂದೆ ರೇವಣ್ಣ ಅವರು ಹೋಮದ ಸಂಕಲ್ಪ ಕೈಗೊಂಡಿದ್ದು, ಶುಕ್ರವಾರ
ಪೂರ್ಣಾಹುತಿಯೊಂದಿಗೆ ಹೋಮ ಸಂಪನ್ನಗೊಂಡಿತು. ಗುರುವಾರ ಸಂಜೆ ಶೃಂಗೇರಿಗೆ ಆಗಮಿಸಿದ್ದ ಕುಮಾರಸ್ವಾಮಿ, ದೇವಾಲಯಗಳಿಗೆ ಭೇಟಿ ನೀಡಿದ್ದರಲ್ಲದೆ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದಿದ್ದರು. ಜಯಪುರ ಸಮೀಪದ ಗುಡ್ಡೆತೋಟದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು.

ಶುಕ್ರವಾರ ಬೆಳಗ್ಗೆ ಮಠಕ್ಕೆ ಆಗಮಿಸಿದ ಕುಮಾರಸ್ವಾಮಿ, ತೋರಣ ಗಣಪತಿ, ಶಂಕರಾಚಾರ್ಯ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ನಂತರ ಮಠದ ಒಳ ಆವರಣದ ಶಕ್ತಿ ಗಣಪತಿ ಹಾಗೂ ದೇವಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಮಠದ ಹೊರ ಆವರಣದಲ್ಲಿರುವ ಯಾಗಶಾಲೆಗೆ ಆಗಮಿಸಿ,ಪ್ರತ್ಯಂಗೀರಾ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಬಳಿಕ, ನೃಸಿಂಹ ಭಾರತಿ ಸ್ವಾಮೀಜಿಗಳ ಅನು ಷ್ಠಾನ ಮಂದಿರದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಶಾರದಾ ಪೀಠದ ಶಕ್ತಿ ದೇವತೆಯಾದ ಕಾಳಿಕಾಂಬಾ, ದುರ್ಗಾಂಬಾ ದೇವಸ್ಥಾನ, ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು. ಬಳಿಕ, ಗುರುಭವನಕ್ಕೆ ತೆರಳಿ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿ, ಫಲ ಮಂತ್ರಾಕ್ಷತೆ ಸ್ವೀಕರಿಸಿ ಆಶೀರ್ವಾದ ಪಡೆದರು.

ಆಪರೇಷನ್‌ ಕಮಲದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಮ್ಮ ಕುಟುಂಬ ಮೊದಲಿನಿಂದಲೂ ಶೃಂಗೇರಿ ಪೀಠದಲ್ಲಿ
ಹಲವು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತ ಬಂದಿದೆ. ನಾವು ಅದನ್ನು ಮುಂದುವರಿಸಿದ್ದು, ಇದರಲ್ಲಿ ಯಾವುದೇ ವಿಶೇಷ ಇಲ್ಲ. ಸಮಾಜದಲ್ಲಿ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿ ಶಾರದಾಂಬೆಯ ಸನ್ನಿಧಿಯಲ್ಲಿ ಪೂಜೆ, ಹೋಮ ನಡೆಸಲಾಗಿದೆ ಎಂದರು. ಅಪರೇಷನ್‌ ಕಮಲದ ಬಗ್ಗೆ ಗಮನ ಸೆಳೆಯುತ್ತಿದ್ದಂತೆ “ಈ ಬಗ್ಗೆ ನನ್ನ ಬಳಿ ಕೇಳಬೇಡಿ. ಯಾರೆಲ್ಲಾ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅರಿವಿದೆ. ಅದಕ್ಕೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ತಾಯಿ ಶಾರದೆ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ. ದೇವರು ಕೊಟ್ಟ ಆಶೀರ್ವಾದ ದೊಡ್ಡದು. ತಾಯಿಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ.ಮನುಷ್ಯರಿಗಿಂತ ದೇವರ ಆಶೀರ್ವಾದ ದೊಡ್ಡದು. ಹೀಗಾಗಿಯೇ ದೇವರ ಸನ್ನಿಧಿಯಲ್ಲೇ ಪೂಜೆ ಸಲ್ಲಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next