Advertisement

ಚಿಮ್ಮಿದ ಚಿಮೂ ಸ್ವಾಭಿಮಾನೀ ವಿನಯ

04:55 PM Apr 30, 2022 | Team Udayavani |

ಕನ್ನಡ ಸಾಹಿತ್ಯ, ಸಂಶೋಧನೆ, ಕರ್ನಾಟಕದ ಇತಿಹಾಸ, ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕನ್ನಡದ ಹಿತಕ್ಕಾಗಿ ಚಳವಳಿ, ಹಂಪಿಯ ಸ್ಮಾರಕ ಉಳಿಸಲು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಗಳಿಸಲು ಮಾಡಿದ ಹೋರಾಟಕ್ಕೆ ಹೆಸರಾದವರು ಡಾ| ಚಿದಾನಂದಮೂರ್ತಿಯವರು.

Advertisement

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದ ಮೂರ್ತಿಯವರು ಇಂಟರ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹತ್ತನೆಯ ರ್‍ಯಾಂಕ್‌ ಪಡೆದರೂ ಕನ್ನಡ ಆನರ್ಸ್‌ ಪದವಿಗೆ ಸೇರಿ ಕನ್ನಡಕ್ಕಾಗಿ ಜೀವ ಸವೆಸಿದವರು. ಬೆಂಗಳೂರು ವಿ.ವಿ.ಯಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಸಂಶೋಧನೆಗಾಗಿ ಹಲವು ದೇಶ, ಭಾರತದ ಬೇರೆ ಬೇರೆ ಪ್ರಾಂತಗಳನ್ನು ಸಂದರ್ಶಿಸಿದವರು. 25ಕ್ಕೂ ಹೆಚ್ಚು ಕೃತಿ, 400ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ ನಾಡಿನ ದೊಡ್ಡ ಹೆಸರು ಚಿಮೂ. ಕನ್ನಡ ಶಕ್ತಿ ಕೇಂದ್ರದ ಮೂಲಕ ಚಳವಳಿಯನ್ನೇ ಹುಟ್ಟುಹಾಕಿದವರು. ಹಂಪಿಯಲ್ಲಿ ಕನ್ನಡ ವಿ.ವಿ. ಸ್ಥಾಪನೆಗೆ ಕಾರಣರಾದವರಲ್ಲಿ ಪ್ರಮುಖರು. ಇವರಿಗೆ ರಾಜ್ಯೋತ್ಸವ, ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಮೊದಲಾದ ಪ್ರಶಸ್ತಿ ಸಿಕ್ಕಿದೆ. ಇಷ್ಟೆಲ್ಲ ಬಲ ಒಬ್ಬ ಮನುಷ್ಯನಿಗೆ ಹೇಗೆ ಬರುತ್ತದೆ ಎಂಬ ತರ್ಕ ಹೊಳೆದರೆ ಅವರ ಮೂಲಭೂತ ಪ್ರಮುಖ ಗುಣಗಳನ್ನು (ಸ್ವ-ಭಾವ) ಅವಲೋಕಿಸಿ ಸತ್ಯಾನ್ವೇಷಕರಾಗಬಹುದು.

ಚಿಮೂ ಅಂದರೆ ಆಡಳಿತ ವಲಯ ಕಿವಿಯಾಗುತ್ತಿತ್ತು. ಇಂತಹ ವ್ಯಕ್ತಿತ್ವ ನಾಡಿನಲ್ಲಿ ಸಾವಿರಾರು ಜನರಿಗೆ ಇರಬಹುದು. ಚಿಮೂ ಮತ್ತು ಇತರರಿಗೆ ಇರುವ ವ್ಯತ್ಯಾಸವೆಂದರೆ ಸ್ವಾಭಿಮಾನ. ಅವರೆಂದೂ ತನಗಾಗಿ, ತನ್ನ ಮನೆಯವರು, ಬಂಧುಗಳಿಗಾಗಿ ಯಾರೊಬ್ಬರಲ್ಲೂ ಕೈಚಾಚಿದವರಲ್ಲ. ಈ ಮಾತನ್ನು ಹೇಳುವಾಗ ಸರ್‌| ಎಂ.ವಿಶ್ವೇಶ್ವರಯ್ಯನವರ ಜೀವನದ ಒಂದು ಘಟನೆ ಉಲ್ಲೇಖೀಸಬಹುದು. ಅವರಿಗೆ ದಿವಾನ್‌ ಪದವಿ ಸಿಗುವಾಗ ತಾಯಿಗೆ ನಮಸ್ಕಾರ ಮಾಡಿ “ಯಾವುದೇ ಸಂಬಂಧಿಕರ ಕೆಲಸವನ್ನು ನನ್ನ ಬಳಿ ಹೇಳಬಾರದು’ ಎಂದು ಪ್ರಮಾಣ ಮಾಡಿದರೆ ಮಾತ್ರ ಹುದ್ದೆಯನ್ನು ಸ್ವೀಕರಿಸುತ್ತೇನೆ ಎಂದಿದ್ದರು.

ಚಿಮೂ ಅವರ ಏಕಮಾತ್ರ ಪುತ್ರ ವಿನಯಕುಮಾರ್‌ ಅವರಿಗೆ 23-24ರ ವಯಸ್ಸು, 1986ರ ವೇಳೆ ಬಿಎ ಪದವಿ ಓದಿ ಕೆಲಸಕ್ಕೆ ಪ್ರಯತ್ನಪಡುತ್ತಿದ್ದರು. ತಂದೆ ಪ್ರಭಾವಶಾಲಿಗಳೆನ್ನುವುದು ಮಗನಿಗೆ ಸಹಜವಾಗಿ ತಿಳಿದಿತ್ತು. ಆಗಲೂ ಪ್ರಭಾವಬೀರುವುದು ಇತ್ತು. ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಹಣದ ಬಲವೂ ಇದ್ದಿರಲಿಲ್ಲ. ತಂದೆ ಎಂಥವರು ಎಂಬುದು ಮಗನಿಗೂ ಗೊತ್ತಿತ್ತು. ಏಕೆಂದರೆ ಮನೆಯಲ್ಲಿ “ಬೇರೆಯವರಿಗೆ ಸಹಾಯ ಮಾಡುವುದು ಬೇರೆ. ಮನೆಯವರು, ಸಂಬಂಧಿಕರಿಗೆ ಸಹಾಯ ಮಾಡುವುದು ನನಗೆ ಸರಿ ಹೋಗುವುದಿಲ್ಲ, ಅದು ಆಭಾಸವಾಗುತ್ತದೆ’ ಎನ್ನುತ್ತಿದ್ದರು. ಆದರೂ ನಿರುದ್ಯೋಗದ ತಾಪತ್ರಯ ಅನುಭವಿಸುತ್ತಿದ್ದ ಮಗ “ಅಪ್ಪಾಜಿ, ನನ್ನ ಜಾಬ್‌ಗ ನೀವು ಟ್ರೈ ಮಾಡಿದರೆ ಆಗ್ತಿತ್ತು’ ಎಂದ. ಸ್ವಾಭಿಮಾನಿ ಚಿಮೂ ಅವರು “ನನ್ನನ್ನು ಭಿಕ್ಷುಕನನ್ನಾಗಿ ಬೇರೆಯವರಲ್ಲಿಗೆ ಕಳುಹಿಸಬೇಡ’ ಎಂದು ಸ್ಪಷ್ಟವಾಗಿ ಹೇಳಿದರು. ಆಗ ತಾರುಣ್ಯದ ಬಿಸಿ ರಕ್ತ. ಮಗನಿಗೆ ತಂದೆ ಮೇಲೆ ಸಿಟ್ಟು ಬಂದಿತ್ತು. “ಯಾರ್ಯಾರಿಗೋ ಸಹಾಯ ಮಾಡುವವರಿಗೆ ನಮಗೆ ಸ್ವಲ್ಪ ಸಹಾಯ ಮಾಡಬಹುದಲ್ಲವೆ?’ ಎಂಬ ಕಾರಣಕ್ಕಾಗಿ ಈ ಸಿಟ್ಟು.

ಚಿಮೂ ಅವರ ಪತ್ನಿಯ ತಂಗಿಯವರ ಇನ್ನೊಂದು ಅನುಭವವಿದೆ. ಅವರು ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಅವರಿಗೆ ಬೇಕಾದ ಸ್ಥಳದಲ್ಲಿ ನಿಯೋಜನೆ ಬೇಕಿತ್ತು. ಚಿಮೂ ಅವರಲ್ಲಿ ಬಂದು “ನಿಮಗೆ ಸಚಿವರು, ಅಧಿಕಾರಿಗಳೆಲ್ಲ ಗೊತ್ತು. ನೀವೊಂದು ಮಾತು ಹೇಳಿದರೆ ನನ್ನ ಕೆಲಸ ಕೈಗೂಡುತ್ತದೆ’ ಎಂದು ಹೇಳಿದರು. “ನಾನು ಹೇಳಿಯೂ ಅವರು ಮಾಡದಿದ್ದರೆ?’ ಎಂದು ಚಿಮೂ ಹೇಳಿದರು. “ನೀವು ಸಾಮಾನ್ಯರಲ್ಲ. ಕನ್ನಡ ಶಕ್ತಿ ಕೇಂದ್ರದ ಬಲ ನೀವು’ ಎಂದು ಪ್ರತಿಯಾಗಿ ಹೇಳಿದರು. “ಈಗ ನಾನು ಇನ್ನೂ ಎಚ್ಚರ ವಹಿಸಬೇಕಾಗಿದೆ. ಶಕ್ತಿ ಕೇಂದ್ರ ಇರುವುದು ಕನ್ನಡಿಗರ ಹಿತರಕ್ಷಣೆಗೆ, ನನ್ನ ನಾದಿನಿಯ ವರ್ಗಾವಣೆ ಮಾಡಿಸಲು ಅಲ್ಲ. ಕ್ಷಮಿಸು’ ಎಂದು ಖಡಕ್‌ ಆಗಿ ಹೇಳಿದರು. ಇವೆರಡೂ ಘಟನೆಗಳನ್ನು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಸಾ.ಶಿ. ಮರುಳಯ್ಯ ದಾಖಲಿಸಿದ್ದರೆ, ಚಿಮೂ ಅವರ ಪುತ್ರ ಈಗಲೂ ನೆನಪಿಸಿಕೊಳ್ಳುತ್ತಾರೆ.

Advertisement

ಈಗ ವಿನಯಕುಮಾರ್‌ ತನ್ನ ತಂದೆಯವರ ಸ್ವಾಭಿಮಾನತನವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ. “ಆಗಿನದು ಪ್ರೀಮೆಚ್ಯುರ್‌ ಮೈಂಡ್‌. ಈಗ ತಂದೆಯ ಮೌಲ್ಯ ಅರ್ಥವಾಗುತ್ತಿದೆ’ ಎನ್ನುತ್ತಾರೆ ವಿನಯಕುಮಾರ್‌. ವಿನಯಕುಮಾರ್‌ ಬಳಿಕ ಕಸ್ಟಮ್ಸ್‌ ಇಲಾಖೆಗೆ ಸೇರಿದರು. ಸ್ವಂತ ಆಸಕ್ತಿಯಿಂದ 2003-04ರಿಂದ 16ರ ವರೆಗೆ ವನ್ಯಜೀವಿ ಇಲಾಖೆಯಲ್ಲಿ ಹುಲಿ ಸಂಶೋಧನೆ ಕೆಲಸದಲ್ಲಿ ಎರವಲು ಸೇವೆಯಲ್ಲಿ ತೊಡಗಿಕೊಂಡರು. 2017ರಲ್ಲಿ ನಿವೃತ್ತಿಗೆ ಎಂಟು ವರ್ಷ ಇರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡು ಮತ್ತೆ ಡಾ|ಉಲ್ಲಾಸ್‌ ಕಾರಂತ(ಕೋಟ ಶಿವರಾಮ ಕಾರಂತರ ಮಗ)ರ ಜತೆ ವನ್ಯಜೀವಿ ವಿಭಾಗದಲ್ಲಿ ಕೆಲಸ ನಿರ್ವಹಿಸಿದರು. ಈಗ ವಿನಯಕುಮಾರರಿಗೆ 55 ವರ್ಷ. ಇನ್ನು ವನ್ಯಜೀವಿ, ಹುಲಿ ಸಂಶೋಧನೆ ಬೇಡವೆಂದು ಅವರಿಗೆ ಅನಿಸಿದೆ. ತಂದೆಯವರ ಸಾಮಾಜಿಕ ಕಳಕಳಿ, ಚಳವಳಿಯನ್ನು ಹತ್ತಿರದಿಂದ ಕಂಡ ಮಗನಿಗೆ ತನ್ನ ಇದುವರೆಗಿನ ಸಾಧನೆ ಆಲ್ಪವೆಂದು ಕಾಣುತ್ತಿದೆ. ತಂದೆ ದಾರಿಯಲ್ಲಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಬಲವಾದ ಇಚ್ಛೆ ಮಗನಲ್ಲಿ ಮೂಡಿದೆ. ಯಾವ ರೀತಿ, ಯಾವ ದಿಕ್ಕಿನಲ್ಲಿ ಎಂಬ ಸ್ಪಷ್ಟ ನಿರ್ಧಾರಕ್ಕೆ ಇನ್ನಷ್ಟೇ ಬರಬೇಕಾಗಿದೆ.

ಮಗನಿಗೆ ಸಾಕಷ್ಟು ಆದಾಯ ಬರುವ ಮೂಲವಿದ್ದರೂ ಅದನ್ನೊಲ್ಲೆ ಎನ್ನುತ್ತ ಸಾಮಾಜಿಕ ಜೀವನ ಸಂತೃಪ್ತಿಯತ್ತ ಮುಖ ಮಾಡುತ್ತಿರುವುದಕ್ಕೆ ಚಿಮೂ ಅವರು ಎಂದೋ ಹಾಕಿಕೊಟ್ಟ “ಜೀವನಬೀಜ’ದ ಪಾಠ ಕಾರಣ ಎಂದು ವಿಶ್ಲೇಷಿಸಬಹುದು. ಅದೇ ರೀತಿ ಈಗ ಮಾಧ್ಯಮಗಳಲ್ಲಿ ನಿತ್ಯ ರಾರಾಜಿಸುವ ಸ್ವಜನಪಕ್ಷಪಾತ, ಹಗರಣ, ಭ್ರಷ್ಟಾಚಾರಗಳನ್ನು ಕಂಡಾಗ ಆರೋಪಿ ಸ್ಥಾನದಲ್ಲಿರುವವರ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನೈತಿಕ ದಾರಿಯಲ್ಲಿ ಬೆಳೆಸುವಲ್ಲಿ ಎಡವಿದರೋ ಎಂದು ಸಂಶಯ ಬರುತ್ತದೆ. ಚಿಮೂ ಅವರಂತಹ ತಂದೆ-ತಾಯಂದಿರ ಸಂಖ್ಯೆ ಹೆಚ್ಚಿಸುವ ದೀರ್ಘಾವಧಿ ಗುರಿಯತ್ತ ಸಮಾಜ ಕಾರ್ಯಾಚರಿಸಬೇಕಾಗಿದೆ.

-ಮಟಪಾಡಿ ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next