Advertisement

ಯುಗಾದಿ Festival ಆಚರಣೆಯಿಂದ ಉಲ್ಲಾಸ, ಆರೋಗ್ಯ

11:50 PM Apr 14, 2023 | Team Udayavani |

ಕೆಲವು ದಿನಗಳ ಹಿಂದೆ ಚಾಂದ್ರಮಾನ ಯುಗಾದಿ ಕಳೆಯಿತು. ಇದೀಗ ಸೌರಮಾನ ಯುಗಾದಿ. ಎಲ್ಲವೂ ಯುಗಾದಿಯೇ. ಆದರೆ ಪಂಚಾಂಗಗಳ ಆಧಾರದಲ್ಲಿ ವ್ಯತ್ಯಾಸ. ಸೌರಮಾನ ಯುಗಾದಿಯು ಸೂರ್ಯನ ಚಲನೆಯನ್ನು ಅವಲಂಬಿಸಿದೆ. ಸೂರ್ಯನು ಮೇಷ ರಾಶಿಗೆ ಬರುವ ಸಂಕ್ರಮಣ ಕಾಲವೇ ಸೌರಮಾನ ಯುಗಾದಿ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಸೌರಮಾನ ಯುಗಾದಿಯ ಆಚರಣೆ ಅಧಿಕ. ಕೇರಳದಲ್ಲಿ ವಿಷುಹಬ್ಬ, ತುಳುನಾಡಿನಲ್ಲಿ ಬಿಸುಪರ್ಬ ಎಂಬ ಹೆಸರುಗಳಿಂದ ಕರೆಯುತ್ತಾರೆ.

Advertisement

ಕೃಷಿ ಮತ್ತು ಪ್ರಕೃತಿ ಯುಗಾದಿಯೊಂದಿಗೆ ಮಧುರ ಸಂಬಂಧವನ್ನು ಬೆಳೆಸಿಕೊಂಡಿವೆ. ಪ್ರಕೃತಿಯಲ್ಲಿ ಪರಿವರ್ತನೆಯ ಕಾಲ. ಮರಗಳು ಚಿಗುರುತ್ತವೆ. ಹೂ ಹಾಗೂ ಹಣ್ಣುಗಳು ಅರಳುವ ಪಕ್ವಕಾಲ. ಋತುಗಳ ರಾಜ ವಸಂತ ಋತುವಿನ ಆಗಮನ. ಒಟ್ಟಿನಲ್ಲಿ ಗಿಡ, ಮರ, ಪಕ್ಷಿ, ಪ್ರಾಣಿಗಳಲ್ಲಿ ಉಲ್ಲಾಸದ ಸಮಯ. ಗೀತೆಯಲ್ಲಿಯೂ ಶ್ರೀಕೃಷ್ಣನು ತಾನು ಋತುಗಳಲ್ಲಿ ವಸಂತ ಎಂದಿರುತ್ತಾನೆ. ಅಂತೂ ಪ್ರಕೃತಿಯಲ್ಲಿ ರಮ್ಯ ಕಾಲ. ಮನಸ್ಸಿಗೆ ಮುದ ನೀಡುವ ಕಾಲ. ಯುಗಾದಿಯ ಆಚರಣೆಯೂ ಮನಸ್ಸಿಗೆ ಉತ್ಸಾಹ ತುಂಬುವ ಹಬ್ಬ. ಬೇಂದ್ರೆಯವರು ಹೇಳುವಂತೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ||.

ಬೇವು ಹಾಗೂ ಬೆಲ್ಲದ ಸೇವನೆ ಯುಗಾದಿಯ ಇನ್ನೊಂದು ವಿಶೇಷ. ಇದರಲ್ಲಿ ಆರೋಗ್ಯದ ಅಂಶ ಅಡಗಿದೆ. ಹಿಂದೆ ಕೃಷಿಕರು ಮನೆಯಲ್ಲಿಯೇ ಉತ್ತಮ ಗುಣಮಟ್ಟದ ಬೆಲ್ಲವನ್ನು ತಯಾರಿಸುತ್ತಿದ್ದರು. ಅಂದಿನ ಡಬ್ಬಿ ಬೆಲ್ಲ ಇಂದಿಲ್ಲ. ಹಾಗಾಗಿ ಬೆಲ್ಲಕ್ಕೆ ವಿಶೇಷ ಪ್ರಾಶಸ್ತÂ. ಬೇವು ಕಹಿ. ಜೀವನದಲ್ಲಿ ಸುಖ ಹಾಗೂ ಕಷ್ಟಗಳು ಒದಗಬಹುದು. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಸಂದೇಶ. ಇನ್ನೊಂದು ಅರ್ಥದಲ್ಲಿ ಸಿಹಿಯು ವೈಭವದ ಸಂಕೇತ. ಅದು ಅತಿಯಾದರೆ ಆರೋಗ್ಯಕ್ಕೆ ಹಾನಿ. ಬೇವಿನಂಥ ಕಹಿಯ ಅನುಭವ ಸಹಜವಾಗಿ ವೈಭವದ ಅಹಂಕಾರಕ್ಕೆ ಅಂಕುಶ ತೊಡಿಸಲಿ ಎಂಬ ಆಶಯ. ಕಹಿ ಬೇವು ಮಧುಮೇಹದ ನಿಯಂತ್ರಣಕ್ಕೆ ಉತ್ತಮ ಔಷಧ. ನಮ್ಮ ಹಳ್ಳಿಗಳಲ್ಲಿ ಇಂದಿಗೂ ಇದರ ಸೇವನೆ ಇದೆ. ಬೇವಿನ ಮೂರು ಎಲೆಗಳನ್ನು ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿ, ನೀರು ಕುಡಿದರೆ ರಕ್ತದೊತ್ತಡ ನಿಯಂತ್ರಣವೆಂಬ ನಂಬಿಕೆಯೂ ಇದೆ. ಇದೆಲ್ಲ ಹಳ್ಳಿಯವರು ಸಸ್ಯಗಳೊಂದಿಗೆ ಬೆಳೆಸಿಕೊಂಡ ಸಂಬಂಧ.

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ-ಇದು ಬೇಂದ್ರೆ ಅವರ ಕವನ. ಈ ಕವನದಲ್ಲಿ ಕವಿ ಒಂದು ಕುತೂಹಲವನ್ನು ನಮ್ಮ ಮುಂದಿಡುತ್ತಾರೆ. ಪ್ರಕೃತಿಯಲ್ಲಿ ಪ್ರತೀ ವರುಷವೂ ಮರಗಳಲ್ಲಿ ಎಲೆ ಉದುರಿ ಮತ್ತೆ ಮತ್ತೆ ವಸಂತಕಾಲದಲ್ಲಿ ಚಿಗುರೊಡೆಯುತ್ತವೆ. ಆದರೆ ಮನುಷ್ಯನಲ್ಲಿ ಒಮ್ಮೆ ಮಾತ್ರ ಬಾಲ್ಯ, ಹರೆಯ. ಪ್ರಾಣಿಗಳು ಸಹಜವಾಗಿ ಹಿಂದಿನ ಕಹಿಯನ್ನು ಮರೆತು ಸಂತೋಷದಿಂದ ಮುಂದಿನ ದಿನಕ್ಕೆ ಸಿದ್ಧವಾಗುತ್ತವೆ. ಮನುಷ್ಯನ ಮನಸ್ಸು ಕೊಳೆತ ಹಳತನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತದೆ. ರಾತ್ರಿ ನಿದ್ರೆಯೊಂದಿಗೆ ಆ ದಿನದ ಕಹಿ ಅನುಭವಗಳು ಮರಣ ಹೊಂದಿ, ಬೆಳಗ್ಗೆ ಏಳುವಾಗ ಉಲ್ಲಾಸದ ಹೊಸ ವಿಚಾರಗಳು ಜನಿಸಬೇಕು. ಇದು ಕವಿಯ ಅಶಯ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ. ಬೇಂದ್ರೆಯವರು ಹೇಳುವಂತೆ ಪ್ರತೀ ಯುಗಾದಿಯೂ ನಮ್ಮ ಮನಸ್ಸು, ದೇಹದಲ್ಲಿ ಹೊಸ ಉಲ್ಲಾಸವನ್ನು ತರಬೇಕು. ಬೇವು ಹಾಗೂ ಬೆಲ್ಲವನ್ನು ಸೇವಿಸುವಾಗ ಹೇಳುವ ಶ್ಲೋಕದಲ್ಲೂ ಈ ಆಶಯ ಅಡಗಿದೆ. ಉಲ್ಲಾಸ, ಆರೋಗ್ಯಗಳು ಯುಗಾದಿಯ ಕೊಡುಗೆಗಳಾಗಲಿ.

ಪ್ರಕೃತಿಗೆ ವಿಶೇಷ ಪೂಜೆ
ಚಾಂದ್ರಮಾನದಂತೆ ಸೌರಮಾನದಲ್ಲೂ ಪ್ರಕೃತಿಗೆ ವಿಶೇಷ ಪೂಜೆ. ಒಡೆಯ ಹಾಗೂ ಒಕ್ಕಲು ಸಂಬಂಧದ ಕಾಲ. ಒಡೆಯನ ಮನೆಗೆ ಒಕ್ಕಲುಗಳು ತರಕಾರಿ, ಧಾನ್ಯ, ಹಣ್ಣು ಮೊದಲಾದವುಗಳನ್ನು ತಂದು ಕಾಣಿಕೆ ರೂಪದಲ್ಲಿ ಒಪ್ಪಿಸುತ್ತಿದ್ದರು. ಇದನ್ನು ವಿಷುಕಣಿ ಎಂದು ಕರೆಯುತ್ತಾರೆ. ಒಕ್ಕಲುಗಳಿಗೆ ಪ್ರತಿಯಾಗಿ ಒಡೆಯ ಸಂಭಾವನೆ ನೀಡುವ ಕ್ರಮವಿತ್ತು. ಈ ವಸ್ತುಗಳನ್ನು ಯುಗಾದಿಯ ಹಿಂದಿನ ದಿನ ಸಂಜೆ ದೇವರ ಮುಂದೆ ಇಡುತ್ತಾರೆ. ಅದರೊಂದಿಗೆ ಒಂದು ಕನ್ನಡಿ. ಮರುದಿನ ಬೆಳಗ್ಗೆ ಬ್ರಾಹ್ಮಿà ಮುಹೂರ್ತದಲ್ಲಿ ಎದ್ದು ಮನೆಯವರು ಸ್ನಾನ ಮಾಡಿ ದೇವರ ಮುಂದಿರುವ ಕನ್ನಡಿಯಲ್ಲಿ ಮುಖ ನೋಡುತ್ತಾರೆ. ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ. ಇದನ್ನು ನೋಡುವುದರಿಂದ ಸಂತೋಷ, ಸಂಪತ್ತು ಪ್ರಾಪ್ತಿ ಎಂಬ ನಂಬಿಕೆ. ಯುಗಾದಿಯ ದಿನ ಈ ತರಕಾರಿಗಳಿಂದಲೇ ಅಡುಗೆ. ಹೊಸ ಬಟ್ಟೆಗಳ ಧಾರಣೆ. ಪಂಚಾಂಗ ಶ್ರವಣ. ಮನೆಯ ಹಿರಿಯರಿಗೆ ನಮಸ್ಕಾರ. ಇದೆಲ್ಲ ಹಿರಿಯರಿಂದ ಹರಿದು ಬಂದ ಕ್ರಮ. ಒಟ್ಟಿನಲ್ಲಿ ಕುಟುಂಬದವರು ಹೊಸ ಬದುಕಿಗೆ ತೆರೆದುಕೊಳ್ಳುವ ದಿನ. ಹೊಸ ಹುರುಪು, ಹರುಷಗಳನ್ನು ಆಹ್ವಾನಿಸುವ ಹಬ್ಬ.

Advertisement

* ಡಾ| ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next