Advertisement

ಕೋವಿಡ್‌ ಲಕ್ಷಣ ಕಂಡಾಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ

06:58 PM Apr 17, 2021 | Team Udayavani |

ಬಳ್ಳಾರಿ : ಕೋವಿಡ್‌-19 ರೋಗದ ಲಕ್ಷಣಗಳು ಹಾಗೂ ಅನಾರೋಗ್ಯದ ಯಾವುದೇ ಲಕ್ಷಣಗಳು ಕಂಡು ಬಂದ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ಫೀವರ್‌ ಕ್ಲಿನಿಕ್‌ ಗೆ ಭೇಟಿ ನೀಡಿ ಕೋವಿಡ್‌-19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ತಿಳಿಸಿದ್ದಾರೆ.

Advertisement

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿದ್ದು, ಒಂದು ವಾರದ ಅವಧಿಯಲ್ಲಿ 11 ಜನರು ಕೋವಿಡ್‌ ನಿಂದ ಮೃತಪಟ್ಟಿದ್ದಾರೆ. ಕೋವಿಡ್‌ ಸೋಂಕಿನಿಂದ ಮರಣ ಹೊಂದುತ್ತಿರುವ ಪ್ರಕರಣಗಳನ್ನು ಜಿಲ್ಲೆಯ ತಾಂತ್ರಿಕ ವೈದ್ಯಕೀಯ ತಜ್ಞರ ಸಮಿತಿ ಪರಿಶೀಲಿಸಿದ್ದು ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಲು ಪ್ರಮುಖ ಅಂಶಗಳಾಗಿವೆ ಎಂದವರು ತಿಳಿಸಿದ್ದಾರೆ.

ವೈದ್ಯಕೀಯ ತಜ್ಞರ ಸಮಿತಿ ತಿಳಿಸಿದ ಪ್ರಮುಖ ಅಂಶಗಳು: ಕೋವಿಡ್‌ 19 ರೋಗದ ಲಕ್ಷಣಗಳು ಕಂಡು ಬಂದರೂ ಜನರು ಅದನ್ನು ನಿರ್ಲಕ್ಷಿಸಿ ತಡವಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವುದು. ಸೋಂಕಿನ ಲಕ್ಷಣಗಳು ಕಂಡು ಬಂದರೂ ಸರ್ಕಾರಿ ಆಸ್ಪತ್ರೆಗಳಿಗೆ ತೆರಳದೆ ಅಧಿಕೃತ ವೈದ್ಯರಲ್ಲದವರಿಂದ ಚಿಕಿತ್ಸೆ ಪಡೆಯುತ್ತಿರುವುದು. ಜ್ವರ, ಕೆಮ್ಮು, ನೆಗಡಿ ಅಥವಾ ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡು ಬಂದ ತಕ್ಷಣ ಔಷಧ ಅಂಗಡಿಗಳಿಂದ ಸ್ವತಃ ಔಷಧಿ ಪಡೆದುಕೊಳ್ಳುವುದು. ಜಿಲ್ಲಾಡಳಿತದಿಂದ ಕೋವಿಡ್‌ 19 ಲಕ್ಷಣದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರೂ ಜನರು ಅದನ್ನು ನಿರ್ಲಕ್ಷಿಸಿ, ರೋಗವು ತೀವ್ರಗೊಂಡ ನಂತರ ಕೊನೆಗಳಿಗೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುವುದರಿಂದ ಜಿಲ್ಲೆಯಲ್ಲಿ ಮರಣ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.

ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದರ ಜೊತೆಗೆ ಪಾಸಿಟಿವ್‌ ಬಂದರೆ ವೈದ್ಯರ ಮಾರ್ಗದರ್ಶನದಂತೆ ಹೋಂ ಕ್ವಾರಂಟೈನ್‌ನಲ್ಲಿರಬೇಕು. ವೈದ್ಯರು ನೀಡುವ ಎಲ್ಲ ಔಷಧಿ ಗಳನ್ನು ಹಾಗೂ ನಿರ್ದೇಶನಗಳನ್ನು ಗುಣಮುಖರಾಗುವವರೆಗೂ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಹೋಂ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಉಸಿರಾಡಲು ಅಥವಾ ಬೇರೆ ಯಾವುದೇ ರೀತಿಯ ತೀವ್ರ ತೊಂದರೆಗಳು ಕಂಡು ಬಂದಲ್ಲಿ ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು. ಕೋವಿಡ್‌ ಲಕ್ಷಣಗಳು ಕಂಡು ಬಂದ ಪ್ರಾಥಮಿಕ ಹಂತದಲ್ಲಿಯೇ ಸರ್ಕಾರಿ ಆಸ್ಪತ್ರೆಯಿಂದ ಸೂಕ್ತ ರೀತಿಯ ಮಾರ್ಗದರ್ಶನದ ಜೊತೆಗೆ ಚಿಕಿತ್ಸೆಯನ್ನು ಪಡೆದರೆ ಕೋವಿಡ್‌ ಸೋಂಕಿನಿಂದ ಹೆಚ್ಚಾಗುತ್ತಿರುವ ಸಾವಿನ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next