Advertisement

ಅಕ್ರಮ ಮನೆಗಳಿಗೆ ಹಕ್ಕುಪತ್ರ

12:53 AM Sep 12, 2019 | Lakshmi GovindaRaju |

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ ಕಂದಾಯ ಭೂಮಿಯಲ್ಲಿ 1,200 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ಜತೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರ ಪೈಕಿ ನಿಯಮ 94ಸಿಸಿ ಅಡಿ 10,000 ಕುಟುಂಬಗಳಿಗೆ ನವೆಂಬರ್‌ನೊಳಗೆ ಹಕ್ಕುಪತ್ರದ ಜತೆಗೆ ನೋಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ 30- 40 ವರ್ಷಗಳಿಂದ ಅಕ್ರಮವಾಗಿ ಮನೆ ನಿರ್ಮಿಸಿ ಸಾಕಷ್ಟು ಮಂದಿ ನೆಲೆಸಿದ್ದಾರೆ. ಆ ಮನೆಗಳನ್ನು ನಿಯಮ 94ಸಿಸಿ ಅಡಿ ಸಕ್ರಮೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನವೆಂಬರ್‌ನಲ್ಲಿ 10,000 ಮಂದಿಗೆ ಹಕ್ಕುಪತ್ರದ ಜತೆಗೆ 50 ರೂ. ಶುಲ್ಕದಲ್ಲಿ ಆಸ್ತಿ ನೋಂದಣಿ ಮಾಡಿಕೊಡಲಾಗುವುದು. ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನ ಇಲ್ಲವೇ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಿ ಹಕ್ಕುಪತ್ರ ವಿತರಣೆ ಜತೆಗೆ ಆಸ್ತಿ ನೋಂದಣಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಪೂರ್ವ, ಉತ್ತರ, ದಕ್ಷಿಣ, ಯಲಹಂಕ, ಆನೇಕಲ್‌ ತಾಲ್ಲೂಕು ವ್ಯಾಪ್ತಿಯಲ್ಲಿ ನಿಯಮ 94ಸಿಸಿ ಅಡಿ ಅಕ್ರಮ ಮನೆ ಸಕ್ರಮೀಕರಣಕ್ಕೆ 52,813 ಅರ್ಜಿ ಸ್ವೀಕೃತವಾಗಿತ್ತು. ಈ ಪೈಕಿ 11,964 ಅರ್ಜಿ ಮಂಜೂರಾಗಿದ್ದರೆ, 25,553 ಅರ್ಜಿ ತಿರಸ್ಕೃತವಾಗಿತ್ತು. 15,296 ಅರ್ಜಿಗಳು ಬಾಕಿ ಇವೆ. ಮಂಜೂರಾದ ಅರ್ಜಿಗಳ ಪೈಕಿ 5868 ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಿದ್ದರೆ, 6096 ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಬೇಕಿದೆ. ಒಟ್ಟು 10,000 ಕುಟುಂಬಗಳನ್ನು ಸಕ್ರಮೀಕರಣಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ.

ಒಟ್ಟು 1,200 ಅಡಿ ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಮಾತ್ರ ಅನ್ವಯವಾಗಲಿದೆ. ಬದಲಿಗೆ ವ್ಯಾಪಾರ, ಮಳಿಗೆ, ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರೆ ಅನ್ವಯವಾಗದು. 15 ವರ್ಷ ಮಾರಾಟಕ್ಕೆ ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next