Advertisement

Charmadi: ಹಲ್ಲೆ-ಆರೋಪ: ಬಸ್‌ ತಡೆದ ವಿದ್ಯಾರ್ಥಿಗಳು

01:06 AM Jun 19, 2023 | Team Udayavani |

ಬೆಳ್ತಂಗಡಿ: ಬಸ್‌ ನಿರ್ವಾಹಕ ವಿದ್ಯಾರ್ಥಿಗಳನ್ನು ಬಸ್‌ ಒಳಗೆ ದೂಡಿ ಹಲ್ಲೆ ನಡೆಸಿದ ಎಂದು ಆರೋಪಿಸಿ ಬಸ್‌ ಅನ್ನು ಚಾರ್ಮಾಡಿ ಬಳಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರು ತಡೆಹಿಡಿದು ಗಲಾಟೆ ನಡೆಸಿದ ಘಟನೆ ಶನಿವಾರ ಸಂಜೆ ನಡೆದಿದ್ದು, ಈ ಬಗ್ಗೆ ಬಸ್ಸಿನ ನಿರ್ವಾಹಕ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಂಗಳೂರಿನಿಂದ ಮೂಡಿಗೆರೆಗೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್‌ಗೆ ಉಜಿರೆಯಲ್ಲಿ ವಿದ್ಯಾರ್ಥಿಗಳು ಹತ್ತುವ ವೇಳೆ ನಿರ್ವಾಹಕ ದೂಡಿ ಹಲ್ಲೆ ನಡೆಸಿರುವುದಾಗಿ ಹೇಳಿರುವ ವಿದ್ಯಾರ್ಥಿಗಳು ನಿರ್ವಾಹಕನ ಜತೆ ಗಲಾಟೆ ನಡೆಸಿದ್ದಾರೆ. ಬಳಿಕ ಈ ಬಗ್ಗೆ ಚಾರ್ಮಾಡಿಯವರಿಗೆ ಕರೆ ಮಾಡಿ ಹೇಳಿದ್ದು, ಬಸ್‌ ಚಾರ್ಮಾಡಿ ಚೆಕ್‌ಪೋಸ್ಟ್‌ಗೆ ತಲುಪುವ ಸಮಯದಲ್ಲಿ ಸ್ಥಳೀಯರು ಜಮಾಯಿಸಿ ಬಸ್‌ ಅನ್ನು ನಿಲ್ಲಿಸಿ ಗಲಾಟೆ ಆರಂಭಿಸಿದ್ದಾರೆ.

ಈ ಸಮಯ ಚೆಕ್‌ಪೋಸ್ಟ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಸಿಬಂದಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೆ ಬಸ್‌ನಲ್ಲಿದ್ದ ಪ್ರಯಾಣಿಕ ವಿದ್ಯಾರ್ಥಿಗಳು ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯನ್ನು ಸ್ಥಳಿಯರು ಮೊಬೈಲ್‌ನಲ್ಲಿ ಚಿತ್ರಕರಿಸಿದ್ದು, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಪಿಎಸ್‌ಐ ಅನಿಲ್‌ ಕುಮಾರ್‌ ಮತ್ತು ತಂಡದವರು ಸ್ಥಳಕ್ಕೆ ಆಗಮಿಸಿ ಬಸ್‌ ಸಿಬಂದಿ, ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಜತೆ ಮಾತನಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಚಾರ್ಮಾಡಿಯಿಂದ ಒಂದೂವರೆ ಗಂಟೆಯಷ್ಟು ಕಾಲ ತಡವಾಗಿ ಬಸ್‌ ಮೂಡಿಗೆರೆಯತ್ತ ಪ್ರಯಾಣ ಬೆಳೆಸಿತು.

ಪ್ರಕರಣ ದಾಖಲು
ಘಟನೆಯ ಬಗ್ಗೆ ಬಸ್‌ ನಿರ್ವಾಹಕ ಶಿವಕುಮಾರ್‌ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next