Advertisement

ವರ್ಚಸ್ಸು, ವ್ಯಕ್ತಿತ್ವ ಹೇಳುವುದು  ಜಾತಕದ ಎರಡನೇ ಭಾವ

04:14 AM Oct 15, 2016 | |

ಜಾತಕಶಾಸ್ತ್ರ ಬಹು ಸಂಕೀರ್ಣವಾದದ್ದು. ಇರುವುದು ಕೇವಲ ಹನ್ನೆರಡು ಮನೆಗಳೇ ಆದರೂ ಜಾತಕ ಕುಂಡಲಿಯಲ್ಲಿ ಅವು ವಿಸ್ತಾರವಾದ ವಿಚಾರಗಳನ್ನು ಒಬ್ಬ ವ್ಯಕ್ತಿಯ ಕುರಿತಾಗಿ ಬಿಚ್ಚಿಡುತ್ತವೆ. ಬರೀ ಈ ಜನ್ಮವೊ ಒಂದನ್ನೇ ಅಲ್ಲ. ಜಾತಕದಲ್ಲಿರುವ ಐದನೇ ಭಾವವಾದ ಪೂರ್ವಪುಣ್ಯ ಸ್ಥಾನವನ್ನು ವಿಶ್ಲೇಷಿಸುತ್ತಾ ಜಾತಕದ ಮೂರು ಆರು ಹಾಗೂ ಎಂಟರ ಜೊತೆಗೆ 12 ಭಾವಗಳನ್ನು ಐದನೇ ಭಾವದ ಜೊತೆಗೆ ಪೂರಕವಾಗಿ ವಿಶ್ಲೇಷಣೆ ನಡೆಸಿದಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಹಾಗೂ ಮುಂದಿನ ಜನ್ಮಗಳ ಬಗೆಗೂ ಒಂದು ಪುಟ್ಟ ಚೌಕಟ್ಟನ್ನು ಕಟ್ಟಿಕೊಡಬಹುದು. ಆದರೆ ಹಿಂದಿನ ಜನ್ಮವನ್ನಾಗಲೀ ಮುಂದಿನ ಜನ್ಮವನ್ನಾಗಲೀ ತಿಳಿದು ಪ್ರಯೋಜನ ಏನಿದೆ ಎಂಬುದನ್ನು ಗ್ರಹಿಸಿದರೆ ಈ ವಿಶ್ಲೇಷಣೆಗಳಿಗೆ ಅರ್ಥವಿಲ್ಲ ಎಂದು ಅನ್ನಬಹುದು. ಆದರೂ ಹಲವರಿಗೆ ಇದನ್ನು ತಿಳಿಯುವ ಕುತೂಹಲ ಅಧಿಕವಾಗಿರುತ್ತದೆ.

Advertisement

ಹಿಂದಿನವಾರ ವರ್ಚಸ್ಸು ಹಾಗೂ ವ್ಯಕ್ತಿತ್ವದ ವಿಚಾರವನ್ನು ಈ ಅಂಕಣದಲ್ಲಿ  ಜನ್ಮ ಕುಂಡಲಿಯ ಹಿನ್ನೆಲೆಯಲ್ಲಿ ವಿವರಿಸಲಾಗಿತ್ತು. ಬಹಳಷ್ಟು ಜನ ತಮ್ಮ ವರ್ಚಸ್ಸು ಹಾಗೂ 
ವ್ಯಕ್ತಿತ್ವಗಳ ಕುರಿತು ಅವು ಹಾರ್ದಿಕವಾದ ಸಮತೋಲನ ಹಾಗೂ ವಿಶೇಷ ಸಮತೋಲನ ಒಂದನ್ನು ಪಡೆದಿರಬೇಕು ಎಂಬ ಒಲವನ್ನು ಹೊಂದಿದ್ದರು ಎಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು. ನಿಜ ಒಬ್ಬರ ವ್ಯಕ್ತಿತ್ವಕ್ಕೆ ದೊಡ್ಡ ತೂಕ ಯಾವಾಗಲೂ ಇದ್ದೇ ಇದೆ. ಅದನ್ನು ಕಾಪಾಡಿಕೊಳ್ಳಲು ಸದಾ ಬಹುತೇಕ ಎಲ್ಲರೂ ಅವಿರತವಾದ ಆಸೆಯನ್ನು ಹೊಂದಿರುತ್ತಾರೆ. ಈ ಕುರಿತಾಗಿ ಅಂಥಃಕರಣಪೂರ್ಣವಾಗಿ ಪ್ರಯತ್ನಿಸುತ್ತಾರೆ. ಆದರೂ ಅದೃಷ್ಟ ಕೈಕೊಡುತ್ತದೆ.

ಹಲವಾರು ಜನ ಸಂಪರ್ಕಿಸಿ ತಮ್ಮ ವ್ಯಕ್ತಿತ್ವದಲ್ಲಿ ಏನೋ ದೋಷವಿದೆ ಇದನ್ನು ಸರಿಪಡಿಸಲು ಸಾಧ್ಯವೇ ಎಂದು ತಮ್ಮ ಬಗೆಗೆ ತಮ್ಮ ವ್ಯಕ್ತಿತ್ವದ ಬಗೆಗೆ ಅನುಮಾನ ಹೊಂದಿದ್ದು ಅವರು ಮಾತನಾಡಿ ವಿಚಾರಿಸುತ್ತಿದ್ದಾಗ ಸ್ಪಷ್ಟವಾಗಿತ್ತು. ಒಬ್ಬಳು ಹೆಣ್ಣು ಮಗಳಂತೂ ತಾನು ಐಶ್ವರ್ಯ ರೈ ರೀತಿಯಲ್ಲಿ ಸಿನಿಮಾ ರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು. ಇದು ನನ್ನ ಜಾತಕದಲ್ಲಿ ಇದ್ದಿರುವ ಸೌಭಾಗ್ಯವಾಗಿರಬಹುದೇ ಎಂದು ಕಳಕಳಿ ಮತ್ತು ಅತೀವವಾದ ಮಹತ್ವಾಕಾಂಕ್ಷೆಯ ವಿಚಾರಗಳನ್ನು ಮುಂದಿರಿಸಿ ಕೇಳಿದ್ದಳು.

ಜಾತಕ ಕುಂಡಲಿಯ ವಿಚಾರ ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ ಸಪೂರ್ಣವಾಗಿ ಬೇರೆಯದೇ ಆಗಿರುತ್ತದೆ. ಹೀಗಾಗಿ ಯಾರನ್ನೂ ಅನುಕರಿಸಬೇಡಿ. ಅನುಕರಣೆಗಾಗಿ ಮುಂದಾಗಿ ಹೋದರೆ ವೈಫ‌ಲ್ಯಕ್ಕೆ ತುಂಬಾ ಅವಕಾಶಗಳಿರುತ್ತದೆ. ಅಮಿತಾಬ್‌ ಬಚ್ಚನ್‌ ಮಹಾತ್ಮಾ ಗಾಂಧಿಯಾಗಲು ಸಾಧ್ಯವಿಲ್ಲ. ಸಚಿನ್‌ ತೆಂಡೂಲ್ಕರ್‌ ದ್ರಾವಿಡ್‌ ಆಗಲು ಸಾಧ್ಯವಿಲ್ಲ. ದ್ರಾವಿಡ್‌ ಪ್ರಧಾನರಾಗಬೇಕಾದರೆ ತೆಂಡೂಲ್ಕರ್‌ ಅವರಂತೆ ಶತಕಗಳ ಬೆನ್ನುಹತ್ತುವ ಆಯಾಸ ಪೂರ್ಣ ಕೆಲಸ ಮಾಡಬೇಕಿತ್ತು. ತೆಂಡೂಲ್ಕರ್‌ ದ್ರಾವಿಡರಂತೆ ಪ್ರಧಾನರಾಗಬೇಕಾದರೆ ಗೋಡೆಯಾಗುವ ಪಾಡು ಪಡಬೇಕಿತ್ತು. ಇಂದಿರಾ ಗಾಂಧಿಯವರು ತುರ್ತು ಸ್ಥಿತಿ ಹೇರಿದಾಗ ಅವರ ಮನೋಸ್ಥಿತಿಯ ರೂಪರೇಷೆಗಳು ಅಂಥದೊಂದು ಜೂಜನ್ನು ನಿರ್ವಹಿಸುವ ಸಂಕಲ್ಪ ಬಲಕ್ಕೆ ಮನಸ್ಸು ಬದ್ಧಗೊಂಡಿತ್ತು. ನರಸಿಂಹರಾವ್‌ ಪ್ರಧಾನಿಗಳಾದಾಗ ಬಾಬ್ರಿ ಮಸೀದಿ ಉರುಳಿದರೂ, ಉರುಳದಿದ್ದರೂ ಅದು ಕಾಂಗ್ರೆಸ್ಸಿಗೇ ವಿರೋಧವಾಗುವ ಪರಿಸ್ಥಿತಿಯನ್ನು ನಿರ್ಮಿಸುವಂಥ ರೀತಿಯಲ್ಲಿತ್ತು. ಅದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ವಿಶ್ಲೇಷಿಸುವುದು ಸೂಕ್ತವಾಗಿರದು. ಒಟ್ಟಿನಲ್ಲಿ ಆಯಾ ವ್ಯಕ್ತಿಗಳು ಇರುವ ಕಾಲ ವರ್ತಮಾನ ಗತಿ ಸ್ಥಿತಿ ಅನಿವಾರ್ಯವಾಗಿ ತೊಡಗಿಕೊಳ್ಳಬೇಕಾದ ಒತ್ತಡಗಳು ಕೂಡಾ ಒಬ್ಬನ ವ್ಯಕ್ತಿತ್ವವನ್ನು ವರ್ಚಸ್ಸನ್ನು ಎತ್ತಿ ಸಂಭ್ರಮಿಸುವ ಪೂರ್ತಿ ಬುಡಮೇಲು ಮಾಡುವ ಮಾತೃ ವಾತ್ಸಲ್ಯವನ್ನು ವಿಷದ ಬಟ್ಟಲಲ್ಲಿ ವಿಷ ಕುಡಿಸಿ ನಿರ್ನಾಮ ಮಾಡುವ ರಾಕ್ಷಸತ್ವವನ್ನು ನಿರ್ಮಿಸುತ್ತದೆ. ಹೀಗಾಗಿ ಯಾರೆ ಇರಲಿ ತಾನು ಇನ್ನೊಬ್ಬನಂತೆ ಆಗುತ್ತೇನೆ ಎಂದು ಸಂಕಲ್ಪ ಮಾಡುವುದು ಬೇಡ. ನಾನು ವಿಶಿಷ್ಟವಾದ ನೆಲೆಯಲ್ಲಿ ಸಾತ್ವಿಕತೆಯೊಂದಿಗೆ ನಾನೇ ಆಗಿ ರೂಪಾಂತರಗೊಳ್ಳುತ್ತೇನೆ ಎಂಬುದನ್ನೇ ಪ್ರಧಾನವಾಗಿಸಿಕೊಳ್ಳುವುದು ಸೂಕ್ತ.

ಜಾತಕ ಕುಂಡಲಿಯ ಎರಡನೇ ಭಾವವೂ ಪ್ರಧಾನವಾಗಿದೆ. ಮನಸ್ಸನ್ನು ಅನುಗ್ರಹಿಸಲು ತೂಕವನ್ನಾಗಲೀ ತುಕ್ಕನ್ನಾಗಲೀ ಮನಸ್ಸಿನ ಮೇಲೆ ಉಂಟು ಮಾಡಲು ಚಂದ್ರನೇ ಪೂರ್ತಿ ಕಾರಣನಾಗಿರುತ್ತಾನೆ. ಚಂದ್ರನ ಮೂಲಕವಾದ ಮನೋವೇದಿಕೆಯ ಮೇಲಿನ ಏರುಪೇರುಗಳನ್ನು ಸಂಪನ್ನತೆಗಳನ್ನು ಕುಜ ಬುಧ ಹಾಗೂ ರವಿ ಗ್ರಹಗಳು ನಿಯಂತ್ರಿಸುವ ಶಕ್ತಿಯನ್ನು ಹೆಚ್ಚಾಗಿ ಮಾಡುತ್ತಿರುತ್ತದೆ. ಆದರೆ ವಿವೇಚನೆ ಎಂಬುದನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕಾದರೆ ಮಾತನ್ನು ಯುಕ್ತವಾಗಿ ಆಡುವ ಬೇಕಾಬಿಟ್ಟಿ ಮಾತನಾಡುವುದನ್ನು ತಡೆಯುವ ವಿಚಾರದಲ್ಲಿ ತರ್ಕವನ್ನು ಉಪಯೋಗಿಸಲೇ ಬೇಕು. ಹೀಗಾಗಿ ಮಾತಿನ ಸ್ಥಾನವು (ಜಾತಕದಲ್ಲಿ ಎರಡನೇ ಮನೆ, ಭಾವದ ಮೇಲಿಂದ ಒಂದು ತಳಹದಿಯನ್ನು ಸಂಪಾದಿಸಿಕೊಂಡಿರುತ್ತದೆ.) ಜಾತಕ ಕುಂಡಲಿಯಲ್ಲಿ ಪ್ರಾಧಾನ್ಯತೆಯನ್ನು ಪಡೆಯುತ್ತದೆ. ಹಾಗೆಂದು ಕೇವಲ ಮೂಕವಾಗಿ ಆಡಬೇಕಾದ ಮಾತನ್ನು ಆಡದಿರುವುದಲ್ಲ. ಒಂದು ಮಾತಿದೆ. ನಮ್ಮ ವ್ಯವಹಾರ ಹಾಗೂ ಬದುಕಿನ ಮಾತಿನ ಓಟದಲ್ಲಿ ಅದೇನೆಂದರೆ ಮಾತು ಬೆಳ್ಳೆ ಹಾಗೂ ಮೌನ ಬಂಗಾರ. ಈ ವಿಚಾರವೇ ಯಶಸ್ಸನ್ನು ಪಡೆದು ಜೀವನವನ್ನು ಸಾರ್ಥಕ ಪಡಿಸಿಕೊಂಡವರ ಶೇ. 90ಕ್ಕೂ ಮಿಕ್ಕಿ ಉದಾಹರಣೆಗಳನ್ನು ಹೇಳಬಹುದು.

Advertisement

ಒಟ್ಟಾರೆಯಾಗಿ ಸೂರ್ಯನಿರಲಿ ಅಥವಾ ಇನ್ನಿತರ ಯಾವುದೇ ಗ್ರಹಗಳಿರಲಿ ಅವು ಎಲ್ಲಾ ಸಂದರ್ಭಗಳಲ್ಲೂ ಒಳ್ಳೆಯವರೇ ಆಗಿರುವುದಿಲ್ಲ. ಹಾಗೆಯೇ ಕೆಟ್ಟದ್ದನ್ನು ಮಾಡಲು ಹೋಗುವುದೇ ಈ ಗ್ರಹ‌ಗಳ ಎಲ್ಲಾ ಕಾಲದ ಕೆಲಸವೂ ಅಲ್ಲ. ನಾವು ಹುಟ್ಟಿದ ವೇಳೆಯಲ್ಲಿನ ಜಾತಕ ಕುಂಡಲಿ ನಮ್ಮ ಹಿಂದಿನ ಜನ್ಮದಲ್ಲಿ ನಾವು ಶೇಖರಿಸಿಟ್ಟ ಬ್ಯಾಂಕ್‌ ಬ್ಯಾಲೆನ್ಸಿನಂತೆ ಎಂದು ಹೇಳಬಹುದು. ಅದು ಹೇಗಿದೆ, ಎಲ್ಲಿದೆ? ಅದು ಸಾತ್ವಿಕ ಬ್ಯಾಲೆನ್ಸೋ ಕಪ್ಪುಹಣದ ಹಾಗೆ 
ಸಾತ್ವಿಕವಲ್ಲದ ಬ್ಯಾಲೆನ್ಸೋ ನಮ್ಮ ಕರ್ಮಫ‌ಲದ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ನಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಲು ಸಾಧ್ಯವಾಗುವ ಹಾಗೆ ಜಾತಕದಲ್ಲಿನ ಲಗ್ನಾಧಿಪತಿ ಹಾಗೂ ನಮ್ಮ ಮಾತನ ಭಾವದ ಅಧಿಪತಿಗಳು ಮಾತಿನ ಭಾವದಲ್ಲಿರುವ ಗ್ರಹಗಳು ನಮಗೆ ಜೀವನದ ಪ್ರತಿಕ್ಷಣದಲ್ಲಿಯೂ ಭಿನ್ನವಾದ ಅವಕಾಶಗಳನ್ನು ಒದಗಿಸಿರುತ್ತಾರೆ. ಆಗ ಕರಿಯೆನೆಂಬ ಕಾರಣಕ್ಕಾಗಿ ವಾಹನದಿಂದ ಹೊರದಬ್ಬಲ್ಪಟ್ಟ ಮೋಹನ್‌ ದಾಸ ಕರಮ್‌ಚಂದ್‌ ಗಾಂಧಿ ಮಹಾತ್ಮರಾಗುತ್ತಾರೆ. ಬಿದಿರಿನ ಕೋಲಿನಂತೆ ಪೇಲವವಾಗಿದ್ದೀಯ ಎಂದು ಅನಿಸಿಕೊಂಡ ಬಚ್ಚನ್‌ ಸೂಪರ್‌ಸ್ಟಾರ್‌ ಆಗುತ್ತಾರೆ. ತರಗಲೆಗಳಂತೆ ವಿಕೆಟ್‌ ಉರುಳಿದರೂ ದ್ರಾವಿಡ್‌ ಅಂಥವರು ಕಾಪಾಡುವ ಗೋಡೆಗಳಾಗುತ್ತಾರೆ. ಸಾಮಾನ್ಯ ಬೆಸ್ತರ ಮನೆಯಲ್ಲಿ ಹುಟ್ಟಿದ ಅಬ್ದುಲ್‌ ಕಲಾಂ ಭಾರತ ದೇಶದ ಮೊದಲ ಪ್ರಜೆಯಾಗುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next