Advertisement

ಇಂದು ಮಳವಳ್ಳಿಯಲ್ಲಿ “ಅಕ್ಷರ ಜಾತ್ರೆ’

04:01 PM Dec 23, 2017 | Team Udayavani |

ಮಂಡ್ಯ: ಮಳವಳ್ಳಿಯಲ್ಲಿ ಶನಿವಾರ ಅಕ್ಷರ ಜಾತ್ರೆ. ಕನ್ನಡದ ಮನಸ್ಸುಗಳೆಲ್ಲವೂ ಒಂದಾಗುವ ಶುಭದಿನ. ಕನ್ನಡದ ವಿಕಾಸ ನಮ್ಮೆಲ್ಲರ ಮುಂದಿರುವ ಗುರಿ. ಅದನ್ನು ಸಾಧಿಸಲು ಎಲ್ಲರೂ ಕೈಜೋಡಿಸಬೇಕಿದೆ. ಇತ್ತ ಬೆಂಗಳೂರು ರಾಜಧಾನಿ, ಅತ್ತ ಮೈಸೂರುಗಳ ನಡುವಿರುವ ಮಂಡ್ಯ ಜಿಲ್ಲೆಗೆ ವಿಶೇಷ ಸ್ಥಾನಮಾನಗಳಿವೆ. ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಕನ್ನಡ ಹಬ್ಬಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಾಂದಿ ಹಾಡಬೇಕಿದೆ.

Advertisement

ಮಳವಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಬಳಿ ನಡೆಯಲಿರುವ ಸಮ್ಮೇಳನದ ಮಹಾದ್ವಾರಕ್ಕೆ ಮಳವಳ್ಳಿ ಸುಂದರಮ್ಮ, ಮಹಾಮಂಟಪಕ್ಕೆ ಮ.ಮಲ್ಲಪ್ಪ, ಪ್ರಧಾನ ವೇದಿಕೆಗೆ ಷಡಕ್ಷರ ದೇವ ಹೆಸರಿಡಲಾಗಿದೆ. ಬೆಳಗ್ಗೆ 8.30ಕ್ಕೆ
ಶಾಸಕ ನರೇಂದ್ರಸ್ವಾಮಿ ರಾಷ್ಟ್ರ ಧ್ವಜಾರೋಹಣ, ತಹಶೀಲ್ದಾರ್‌ ದಿನೇಶ್‌ಚಂದ್ರ ನಾಡ ಧ್ವಜಾರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಕೆ.ರವಿಕುಮಾರ ಪರಿಷತ್‌ ಧ್ವಜಾ ರೋಹಣ ಮಾಡುವರು.

ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಪ್ರೇಮಕುಮಾರಿ ಚಾಲನೆ ನೀಡುವರು. ತಾಲೂಕು ಪಂಚಾಯಿತಿ ಕಚೇರಿಯಿಂದ ಕೊಳ್ಳೇಗಾಲ ರಸ್ತೆ ಮುಖಾಂತರ ಮೆರವಣಿಗೆ ಪ್ರಧಾನ ವೇದಿಕೆಯನ್ನು ತಲುಪಲಿದೆ. ಸಮ್ಮೇಳನವನ್ನು ಬೆಳಗ್ಗೆ 11 ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಪುಸ್ತಕ ಮಳಿಗೆ, ಸಂಸದ ಪುಟ್ಟರಾಜು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಮಾಜಿ ಸಚಿವ ಚೆಲುವರಾಯಸ್ವಾಮಿ ಪುಸ್ತಕ ಬಿಡುಗಡೆ ಮಾಡುವರು. ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಸಮ್ಮೇಳನಾಧ್ಯಕ್ಷರು ಭಾಷಣ ಮಾಡುವರು. ಸಮ್ಮೇಳನ ಕುರಿತು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಎಚ್‌.ಎನ್‌.ಯೋಗೇಶ್‌ ಮಾತನಾಡುವರು.

ಮೊದಲ ಗೋಷ್ಠಿ: ಮಧ್ಯಾಹ್ನ 2ರಿಂದ 3.30ರವರೆಗೆ ನಡೆಯುವ ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಲೋಕ ಗೋಷ್ಠಿಯಲ್ಲಿ “ಜಿಲ್ಲೆಯ ರಂಗಭೂಮಿ ಮತ್ತು ಸಿನಿಮಾ ಕುರಿತು ಸರ್ಕಾರಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎನ್‌.ಎಸ್‌.ಶಂಕರೇಗೌಡ, “ಜಿಲ್ಲೆಯ ಸಾಹಿತ್ಯ’ದ ಬಗ್ಗೆ ಮೈಸೂರು ಮಹಾರಾಜ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಎಂ.ಬಿ.ಸುರೇಶ್‌, “ಕನ್ನಡ ಭಾಷಾ ಸಂವರ್ಧನೆಯಲ್ಲಿ ಆಡುನುಡಿಗಳ ಪಾತ್ರ’ ಕುರಿತು ಮದ್ದೂರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಚ್‌.ಜೆ.ಚಂದ್ರು ವಿಷಯ ಮಂಡಿಸುವರು.

Advertisement

ಎರಡನೇ ಗೋಷ್ಠಿ: ಗೋಷ್ಠಿ 2ರಲ್ಲಿ ಮಂಡ್ಯ ನೆಲದ ಬಹುಮುಖೀ ಸಂಸ್ಕೃತಿಯ ಇತಿಹಾಸವನ್ನು ಒಳಗೊಂಡಿದ್ದು, “ದಲಿತ ಚಳವಳಿ’ ಬಗ್ಗೆ ಸಾಹಿತಿ ಡಾ.ಹೊನ್ನು ಸಿದ್ಧಾರ್ಥ, “ಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯ ಪರಂಪರೆ’ ಬಗ್ಗೆ ಸಂಕಥನ ಸಂಪಾದಕ ರಾಜೇಂದ್ರ ಪ್ರಸಾದ್‌, ರಾಮಾನುಜಾಚಾರ್ಯರು ಮತ್ತು ವೈಷ್ಣವ ಪಂಥ ಕುರಿತು ಮೈಸೂರು ಜೆಎಸ್‌ಎಸ್‌ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಬೇವುಕಲ್ಲು ಸುದೀಪ್‌ ಮಾತನಾಡುವರು.

ಕವಿಗೋಷ್ಠಿ: ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಡಾ.ಬಸವರಾಜ ಸಬರದ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಾಹಿತಿ ಡಾ.ಟಿ.ಸಿ.ಪೂರ್ಣಿಮಾ ವಹಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪನೆನಪಿನ ಕಾಣಿಕೆ ವಿತರಿಸುವರು. ಸಂಜೆ 6.30ರಿಂದ 7.15ರವರೆಗೆ ಶಿವಾರದ ಉಮೇಶ್‌ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 7.15ರಿಂದ 8 ಗಂಟೆವರೆಗೆ ಎಂ.ಎಸ್‌.ನಿತ್ಯಶ್ರೀ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಮೈಸೂರಿನ ಕನ್ನಡ ಸಿರಿ ಕಲಾವೃಂದದಿಂದ “ಮುದುಕನ ಮದುವೆ’ ನಾಟಕ ನಡೆಯಲಿದೆ.

ಬೃಹತ್‌ ವೇದಿಕೆ ನಿರ್ಮಾಣ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 40×60 ಅಡಿ ಅಳತೆಯ ವೇದಿಕೆ ನಿರ್ಮಿಸಲಾಗಿದೆ. 3 ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಸುಮಾರು 5 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. 

ಸರ್ಕಾರಿ ನೌಕರರಿಗೆ ಒಒಡಿ ಸೌಲಭ್ಯ: ಮಳವಳ್ಳಿಯಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಶನಿವಾರಕ್ಕೆ ಅನ್ವಯವಾಗುವಂತೆ ಅನ್ಯ ಕಾರ್ಯನಿಮಿತ್ತ (ಒಒಡಿ) ಸೌಲಭ್ಯ ದೊರೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಕೆ. ರವಿಕುಮಾರ್‌ ತಿಳಿಸಿದ್ದಾರೆ.

ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು, ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶನಿವಾರಕ್ಕೆ ಅನ್ವಯಿಸುವಂತೆ ಓಓಡಿ ಸೌಲಭ್ಯ ದೊರೆಯಲಿದೆ. ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರು, ಮಹಿಳಾ ಸಂಘಗಳ ಸದಸ್ಯರು, ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ

ಸಮ್ಮೇಳನದ ಸವಿಯೂಟ ಶನಿವಾರ ಬೆಳಗ್ಗೆ: ಸಿಹಿ ಪೊಂಗಲ್‌, ಖಾರ ಪೊಂಗಲ್‌, ಕಾಫಿ, ಟೀ. ಮಧ್ಯಾಹ್ನ: ರಾಗಿರೊಟ್ಟಿ, ಅಕ್ಕಿ ರೊಟ್ಟಿ, ಬೆಣ್ಣೆ, ಒಂದು ಲಾಡು, ಹೆಸರುಬೇಳೆ ಪಾಯಸ, ಸಿಹಿಪೊಂಗಲ್‌, ತುಪ್ಪ, ಹುಚ್ಚೆಳ್ಳು ಚಟ್ನಿ, ಚಿತ್ರಾನ್ನ, ಕೋಸಂಬರಿ ಪಲ್ಯ, ಅನ್ನ, ಸಾಂಬಾರ್‌, ರಸಂ, ಮಜ್ಜಿಗೆ, ಹಪ್ಪಳ. ರಾತ್ರಿ: ಅನ್ನ, ಸಾಂಬಾರ್‌, ಮೊಸರು, ಬಜ್ಜಿ, ಹಪ್ಪಳ.

ಭಾನುವಾರ ಬೆಳಗ್ಗೆ: ಕೇಸರಿ ಬಾತ್‌, ತಟ್ಟೆ ಇಡ್ಲಿ, ವಡೆ, ಸಾಂಬಾರ್‌, ಬೆಣ್ಣೆ, ರವೆ ವಾಂಗಿಬಾತ್‌, ಕಾಫಿ, ಟೀ. ಮಧ್ಯಾಹ್ನ: ಒಬ್ಬಟ್ಟು, ಗೋಧಿ ಪಾಯಸ, ಮೆಂತ್ಯ ಬಾತ್‌, ಮುದ್ದೆ, ಹಸಿ ಅವರೆಕಾಳು ಗೊಜ್ಜು, ಹುರಳಿ ಪಲ್ಯ, ಹೆಸರುಕಾಳು ಮೊಳಕೆ, ಅನ್ನ, ಹುರಳಿಕಟ್ಟು, ರಸಂ, ಮಜ್ಜಿಗೆ, ಬೆಣ್ಣೆ, ತುಪ್ಪ, ಹಪ್ಪಳ.

„ಮಂಡ್ಯ ಮಂಜುನಾಥ

Advertisement

Udayavani is now on Telegram. Click here to join our channel and stay updated with the latest news.

Next