Advertisement

ದಿಕ್ಕು ಬದಲಿಸಿದ ಪಂಜಾಬ್ ರಾಜಕಾರಣ :ಭವಿಷ್ಯದಲ್ಲಿ ಬಿಜೆಪಿ-ಅಕಾಲಿದಳ ಮರು ಮೈತ್ರಿ ?

06:08 PM Mar 08, 2022 | Team Udayavani |

ಅಮೃತಸರ: ಸಿಕ್ಭರ ನಾಡು ಪಂಜಾಬ್ ನ ಚುನಾವಣೆ ಈ ಬಾರಿ ಬಹುಕೋನಗಳ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ಸರಕಾರ ರಚಿಸಲಿದೆ ಎಂದು ಹೇಳಿದೆ.

Advertisement

ಪಂಜಾಬ್ ನ ಪ್ರಮುಖ ಪಕ್ಷವಾಗಿದ್ದ ಶಿರೋಮಣಿ ಅಕಾಲಿದಳ ಬಿಜೆಪಿಯೊಂದಿಗೆ ಮೈತ್ರಿ ಕಳೆದುಕೊಂಡು ಭಾರಿ ಪ್ರಮಾಣದ ನಷ್ಟಕ್ಕೆ ಗುರಿಯಾಗಲಿದೆ ಎಂದು ಸಮೀಕ್ಷೆಗಳಲ್ಲಿ ಕಂಡು ಬಂದಿದ್ದು, ಬಿಜೆಪಿ ಮತ್ತು ಅಕಾಲಿದಳ ಎರಡೂ ಪಕ್ಷಗಳು ಮೈತ್ರಿ ಆಧಾರದಲ್ಲಿ ಚುನಾವಣೆ ಎದುರಿಸಿದ್ದು, ಬಿಜೆಪಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಬಲವೂ ಹೆಚ್ಚಿನ ಸ್ಥಾನಗಳನ್ನು ತಂದು ಕೊಡುವುದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.

ಮತ್ತೆ ಕೇಳಿ ಬಂದ ಮೈತ್ರಿ ಮಾತು

ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರೇಮ್ ಸಿಂಗ್ ‘‘ಶಿರೋಮಣಿ ಅಕಾಲಿದಳ ಮತ್ತು ಬಿಎಸ್‌ಪಿ ಮೈತ್ರಿಯು ಪಂಜಾಬ್‌ನಲ್ಲಿ ಸರಕಾರ ರಚಿಸುವಲ್ಲಿ ಯಶಸ್ವಿಯಾಗಲಿದೆ. ಒಂದು ವೇಳೆ ನಮಗೆ ಬಹುಮತ ಸಿಗದಿದ್ದರೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ.

ಪ್ರೇಮ್ ಸಿಂಗ್ ಅವರ ಮಾತು ಈ ಬಾರಿ ಕಾರ್ಯ ರೂಪಕ್ಕೆ ಬರದಿದ್ದರೂ ಮುಂದಿನ ಲೋಕಸಭಾ ಚುನಾವಣೆಯ ವೇಳೆ ಪಂಜಾಬ್ ನಲ್ಲಿ ಮತ್ತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಸೂಚನೆ ಇದಾಗಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

Advertisement

ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಅಕಾಲಿದಳ ಎನ್ ಡಿಎ ಮೈತ್ರಿ ಕೂಟವನ್ನು ತೊರೆದಿತ್ತು. ಹರ್‌ಸಿಮ್ರತ್ ಕೌರ್ ಬಾದಲ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಹಿಂದೆಗೆದುಕೊಳ್ಳುವ ಮೂಲಕ ಬಿಜೆಪಿಯಿಂದ ದೂರವಾಗಿತ್ತು. ಈ ಚುನಾವಣೆಯಲ್ಲಿ ದಲಿತ ಮತಗಳ ಮೇಲೆ ಕಣ್ಣಿಟ್ಟು ಬಿಎಸ್ ಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

ಸದ್ಯ ಕೃಷಿ ಮಸೂದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಿಂಪಡೆದಿರುವುದರಿಂದ ಅಕಾಲಿ ದಳ ರಾಜಕೀಯ ಭವಿಷ್ಯಕ್ಕಾಗಿ ಮತ್ತೆ ಎನ್ ಡಿಎ ಮೈತ್ರಿಕೂಟಕ್ಕೆ ಸೇರಿಕೊಳ್ಳುವುದೇ ಎನ್ನುವ ಪ್ರಶ್ನೆ ಮೂಡಿದೆ.

ಈ ಬಾರಿ ಬಿಜೆಪಿ 65 ಸ್ಥಾನಗಳಲ್ಲಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ 37 ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿದಳ (ಸಂಯುಕ್ತ್) 15 ಸ್ಥಾನಗಳಲ್ಲಿ ಸ್ಪರ್ಧಿಸಿದೆ.ಶಿರೋಮಣಿ ಅಕಾಲಿದಳ (ಸಂಯುಕ್ತ್) ಅಕಾಲಿದಳ ದಿಂದ ಸಿಡಿದ ಒಂದು ಪಕ್ಷ.

ಮೈತ್ರಿಯಿಂದ ಪರಿಣಾಮ

2012ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಎಡಿ-ಬಿಜೆಪಿ ಮೈತ್ರಿಕೂಟ ಅಲ್ಪ ಬಹುಮತದೊಂದಿಗೆ ಗೆದ್ದಿತ್ತು. ಸಿಖ್ಖರಿಗಿಂತ ಹೆಚ್ಚು ಹಿಂದೂಗಳನ್ನು ಅಕಾಲಿದಳ ತನ್ನ ಟಿಕೆಟ್‌ನಲ್ಲಿ ಗೆಲ್ಲಿಸಿಸಿತ್ತು. ಬಿಜೆಪಿ ಸಾರ್ವತ್ರಿಕ ಚುನಾವಣೆಗಳಲ್ಲಿ ಅಮೃತಸರ ಕ್ಷೇತ್ರದಲ್ಲಿ ತನ್ನ ಇಬ್ಬರು ಉನ್ನತ ಮಂತ್ರಿಗಳಾದ ಅರುಣ್ ಜೇಟ್ಲಿ (2014) ಮತ್ತು ಹರ್ದೀಪ್ ಸಿಂಗ್ ಪುರಿ (2019) ಅವರನ್ನು ಕಣಕ್ಕಿಳಿಸಿದರೂ ಸೋಲಿನ ಅವಮಾನವನ್ನು ಅನುಭವಿಸಬೇಕಾಗಿತ್ತು. ಆ ವೇಳೆ ಅಕಾಲಿದಳದ ಮೇಲೆ ಸರಿಯಾಗಿ ಕೆಲಸ ಮಾಡದ ಆರೋಪವೂ ಕೇಳಿ ಬಂದಿತ್ತು.

2019 ರಲ್ಲಿ ಬಿಜೆಪಿಯು ಪಂಜಾಬ್‌ನಲ್ಲಿ ಸ್ಪರ್ಧಿಸಿದ ಮೂರು ಸ್ಥಾನಗಳಲ್ಲಿ ಎರಡನ್ನು ಮಾತ್ರ ಗೆದ್ದಿತ್ತು, ಆದರೆ ಅಕಾಲಿದಳವು ಉಳಿದ 10 ರಲ್ಲಿ ಸ್ಪರ್ಧಿಸಿ ಎರಡನ್ನು ಮಾತ್ರ ಗೆದ್ದಿತ್ತು. ಒಟ್ಟು 37.08% ಮತಗಳನ್ನು ಮೈತ್ರಿ ಕೂಟ ಪಡೆದಿತ್ತು.

ಕಾಂಗ್ರೆಸ್ ಭವಿಷ್ಯ ಮಂಕು

ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದಿಂದ ಸಿಡಿದು ಹೊರ ಬಂದ ಬಳಿಕ ಆಂತರಿಕ ಕಚ್ಚಾಟದಲ್ಲಿ ಮುಳುಗಿದ್ದ ಕಾಂಗ್ರೆಸ್ ಪಕ್ಷಕ್ಕೆ ನಾಯಕರು ತೇಪೆ ಹಚ್ಚಿ ಅಧಿಕಾರ ಉಳಿಸಿಕೊಂಡಿದ್ದರು. ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚೆನ್ನಿ ಮತ್ತು ಕಾಂಗ್ರೆಸ್ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನಡುವಿನ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿದ್ದವು. ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಇನ್ನಷ್ಟು ಒಡಕು ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next