Advertisement

Chandrayaan 3 Succes: ಇಂದು ರಾಷ್ಟ್ರೀಯ ಬಾಹ್ಯಾಕಾಶ ದಿನ; ಅಂತರಿಕ್ಷದಲ್ಲಿ ಭಾರತ ವಿಕ್ರಮ!

02:03 AM Aug 23, 2024 | Team Udayavani |

ಭಾರತದ ಬಾಹ್ಯಾಕಾಶ ಸಾಧನೆಗಳ ಪೈಕಿ ಚಂದ್ರಯಾನ-3 ಯೋಜನೆಗೆ ವಿಶೇಷ ಸ್ಥಾನವಿದೆ. ಕಳೆದ ವರ್ಷ ಆ.23ರಂದು ಚಂದ್ರಯಾನ-3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಕ್ಷಣದಲ್ಲಿ ಇತಿಹಾಸವೇ ಸೃಷ್ಟಿಯಾಯಿತು. ಈ ಸ್ಥಳಕ್ಕೆ ತಲುಪಿದ ಮೊದಲ ರಾಷ್ಟ್ರ ಭಾರತವಾಯಿತು. ಈ ಸಂಭ್ರಮವನ್ನು ಸದಾ ಸ್ಮರಣೀಯಗೊಳಿಸಲು ಭಾರತ ಸರಕಾರವು ಪ್ರಸಕ್ತ ವರ್ಷದಿಂದ ಆಗಸ್ಟ್‌ 23ರಂದು “ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲು ಮುಂದಾಗಿದೆ. ಆ ಕುರಿತು ಇಲ್ಲಿದೆ ಮಾಹಿತಿ.

Advertisement

ಬಾಹ್ಯಾಕಾಶ ದಿನಾಚರಣೆ ಏಕೆ?
1969ರಲ್ಲಿ ಸ್ಥಾಪನೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) 55 ವರ್ಷಗಳಿಂದ ಬಾಹ್ಯಾಕಾಶ ಸಂಶೋಧನೆಯಲ್ಲಿ ಅಗಾಧ ಸಾಧನೆ ಮೆರೆದಿದೆ. ಹಲವು ಉಪಗ್ರಹಗಳ ಮೂಲಕ ಭಾರತದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜತೆಗೆ ಬಾಹ್ಯಾಕಾಶ ಸಾಧನೆಗಳ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ.

ಇಸ್ರೋದ ಹಲವಾರು ಸಾಧನೆಗಳ ಪೈಕಿ ಈಗಲೂ ಚಂದ್ರಯಾನ ಸರಣಿ ಮಿಷನ್‌ಗಳು ವಿಶಿಷ್ಟವಾಗಿವೆ. ಕಳೆದ ವರ್ಷ 23ರಂದು ಚಂದ್ರನಯಾನ-3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಬಳಿಕ ಈ ಸಾಧನೆ ಮಾಡಿದ ಮೊದಲ ರಾಷ್ಟ್ರ ಎನಿಸಿ ಕೊಂಡಿತು. ಭಾರತದ ಪ್ರಗತಿಯ ಪಯಣದಲ್ಲಿ ಇದೊಂದು ಗಮನಾರ್ಹ ಮೈಲುಗಲ್ಲು. ಈ ಮಹತ್ವದ ದಿನ ಸ್ಮರಣೀಯವಾಗಿಸುವ ಉದ್ದೇಶ ದಿಂದ ಪ್ರತಿವರ್ಷದ ಆ. 23ರ ದಿನವನ್ನು “ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲು ಭಾರತ ಸರಕಾರ ಘೋಷಿಸಿದ್ದು, ಪ್ರಸಕ್ತ ವರ್ಷವೇ ಮೊದಲ ಆಚರಣೆ ಇಂದು ನಡೆಯಲಿದೆ.

ಬಾಹ್ಯಾಕಾಶ ದಿನದ ಆಚರಣೆ ಹೇಗೆ?
ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿ ತವಾಗಿಲ್ಲ. ಇದು ಅಭಿಯಾನದ ರೂಪದಲ್ಲಿ ವಿವಿಧ ಚಟುವಟಿಕೆಗಳು ಆಯೋಜನೆಗೊಂಡಿವೆ. ಈ ದಿನ ಹೊಸದಿಲ್ಲಿಯ ಭಾರತ ಮಂಟಪದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರದರ್ಶನ, ವಿಚಾರಗೋಷ್ಠಿ, ಕಾರ್ಯಾಗಾರ, ಚಂದ್ರಯಾನ-3 ಸಾಕ್ಷ್ಯಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬಾಹ್ಯಾಕಾಶ ದಿನ ಹಿನ್ನೆಲೆ ರೊಬೊಟಿಕ್ಸ್‌ ಚಾಲೆಂಜ…, ಭಾರತೀಯ ಅಂತರಿಕ್ಷ ಹ್ಯಾಕಥಾನ್‌ ಸ್ಪರ್ಧೆ ಕೂಡ ನಡೆದಿದ್ದವು. ಅದರ ಪ್ರಶಸ್ತಿ ಪ್ರದಾನ ಈ ದಿನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. “ಸ್ಪೇಸ್‌ ಆನ್‌ ವೀಲ್ಸ…’ ಯೋಜನೆ ಮೂಲಕ ಬಾಹ್ಯಾಕಾಶದ ಸಾಧನೆಗಳ ರೂಪಕಗಳನ್ನು ಶಾಲಾ- ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಾಹ್ಯಾಕಾಶ ಶಿಕ್ಷಣದ ಜಾಗೃತಿಗಾಗಿ ಚರ್ಚೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ಆಯೋಜನೆಗೊಂಡಿವೆ.

ಚಂದ್ರಯಾನ-3 ಯಶಸ್ಸಿನ ಕತೆ
2019ರ ಜುಲೈ 22ರಂದು ಇಸ್ರೋ ಕೈಗೊಂಡ ಚಂದ್ರಯಾನ-2 ವೈಫ‌ಲ್ಯ ಕಂಡಿತ್ತು. ಆದರೆ ಇಷ್ಟಕ್ಕೆ ಸುಮ್ಮನಾಗದೇ ಭಾರತವು ಚಂದ್ರಯಾನ-3 ಕೈಗೊಂಡು ಯಶಸ್ವಿ ಆಯಿತು. ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡರ್‌ ಹಾಗೂ ರೋವರ್‌ ಕಳಿಸುವುದು ಮತ್ತು ಸುರಕ್ಷಿತ ಹಾಗೂ ಸಾಫ್ಟ್ ಲ್ಯಾಂಡಿಂಗ್‌, ರೋವರ್‌ ಸಂಚಾರ, ಆ ಮೂಲಕ ಸ್ಥಳದಲ್ಲಿನ ವೈಜ್ಞಾನಿಕ ಪ್ರಯೋಗ, ಸಂಶೋಧನೆ ನಡೆಸುವುದು ಚಂದ್ರಯಾನ-3ರ ಉದ್ದೇಶವಾಗಿತ್ತು.

Advertisement

2023 ಜುಲೈ 14ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಹೊತ್ತ ರಾಕೆಟ್‌ ಉಡಾವಣೆಗೊಂಡಿತು. ಅದೇ ವರ್ಷ ಆ. 5ರಂದು ಚಂದ್ರನ ಕಕ್ಷೆಗೆ ಸೇರ್ಪಡೆಯಾಯಿತು. ಆ. 17ರಂದು ವಾಹಕದಿಂದ ಲ್ಯಾಂಡರ್‌ ಪ್ರತ್ಯೇಕವಾಗಿ ಮುಂದೆ ಆ.23ರಂದು ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಿತು. ಈ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ನಾಮಕರಣ ಮಾಡಲಾಯಿತು. ಮರುದಿನ ತನ್ನ ಕಾರ್ಯಾರಂಭ ಮಾಡಿದ ಪ್ರಜ್ಞಾನ್‌ ರೋವರ್‌, ಹಲವು ಮಾಹಿತಿ ಕಲೆಹಾಕಿ, ಆ.30ರಂದು ಚಂದ್ರನಲ್ಲಿ ಗಂಧಕ ಇರುವಿಕೆ ಪತ್ತೆ ಹಚ್ಚಿತು. ತನಗೆ ವಹಿಸಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ ಪ್ರಜ್ಞಾನ್‌ ರೋವರ್‌ ಅನ್ನು ಸೆ.2 ಹಾಗೂ ವಿಕ್ರಮ್‌ ಲ್ಯಾಂಡರ್‌ನ್ನು ಸೆ.4ರಂದು ಸ್ಲಿàಪ್‌ ಮೋಡ್‌ಗೆ ಹಾಕಲಾಯಿತು.

14 ದಿನಗಳ ಬಳಿಕ ಸೂರ್ಯನ ಬೆಳಕಿನಿಂದ ಅವುಗಳು ಮತ್ತೆ ಕಾರ್ಯೋ ನ್ಮುಖವಾ­ಗಬಹುದೆಂದು ನಿರೀಕ್ಷೆ ಮಾಡಲಾಗಿತ್ತಾದರೂ, ಹಲವು ಪ್ರಯತ್ನ ಗಳ ಬಳಿಕ ಲ್ಯಾಂಡರ್‌ ಹಾಗೂ ರೋವರ್‌ ಸ್ಪಂದಿಸಲಿಲ್ಲ. ಹೀಗೆ ಚಂದ್ರ­ಯಾನ-3 ಯಶಸ್ವಿಯಾಗುವುದಲ್ಲದೇ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಚಂದ್ರನ ಮೇಲೆ ಭಾರತದ ಶಾಶ್ವತ ರಾಯಭಾರಿಗಳಾದವು.

74 ಸಾವಿರ ಕೋಟಿ ಬಾಹ್ಯಾಕಾಶ ಉದ್ಯಮ: 45 ಸಾವಿರ ಉದ್ಯೋಗ!
ಇಸ್ರೋ ಕೈಗೊಂಡ ಅದ್ವಿತೀಯ ಸಾಧನೆಗಳು ಭಾರತೀಯ ಬಾಹ್ಯಾಕಾಶ ಉದ್ಯಮಕ್ಕೆ ಸಾಕಷ್ಟು ನೆರವು ನೀಡಿದೆ. ಸದ್ಯ 500ಕ್ಕೂ ಹೆಚ್ಚು ಪೂರೈಕೆದಾರರು ಸೇರಿದಂತೆ ವಿವಿಧ ಕಂಪೆನಿಗಳು ಇದರಲ್ಲಿ ಪಾಲ್ಗೊಂಡಿವೆ. ಮೊದಲು ಸರಕಾರಕ್ಕೆ ಮಾತ್ರವೇ ಸೀಮಿತವಾಗಿದ್ದ ಬಾಹ್ಯಾಕಾಶ ಈಗ ಖಾಸಗಿಗೂ ಮುಕ್ತವಾಗಿದೆ. ಖಾಸಗಿ ಉಪಗ್ರಹಗಳನ್ನೂ ಲಾಂಚ್‌ ಮಾಡಲಾಗುತ್ತಿದೆ. ಭಾರತದ ಬಾಹ್ಯಾಕಾಶ ಉದ್ಯಮವು 74,700 ಕೋಟಿ ರೂ.(9 ಶತಕೋಟಿ ಡಾಲರ್‌) ಮೌಲ್ಯವನ್ನು ಹೊಂದಿದ್ದು, ಇದು ಜಾಗತಿಕ ಬಾಹ್ಯಾಕಾಶದ ಶೇ.2ರಿಂದ 3ರಷ್ಟು ಪಾಲು ಎನ್ನಬಹುದು. ಈ ಮೌಲ್ಯವು 3.65 ಲಕ್ಷ ಕೋಟಿ ರೂ.ಗೂ ತಲುಪುವ ಸಂಭವ ಇದೆ!

ಭಾರತೀಯ ಬಾಹ್ಯಾಕಾಶ ಉದ್ಯಮವು ಸುಮಾರು 45 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸಿದೆ. ಖಾಸಗಿಗೆ ಮತ್ತು ಸ್ಟಾರ್ಟ್‌ಅಪ್‌ಗ್ಳಿಗೆ ನೆರವು ನೀಡುವುದಕ್ಕಾಗಿಯೇ 2021ರಲ್ಲಿ ಭಾರತವು ಭಾರತೀಯ ಬಾಹ್ಯಾಕಾಶ ಸಂಘಟನೆ (ಐಸ್ಪಾ) ಆರಂಭಿಸಿದೆ. ಲಾರ್ಸನ್‌ ಆ್ಯಂಡ್‌ ಟುಬ್ರೋ, ನೆಲ್ಕೋ(ಟಾಟಾ), ಒನ್‌ವೆಬ್‌, ಮ್ಯಾಪ್‌ಮೈಇಂಡಿಯಾ ಸೇರಿ ಅನೇಕ ಕಂಪೆನಿಗಳು ಸಕ್ರಿಯವಾಗಿವೆ.

ವೈಫ‌ಲ್ಯ ಕಂಡಿದ್ದ ಚಂದ್ರಯಾನ-2
ಚಂದ್ರಯಾನ-3ಕ್ಕಿಂತ ಮೊದಲು 2019ರ ಜುಲೈ 22ರಂದು ಚಂದ್ರಯಾನ-2ಕ್ಕೆ ಚಾಲನೆ ನೀಡಲಾಗಿತ್ತು. ನಿಗದಿಯಂತೆ ಸೆ. 6ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸಬೇಕಿತ್ತು. ಗುರಿ ತಲುಪಲು ಕೇವಲ 2.1 ಕಿ.ಮೀ. ಬಾಕಿ ಇರುವಾಗ ಲ್ಯಾಂಡರ್‌ನ ಅವರೋಹಣ ವೇಗ ಕಡಿಮೆಯಾಗಲಿಲ್ಲ. ಕೊನೇ ಕ್ಷಣದಲ್ಲಾದ ಸಾಫ್ಟ್ವೇರ್‌ ದೋಷದಿಂದ ಲ್ಯಾಂಡರ್‌ ಪತನಗೊಂಡಿತು.

ಇಸ್ರೋ ಮಾತ್ರವಲ್ಲದೇ ಇಡೀ ದೇಶ ಈ ವೈಫ‌ಲ್ಯಕ್ಕೆ ಮರುಗಿತು. ಲ್ಯಾಂಡರ್‌ ಎಂಜಿನ್‌ ಮೇಲಿದ್ದ ಒತ್ತಡ, ವೇಗ ಕಡಿಮೆಗೊಳ್ಳದಿರುವುದು, ಸಾಫ್ಟ್ವೇರ್‌ ದೋಷ, ಲ್ಯಾಂಡಿಂಗ್‌ ಸೈಟ್‌ನಲ್ಲಿ ಇಳಿಯಲು ಇದ್ದ ಕಠಿನತೆ ಹೀಗೆ ಹಲವು ದೋಷಗಳಿಂದ ಚಂದ್ರಯಾನ-2 ವಿಫ‌ಲಗೊಂಡಿತು. 2008ರಲ್ಲಿ ಕೈಗೊಂಡ ಚಂದ್ರಯಾನ 1 ಯಶಸ್ವಿಯಾಗಿತ್ತು.

ವಿದೇಶಿಗಳಿಗೆ ಭಾರತ ಅಚ್ಚುಮೆಚ್ಚು
ಭಾರತವು ವಾಣಿಜ್ಯಾತ್ಮಕ ಉದ್ದೇಶಗಳಿಗಾಗಿ ತನ್ನ ಬಾಹ್ಯಾಕಾಶ ಸೇವೆಯನ್ನು ಇತರ ದೇಶಗಳಿಗೂ ನೀಡುತ್ತಿದೆ. ಅಮೆರಿಕ, ಫ್ರಾನ್ಸ್‌, ಬ್ರಿಟನ್‌ನಂಥ ದೇಶಗಳಿಗೆ ಹೋಲಿಸಿದರೆ, ಇಸ್ರೋ ಮೂಲಕ ಸ್ಯಾಟ್‌ಲೆçಟ್‌ ಉಡಾವಣೆ ಮಾಡುವುದು ತುಂಬ ಅಗ್ಗ. ಹಾಗಾಗಿ, ಟರ್ಕಿ, ಜರ್ಮನಿ, ಸಿಂಗಾಪುರ್‌, ಸ್ವಿಟ್ಸರ್ಲೆಂಡ್‌, ಬೆಲ್ಜಿಯಂ ಸೇರಿದಂತೆ 33ಕ್ಕೂ ಅಧಿಕ ರಾಷ್ಟ್ರಗಳು ಇಸ್ರೋ ಮೂಲಕ ತಮ್ಮ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿವೆ. ಇದರಿಂದ ಸಾಕಷ್ಟು ಆದಾಯವೂ ಬರುತ್ತಿದೆ.

ಇಸ್ರೋ ಮುಂದಿನ ಯೋಜನೆಗಳು
ಗಗನಯಾನ: 3 ಗಗನಯಾತ್ರಿಗಳನ್ನು
3 ದಿನಗಳ ಕಾರ್ಯಾಚರಣೆಗಾಗಿ 400 ಕಿ.ಮೀ. ದೂರದ ಕಕ್ಷೆಗೆ ಕಳುಹಿಸಿ, ಮರಳಿ ಅವರನ್ನು ಸುರಕ್ಷಿತವಾಗಿ ಕರೆತರುವ ಯೋಜನೆ. ಇದು ಭಾರತದ ಮೊದಲ ಮಾನವ ಸಹಿತ ಯೋಜನೆಯಾಗಿದೆ.

ನಿಸಾರ್‌: ಇದು ನಾಸಾ ಮತ್ತು ಇಸ್ರೋ ಜಂಟಿ ಕಾರ್ಯಾಚರಣೆ ಯೋಜನೆ. 12 ದಿನಗಳಲ್ಲಿ ಇಡೀ ಜಗತ್ತಿನ ನಕ್ಷೆ ಸಂಗ್ರಹಿಸಿ, ಭೂಮಿ ಮೇಲಿನ ಮಂಜು ಪ್ರದೇಶ, ಸಸ್ಯ ವರ್ಗ, ಸಮುದ್ರ ಮಟ್ಟ, ಅಂತರ್ಜಲ, ಭೂಕಂಪ, ಸುನಾಮಿ, ಜ್ವಾಲಾಮುಖೀ, ಭೂಕುಸಿತದಂಥ ನೈಸರ್ಗಿಕ ಅಪಾಯ, ಬದಲಾವಣೆ ಅರಿಯಲು ದತ್ತಾಂಶ ಒದಗಿಸುವ ಯೋಜನೆ ಇದಾಗಿದೆ.

ಬಾಹ್ಯಾಕಾಶ ನಿಲ್ದಾಣ: ಗಗನಯಾನ
ಯೋಜನೆ ಬಳಿಕ ಭಾರತವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಹೊಂದಿದೆ. 2035ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ.

ಚಂದ್ರನನ್ನು ಸ್ಪರ್ಶಿಸಿದ ದೇಶಗಳು
ಚಂದ್ರಯಾನ ಮಿಷನ್‌ಗಳಲ್ಲಿ ಅಮೆರಿಕ, ರಷ್ಯಾ ಮಾತ್ರವೇ ಪ್ರಾಬಲ್ಯ ಹೊಂದಿದ್ದವು. ಇದೀಗ ಭಾರತ ಸೇರಿ ಜಪಾನ್‌, ಚೀನ, ಐರೋಪ್ಯ ಒಕ್ಕೂಟ, ಇಟಲಿ, ದಕ್ಷಿಣ ಕೊರಿಯಾ ಕೂಡ ಚಂದ್ರ ಅಂಗಳವನ್ನು ತಲುಪಿವೆ.


– ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next