Advertisement

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಬೀಸಲಿದೆ ಮಿನಿ ವಿಶ್ವಕಪ್‌ ಹವಾ

12:15 PM May 24, 2017 | |

ಹತ್ತನೇ ಐಪಿಎಲ್‌ ಜೋಶ್‌ ಕೊನೆಗೊಂಡಿದೆ. ಆದರೆ ಕ್ರಿಕೆಟಿಗರಿಗೆ, ಕ್ರಿಕೆಟಿಗೆ ವಿಶ್ರಾಂತಿ ಇಲ್ಲ. ಅಷ್ಟರಲ್ಲೇ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಪಂದ್ಯಾವಳಿಯ ಗಂಟೆ ಕ್ರಿಕೆಟ್‌ ಜನಕರ ನಾಡಾದ ಇಂಗ್ಲೆಂಡಿನಲ್ಲಿ ಮೊಳಗಲಾರಂಭಿಸಿದೆ. ಜೂನ್‌ ಒಂದರಿಂದಲೇ ಹಣಾಹಣಿ ಆರಂಭ. ಇದಕ್ಕೂ ಮುನ್ನ ಅಭ್ಯಾಸ ಪಂದ್ಯಗಳೂ ನಡೆಯಲಿವೆ. ಒಟ್ಟು 18 ದಿನಗಳ ಕಾಲ ನಡೆಯಲಿರುವ ಈ ಕ್ರಿಕೆಟ್‌ ಕಾಳಗದಲ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿರುವ 8 ತಂಡಗಳು ಪಾಲ್ಗೊಳ್ಳಲಿವೆ. ಹಾಲಿ ಚಾಂಪಿಯನ್‌ ಭಾರತ ಮತ್ತು ಪಾಕಿಸ್ಥಾನ ನಡುವಿನ ಹೈ ವೋಲ್ಟೆàಜ್‌ ಪಂದ್ಯವೂ ಈ ಕೂಟದ ಆಕರ್ಷಣೆಗಳಲ್ಲೊಂದು. ಈ ಹಿನ್ನೆಲೆಯಲ್ಲಿ “ಮಿನಿ ವಿಶ್ವಕಪ್‌ ಪಂದ್ಯಾವಳಿ’ಯ ಕುರಿತು ಹಿನ್ನೋಟ…

Advertisement

1988
ಐಸಿಸಿ ನಾಕೌಟ್‌ ಟೂರ್ನಮೆಂಟ್‌

ನಾಕೌಟ್‌ ಮಾದರಿಯ ಈ ಪಂದ್ಯಾವಳಿಯ ಮೊದಲ ಆತಿಥ್ಯ ವಹಿಸಿದ ಹೆಗ್ಗಳಿಕೆ ಬಾಂಗ್ಲಾದೇಶದ್ದು. ಆಗ ಇದು “ವಿಲ್ಸ್‌ ಇಂಟರ್‌ನ್ಯಾಶನಲ್‌ ಕಪ್‌’. ಎಲ್ಲ ಪಂದ್ಯಗಳೂ ಢಾಕಾದಲ್ಲೇ ನಡೆದವು. ಭಾರತ ಸೆಮಿಫೈನಲ್‌ ತನಕ ಸಾಗಿ ವೆಸ್ಟ್‌ ಇಂಡೀಸಿಗೆ ಸೋತಿತು. ಫೈನಲ್‌ನಲ್ಲಿ ಲಾರಾ ಪಡೆಯನ್ನು 4 ವಿಕೆಟ್‌ಗಳಿಂದ ಮಣಿಸಿದ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿ ಮೂಡಿಬಂತು. ವಿಂಡೀಸ್‌ 49.3 ಓವರ್‌ಗಳಲ್ಲಿ 245ಕ್ಕೆ ಆಲೌಟಾಯಿತು. ದಕ್ಷಿಣ ಆಫ್ರಿಕಾ 47 ಓವರ್‌ಗಳಲ್ಲಿ 6ಕ್ಕೆ 248 ರನ್‌ ಬಾರಿಸಿತು. ಕೆರಿಬಿಯನ್‌ ಆರಂಭಕಾರ ಫಿಲೊ ವ್ಯಾಲೇಸ್‌ ಬಾರಿಸಿದ ಶತಕ ವ್ಯರ್ಥವಾಯಿತು (103).

2000
ನ್ಯೂಜಿಲ್ಯಾಂಡ್‌ ಚಾಂಪಿಯನ್‌

ದ್ವಿತೀಯ “ಐಸಿಸಿ ನಾಕೌಟ್‌ ಟೂರ್ನಿ’ ಕೀನ್ಯಾದಲ್ಲಿ ನಡೆಯಿತು. ಗಂಗೂಲಿ ಸಾರಥ್ಯದ ಭಾರತ ಅಮೋಘ ಪ್ರದರ್ಶನದೊಂದಿಗೆ ಫೈನಲ್‌ಗೆ ಲಗ್ಗೆ ಇರಿಸಿತು. ಆದರೆ ಅಲ್ಲಿ ನ್ಯೂಜಿಲ್ಯಾಂಡಿಗೆ ಶರಣಾಯಿತು. ಗಂಗೂಲಿ (117)-ತೆಂಡುಲ್ಕರ್‌ (69) ಜೋಡಿಯ ಅಮೋಘ ಆರಂಭದ ನೆರವಿನಿಂದ ಭಾರತ 6ಕ್ಕೆ 264 ರನ್‌ ಪೇರಿಸಿತು. ಕಿವೀಸ್‌ಗೆ ಕ್ರಿಸ್‌ ಕೇರ್ನ್ಸ್ ಅವರ ಅಜೇಯ ಶತಕ (102) ಆಸರೆಯಾಯಿತು. 49.4 ಓವರ್‌ಗಳಲ್ಲಿ 6ಕ್ಕೆ 265 ರನ್‌ ಪೇರಿಸಿ ಗೆದ್ದಿತು. ಇದು ನ್ಯೂಜಿಲ್ಯಾಂಡ್‌ ಗೆದ್ದ ಏಕೈಕ ಐಸಿಸಿ ಟ್ರೋಫಿಯಾಗಿ ಉಳಿದಿದೆ. ಭಾರತದ ಯುವರಾಜ್‌ ಸಿಂಗ್‌, ಜಹೀರ್‌ ಖಾನ್‌ ಪಾಲಿಗೆ ಇದು ಪಾದಾರ್ಪಣಾ ಸರಣಿಯಾಗಿತ್ತು.

2002
ಭಾರತ-ಶ್ರೀಲಂಕಾ ಜಂಟಿ ವಿಜೇತರು

3ನೇ ಆವೃತ್ತಿಯಲ್ಲಿ ಇದಕ್ಕೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಎಂದು ನಾಮಕರಣವಾಯಿತು. ಭಾರತ ಇದರ ಆತಿಥ್ಯ ವಹಿಸಬೇಕಿತ್ತು, ಆದರೆ ಕೇಂದ್ರ ಸರಕಾರ ತೆರಿಗೆ ವಿನಾಯಿತಿ ನೀಡದ ಕಾರಣ ಶ್ರೀಲಂಕಾಕ್ಕೆ ವರ್ಗಾವಣೆಗೊಂಡಿತು. ಆದರೆ ಭಾರತ-ಶ್ರೀಲಂಕಾ ನಡುವಿನ ಫೈನಲ್‌ ಪಂದ್ಯ ಮಳೆಯಿಂದ ಕೊಚ್ಚಿಹೋದ್ದರಿಂದ ಇತ್ತಂಡಗಳನ್ನೂ ಜಂಟಿ ವಿಜೇತರೆಂದು ಘೋಷಿಸಬೇಕಾಯಿತು. ಶ್ರೀಲಂಕಾ 7 ವಿಕೆಟಿಗೆ 222 ರನ್‌ ಮಾಡಿದರೆ, ಭಾರತದ ಚೇಸಿಂಗ್‌ ವೇಳೆ 9ನೇ ಓವರಿನಲ್ಲಿ ಸುರಿದ ಮಳೆ ನಿಲ್ಲಲೇ ಇಲ್ಲ. ಆಗ ಭಾರತ ಒಂದಕ್ಕೆ 38 ರನ್‌ ಮಾಡಿತ್ತು. ಜಯಸೂರ್ಯ ಅವರನ್ನು ಜಹೀರ್‌ ಮೊದಲ ಎಸೆತಕ್ಕೇ ಉರುಳಿಸಿದ್ದರು.

2004
ಗೆಲುವು ಕಸಿದ ವೆಸ್ಟ್‌ ಇಂಡೀಸ್‌

2004ರ ಪಂದ್ಯಾವಳಿ ಇಂಗ್ಲೆಂಡ್‌ ಆತಿಥ್ಯದಲ್ಲಿ ನಡೆಯಿತು. ಮೈಕಲ್‌ ವಾನ್‌ ನಾಯಕತ್ವದ ಇಂಗ್ಲೆಂಡ್‌ ಫೈನಲಿಗೂ ಲಗ್ಗೆ ಇರಿಸಿತು. ವೆಸ್ಟ್‌ ಇಂಡೀಸ್‌ ವಿರುದ್ಧ ಇನ್ನೇನು ಗೆದ್ದೇ ಬಿಟ್ಟಿತು ಎಂಬ ಹಂತದಲ್ಲೇ ಎಡವಿತು. ಬ್ರಿಯಾನ್‌ ಲಾರಾ ಬಳಗ 2 ವಿಕೆಟ್‌ ರೋಚಕ ಜಯದೊಂದಿಗೆ ಟ್ರೋಫಿ ಎತ್ತಿ ಹಿಡಿಯಿತು. ಇಂಗ್ಲೆಂಡ್‌ 217ಕ್ಕೆ ಕುಸಿದರೆ, ವಿಂಡೀಸ್‌ ಒಂದು ಹಂತದಲ್ಲಿ 147ಕ್ಕೆ 8 ವಿಕೆಟ್‌ ಉರುಳಿಸಿಕೊಂಡಿತ್ತು. ಆದರೆ ಕೋರ್ಟ್ನಿ ಬ್ರೌನ್‌-ಇಯಾನ್‌ ಬ್ರಾಡ್‌ಶಾ ಅಜೇಯ 71 ರನ್‌ ಜತೆಯಾಟ ನಿಭಾಯಿಸಿ ಆಂಗ್ಲರಿಗೆ ಚಳ್ಳೆಹಣ್ಣು ತಿನಿಸಿದರು. ಅಂದಹಾಗೆ, ಪಾಕಿಸ್ಥಾನಕ್ಕೆ 3 ವಿಕೆಟ್‌ಗಳಿಂದ ಶರಣಾದ ಭಾರತ ಗ್ರೂಪ್‌ ಹಂತದಲ್ಲೇ ನಿರ್ಗಮಿಸಿತ್ತು.

Advertisement

2006
ಆಸ್ಟ್ರೇಲಿಯದ ಗೆಲುವಿನ ಸರದಿ

ಅರ್ಹತಾ ಸುತ್ತಿನ 6 ಪಂದ್ಯಗಳ ಬಳಿಕ ಕಾವೇರಿಸಿಕೊಂಡ ಪಂದ್ಯಾವಳಿ ಇದು. ಆತಿಥ್ಯ ಭಾರತದ್ದಾಗಿತ್ತು. ಆದರೆ ಏಶ್ಯದ ಯಾವ ತಂಡಗಳೂ ಸೆಮಿಫೈನಲ್‌ ಪ್ರವೇಶಿಸಲಿಲ್ಲ. ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಫೈನಲ್‌ ಪ್ರವೇಶಿಸಿ ಆಸ್ಟ್ರೇಲಿಯದ ದಾಳಿಗೆ ತತ್ತರಿಸಿತು. ಕೇವಲ 138 ರನ್ನಿಗೆ ಉದುರಿತು. ಮಳೆಯಿಂದಾಗಿ ಪಾಂಟಿಂಗ್‌ ಪಡೆಗೆ 35 ಓವರ್‌ಗಳಲ್ಲಿ 116 ರನ್‌ ತೆಗೆಯುವ ಗುರಿ ಲಭಿಸಿತು. ಅದು ಎರಡೇ ವಿಕೆಟಿಗೆ ಗುರಿ ಸಾಧಿಸಿತು. ಫೈನಲ್‌ ತಾಣ ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂ. ಇದು ಕ್ರಿಸ್‌ ಗೇಲ್‌ ಆಬ್ಬರವನ್ನು ಸಾರಿದ ಕೂಟವೂ ಹೌದು. 8 ಪಂದ್ಯಗಳಲ್ಲಿ ಗೇಲ್‌ ಸಾಧನೆ, 3 ಶತಕ ಸಹಿತ 474 ರನ್‌!

2009
ಪ್ರಶಸ್ತಿ ಉಳಿಸಿಕೊಂಡ ಕಾಂಗರೂ ಟೀಮ್‌

ದಕ್ಷಿಣ ಆಫ್ರಿಕಾದ ಆತಿಥ್ಯ. ಆಗ ಭಾರತ ಟಿ-20 ವಿಶ್ವಕಪ್‌ ಗೆದ್ದ ಹುರುಪಿನಲ್ಲಿತ್ತು. ಆದರೆ ಇಲ್ಲಿ ಗೆದ್ದದ್ದು ಒಂದು ಪಂದ್ಯ ಮಾತ್ರ. ಪಾಕಿಸ್ಥಾನ ವಿರುದ್ಧ ಮತ್ತೆ ಮುಖಭಂಗ ಅನುಭವಿಸಿತು. ಆಸ್ಟ್ರೇಲಿಯ ಟ್ರೋಫಿ ಉಳಿಸಿಕೊಂಡಿತು. ಸತತ 2 ಸಲ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ ಏಕೈಕ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಸೆಂಚುರಿಯನ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಎದುರಾದ ತಂಡ ನ್ಯೂಜಿಲ್ಯಾಂಡ್‌. ಮೆಕಲಮ್‌ ಪಡೆ ಭರ್ತಿ 200 ರನ್ನಿಗೆ ನಿಂತಿತು; ಆಸೀಸ್‌ ಕೇವಲ 6 ರನ್ನಿಗೆ 2 ವಿಕೆಟ್‌ ಕಳೆದುಕೊಂಡ ಬಳಿಕ ಚೇತರಿಸಿ 4ಕ್ಕೆ 206 ರನ್‌ ಬಾರಿಸಿತು. ಇದರಲ್ಲಿ ಆರಂಭಕಾರ ಶೇನ್‌ ವಾಟ್ಸನ್‌ ಪಾಲೇ ಅಜೇಯ 105 ರನ್‌!

2013
ಧೋನಿ ಯುವ ಪಡೆಯ ಸಾಹಸ

ಕೊನೆಯ ಚಾಂಪಿಯನ್ಸ್‌ ಟ್ರೋಫಿ ಕೂಡ ಇಂಗ್ಲೆಂಡಿನಲ್ಲೇ ನಡೆದಿತ್ತು. ಧೋನಿ ಪಡೆ ಅತ್ಯಂತ ಆಕ್ರಮಣಕಾರಿ ಆಟವಾಡಿ ಫೈನಲಿಗೆ ಲಗ್ಗೆ ಇರಿಸಿತು. ಅಲ್ಲಿ ಎದುರಾದ ತಂಡ ಆತಿಥೇಯ ಇಂಗ್ಲೆಂಡ್‌. ಆದರೆ ಬರ್ಮಿಂಗಂನಲ್ಲಿ ಭಾರೀ ಮಳೆ ಸುರಿದುದರಿಂದ ಈ ಪಂದ್ಯವನ್ನು 20 ಓವರ್‌ಗಳಿಗೆ ಇಳಿಸಲಾಯಿತು. ಭಾರತ 5 ರನ್ನಿನಿಂದ ಇಂಗ್ಲೆಂಡನ್ನು ಉರುಳಿಸಿ ಚಾಂಪಿಯನ್‌ ಎನಿಸಿಕೊಂಡಿತು. ಭಾರತ 7ಕ್ಕೆ 129 ರನ್‌ ಹೊಡೆದರೆ, ಇಂಗ್ಲೆಂಡಿಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 124 ರನ್‌ ಮಾತ್ರ. ರವೀಂದ್ರ ಜಡೇಜ ಆಲ್‌ರೌಂಡ್‌ ಶೋ (ಅಜೇಯ 33 ರನ್‌, 24ಕ್ಕೆ 2 ವಿಕೆಟ್‌) ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

– ಎಚ್‌. ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next