Advertisement

ಚಾಮರಾಜನಗರಕ್ಕೆ ಸಿಕ್ಕಿದ್ದು ಅಲ್ಪ

06:57 AM Feb 09, 2019 | |

ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ ಚಾಮರಾಜನಗರದ ಪಾಲಿಗೆ ಸುವರ್ಣ ಕಾಲ ಅನ್ನಬಹುದು. ಅವರ ಬಳಿಕ ಬಂದು ಎರಡನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗಡಿಜಿಲ್ಲೆಗೆ ನೀಡಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಚಾಮರಾಜನಗರ ಜಿಲ್ಲೆಗೆಂದೇ ನಿಗದಿಪಡಿಸಿ ನೀಡಿರುವುದು ಒಟ್ಟು 8.5 ಕೋಟಿ ರೂ. ಅನುದಾನ ಮಾತ್ರ. ಇದು ಬರದಿಂದ ಬಿಸಿಯಾದ ನೆಲಕ್ಕೆ ನೀರು ಹನಿ ನೀರು ಚಿಮುಕಿಸಿದಂತಾಗಿದೆ ಅಷ್ಟೇ.

Advertisement

ರೇಷ್ಮೆ ಪುನಶ್ಚೇತನ: ಚಾಮರಾಜನಗರ ಪಟ್ಟಣದಲ್ಲಿ ಈಗಾಗಲೇ ಮುಚ್ಚಿ ಹೋಗಿರುವ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ. ಹಾಗೂ ಸಂತೆಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಇದಲ್ಲದೇ, ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪಿಸಲು 10 ಜಿಲ್ಲೆಗಳಿಗೆ ಒಟ್ಟು 15 ಕೋಟಿ ರೂ. ನೀಡಲಾಗಿದೆ. ಅದರಲ್ಲಿ ಚಾಮರಾಜನಗರ ಜಿಲ್ಲೆಯೂ ಒಂದು.

ನಿರೀಕ್ಷೆ ಹುಸಿ: ಇದಿಷ್ಟು ಬಿಟ್ಟರೆ ಚಾಮರಾಜನಗರ ಜಿಲ್ಲೆಗೆ ರಾಜ್ಯ ಬಜೆಟ್‌ನಲ್ಲಿ ಇನ್ನೇನೂ ದೊರಕಲಿಲ್ಲ. ಕಳೆದ ಬಜೆಟ್‌ನಲ್ಲೂ ಅಷ್ಟೇ. ನಾಲ್ಕು ಜಿಲ್ಲೆಗಳ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳ ನಿರ್ಮಾಣಕ್ಕೆ ಒಟ್ಟು 200 ಕೋಟಿ ರೂ. ನೀಡಿದ್ದರು. ಅಷ್ಟು ಬಿಟ್ಟು ಬೇರಾವ ಅನುದಾನ ನೀಡಿರಲಿಲ್ಲ. ಈ ಬಾರಿಯಂತೂ ಕೇವಲ 8.5 ಕೋಟಿ ರೂ. ಗಳ ಅನುದಾನ ನೀಡುವ ಮೂಲಕ ಗಡಿಜಿಲ್ಲೆಯನ್ನು ತೀವ್ರವಾಗಿ ನಿರ್ಲಕ್ಷಿಸಿದ್ದಾರೆ. ಮುಖ್ಯಮಂತ್ರಿಯವರು ಈ ಬಾರಿಯಾದರೂ ಜಿಲ್ಲೆಗೆ ಒಂದಷ್ಟು ಅನುದಾನ, ಹೊಸ ಯೋಜನೆಗಳನ್ನು ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಳು ಹುಸಿಯಾಗಿವೆ.

ಈಗಾಗಲೇ ಚಾಮರಾಜನಗರ ಗುಂಡ್ಲುಪೇಟೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ. ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದು, ಈಗಿನ ಜನಸಂಖ್ಯೆಗೆ ಈ ನೀರು ಸಾಲುತ್ತಿಲ್ಲ. ಹೀಗಾಗಿ ಪಟ್ಟಣಕ್ಕೆ ತಡಿ ಮಾಲಂಗಿಯಿಂದ ಪೈಪುಗಳ ಮೂಲಕ ನೀರು ಪೂರೈಸುವ ಈ ಯೋಜನೆಗೆ 220 ಕೋಟಿ ರೂ. ಅಂದಾಜು ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಜಿಲ್ಲಾ ಕೇಂದ್ರದಲ್ಲಿ ಈಗಿರುವ ಪ್ರದೇಶಕ್ಕಿಂತ ಜನವಸತಿ ಪ್ರದೇಶ ವಿಸ್ತರಣೆಯಾಗಿಲ್ಲ. ಆಶ್ರಯ, ಅಂಬೇಡ್ಕರ್‌, ಬಸವ ವಸತಿ ಯೋಜನೆಯಡಿ ಮನೆ ನೀಡುವಂತೆ 15 ಸಾವಿರದಷ್ಟು ಮಂದಿ ನಗರಸಭೆಗೆ ಚುಡಾಕ್ಕೆ ಈ ಅರ್ಜಿ ಸಲ್ಲಿಸಿದ್ದಾರೆ. ನಗರದ ಸಮೀಪದ ಮಾಲೆಗೆರೆ ಬಳಿ ಜಮೀನುಗಳನ್ನು ಖರೀದಿಸಿ 5 ಸಾವಿರ ನಿವೇಶನಗಳನ್ನು ವಿತರಿಸಲು ಬಜೆಟ್‌ನಲ್ಲಿ ಅನುದಾನಕ್ಕಾಗಿ ಉಸ್ತುವಾರಿ ಸಚಿವ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಬೇಡಿಕೆಯಿಟ್ಟಿದ್ದರು. ನಗರದ ಹೊಸ ಬಡಾವಣೆಗಳಿಗೆ ಒಳಚರಂಡಿ ಮುಂದುವರಿದ ಕಾಮಗಾರಿಗೆ 50 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದ್ಯಾವುದೂ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ.

Advertisement

ಪ್ರವಾಸಿ ತಾಣಗಳ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಲು ಹಣ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಚಾಮರಾಜನಗರ ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸ್ಥಳ ಮೀಸಲಿರಿಸಲಾಗಿದೆ. ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ನೂತನ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಮೇಲಿನ ಎಲ್ಲ ನಿರೀಕ್ಷೆಗಳು ನಿರೀಕ್ಷೆಯಾಗಿಯೇ ಉಳಿದಿವೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ರಾಮನಗರ, ಹಾಸನ, ಮಂಡ್ಯ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿ, ಗಡಿ ಜಿಲ್ಲೆ ಚಾಮರಾಜನಗರವನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಿಲ್ಕ್ ಫ್ಯಾಕ್ಟರಿಗೆ 5 ಕೋಟಿ ರೂ.: ಚಾಮರಾಜನಗರದ ತಿ.ನರಸೀಪುರ ರಸ್ತೆಯಲ್ಲಿರುವ ಮುಚ್ಚಿ ಹೋಗಿರುವ ಸರ್ಕಾರಿ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ. ಕಲ್ಪಿಸಲಾಗಿದೆ. ಕಳೆದ ಬಾರಿ ಬಿಜೆಪಿ, ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಜಿಲ್ಲೆಯ ಕೊಂಬುಡಿಕಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು. ಜಿಲ್ಲೆಯ ಪರಿಸ್ಥಿತಿ ಬಗ್ಗೆ ಅವರಿಗೆ ಅರಿವಿತ್ತು. ಆದರೂ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡದಿರುವುದು ಜನತೆಗೆ ನಿರಾಸೆ ಮೂಡಿಸಿದೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next