Advertisement

ಸರಗಳ್ಳತನ ನಡೆಸಿದ್ದ “ಚಡ್ಡಿಗ್ಯಾಂಗ್‌’ಸೆರೆ

09:53 AM Jan 21, 2023 | Team Udayavani |

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ‘ಚಡ್ಡಿ’ ಗ್ಯಾಂಗ್‌’ನ ಇಬ್ಬರು ಸದಸ್ಯರು ಹನುಮಂತನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

Advertisement

ಅಂಬೇಡ್ಕರ್‌ ನಗರದ ಪಂತರಪಾಳ್ಯದ ಸುನೀಲ್‌ ಕುಮಾರ್‌ (37) ಹಾಗೂ ವಿನಾಯಕ ಲೇಔಟ್‌ನ ಶ್ರೀನಿವಾಸ(25) ಬಂಧಿತರು. ಆರೋಪಿಗಳಿಂದ 27 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿ ಒಟ್ಟು 13 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಆರೋ ಪಿಗಳ ಬಂಧನದಿಂದ ಕೆಂಗೇರಿ, ಹನುಮಂತನಗರ, ಸಿ.ಕೆ.ಅಚ್ಚುಕಟ್ಟು, ಕೆ.ಜಿ.ನಗರ, ಗಿರಿನಗರ, ಬನಶಂಕರಿ, ಹಗಲಸೂರು ಗೇಟ್‌ ಸೇರಿ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 12 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಈ ಗ್ಯಾಂಗ್‌ನ ಸದಸ್ಯರು ಚಡ್ಡಿ ಹಾಕಿಕೊಂಡು ಬೈಕ್‌ ಚಲಾಯಿಸಿಕೊಂಡು ಫೀಲ್ಡ್‌ಗೆ ಇಳಿದರೆ ಚಿನ್ನದ ಸರ ಕಿತ್ತುಕೊಳ್ಳದೇ ವಾಪಸ್‌ ಹೋಗುತ್ತಿರಲಿಲ್ಲ. ಶರವೇಗದಲ್ಲಿ ಬಂದು ಕ್ಷಣ ಮಾತ್ರದಲ್ಲಿ ಒಂಟಿ ಮಹಿಳೆಯರ ಕತ್ತಿನಲ್ಲಿರುವ ಸರ ಕಸಿದುಕೊಂಡು ಪರಾರಿಯಾಗುವುದು ಈ ಗ್ಯಾಂಗ್‌ನ ಶೈಲಿ. ಆರೋಪಿ ಸುನೀಲ್‌ ಕುಮಾರ್‌ 2016ರ ವರೆಗೆ 8 ವರ್ಷ ಜೈಲಿನಲ್ಲಿದ್ದ. ನಂತರ ಜೈಲಿನಿಂದ ಹೊರಬಂದು ಮತ್ತೆ ಹಳೆ ಚಾಳಿ ಮುಂದುವರಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಸಿಕ್ಕಿ ಬಿದ್ದಿದ್ದು ಹೇಗೆ? : ಹನುಮಂತನಗರ ನಿವಾಸಿ ಜಯಶ್ರೀ ಜ.4 ರಂದು ಮಧ್ಯಾಹ್ನ 3.30ಕ್ಕೆ ಹನುಮಂತನಗರದ 5ನೇ ಮುಖ್ಯರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ದ್ವಿಚಕ್ರ ವಾಹನ ದಲ್ಲಿ ಬಂದು ಆರೋಪಿಗಳು ಜಯಶ್ರೀ ಅವರನ್ನು ಅಡ್ಡಗಟ್ಟಿದ್ದರು. ಬಳಿಕ ಚಾಕು ತೋರಿಸಿ ಬೆದರಿಸಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು. ಪ್ರಕರಣ ನಡೆದ ಬಳಿಕ 15 ದಿನ ನಿರಂತರ ಕಾರ್ಯಾ ಚರಣೆ ಬಳಿಕ ಪೊಲೀಸರು, ಕೃತ್ಯ ನಡೆದ ಸ್ಥಳದ ಬಳಿ ನೂರಾರು ಸಿಸಿ ಕ್ಯಾಮೆರಾ ಪರಿಶೀಲಿಸಿ ಕೊನೆಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next