Advertisement

ನೀರ ನೆಮ್ಮದಿಗೆ ಕಟ್ಟ ಕಟ್ಟುವ ಹಬ್ಬಕ್ಕೆ ವಿಧ್ಯುಕ್ತ ಚಾಲನೆ

08:21 PM Dec 03, 2019 | Lakshmi GovindaRaju |

ಪೆರ್ಲ: ಜಲ ಸಂರಕ್ಷಣೆಗಾಗಿ ಅವಿರತ ದುಡಿಯುವ ನೀರ ನೆಮ್ಮದಿ ಯತ್ತ ಪಡ್ರೆ ಜಲಯೋಧರ ತಂಡದಿಂದ ಕಳೆದ ಬೇಸಗೆಯಲ್ಲಿ ಬತ್ತಿ ಬರಡಾಗಿದ್ದ ಪಡ್ರೆ ಪ್ರದೇಶದ ತೋಡುಗಳ ಪುನರುದ್ಧಾರ, ವರ್ಷ ಪೂರ್ತಿ ನೀರು ಹರಿಯುವಂತೆ ಮಾಡಲು ಕ್ರಿಯಾ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲು ಡಿ. 1ರಂದು ಪಡ್ಪು, ಪೊಯ್ಯೆ ತೋಡಿನಲ್ಲಿ ನಾಲ್ಕು ಸರಣಿ ಕಟ್ಟಗಳನ್ನು ನಿರ್ಮಿಸುವ ಮೂಲಕ ಕಟ್ಟ ಕಟ್ಟುವ ಹಬ್ಬಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

Advertisement

ಕಟ್ಟ ನಿರ್ಮಾಣವನ್ನು ಉತ್ಸವರೀತಿಯಲ್ಲಿ ಆಚರಿಸುತ್ತ ಎರಡು ತೋಡುಗಳಿಗೆ ಮೂರರಿಂದ ನಾಲ್ಕು ಡಜನ್‌ ಸರಣಿ ಕಟ್ಟ ನಿರ್ಮಾಣಕ್ಕೆ ಪಣತೊಟ್ಟ ಜಲಪ್ರೇಮಿಗಳಿಗೆ ಸ್ಥಳೀಯರು ಸಹಕರಿಸಿದರು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಯೋಜನಾಧಿಕಾರಿ ಹರಿಪ್ರಸಾದ್‌ ನೇತೃತ್ವದಲ್ಲಿ ಕಟ್ಟ ಕಟ್ಟುವ ಕೆಲಸ ಕಾರ್ಯ ಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಪ್ರಗತಿ ಪರ ಕೃಷಿಕ, ಕಟ್ಟಗಳ ತಜ್ಞ ಜಗದೀಶ್ಚಂದ್ರ ಕುತ್ತಾಜೆ, ಮರಳು ಚೀಲ, ಅರಿಪ್ಪೆ ಕಟ್ಟ, ಫೈಬರ್‌ ಶೀಟ್‌ ಕಟ್ಟಗಳ ವಿಧಾನಗಳು, ನಿರ್ಮಾಣ ರೀತಿ, ಕಚ್ಚಾ ವಸ್ತುಗಳು ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು.

ಮಣ್ಣು ನೀರಿನ ಆಟ
ನೀರ ನೆಮ್ಮದಿಯತ್ತ ಪಡ್ರೆ ಸಂಘಟನಾ ಅಧ್ಯಕ್ಷ ಶ್ರೀಹರಿ ಸಜಂಗದ್ದೆ ಕಟ್ಟ ನಿರ್ಮಾಣದ ಪೂರ್ವಭಾವಿಯಾಗಿ ಮಣ್ಣನ್ನು ರಾಶಿ ಹಾಕಿ ಹುಳಿ ಬರಿಸಿ, ನಿರ್ಮಾಣದ ದಿನ ಚೆನ್ನಾಗಿ ಕಲಸಿ ಉಂಡೆಯಾಕಾರದಲ್ಲಿ ಮಾಡಿ ಕಟ್ಟಕ್ಕೆ ಬಳಸುವ ವಿಧಾನ ತಿಳಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹುಳಿಬರಿಸಿದ ಮಣ್ಣಿನ ಉಂಡೆಗಳನ್ನು ಮಾಡಲು ನೆರವಿತ್ತರು. ತೋಡಿನ ಕಲ್ಲು ಗಳನ್ನು ಸಂಗ್ರಹಿಸಿ ತಡೆ ನಿರ್ಮಿಸ ಲಾಯಿತು.  ಮರಳು ಚೀಲದ ಕಟ್ಟು , ಅಡಕೆ ಮರದ ತುಂಡು, ಹುಳಿಬರಿಸಿದ ಮಣ್ಣಿನಿಂದ ಅರಿಪೆ ಕಟ್ಟ ನಿರ್ಮಿಸಿದರು. ತೋಡು ದಾಟಲು ಅಡಿಕೆ ಮರದ ತಾತ್ಕಾಲಿಕ ಕಾಲ್ಸಂಕ ನಿರ್ಮಿಸಿದರು.

ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ., ಜಲತಜ್ಞ ಶ್ರೀಪಡ್ರೆ, ಕೃಷಿಕ ಡಾ| ವೇಣು ಕಳೆಯತೋಡಿ, ನಿವೃತ್ತ ಉಪನ್ಯಾಸಕ ಎಸ್‌. ನಿತ್ಯಾನಂದ ಪಡ್ರೆ, ಉಪನ್ಯಾಸಕರಾದ ರಾಕೇಶ್‌ ಕುಮಾರ್‌ ಕಮ್ಮಜೆ, ಭರತ್‌ ರಾಜ್‌, ಸುಬ್ರಹ್ಮಣ್ಯ ಭಟ್‌ ಕೆ.ವೈ., ಶಿವ ಪ್ರಕಾಶ್‌ ಪಾಲೆಪ್ಪಾಡಿ, ಶ್ರೀಹರಿ ಭರಣೇಕರ್‌, ಶ್ರೀನಿವಾಸ ಸ್ವರ್ಗ, ಶೈಲಜಾ ದೇಲಂತರು, ಗೀತಾಲಕ್ಷ್ಮೀ ಪಾಲೆಪ್ಪಾಡಿ ಉಪಸ್ಥಿತರಿದ್ದರು.

ಭೇಟಿ, ಸಂದರ್ಶನ
ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್‌ ಸಿದ್ದಿಕ್‌ ಖಂಡಿಗೆ ನಿರ್ಮಾಣ ಸ್ಥಳಕ್ಕೆ ಆಗಮಿಸಿದಾಗ ವಿದ್ಯಾರ್ಥಿಗಳು ಸಂದರ್ಶನ ನಡೆಸಿದರು. ಅವರು ಮಾಹಿತಿ ನೀಡುತ್ತಾ, ಪ್ರಕೃತಿದತ್ತ ತೋಡು, ತೊರೆಗಳ ಬಳಕೆ, ಸಂರಕ್ಷಣೆ ಪ್ರತೀ ನಾಗರಿಕರ ಕರ್ತವ್ಯವಾಗಬೇಕು. ವಿದ್ಯಾರ್ಥಿಗಳಿಗೆ ಜಲಸಂಪನ್ಮೂಲಗಳ ಸಂರಕ್ಷಣೆ, ಬಳಕೆಗಳ ಬಗ್ಗೆ ಅರಿವು ನೀಡಿದರು. ಇಲ್ಲಿನ ಜಲಯೋಧರ ಉತ್ಸಾಹ, ನೀರಿನ ಕಾಳಜಿ ಅಭಿನಂದನೀಯ ಎಂದರು. ಸ್ವತಃ ಸಮಾಜ ಕಾರ್ಯಕರ್ತ, ರಾಜಕಾರಣಿಯ ಜತೆಗೆ ಹೈನುಗಾರಿಕೆ, ಪಶು ಆಹಾರ ತಯಾರಿ ಘಟಕ ಹೊಂದಿರುವ ಇವರು ಪ್ರಗತಿಪರ ಕೃಷಿಕರೂ ಆಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next