Advertisement

ತೈಲ ಬೆಲೆ ತಗ್ಗಿಸಲು ಕೇಂದ್ರ ಶೀಘ್ರ ಕ್ರಮ

01:28 PM Jul 11, 2020 | Suhan S |

ಹುಬ್ಬಳ್ಳಿ: ತೈಲ ಆಮದು ಕಡಿಮೆ ಮಾಡಲು ಕೇಂದ್ರ ಸರಕಾರ ಹಲವು ಕ್ರಮ ಕೈಗೊಳ್ಳುತ್ತಿದೆ. ಪೆಟ್ರೋಲ್‌-ಡಿಸೇಲ್‌ ಮೇಲೆ ವಿವಿಧ ರಾಜ್ಯ ಸರಕಾರಗಳು ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಕೋವಿಡ್‌-19 ಸಂಕಷ್ಟ ಸ್ಥಿತಿಯಲ್ಲಿ ಅದು ಹೆಚ್ಚೆನಿಸುತ್ತಿದೆ. ತೈಲ ಬೆಲೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ಬೆಲೆ ನಿರ್ವಹಣೆಯಲ್ಲಿ ಅನೇಕ ವರ್ಷಗಳಿಂದ ಇರುವ ಪದ್ಧತಿಯನ್ನೇ ನಾವು ಮುಂದುವರಿಸಿದ್ದೇವೆ. ಆದರೆ, ಪಾರದರ್ಶಕತೆಗೆ ಒತ್ತು ನೀಡಿದ್ದೇವೆ ಎಂದರು. ಸಂಕಷ್ಟದಲ್ಲಿ ಆತ್ಮನಿರ್ಭರದ ಬಲ ಕೋವಿಡ್‌-19 ವಿಶ್ವದ ಅನೇಕ ದೇಶಗಳನ್ನು ಕಾಡುತ್ತಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಸುಮಾರು 137 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಭಾರತ ಕೋವಿಡ್‌ ನಿರ್ವಹಣೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಕೋವಿಡ್‌-19 ಸಂಕಷ್ಟ ಸ್ಥಿತಿಯಲ್ಲಿ ಆರ್ಥಿಕ ಬಲವರ್ಧನೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮೇ 12ರಂದು ಘೋಷಿಸಿದ ಆತ್ಮನಿರ್ಭರ ವಿಶೇಷ ಪ್ಯಾಕೇಜ್‌ ಕೃಷಿ, ಉದ್ಯಮ, ಮೂಲಭೂತ ಸೌಕರ್ಯ, ಕಲ್ಲಿದ್ದಲು-ಗಣಿ, ಉದ್ಯೋಗ, ಕಾರ್ಮಿಕರು ಇತ್ಯಾದಿ ಕ್ಷೇತ್ರಗಳಿಗೆ ಮಹತ್ವದ ವರದಾನವಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಬಲವರ್ಧನೆಗೆ ಮೂರು ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌ ಭಾಗವಾಗಿ ಸರಕಾರಿ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳು ಎಂಎಸ್‌ಎಂಇಗೆ ತುರ್ತು ಕ್ರೆಡಿಟ್‌ ಲೈನ್‌ ಗ್ಯಾರೆಂಟಿ ಯೋಜನೆಯಡಿ ಒಂದು ಲಕ್ಷ ಕೋಟಿ ರೂ. ಸಾಲ ಸೌಲಭ್ಯ ನೀಡಿವೆ. ಇದರಲ್ಲಿ 45,000 ಕೋಟಿ ರೂ. ವಿತರಣೆಯಾಗಿದ್ದು, 30 ಲಕ್ಷ ಘಟಕಗಳಿಗೆ ಸಹಾಯವಾಗಿದೆ. ರಾಜ್ಯದಲ್ಲಿ 66,785 ಖಾತೆದಾರರಿಗೆ ಒಟ್ಟು 3,391ಕೋಟಿ ರೂ. ಸಾಲ ಮಂಜೂರಾಗಿದ್ದು, 2024 ಕೋಟಿ ರೂ.ವಿತರಣೆಯಾಗಿದೆ ಎಂದರು.

200 ಕೋಟಿ ರೂ.ವರೆಗಿನ ಕಾಮಗಾರಿಯಲ್ಲಿ ವಿದೇಶಿ ಕಂಪೆನಿಗಳು ಟೆಂಡರ್‌ ಹಾಕದಂತೆ ಕ್ರಮ ಕೈಗೊಳ್ಳಲಾಗಿದ್ದು, ಅದರ ನಂತರದ ಕಾಮಗಾರಿಗಳಿಗೂ ದೇಶದ ಕಂಪೆನಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು. ಕೃಷಿಯಲ್ಲಿ ದೊಡ್ಡ ಪ್ರಮಾಣದ ಉತ್ಪಾದನೆ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಸಾಗಣೆ ಇನ್ನಿತರ ಸೌಲಭ್ಯಗಳಿಗೆ ಒಂದು ಲಕ್ಷ ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ ಶೈತ್ಯಾಗಾರ ಹಾಗೂ ಪೂರೈಕೆ ಚೈನ್‌ಗೆ ಆದ್ಯತೆ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ದೇಶದ ಒಟ್ಟು 8.94ಕೋಟಿ ರೈತರಿಗೆ 17,891ಕೋಟಿ ರೂ. ವಿತರಣೆಯಾಗಿದೆ. ಮಹಿಳೆಯರ ಜನಧನ ಖಾತೆ, ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಮಾಸಾಶನಕ್ಕೆ ಒಟ್ಟಾರೆ 2,814.50 ಕೋಟಿ ರೂ. ವಿತರಿಸಲಾಗಿದೆ ಎಂದರು.

ಕಲ್ಲಿದ್ದಲು-ಪಾರದರ್ಶಕತೆ: ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ಸಂಪತ್ತು ಇದ್ದರೂ, ಇಲ್ಲಿಯವರೆಗೆ ಕಲ್ಲಿದ್ದಲು ಆಮದು ಮಾಡುತ್ತ ಬರಲಾಗಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಪ್ರಧಾನಿಯವರ ಆತ್ಮನಿರ್ಭರ ಅಡಿಯಲ್ಲಿ ಕಲ್ಲಿದ್ದಲು ವಾಣಿಜ್ಯ ಉತ್ಪನ್ನಕ್ಕೆ ಅವಕಾಶ ನೀಡಲಾಗಿದೆ ಎಂದರು. ಈ ವರ್ಷ ದೇಶಕ್ಕೆ ಸುಮಾರು 11,000 ಮಿಲಿಯನ್‌ ಟನ್‌ ಕಲ್ಲಿದ್ದಲು ಅವಶ್ಯಕತೆ ಇದ್ದು, ಕೋಲ್‌ ಇಂಡಿಯಾ ಕಂಪೆನಿ 630 ಮಿಲಿಯನ್‌ ಟನ್‌ ಮಾತ್ರ ಉತ್ಪಾದಿಸಿದೆ.

Advertisement

ಆತ್ಮನಿರ್ಭರ ಅಡಿಯಲ್ಲಿ ಸುಮಾರು 41 ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ದೇಶದಲ್ಲಿ ತಲಾವಾರು ವಿದ್ಯುತ್‌ ಬಳಕೆ ಪ್ರಮಾಣ 3,000 ಕಿಲೋ ವ್ಯಾಟ್‌ ಇದ್ದು, ಅಮೆರಿಕದಲ್ಲಿ ಇದು 30 ಸಾವಿರ ಕಿಲೋವ್ಯಾಟ್‌, ಇತರೆ ದೇಶಗಳಲ್ಲಿ 11-12 ಸಾವಿರ ಕಿಲೋವ್ಯಾಟ್‌ ಇದ್ದು, ವಿದ್ಯುತ್‌ ಉತ್ಪಾದನೆ ಸುಧಾರಣೆಗೆ ಮಹತ್ವದ ಸಹಕಾರಿ ಆಗಲಿದೆ. ಕಲ್ಲದ್ದಲು ವಾಣಿಜ್ಯ ಗಣಿಗಾರಿಕೆಗೆ ಎಲ್ಲಿಯೂ ಲೋಪ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಆಗಿರುವ ಗಣಿಗಾರಿಕೆ ಆವಾಂತರವೇ ಬೇರೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅಂತಹ ತಪ್ಪುಗಳಿಗೆ ಅವಕಾಶವೇ ಇಲ್ಲ. ಪ್ರತಿ ಬ್ಲಾಕ್‌ಗಳ ನಿಗದಿ, ಅದೇ ಜಾಗದಲ್ಲಿ ಗಣಿಗಾರಿಕೆ, ಸ್ಯಾಟ್‌ ಲೈಟ್‌ ಕ್ಯಾಮೆರಾಗಳ ನಿಗಾ, ಲೋಪ ಕಂಡು ಬಂದಲ್ಲಿ ತಕ್ಷಣವೇ ಸಂಬಂಧಿಸಿದ ರಾಜ್ಯಗಳಿಗೆ ಮಾಹಿತಿ ರವಾನೆ ಸೇರಿದಂತೆ ಏನೆಲ್ಲಾ ಪಾರದರ್ಶಕ ಕ್ರಮಗಳು ಸಾಧ್ಯವೋ ಅವುಗಳೆಲ್ಲವನ್ನು ಕೈಗೊಂಡಿದ್ದೇವೆ ಎಂದರು.

ಜಿಪಿಎಸ್‌ನಲ್ಲಿ ಲೋಪ :  ರೈತರ ಬೆಳೆವಿಮೆ ಸಮೀಕ್ಷೆಯನ್ನು ಇದೇ ಮೊದಲ ಬಾರಿಗೆ ಜಿಪಿಎಸ್‌ನಡಿ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಆಗುತ್ತಿರುವ ಲೋಪ ತಡೆಗೆ ತಂತ್ರಜ್ಞಾನ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಥಮ ವರ್ಷ ಆಗಿರುವುದರಿಂದ ಜಿಪಿಎಸ್‌ನಲ್ಲಿ ಕೆಲವೊಂದು ಲೋಪಗಳು ಕಂಡುಬಂದಿರುವುದು ನಮ್ಮ ಗಮನಕ್ಕೂ ಬಂದಿದ್ದು, ಈ ಕುರಿತು ಈಗಾಗಲೇ ರಾಜ್ಯ ಸರಕಾರದ ಕಾರ್ಯದರ್ಶಿಯವರಿಗೆ ಮಾತನಾಡಿದ್ದು, ಈ ಬಾರಿ ಸರಳೀಕರಣದೊಂದಿಗೆ ವಿಮೆ ವಿತರಿಸಿ ರೈತರು ಯಾವ ಬೆಳೆ ಬಿತ್ತಿದ್ದಾರೋ ಅದೇ ಬೆಳೆ ಅವರ ಪಹಣಿಯಲ್ಲಿ ನೋಂದಣಿ ಆಗುವಂತೆ ಮಾಡಬೇಕೆಂದು ಸೂಚಿಸಿದ್ದು, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಕ್ರಮ ಜಾರಿಯಾಗುವ ವಿಶ್ವಾಸವಿದೆ ಎಂದು ಜೋಶಿ ತಿಳಿಸಿದರು.

ಕಾಂಗ್ರೆಸ್‌ ಭ್ರಷ್ಟಾಚಾರದ ಮೂಲ ಸೆಲೆ :  ರಾಜ್ಯದಲ್ಲಿ ಕೋವಿಡ್‌-19 ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ನೀಡುವ ಬದಲು ಅಗತ್ಯ ದಾಖಲೆಗಳನ್ನು ಕೊಡಲಿ. ತಪ್ಪು ನಡೆದಿದ್ದರೆ ತಕ್ಕ ಶಿಕ್ಷೆ ಅನುಭವಿಸುತ್ತಾರೆ. ಕಾಂಗ್ರೆಸ್‌ ಪಕ್ಷ ಎಂದರೇನೆ ಭ್ರಷ್ಟಾಚಾರದ ಮೂಲ ಸೆಲೆಯಾಗಿದೆ. ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ವಿಚಾರದಲ್ಲೂ ರಾಜಕಾರಣ ಮಾಡುವುದು ಕಾಂಗ್ರೆಸ್ಸಿಗರ ಗುಣ ಎಂದರು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಜಾರಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಯಾಗುತ್ತಿವೆ. ಈ ವಿಚಾರವನ್ನು ಹಸಿರು ನ್ಯಾಯಾಧಿಕರಣದಲ್ಲಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next