Advertisement

ವಯಲಿನ್‌ ವಾದಕ ಬಾಲಭಾಸ್ಕರ್‌ ಅಪಘಾತ ಪ್ರಕರಣ ಸಿಬಿಐ ತನಿಖೆಗೆ

10:12 PM Jul 30, 2020 | Hari Prasad |

ತಿರುವನಂತಪುರಂ: ಚಿಕ್ಕ ವಯಸ್ಸಿನಲ್ಲೇ ದೇಶ, ವಿದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪ್ರಸಿದ್ಧ ವಯಲಿನ್‌ ವಾದಕ ಬಾಲ ಭಾಸ್ಕರ್‌.

Advertisement

ಅವರ ಭಾವ ಪೂರ್ಣ ಸಂಗೀತಕ್ಕೆ ಮನಸೋಲದವರೇ ಇಲ್ಲ. ಬಾಲ ಭಾಸ್ಕರ್‌ ವಯಲಿನ್‌ ಹಿಡಿದರೆ ಸಾಕು ಕೇಳುಗರಿಗೆ ಅದೊಂದು ಹಬ್ಬ.

ಅಂತಹ ಮೇರು ಕಲಾವಿದನ ಜೀವವನ್ನು ಒಂದು ರಸ್ತೆ ಅಪಘಾತ ಬಲಿತೆಗೆದುಕೊಂಡುಬಿಟ್ಟಿತ್ತು. 2018ರ ನಡೆದಿದ್ದ ಬಾಲ ಭಾಸ್ಕರ್‌ ಅವರು ಪತ್ನಿ, ಪುತ್ರಿಯಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಬಾಲು ಸಾವನ್ನಪ್ಪಿದ್ದರು. ಹೀಗಾಗಿ ವಯಲಿನ್‌ ಸಂಗೀತ ಕ್ಷೇತ್ರ ಅಪಾರ ನಷ್ಟ ಅನುಭವಿಸುವಂತಾಗಿತ್ತು.

ಬಾಲ ಭಾಸ್ಕರ್ ಕುಟುಂಬ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಪಳ್ಳಿಪುರಂ ಬಳಿ ಮರಕ್ಕೆ ಕಾರು ಢಿಕ್ಕಿ ಹೊಡೆದದ್ದು ಅನೇಕ ಅನುಮಾನಗಳನ್ನು ಹುಟ್ಟು ಹಾಕಿತ್ತು ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಬಾಲು ತಂದೆ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಇದೀಗ ಸಾವಿನ ತನಿಖೆಯನ್ನು ಸಿಬಿಐ ವಹಿಸಿಕೊಂಡಿದ್ದು ಕಾರ್ಯೋನ್ಮುಖವಾಗಿದೆ.

ಅಪಘಾತದ ಸುತ್ತ ಸಂಶಯದ ಹುತ್ತ


ಬಾಲಭಾಸ್ಕರ್‌ ಅವರ ತಂದೆ ಸಿ.ಕೆ. ಉನ್ನಿ ಅವರು, ಈ ದುರ್ಘ‌ಟನೆಯಲ್ಲಿ ಕೆಲವೊಂದು ಗೊಂದಲಕಾರಿ ಸಂಗತಿಗಳಿರುವುದರಿಂದ ಸಿಬಿಐ ತನಿಖೆಯಾಗಲೇ ಬೇಕೆಂದು ಕಳೆದ ವರ್ಷ ಕೇರಳ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.

Advertisement

ಕಾರನ್ನು ಯಾರು ಚಲಾಯಿಸಿದ್ದರು ಎನ್ನುವ ಗೊಂದಲಕ್ಕೇ ಇನ್ನೂ ಉತ್ತರ ಸಿಕ್ಕಿಲ್ಲ. ಅದಲ್ಲದೆ ಚಿನ್ನ ಸಾಗಣೆಯಲ್ಲಿ ಪ್ರಮುಖ ಆರೋಪಿಗಳಾಗಿರುವ ಪ್ರಕಾಶ್‌ ಥಾಂಪಿ ಮತ್ತು ವಿಷ್ಣು ಬಾಲ ಭಾಸ್ಕರ್‌ ಅವರ ಸಹಾಯಕರಾಗಿ ಕಾರ್ಯಕ್ರಮಗಳಿಗೆ ಸಂಯೋಜನೆ ಮಾಡುತ್ತಿದ್ದರು.

ಅದಷ್ಟೇ ಅಲ್ಲದೆ ಪಾಲಕ್ಕಾಡ್‌ನ‌ಲ್ಲಿರುವ ಡಾ| ರವೀಂದ್ರನಾಥ್‌ ಮತ್ತು ಅವರ ಪತ್ನಿಗೆ ಸಾಲ ನೀಡಿದ್ದನ್ನು ಬಾಲಭಾಸ್ಕರ್‌ ಸಾಲ ನೀಡಿದ್ದು ಇದಕ್ಕೂ ಅಪಘಾತಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಕೆಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಬಾಲಭಾಸ್ಕರ್‌ ತಿಶ್ಶೂರ್‌ನಲ್ಲಿ ಉಳಿದುಕೊಳ್ಳಲು ಕೊಠಡಿ ಕಾಯ್ದಿರಿಸಿದ್ದರು. ಆದರೆ ಬಾಲಭಾಸ್ಕರ್‌ ತನ್ನ ನಿರ್ಧಾರವನ್ನು ಹಠಾತ್ತನೆ ಬದಲಾಯಿಸಿ ರಾತ್ರಿಯೇ ವಾಪಸಾಗುವ ಯೋಚನೆ ಮಾಡಿದ್ದೇಕೆ? ಇನ್ನೊಬ್ಬರ ಸೂಚನೆಗಳನ್ನು ಅನುಸರಿಸಿ ತನ್ನ ಮಗ ಹಾಗೆ ಮಾಡಿದ್ದಾನೆಯೇ ಎಂಬ ಅನುಮಾನವಿದೆ ಎಂದು ಮನವಿಯಲ್ಲಿ ಉನ್ನಿ ತಿಳಿಸಿದ್ದರು.

ಹಣಕಾಸಿನ ವ್ಯವಹಾರಗಳಿಲ್ಲ
ಪಾಲಕ್ಕಾಡ್‌ನ‌ ಪೂಂತೊಟ್ಟಂ ಆಯುರ್ವೇದ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ| ಪಿಎಂಎಸ್‌ ರವೀಂದ್ರನಾಥ್‌ ಅವರು, ’15 ವರ್ಷಗಳ ಹಿಂದೆ ಬಾಲಭಾಸ್ಕರ್‌ ಅವರನ್ನು ಭೇಟಿಯಾಗಿದ್ದೆ. ಅನಂತರ ಅವರು ಚೆಪುಲಾರ್‌ಸೇರಿಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಬಂದಿದ್ದಾಗ ಪರಿಚಯವಾಗಿತ್ತು. ಅನಂತರ ಅವರು ಸಾಂದರ್ಭಿಕವಾಗಿ ತನ್ನನ್ನು ಭೇಟಿ ಮಾಡುತ್ತಿದ್ದರು ಮತ್ತು ಒಮ್ಮೆ ತನ್ನ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಇದ್ದರು. ಬಾಲಭಾಸ್ಕರ್‌ ಅವರಿಂದ 10 ಲಕ್ಷ ರೂ. ಪಡೆದಿದ್ದು ನಿಜ. ಆದರೆ ಈ ಮೊತ್ತವನ್ನು 2 ತಿಂಗಳ ಅನಂತರ ಹಿಂತಿರುಗಿಸಲಾಗಿದೆ’ ಎಂದಿದ್ದಾರೆ.

ಅದು ಬಿಟ್ಟು ಅವರೊಂದಿಗೆ ಯಾವುದೇ ಹಣಕಾಸಿನ ಒಪ್ಪಂದದಲ್ಲಿ ಭಾಗಿಯಾಗಿಲ್ಲ. ಬಾಲಭಾಸ್ಕರ್‌ ತ‌ನ್ನ ಆಸ್ಪತ್ರೆಯ ಪಕ್ಕದಲ್ಲಿ 50 ಸೆಂಟ್ಸ್‌ ಭೂಮಿಯನ್ನು ಖರೀದಿಸಿದ್ದರು. ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬುದು ತಿಳಿದಿಲ್ಲ. ಚಾಲಕ ಅರ್ಜುನ್‌ ನನ್ನ ಹೆಂಡತಿಯ ಆಪ್ತ ಸಂಬಂಧಿಯಾಗಿದ್ದ. ಆದರೆ ಅರ್ಜುನ್‌ನನ್ನು ತಾತ್ಕಾಲಿಕ ಚಾಲಕನಾಗಿ ನೇಮಿಸಿಕೊಂಡದ್ದು ಬಾಲಭಾಸ್ಕರ್‌ ಅವರೇ. ಅವರು ಸುರಕ್ಷಿತವಾಗಿ ತಲುಪಿದ್ದಾರೆಯೇ ಎಂದು ವಿಚಾರಿಸಲು ನನ್ನ ಪತ್ನಿ ಲತಾ ಫೋನ್‌ ಕರೆ ಮಾಡಿದ್ದರು.ಈ ಸಂದರ್ಭ ಪೊಲೀಸರು ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ನಮಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.

ಕಾರು ಚಲಾಯಿಸಿದ್ದು ಅರ್ಜುನ್‌: ಲಕ್ಷ್ಮೀ
ತ್ರಿಶ್ಶೂರ್‌ನಿಂದ ಅಪಘಾತ ಸಂಭವಿಸಿದ ಸ್ಥಳಕ್ಕೆ ಕಾರನ್ನು ಚಲಾಯಿಸಿದ್ದು ಡ್ರೈವರ್‌ ಅರ್ಜುನ್‌.  ಅಲ್ಲದೆ ಕಳೆದ 7 ವರ್ಷಗಳಿಂದ ಕುಟುಂಬವು ಪ್ರಕಾಶ್‌ ಥಾಂಪಿಯ ಬಗ್ಗೆ ತಿಳಿದಿದೆ. ನಾನು ಪ್ರಕಾಶ್‌ ಥಾಂಪಿಯನ್ನು ತಿಳಿದಿಲ್ಲ ಎಂದು ಎಂದಿಗೂ ಹೇಳಲಿಲ್ಲ. ನಾನು ಹೇಳಿದ್ದು ಅವನು ಬಾಲುವಿನ ವ್ಯವಸ್ಥಾಪಕನಲ್ಲ ಎಂದು.

ಕೇರಳದಲ್ಲಿ ಕೆಲವು ಸಂಗೀತ ಕಚೇರಿಗಳನ್ನು ಪ್ರಕಾಶ್‌ ಥಾಂಪಿ ಸಂಯೋಜಿಸಿದ್ದವರು. ಪ್ರಕಾಶ್‌ ಥಾಂಪಿ ಚಿನ್ನದ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ನ‌ನಗೂ ಅಥವಾ ಬಾಲುವಿಗೂ ಗೊತ್ತಿರವಿಲ್ಲ. ಬಾಲೂ ವೈದ್ಯರಿಗೆ ಸಾಲ ನೀಡಿದ್ದಾಗಿ ಅವಳೂ ಒಪ್ಪಿಕೊಂಡಳು. ಅವರೂ ಈ ಮೊತ್ತವನ್ನು ಹಿಂದಿರುಗಿಸಿದ್ದಾರೆ ಎಂದು ಲಕ್ಷ್ಮೀ ಹೇಳಿದ್ದರು.

ಮದುವೆ ಮತ್ತು ವಿವಾದ


ಎಲ್ಲರೂ ಬಾಲಭಾಸ್ಕರ್‌ ಅವರ ಅಪ್ರತಿಮ ಕಲೆಯನ್ನು ಮೆಚ್ಚಿಕೊಂಡಿದ್ದರೂ ಅವರ ಕುಟುಂಬದೊಂದಿಗಿನ ಸಂಬಂಧದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ತಮ್ಮ ಮಗ ಖ್ಯಾತ ಸಂಗೀತಗಾರನಾಗಬೇಕೆಂದು ಹಾರೈಸಿದ ಬಾಲಭಾಸ್ಕರ್‌ ಅವರ ಪೋಷಕರು ತಮ್ಮ ಮಗ ಪ್ರೇಮ ವಿವಾಹಕ್ಕೆ ಸಿದ್ಧನಾಗಿರುವ ಸುದ್ದಿಯನ್ನು ಕೇಳಿ ಆಘಾತಕ್ಕೊಳಗಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಸಹೋದರಿಯನ್ನು ಸಹ ನಿರ್ಲಕ್ಷಿಸಿ ಬಾಲಭಾಸ್ಕರ್‌ ತನ್ನ ಮದುವೆಗೆ ಮಹತ್ವ ನೀಡಿದ್ದಾನೆಂದು ತಿಳಿದಾಗ ಖೇದಗೊಂಡಿದ್ದರು. ಈ ಘಟನೆಯು ಸಂಗೀತಗಾರ ಮತ್ತು ಅವರ ಕುಟುಂಬದ ನಡುವೆ ಬಿರುಕು ಸೃಷ್ಟಿಸಿತು. ಅನಂತರ ಬಾಲಭಾಸ್ಕರ್‌‌, ಲಕ್ಷ್ಮೀ ಮದುವೆಗೆ ನೋಂದಾಯಿಸುವಾಗಲು ಕೆಲವು ಸ್ನೇಹಿತರಷ್ಟೇ ಉಪಸ್ಥಿತರಿದ್ದರು.

ಬಾಲಭಾಸ್ಕರ್‌ ಅವರು ಪಾಲಕ್ಕಾಡ್‌ ಮೂಲದ ವೈದ್ಯರು ಮತ್ತು ಅವರ ಕುಟುಂಬದೊಂದಿಗೆ ನಿಕಟ ಸ್ನೇಹವನ್ನು ಹೊಂದಿದ್ದರು. ಬಾಲಭಾಸ್ಕರ್‌ ವಿದೇಶದಲ್ಲಿ ಸಂಗೀತ ಕಚೇರಿಗಳಿಗೆ ಹೋದಾಗ ಅವರ ಪತ್ನಿ ಲಕ್ಷ್ಮೀ ವೈದ್ಯರ ಕುಟುಂಬದೊಂದಿಗೆ ಇರುತ್ತಿದ್ದರು. ಇವರ ಕಾರು ಚಾಲಕ ಅರ್ಜುನ್‌ ಕೂಡ ವೈದ್ಯರ ಆಪ್ತ ಸಂಬಂಧಿಯಾಗಿದ್ದ. ಅನಂತರ ಬಾಲಭಾಸ್ಕರ್‌ ತನ್ನ ತಂದೆಯೊಂದಿಗೆ ಹಳಸಿದ ಸಂಬಂಧವನ್ನು ಸರಿಪಡಿಸಿದ್ದರೂ, ತಾಯಿ ಮಾತ್ರ ಇವರನ್ನು ಕ್ಷಮಿಸಿರಲಿಲ್ಲ.

ಅವರು ಅಪಘಾತದಲ್ಲಿ ಸಾಯುವ ಕೆಲವು ತಿಂಗಳ ಮೊದಲು, ಬಾಲಭಾಸ್ಕರ್‌ ತನ್ನ ಹೆತ್ತವರೊಂದಿಗೆ ರಾಜಿ ಮಾಡಿಕೊಂಡಿದ್ದರು ಎಂದು ಕೆಲವರು ಹೇಳುತ್ತಾರಾದರೂ. ಪರಸ್ಪರ ವಿರುದ್ಧ ಆರೋಪಗಳು ಮುಂದುವರಿದೇ ಇತ್ತು. ಈ ಘಟನೆಯೂ ಬಾಲಭಾಸ್ಕರ್‌ ಅವರ ಕುಟುಂಬ ಮತ್ತು ಅವರ ಸ್ನೇಹಿತರ ನಡುವಿನ ಘರ್ಷಣೆಯ ಭಾಗವೇ ಆಗಿರಬಹುದೆಂದು ಅವರ ನಿಕಟವರ್ತಿಗಳು ಹೇಳುತ್ತಾರೆ.

ಸಾಕ್ಷಿಗಳ ಗೊಂದಲಕಾರಿ ಹೇಳಿಕೆ
ಸಾಕ್ಷಿ 1:
ವರ್ಕಲಾ ಚಾವರ್ಕೋಡ್‌ ಮೂಲದ ಅಸ್ವಿನ್‌ ಎಂ ಜಯನ್‌ (ನಂದು) ಮತ್ತು ಅವರ ಹಿರಿಯ ಸಹೋದರ ಪ್ರಣವ್‌ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದಾಗ, ಪಳ್ಳಿಪುರಂ ಜಂಕ್ಷನ್‌ ಬಳಿಯ ಮರಕ್ಕೆ ಕಾರು ಢಿಕ್ಕಿ ಹೊಡೆದು ನಜ್ಜುಗುಜ್ಜಾಗಿರುವುದನ್ನು ನೋಡಿದರು. ಮಗುವನ್ನು ಹೊರತೆಗೆಯಲು ಎಡಭಾಗದಲ್ಲಿರುವ ಗಾಜಿನ ಕಿಟಕಿ ತೆರೆದಿತ್ತು ಎಂದು ಅವರು ಹೇಳುತ್ತಾರೆ. ಬರ್ಮುಡಾ ಮತ್ತು ಟೀ ಶರ್ಟ್‌ ಧರಿಸಿದ ವ್ಯಕ್ತಿಯು ಚಾಲಕನ ಸೀಟಿನಲ್ಲಿದ್ದನು. ಹಿಂಭಾಗದ ಸೀಟಿನಲ್ಲಿ ಕುರ್ತಾ ಧರಿಸಿದ ಇನ್ನೊಬ್ಬ ವ್ಯಕ್ತಿಯ ತಲೆ ಕೆಳಗಾಗಿ ಕುಳಿತಿದ್ದ.  ನಾನು ತತ್‌ಕ್ಷಣ ಹಿಂದಿನ ಸೀಟಿನಲ್ಲಿದ್ದ ಕುರ್ತಾ ಧರಿಸಿದ್ದ ವ್ಯಕ್ತಿಯನ್ನು ಬಾಲಭಾಸ್ಕರ್‌ ಎಂದು ಗುರುತಿಸಿದೆ ಎಂದು ನಂದು ಹೇಳಿದ್ದಾರೆ.

ಸಾಕ್ಷಿ 2: ಬಾಲ ಭಾಸ್ಕರ್‌ ಅವರ ಕಾರಿನ ಹಿಂದಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸಿ. ಅಜಿ ಅವರು ವಿಭಿನ್ನ ಹೇಳಿಕೆಯನ್ನುನೀಡಿದ್ದಾರೆ. ನಾನು ಮತ್ತು ಕಂಡಕ್ಟರ್‌ ಚಹಾ ಸೇವಿಸಿದ ಅನಂತರ ನಾವು ಅಟ್ಟಿಂಗಲ್‌ನಿಂದ ಪ್ರಾರಂಭಿಸಿದೆವು. ಸ್ವಲ್ಪ ಸಮಯದ ಅನಂತರ ಅವರ ಕಾರು ಬಸ್ಸನ್ನು ಹಿಂದಿಕ್ಕಿತ್ತು. ಬಳಿಕ ಪಾಲಿಪುರಂ ಸಿಗ್ನಲ್‌ ಬಳಿ ಇದ್ದ ದೊಡ್ಡ ಮರಕ್ಕೆ ರಭಸದಿಂದ ಅಪ್ಪಳಿಸಿತು.

ನಾನು ತತ್‌ಕ್ಷಣ ಬಸ್ಸನ್ನು ಬದಿಯಲ್ಲಿ ನಿಲ್ಲಿಸಿ ಸ್ಥಳಕ್ಕೆ ಧಾವಿಸಿದೆ. ಕಾರಿನ ಗೇರ್‌ ಲಿವರ್‌ ಬಳಿ ಮಗು ಮಲಗಿದ್ದು, ಮಹಿಳೆಯೊಬ್ಬರು ಮುಂಭಾಗದ ಸೀಟಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಮಗುವನ್ನು ಹೊರತೆಗೆಯಲು ಕಾರ್‌ ಜ್ಯಾಕ್‌ ಬಳಸಿ ಕಿಟಕಿ ಗಾಜನ್ನು ಒಡೆದುಹಾಕಲಾಯಿತು. ಅನಂತರ ಜನರು ಬಾಗಿಲು ತೆರೆದು ಮಹಿಳೆ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಹೊರಗೆ ಕರೆದೊಯ್ದರು. ಅನಂತರ ಚಾಲಕನ ಸೀಟಿನಲ್ಲಿದ್ದ ವ್ಯಕ್ತಿಯನ್ನು ಹೊರಗೆ ಕರೆದೊಯ್ಯಲಾಯಿತು. ಬಾಲಭಾಸ್ಕರ್‌ ಚಾಲಕನ ಸೀಟಿನಲ್ಲಿದ್ದರು ಎಂದು ಅಜಿ ಸಾಕ್ಷಿ ನೀಡಿದ್ದರು.

ಇದೀಗ ಸಿಬಿಐ ತನಿಖೆಗೆ ಇಳಿದಿರುವುದರಿಂದ  ಬಾಲಭಾಸ್ಕರ್‌ ಸಾವಿನ ಸುತ್ತಲಿನ ಎಲ್ಲ ಒಗಟುಗಳು ಮತ್ತು ರಹಸ್ಯಗಳಿಗೆ ಉತ್ತರ ಸಿಗಲಿದೆ.

ಅಪ್ರತಿಮ ಸಾಧಕ ಬಾಲಭಾಸ್ಕರ್‌


ಬಾಲಭಾಸ್ಕರ್‌ ಈ ಚಂದ್ರನ್‌ 1978ರ ಜುಲೈ 10ರಂದು ಕೇರಳದ ತಿರುವನಂತಪುರಂನಲ್ಲಿ ಜನಿಸಿದ್ದರು. ತಂದೆ ಸಿ.ಕೆ. ಉನ್ನಿ, ತಾಯಿ ಶಾಂತಕುಮಾರಿ. ಇವರ ಕುಟುಂಬ ಸಂಗೀತ ಕಲೆಗೆ ವಿಶೇಷ ಪ್ರಭಾವ ಬೀರಿದ್ದರಿಂದ ಬಾಲ್ಯದಲ್ಲೇ ಇವರಿಗೆ ಸಂಗೀತ ಪಾಠ ಲಭಿಸಿತ್ತು.

ಕರ್ನಾಟಿಕ್‌ ಸಂಗೀತದಲ್ಲಿ ಪ್ರಶಸ್ತಿ ವಿಜೇತರಾಗಿದ್ದ ಶಶಿಕುಮಾರ್‌ ಇವರ ಚಿಕ್ಕಪ್ಪ. ಅವರು ಬಾಲ ಭಾಸ್ಕರ್‌ನನ್ನು 3ನೇ ವಯಸ್ಸಿನಲ್ಲೇ ವಾದ್ಯಸಂಗೀತ ಜಗತ್ತಿಗೆ ಪರಿಚಯಿಸಿದ್ದರು. 12ನೇ ವಯಸ್ಸಿಗೆ ವೃತ್ತಿ ಜೀವನವನ್ನು ಆರಂಭಿಸಿದ್ದ ಬಾಲಭಾಸ್ಕರ್‌ ಅನೇಕ ವೇದಿಕೆಗಳಲ್ಲಿ ತಮ್ಮ ವಯಲಿನ್‌ ಮಾಧುರ್ಯವನ್ನು ಪಸರಿಸಿದರು.

ಮಲಯಾಳಂ ಚಿತ್ರ “ಮಾಂಗಳ್ಯ ಪಲ್ಲಕ್ಕು’ ಚಿತ್ರದಲ್ಲಿ 1998ರಲ್ಲಿ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದರು. 2008ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮೆ ಫಾರ್‌ ಇನ್‌ಸ್ಟ್ರೆಮೆಂಟಲ್‌ ಮ್ಯೂಸಿಕ್‌ (ವಯಲಿನ್‌), ಬಿಸ್ಮಿಲ್ಲಾ ಖಾನ್‌ ಯುವ ಸಂಗೀತಗಾರ ಪುರಸ್ಕಾರ ಗೆದ್ದಿದ್ದರು. ದಕ್ಷಿಣ ಭಾರತದಲ್ಲಿ ಫ್ಯೂಶನ್‌ ಸಂಗೀತ ಮಾದರಿಯನ್ನು ಉತ್ತುಂಗಕ್ಕೇರಿಸುವಲ್ಲಿ ಶ್ರಮಿಸಿದ್ದರು.

ಅವರ ಎರಡು ಆಲ್ಬಂಗಳಾದ ನಿನಕೈ (2014) ಮತ್ತು ಆದ್ಯಮಯಿ (1999) ಸಂಯೋಜನೆಗಳು, ಪ್ರಣಯಗೀತೆಗಳಲ್ಲಿ ಇನ್ನೂ ಪ್ರಾಮುಖ್ಯತೆ ಪಡೆದಿವೆ. ಅವರು ಕರ್ನಾಟಿಕ್‌ ಸಂಗೀತದಲ್ಲಿ ಪಾರಂಗತರಾಗಿದ್ದು, ಪ್ರೇಕ್ಷಕರನ್ನು ತಮ್ಮ ಸಂಗೀತದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅವರಲ್ಲಿದ್ದುದರಿಂದ ಪ್ರಮುಖ ಪ್ರದರ್ಶನಗಳು ಮತ್ತು ಶಾಸ್ತ್ರೀಯ ಸಂಗೀತಗೋಷ್ಠಿಗಳಲ್ಲಿ ಜನ ಮೆಚ್ಚಿನ ಸಂಗೀತ ಕಲಾವಿದರಲ್ಲಿ ಒಬ್ಬರಾಗಿದ್ದರು.

ಹಲವಾರು ಕರ್ನಾಟಿಕ್‌ ಸಂಗೀತ ಕಚೇರಿಗಳಲ್ಲಿ ತಮ್ಮ ಚಿಕ್ಕಪ್ಪ ಮತ್ತು ಗುರುವಾಗಿದ್ದ ಬಿ. ಶಸಿಕುಮಾರ್‌ ಜತೆ ವಯಲಿನ್‌ ವಾದನದಲ್ಲಿ ಮೆಚ್ಚುಗೆ ಗಳಿಸಿದ್ದರು. ಬಾಲಭಾಸ್ಕರ್‌ ಅವರು ಉಸ್ತಾದ್‌ ಜಾಕಿರ್‌ ಹುಸೇನ್‌, ಶಿವಮಣಿ, ಲೂಯಿಸ್‌ ಬ್ಯಾಂಕ್ಸ್‌, ವಿಕ್ಕು ವಿನಾಯಕ್ರಂ, ಹರಿಹರನ್‌, ಮಟ್ಟನ್ನೂರ್‌ ಶಂಕರನ್‌ ಕುಟ್ಟಿ, ರಂಜಿತ್‌ ಬಾರೋಟ್‌, ಫೈಜಲ್‌ ಖುರೇಷಿ ಮುಂತಾದವರೊಂದಿಗೆ ಭಾರತ ಮತ್ತು ವಿದೇಶಗಳಲ್ಲಿ ಸಂಗೀತ ಪ್ರದರ್ಶನ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next