Advertisement

ಕೇಂದ್ರ ಬಜೆಟ್‌: ಜನರ, ಉದ್ಯಮಗಳ ನಿರೀಕ್ಷೆಯೇನು?

08:32 AM Feb 01, 2021 | Team Udayavani |

ಇಂದು ಕೇಂದ್ರ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಫೆ.1ರಂದು ಬಜೆಟ್‌ ಮಂಡನೆಯಾಗಲಿದೆ. ಕೋವಿಡ್‌ನಿಂದಾಗಿ ದೇಶದ ಆರ್ಥಿಕತೆಯೇ ತಲೆಕೆಳಗಾಗಿರುವ ಈ ಸಂದರ್ಭದಲ್ಲಿ ಸಹಜವಾಗಿಯೇ ಬಜೆಟ್‌ನ ಮೇಲೆ ದೇಶದ ಎಲ್ಲ ವಲಯಗಳು ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡಿವೆ. ಹಾಗಿದ್ದರೆ ಈ ಬಾರಿಯ ಬಜೆಟ್‌ ಹೇಗಿರಬಹುದು? ವಿವಿಧ ವಲಯಗಳ ನಿರೀಕ್ಷೆಯೇನಿದೆ?

Advertisement

ಕೃಷಿ ಕ್ಷೇತ್ರದ ಅಗತ್ಯಗಳೇನು?
ಇಡೀ ದೇಶದ ವಿವಿಧ ವಲಯಗಳು ಕೋವಿಡ್‌ ಸಮಯದಲ್ಲಿ ತತ್ತರಿಸಿದ್ದರೆ, ದೇಶದ ಆರ್ಥಿಕತೆಗೆ ಬಲಿಷ್ಠ ಬೆನ್ನೆಲುಬಾಗಿ ನಿಂತಿದ್ದು ಕೃಷಿ ಕ್ಷೇತ್ರ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸರಕಾರದ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ 3.4 ಪ್ರತಿಶತ ಬೆಳವಣಿಗೆಯಾಗುವ ನಿರೀಕ್ಷೆಯಿದೆ. “ಸರಕಾರ ಈಗಾಗಲೇ ಕೃಷಿ ಕ್ಷೇತ್ರಕ್ಕಾಗಿ ಪಿಎಂ ಕಿಸಾನ್‌ ಯೋಜನೆಯ ಡಿಯಲ್ಲಿ ನೇರ ಹಣ ವರ್ಗಾವಣೆ, ಕೃಷಿ ಮೂಲ ಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗಳ ಅನುದಾ ನಗಳನ್ನು ನೀಡಿದೆಯಾದರೂ ಎಂಎಸ್‌ಎಂಇ ಮಾದರಿ ಯಲ್ಲೇ ಸಾಲ ಖಾತ್ರಿ ಯೋಜನೆಗಳು ಮತ್ತು ಕೆಲವು ವಿಮಾ ಸ್ಕೀಮುಗಳನ್ನು ನೀಡುವುದು ಒಳ್ಳೆಯದು’ ಅಂತಾರೆ ಬ್ಯಾಂಕ್‌ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಎಸ್‌. ನಾರಂಗ್‌. ಮುಖ್ಯವಾಗಿ ರೈತರು ಕೇಂದ್ರದ 3 ನೂತನ ಕೃಷಿ ಕಾಯೆ ರದ್ದತಿಗೆ ಆಗ್ರಹಿ ಸುತ್ತಿದ್ದಾರೆ. ಅಲ್ಲದೇ ಎಂಎಸ್‌ಪಿಯನ್ನು ಕಾನೂನಿನ ರೂಪದಲ್ಲಿ ಖಾತ್ರಿ ಪಡಿಸಬೇಕೆ ನ್ನುತ್ತಿದ್ದಾರೆ. ಈ ಬಜೆಟ್‌ನಲ್ಲಿ ಎಂಎಸ್‌ಪಿ ಕುರಿತು ಹೊಸ ನೀತಿಗಳು ಬರುವ ನಿರೀಕ್ಷೆ ಇಲ್ಲವಾದರೂ ಪ್ರಮುಖ ಬೆಳೆಗಳಿಗೆ ನವ ಎಂಎಸ್‌ಪಿ ಘೋಷಿಸುವ/ ಹೊಸ ಕಾನೂನುಗಳ ಅನುಷ್ಠಾನಕ್ಕಾಗಿ ಹೆಚ್ಚಿನ ನಿಧಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ವಾದವೂ ಇದೆ.

ಮಧ್ಯಮವರ್ಗದ ನಿರೀಕ್ಷೆಗಳೇನು?
ದೇಶದ ಅತೀ ದೊಡ್ಡ ತೆರಿಗೆ ಪಾವತಿದಾರ ಜನರಾಗಿರುವ ಮಧ್ಯಮ ವರ್ಗ ಸರಕಾರದಿಂದ ಈ ಬಾರಿ ಬಹಳ  ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಸಾಂಕ್ರಾಮಿಕದಿಂದಾಗಿ ಈ ವರ್ಗವೂ ಬಹಳ ಬಳಲಿದ್ದು, ಮಧ್ಯಮ ವರ್ಗದ ನೌಕರರ ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನು ಅನೇಕರು ಈಗ ವರ್ಕ್‌ಫ್ರಂ ಹೋಂ ಕೆಲಸ ಮಾಡುತ್ತಿದ್ದು, ಮನೆಯಲ್ಲಿಯೇ ಕೆಲಸ ನಿರ್ವಹಣೆ ಮಾಡುತ್ತಿರು ವುದರಿಂದ ಹೆಚ್ಚುವರಿ ಖರ್ಚುಗಳು(ಟೇಬಲ್‌ ಕುರ್ಚಿ, ಲ್ಯಾಪ್‌ಟಾಪ್‌ ಖರೀದಿ, ಇಂಟರ್ನೆಟ್‌ ಖರ್ಚು ಇತ್ಯಾದಿ) ಬರುತ್ತಿವೆ. ಈ ಕಾರಣಕ್ಕಾಗಿ ಯೇ ವರ್ಕ್‌ ಫ್ರಂ ಹೋಂ ಮಾಡುತ್ತಿರುವ ವರ್ಗದವರ ತೆರಿಗೆ ಕಡಿತ ಮಿತಿಯಲ್ಲಿ ವಿನಾಯಿತಿ ನೀಡುವ ಸಾಧ್ಯತೆ ಇದೆ.

ಹೆಚ್ಚುವುದೇ ಆರೋಗ್ಯ ವಲಯದ ಅನುದಾನ?
ಸಾಂಕ್ರಾಮಿಕ ಸಮಯದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯ ಕುಂದು-ಕೊರತೆಗಳು ಜಾಹೀರಾಗಿವೆ. ಆರೋಗ್ಯ ವಲಯದ ಮೇಲೆ ದೇಶವು ತನ್ನ ಜಿಡಿಪಿಯ ಕೇವಲ 1-2 ಪ್ರತಿಶತ ಪಾಲನ್ನು ಮಾತ್ರ ಬಳಸುತ್ತಾ ಬಂದಿದೆ. ಈ ಬಾರಿ ಆರೋಗ್ಯ ಸೇವೆಗಳಿಗಾಗಿ ಹಾಗೂ ಔಷಧೋದ್ಯಮಗಳು, ಈ ವಲಯದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ಹೆಚ್ಚಿನ ಅನುದಾನ ಸಿಗಬಹುದೆಂಬ ನಿರೀಕ್ಷೆಯಿದೆ.

ರಕ್ಷಣ ವಲಯಕ್ಕೆ ಮತ್ತಷ್ಟು ಬಲ?
ವಾಸ್ತವಿಕ ಗಡಿ ನಿಯಂತ್ರಣ ಭಾಗದಲ್ಲಿ ಚೀನದಿಂದ ಹಾಗೂ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನದಿಂದ ಬಿಕ್ಕಟ್ಟು ಎದುರಿಸುತ್ತಿರುವ ಭಾರತವು ಕಳೆದ ಬಾರಿಯಂತೆ ಈ ಬಾರಿಯೂ ರಕ್ಷಣ ಕ್ಷೇತ್ರದ ಬಜೆಟ್‌ ಅನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಕ್ಷಣ ಪರಿಕರಗಳ ದೇಶೀಯ ಉತ್ಪಾದನೆಗೆ ಒತ್ತು ನೀಡಲು, ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತದ ಅಡಿಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಳೆದ ಬಾರಿ ಕೇಂದ್ರವು ರಕ್ಷಣ ವಲಯದ ಬಜೆಟ್‌ನಲ್ಲಿ 6 ಪ್ರತಿಶತ ಏರಿಕೆ ಮಾಡಿತ್ತು. ಇದರಿಂದಾಗಿ ಒಟ್ಟಾರೆ ಬಜೆಟ್‌ನಲ್ಲಿ ರಕ್ಷಣ ವಲಯದ ಪಾಲು 4.7 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿತ್ತು(ಸೇನಾ ಸಿಬಂದಿಯ ಸಂಬಳದ ಮೇಲಿನ ಖರ್ಚು ಹಾಗೂ ಪಿಂಚಣಿಯನ್ನೊಳಗೊಂಡು). 2000 ಮತ್ತು 2020ರ ನಡುವೆ ರಕ್ಷಣ ಬಜೆಟ್‌ನ ಪ್ರಮಾಣ ಗಮನಾರ್ಹ 475 ಪ್ರತಿಶತ ಹೆಚ್ಚಳವಾಗಿದೆ (ಪಿಂಚಣಿ ಹೊರತುಪಡಿಸಿ). ಈ ವರ್ಷ ಕೇಂದ್ರವು ರಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಲು ತೆರಿಗೆ ಮುಕ್ತ ಬಾಂಡ್‌ಗಳನ್ನು ವಿತರಿಸಬಹುದೆಂಬ ನಿರೀಕ್ಷೆಯೂ ಇದೆ.

Advertisement

ಎಂಎಸ್‌ಎಂಇಗಳಿಗೆ ಬೇಕಿದೆ ಸಹಾಯ
ಕೇಂದ್ರವು ಕೋವಿಡ್‌ನಿಂದಾಗಿ ಕಂಗೆಟ್ಟಿರುವ ಎಎಸ್‌ಎಂಇ ಕ್ಷೇತ್ರಕ್ಕೆ (ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) 3 ಲಕ್ಷ ಕೋಟಿ ರೂಪಾಯಿಗಳ ತುರ್ತು ಸಾಲ ಖಾತ್ರಿ ಯೋಜನೆ ಜಾರಿಗೆ ತಂದಿದೆಯಾದರೂ ಎಂಎಸ್‌ಎಂಇಗಳು ಮರುಶಕ್ತಿ ಪಡೆಯಲು ಮತ್ತಷ್ಟು ಸಹಾಯದ ಅಗತ್ಯವಿದೆ. ಎಂಎಸ್‌ಎಂಇಗಳಿಗೆ ಬಲ ತುಂಬುವುದಕ್ಕಾಗಿ ವೃತ್ತಿಪರ ಸೇವೆಗಳ ಮೇಲಿನ ಜಿಎಸ್‌ಟಿಯನ್ನು 18 ಪ್ರತಿಶತದಿಂದ 5 ಪ್ರತಿಶತಕ್ಕೆ ಇಳಿಸಬೇಕು ಎಂಬ ವಾದವಿದೆ. ಅಲ್ಲದೇ ಚಿಕ್ಕ ಉದ್ಯಮಗಳಿಗೆ ಬ್ಯಾಂಕಿಂಗ್‌ ವಲಯದಿಂದ ಸುಗಮ ಸಾಲ ಸಿಗುವಂತಾಗಲು ತಾತ್ಕಾಲಿಕವಾಗಿಯಾದರೂ ಬೇಸೆಲ್‌ ನಿಯಮಗಳನ್ನು ರದ್ದು ಮಾಡ ಬೇಕೆಂಬ ಆಗ್ರಹವಿದೆ. ಇನ್ನು ಮಧ್ಯಮ ಸ್ತರದ ಉದ್ಯಮಗಳಿಗೆ ಮೇಲಾಧಾರ ರಹಿತ ಸಾಲ ಮಿತಿಯನ್ನು 35 ಕೋಟಿ ರೂ., ಸಣ್ಣ ಉದ್ಯಮಗಳಿಗೆ 15 ಕೋಟಿ ರೂ., ಅತೀ ಸಣ್ಣ ಉದ್ಯಮಗಳಿಗೆ 5 ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಜಿಎಸ್‌ಟಿ ಸ್ಲಾéಬ್‌ ಕಡಿತದ ನಿರೀಕ್ಷೆಯಲ್ಲಿ ಶಿಕ್ಷಣ ವಲಯ
ಅತಂತ್ರ ಸ್ಥಿತಿ ಎದುರಿಸುತ್ತಿರುವ ಶೈಕ್ಷಣಿಕ ವಲಯವು ಸಾಲ ಸಬ್ಸಿಡಿ, ಜಿಎಸ್‌ಟಿ ಸ್ಲಾéಬ್‌ಗಳಲ್ಲಿ ಕಡಿತದ ನಿರೀಕ್ಷೆಯಲ್ಲಿದೆ. ಅಲ್ಲದೇ ಡಿಜಿಟಲ್‌ ಶಿಕ್ಷಣ ಕ್ಷೇತ್ರದಲ್ಲಿ ಆರಂಭವಾಗಿರುವ ಸ್ಟಾರ್ಟ್‌ ಅಪ್‌ಗ್ಳಿಗಾಗಿಯೂ ತೆರಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆ ಇದೆ. ಎಲ್ಲಕ್ಕಿಂತ, ಈ ವರ್ಷದ ಬಜೆಟ್‌ ನವ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕಾಗಿ ಹೆಚ್ಚಿನ ಒತ್ತು ನೀಡಲಿದೆ ಎಂಬ ನಿರೀಕ್ಷೆಯಿದೆ. ಇನ್ನು ದೇಶದ ಮೂಲೆ ಮೂಲೆಗೂ ಡಿಜಿಟಲ್‌ ಶಿಕ್ಷಣ ಲಭ್ಯವಾ ಗುವುದನ್ನು ಖಾತ್ರಿಪಡಿಸಲು ಅಂತರ್ಜಾಲ ಸೌಲಭ್ಯದ ವಿಸ್ತರಣೆ, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಇತರ ವ್ಯವಸ್ಥೆ ಗಳನ್ನು ಅಗ್ಗದ ದರದಲ್ಲಿ ಅಥವಾ ಉಚಿತವಾಗಿ ಪೂರೈಸುವಂತಾಗಬೇಕು ಹಾಗೂ ಇದನ್ನು ಸರಕಾರದ ನೇರ ಕಾರ್ಯಕ್ರಮಗಳ ಮೂಲಕ ಅಥವಾ ಸರಕಾರಿ-ಖಾಸಗಿ ಸಹಭಾಗಿತ್ವ ಮಾದರಿಯ ಮೂಲಕವೂ ಮಾಡಲು ಯೋಚಿಸಬೇಕು ಎನ್ನುತ್ತಾರೆ ಪರಿಣತರು.

Advertisement

Udayavani is now on Telegram. Click here to join our channel and stay updated with the latest news.

Next