Advertisement

ಶತಮಾನೋತ್ಸವ ಕಂಡ ಸರ್ಕಾರಿ ಶಾಲೆ: ದುರಸ್ತಿ ನೆಪದಲ್ಲಿ ಆರಂಭವಾಗದ ಪಾಠ

04:51 PM Jun 07, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಪ್ರಾಪರ್‌ (ಸರಕಾರಿ ಹಿರಿಯ ಮಾದರಿಯ)ಶಾಲೆಗೆ ಬರೋಬ್ಬರಿ 118 ವರ್ಷಗಳು ಸಂದಿವೆ. ಆದರೆ, ಜೀಣೋದ್ಧಾರ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗಿರುವುದರಿಂದ ಶಾಲೆಗೆ ಬರುವ ಮಕ್ಕಳು ತರಗತಿಯಿಂದ ವಿಮುಖರಾಗುವಂತಾಗಿದೆ.

Advertisement

ಕಳೆದ ಅವಧಿಯ ಶಾಸಕರು ವಿಶೇಷ ಅನುದಾನ 10 ಲಕ್ಷ ರೂ.ಗಳನ್ನು ನೀಡಿದ್ದರು. ಶಾಲೆಯ ಜಿರ್ಣೋದ್ಧಾರ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನ ನಿರ್ಲಕ್ಷ್ಯದ ಪರಿಣಾಮ ಶಾಲಾ ರಜಾ ದಿನಗಳಲ್ಲಿ ಕಾಮಗಾರಿ ಮಾಡದೇ ಶಾಲಾರಂಭದ ವೇಳೆ ಕಾಮಗಾರಿ
ಮಾಡುತ್ತಿರುವುದರಿಂದ ಮಕ್ಕಳು, ಶಾಲೆಯ ಬೆಂಚ್‌, ಪುಸ್ತಕ, ಪಠ್ಯದ ಸಾಮಾಗ್ರಿಗಳು ತರಗತಿಯ ಹೊರಗೆ ಇರುವಂತಾಗಿದೆ.

ಮಳೆಗಾಲವಾಗಿರುವುದರಿಂದ ಮಕ್ಕಳು ಹಾಗೂ ಶಾಲಾ ಸಾಮಾಗ್ರಿಗಳು ಮಳೆಯಲ್ಲಿ ನೆನೆಯುವಂತಾಗಿದ್ದು ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯಶಿಕ್ಷಕರು ಹಲವು ಭಾರಿ ಕಾಮಗಾರಿ ಮಾಡುವ ಗುತ್ತಿಗೆದಾರ ಮತ್ತು ಕಾಮಗಾರಿ ನಿರ್ವಹಿಸುವ ಜಿ.ಪಂ.
ಇಂಜಿನಿಯರಿಂಗ್‌ ಇಲಾಖೆ ಹಾಗೂ ಬಿಇಒ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಇದರಿಂದ ಶಾಲೆಯ ತರಗತಿಗಳನ್ನು ನಡೆಸಲು ಮತ್ತು ಬಿಸಿಯೂಟ ತಯಾರಿಸಲು ತೊಂದರೆಯಾಗಿದ್ದು ಶಾಲೆ ಆರಂಭವಾಗಿ ನಾಲ್ಕು ದಿನಗಳು ಕಳೆದರೂ ಶಾಲೆಗೆ ಆಗಮಿಸುವ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿಲ್ಲ.

ಪ್ರಾಪರ್‌ ಶಾಲೆ 1906 ರಲ್ಲಿ ಹೈದ್ರಾಬಾದ್‌ ನಿಜಾಮ ಸರಕಾರ ಆರಂಭಿಸಿತ್ತು ಆರಂಭದ ದಿನಗಳಲ್ಲಿ ಶಾಲೆಯ ಜಾಗ ಬಹಳ ವಿಸ್ತಾರವಾಗಿದ್ದು ನಂತರ ಕೆಲವರು ಇದನ್ನು ಒತ್ತುವರಿ ಮಾಡಿದ್ದರ ಪರಿಣಾಮ ಶಾಲೆಯ ಜಾಗ ಬಹಳ ಚಿಕ್ಕದ್ದಾಗಿದೆ ಎನ್ನಲಾಗುತ್ತಿದೆ. ಈ ಶಾಲೆ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಇದು ಒಂದಾಗಿತ್ತು. ಪ್ರತಿ ವರ್ಷ 1000-1200 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪಠೇತರ ಚಟುವಟಿಕೆಗಳಾದ ಕ್ರೀಡೆ, ಭಾರತ ಸ್ಕೌಟ್‌ ಮತ್ತು ಗೈಡ್ಸ್‌ ಮತ್ತು ಭಾರತ ಸೇವಾ ದಳದ ಶಿಬಿರ ಸೇರಿ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಈ ಶಾಲೆಯ ಮಕ್ಕಳು ಪಾಲ್ಗೊಂಡು ಬಹುಮಾನ ಪಡೆಯುತ್ತಿದ್ದರು.

ಖಾಸಗಿ ಶಾಲೆಗಳ ಭರಾಟೆಯಿಂದಾಗಿ ಪ್ರಸ್ತುತ ಈ ಶಾಲೆಯಲ್ಲಿ 01-07 ನೇಯ ತರಗತಿಯಲ್ಲಿ 187 ಮಕ್ಕಳು ಓದುತ್ತಿದ್ದು ಮಕ್ಕಳ ಕೊರತೆಯ ಕಾರಣ ದೆ„ಹಿಕ ಶಿಕ್ಷಕ ಹುದ್ದೆ ರದ್ದಾಗಿದ್ದು ಸದ್ಯ ಮುಖ್ಯಶಿಕ್ಷಕ ಸೇರಿ 06 ಹುದ್ದೆಗಳಿದ್ದು ಹಿಂದು ಬೋಧಿಸುವ ಶಿಕ್ಷಕ ಹುದ್ದೆ ಖಾಲಿ ಇದೆ. ಈ ಶಾಲೆಯ ವ್ಯಾಪ್ತಿಗೆ ಗುಂಡಮ್ಮ ಕ್ಯಾಂಪ್‌, ಗಾಂಧಿ ನಗರ, ಕಾಜನಗೌಡ ಕಾಂಪೌಂಡ್‌, ಇಂದಿರಾನಗರ, ಮೋಚಿವಾಡ, ಜೋಗೇರ್‌ ಓಣಿ, ಬನ್ನಿಗಿಡದ ಕ್ಯಾಂಪ್‌ ಬರುತ್ತಿದ್ದು ಇಲ್ಲಿಂದ ಮಕ್ಕಳು ಹೆಚ್ಚಾಗಿ ಬರುತ್ತಿದ್ದು ಇಲ್ಲಿಯೂ ಸರಕಾರ ಕೆಲ ಖಾಸಗಿ ಶಾಲೆಗಳಿಗೆ ಪರವಾನಿಗೆ ನೀಡಿದ್ದರಿಂದ ಪ್ರಾಪರ್‌ ಶಾಲೆಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪುನಹ ಶಾಲೆಗೆ ಹಳೆಯ ವೈಭವ ತರಲು ಶಾಲಾಭಿವೃದ್ಧಿ ಸಮಿತಿಯವರು ಹಳೆಯ ವಿದ್ಯಾರ್ಥಿಗಳ ಸಹಕಾರ ಪಡೆದು ವಿಶೇಷ ದಾಖಲಾತಿ ಅಭಿಯಾನ, ಶಾಲಾಭುವೃದಿಗೆ ಯೋಜನೆ ರೂಪಿಸುವುದು ಅಗತ್ಯವಾಗಿದೆ.

Advertisement

ಗಂಗಾವತಿಯಲ್ಲಿಯೇ ಅತ್ಯಂತ ಪುರಾತನ ಶಾಲೆ ಇದಾಗಿದ್ದು ಕಳೆದ ವರ್ಷ ಶಾಸಕರು ವಿಶೇಷ ಅನುದಾನದಡಿ 10 ಲಕ್ಷ ರೂ. ಗಳನ್ನು ಮಂಜೂರಿ ಮಾಡಿದ್ದರಿಂದ ತರಗತಿ ಕೊಠಡಿಗಳಿಗೆ ಟೈಲ್ಸ್‌ ಹಾಗೂ ಮಳೆ ಸೋರದಂತೆ ಸಿಮೆಂಟ್‌ ಹಾಕುವ ಕಾಮಗಾರಿ ನಡೆಸಲಾಗುತ್ತಿದ್ದು ಕಾಮಗಾರಿ ಪಡೆದ ಗುತ್ತಿಗೆದಾರ ನಿರ್ಲಕ್ಷéದಿಂದ ವಿಳಂಭವಾಗುತ್ತಿದ್ದು ಇದರಿಂದ ತರಗತಿ ನಡೆಸಲು ತೊಂದರೆಯಾಗಿದೆ. ಈ ಕುರಿತು ಮುಖ್ಯಶಿಕ್ಷಕರು ಸಂಬಂಧಪಟ್ಟವರಿಗೆ ಮೌಖಿಕ ಹಾಗೂ ಪತ್ರದ ಮೂಲಕ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಬೇಗನೆ ಕಾಮಗಾರಿ ಮುಗಿಸುವಂತೆ ಗುತ್ತಿಗೆ ಪಡೆದ ವ್ಯಕ್ತಿಗೆ ಮತ್ತು  ಜಿ.ಪಂ. ಇಂಜಿನಿಯರಿಂಗ್‌ ಇಲಾಖೆಯವರಿಗೆ ತಾಕೀತು ಮಾಡಲಾಗಿದೆ. ಶೀಘ್ರ ಎಲ್ಲಾ ತರಗತಿಗಳು ಮೊದಲಿನಂತೆ ಪ್ರತೇಕ ಕೊಠಡಿಗಳಲ್ಲಿ ನಡೆಯುತ್ತವೆ.
ವಿರೇಶ ಗಾಂ ನಗರ, ಅಧ್ಯಕ್ಷರು
ಶಾಲಾಭಿವೃದ್ಧಿ ಸಮಿತಿ ಪ್ರಾಪರ್‌ ಶಾಲೆ

ಶತಮಾನ ಕಂಡ ಪ್ರಾಪರ್‌ ಶಾಲೆಯ 2024-25 ನೇ ಸಾಲಿನ ಶೈಕ್ಷಣಿಕ ಕಾರ್ಯಚಟುವಟಿಕೆ ಕುಂಟುತ್ತ ಸಾಗಿದ್ದು ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಶಾಲಾರಂಭವಾಗಿ ನಾಲ್ಕೈದು ದಿನ ಕಳೆದರೂ ಶಾಲೆಗೆ ಬಿಇಒ, ಅಕ್ಷರದಾಸೋಹದ ಅಧಿಕಾರಿ ಅಥವಾ ಇತರೆ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ. ದುರಸ್ತಿ ನೆಪದಲ್ಲಿ ತರಗತಿ ಕೋಣೆಯಲ್ಲಿದ್ದ ಸಾಮಾನು ಹೊರಗೆ ಇಡಲಾಗಿದೆ. ಶಾಲಾಮೈದಾನ ಮಳೆ ನೀರಿನಿಂದ ಕೂಡಿದ್ದು ಮಕ್ಕಳ ಓಡಾಟಕ್ಕೆ ತೊಂದರೆಯಾಗಿದೆ. ಬಿಇಒ ಇಂತಹ ಪ್ರತಿಷ್ಠಿತ ಶಾಲೆಗಳ ಕಡೆಗೆ ವಿಶೇಷ ಗಮನಕೊಡುವುದು ಅವಶ್ಯವಿದೆ.

■ ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next