Advertisement

ಬಜಾರ್‌ ಬೆಡಗಿ : ದಾವಣಗೆರೆ ಬೆಣ್ಣೆ ಚೆಲುವೆ

09:22 AM Apr 11, 2019 | Hari Prasad |

‘ಧೈರ್ಯಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅದಿತಿ ಪ್ರಭುದೇವ ದಾವಣಗೆರೆ ಹುಡುಗಿ, ಅಪ್ಪಟ ಕನ್ನಡತಿ. ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ಮಿಂಚಿ ಈಗ ಚಿತ್ರರಂಗದಲ್ಲಿ ಸಾಲುಸಾಲು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. “ಬಜಾರ್‌’ ಮೂಲಕ ಹಾದುಬಂದು, ಈಗ “ತೋತಾಪುರಿ’ ನಗುವ ಬೀರುತ್ತಾ, “ರಂಗನಾಯಕಿ’ ಆಗಲು ಸಜ್ಜಾಗುತ್ತಿದ್ದಾರೆ. ಅರಳು ಹುರಿದಂತೆ ಸ್ಪಷ್ಟ ಕನ್ನಡ ಮಾತನಾಡುವ ಇವರಿಗೆ, ತಾವು ಕನ್ನಡ ಮೀಡಿಯಂ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆ ಇದೆಯಂತೆ. ನಾನು ಕನ್ನಡ ಚಿತ್ರರಂಗದಲ್ಲೇ ನೆಲೆಯೂರುವವಳು ಎಂದು ಕೂಡ ಅದಿತಿ ಹೇಳುತ್ತಾರೆ. ಎಂಜಿನಿಯರಿಂಗ್‌, ಎಂ.ಬಿ.ಎ. ಪದವೀಧರೆ ಕೂಡಾ ಹೌದು. ಅವರ ಸಿನಿಮಾ ಮತ್ತು ಬದುಕಿನ ಪುಟ್ಟ ಪಯಣದ ಬಗ್ಗೆ ಮನದಾಳ ಹಂಚಿಕೊಂಡಿದ್ದಾರೆ…

Advertisement

ನಿಮ್ಮ ನಟನಾ ಪಯಣ ಎಲ್ಲಿಂದ ಶುರು?
ಕಾಲೇಜು ದಿನಗಳಲ್ಲಿ ದಾವಣಗೆರೆಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಿದ್ದೆ. ಎಂ.ಬಿ.ಎ. ಕೊನೆಯ ಸೆಮ್‌ನಲ್ಲಿದ್ದಾಗ ಬೆಂಗಳೂರಿಗೆ ಇಂಟರ್ನ್ಶಿಪ್‌ಗಾಗಿ ಬಂದಿದ್ದೆ. ಆಗ ನಟ ನವೀನ್‌ ಕೃಷ್ಣ ಅವರ ಕಾರ್ಯಕ್ರಮವೊಂದಕ್ಕೆ ನಿರೂಪಕಿಯಾಗಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ನವೀನ್‌ ಕೃಷ್ಣ- “ನೀವೇಕೆ ನಟನೆಗೆ ಪ್ರಯತ್ನಿಸಬಾರದು?’ ಅಂತ ಕೇಳಿದ್ದರು. ನಾನು ಇವರು ಕಾಮಿಡಿ ಮಾಡುತ್ತಿದ್ದಾರೆ ಎಂದುಕೊಂಡು ಮನೆಗೆ ಬಂದೆ. ಕಡೆಗೆ ಅವರೇ ಒಂದೆರಡು ಆಡಿಷನ್‌ ಬಗ್ಗೆ ಮಾಹಿತಿ ನೀಡಿದರು. “ಧೈರ್ಯಂ’ ಚಿತ್ರದ ಆಡಿಷನ್‌ಗೆ ಹೋದೆ. 3 ಪುಟಗಳ ಡೈಲಾಗ್‌ ಕೊಟ್ಟರು. ನನ್ನ ನೆನಪಿನ ಶಕ್ತಿ ತುಂಬಾ ಚೆನ್ನಾಗಿದೆ. ಚಿತ್ರಕ್ಕೆ ಸೆಲೆಕ್ಟ್ ಆದೆ. ಹೀಗೆ ನಟನೆ ಜರ್ನಿ ಆರಂಭವಾಯಿತು.

ಸಿನಿಮಾ ಆಫ‌ರ್‌ ಬಂದಾಗ ಅಪ್ಪ-ಅಮ್ಮನ ಪ್ರತಿಕ್ರಿಯೆ ಹೇಗಿತ್ತು?
ಅವರ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಗಿತ್ತು. ನಿಜ ಹೇಳಬೇಕೆಂದರೆ, ಮೊದಲಿಗೆ ಸಿನಿಮಾ ಆಫ‌ರ್‌ ಬಂದಾಗ ನನಗೆ ಅದರ ಬಗ್ಗೆ ಆಸಕ್ತಿಯೇ ಇರಲಿಲ್ಲ. ಅಪ್ಪಾಜಿ ಹಾಗೂ ಅಮ್ಮನ ಬಳಿ ಹೀಗೊಂದು ಆಫ‌ರ್‌ ಬಂದಿದೆ ಎಂದು ಹೇಳಿದೆ. ಅದಕ್ಕೆ ಅವರು “ಒಪ್ಪಿಕೋ… ಇಂಥ ಅವಕಾಶ ಎಲ್ಲರಿಗೂ ಬರುವುದಿಲ್ಲ’ ಎಂದು ಹೇಳಿ ನನ್ನನ್ನು ಹುರಿದುಂಬಿಸಿದರು.

ತೆರೆ ಮೇಲೆ ತುಂಬಾ ಗ್ಲಾಮರಸ್‌ ಆಗಿ ಕಾಣುತ್ತೀರ. ತೆರೆ ಆಚೆಗೂ ಇಷ್ಟೇ ಗ್ಲಾಮರಸ್‌ ಆಗಿ ಇರುತ್ತೀರಾ?
ನೀನು ನೋಡಲು ಸುಂದರವಾಗಿದ್ದೀಯ ಅಂತ ಯಾರಾದ್ರೂ ಹೇಳಿದರೆ ನನಗೆ ಖುಷಿ ಆಗಲ್ಲ. ನನ್ನ ಪ್ರತಿಭೆ ನೋಡಿ ಗುರುತಿಸಬೇಕು ಎನ್ನುವ ಉದ್ದೇಶ ನನ್ನದು. ಜನರು, ಸೌಂದರ್ಯ, ರೂಪವನ್ನು ಬಹಳ ಬೇಗ ಮರೆಯುತ್ತಾರೆ. ಆದರೆ, ಪಾತ್ರಗಳ ಪೋಷಣೆ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಅದರ ಬಗ್ಗೆ ಜನರು ಕಡೇವರೆಗೂ ಮಾತನಾಡುತ್ತಾರೆ. ನನಗೆ ಅದೇ ಇಷ್ಟ.

ಬಿಡುವಿನ ವೇಳೆ ಏನು ಮಾಡುತ್ತೀರ?
ಮನೆಯಲ್ಲಿದ್ದರೆ ಮನೆಕೆಲಸವೆಲ್ಲಾ ನಾನೇ ಮಾಡುವುದು. ಮನೆ ಯಾವಾಗಲೂ ಚೊಕ್ಕಟವಾಗಿ ಇರಬೇಕು. ಹಾಗಾಗಿ, ಕೆಲಸದವರು ಬರುವವರೆಗೆ ಕಾಯುವುದಿಲ್ಲ. ನಾನೇ ಇಡೀ ಮನೆ ಒಪ್ಪಗೊಳಿಸುತ್ತೇನೆ. ಅಡುಗೆ ಮಾಡುತ್ತೇನೆ. ನಾನು ಜಿಮ್‌ಗೆ ಹೋಗಿ ವರ್ಕೌಟ್‌ ಮಾಡಲ್ಲ. ಪ್ರತಿನಿತ್ಯ ಮನೆಯಲ್ಲೇ ಕೈಲಾದಷ್ಟು ಕೆಲಸ ಮಾಡಿ ಅಮ್ಮನಿಗೆ ನೆರವಾಗುತ್ತೇನೆ. ಮನೆಯಲ್ಲಿ ನಾಯಿಗಳಿವೆ. ಅವುಗಳ ಜೊತೆ ಸಮಯ ಕಳೆಯುತ್ತೇನೆ. ನನಗೆ ಪ್ರಾಣಿಗಳೆಂದರೆ ಪ್ರಾಣ. ಪ್ರಾಣಿಗಳಿಗಾಗಿ ಒಂದು ರಿಹ್ಯಾಬಿಲಿಟೇಷನ್‌ ಸೆಂಟರ್‌ ತೆಗೆಯಬೇಕು ಎಂಬ ಕನಸೂ ಇದೆ. ನೋಡೋಣ…

Advertisement

ಅಡುಗೆ ಮಾಡೋಕೆ ಬರುತ್ತಾ?
ಓ ಎಸ್‌, ನಾನು ಫ‌ಸ್ಟ್‌ ಕ್ಲಾಸ್‌ ಆಗಿ ಅಡುಗೆ ಮಾಡುತ್ತೀನಿ. ಅಪ್ಪಾಜಿಗೆ ನಾನು ಮಾಡುವ ಮುದ್ದೆ, ಸಾರು ತುಂಬಾ ಇಷ್ಟ. ಅಮ್ಮನಿಗಿಂತಲೂ ನಾನು ಚೆನ್ನಾಗಿ ಮುದ್ದೆ ಮಸೆಯುತ್ತೀನಿ. ಬಗೆಬಗೆಯ ಆಮ್ಲೆಟ್‌, ವೆಜ್‌ ಬಿರಿಯಾನಿ, ಸ್ವೀಟ್ಸ್‌ ಎಲ್ಲಾ ಮಾಡುತ್ತೇನೆ. ಮನೆಗೆ ನನ್ನ ಸ್ನೇಹಿತರು ಬಂದರೆ ನಾನೇ ಅವರಿಗೆ ಖುದ್ದಾಗಿ ಅಡುಗೆ ಮಾಡಿ ಬಡಿಸುತ್ತೇನೆ. ನಾವೇ ಖುದ್ದಾಗಿ ಅಡುಗೆ ಮಾಡಿ ಬಡಿಸುವುದರಲ್ಲಿ ಒಂದು ಬಗೆಯ ಪ್ರೀತಿ ವ್ಯಕ್ತವಾಗುತ್ತದೆ.

ಮನೆಯಲ್ಲಿ ಎಲ್ಲರ ಜೊತೆ ನೀವು ಹೇಗಿರುತ್ತೀರ?
ನಾನು ಫ್ಯಾಮಿಲಿ ಗರ್ಲ್. ಅಪ್ಪ, ಅಮ್ಮ, ತಮ್ಮ ನನ್ನ ಪ್ರಪಂಚ. ಅಮ್ಮನನ್ನು ಒಂದು ದಿನವೂ ಬಿಟ್ಟಿರಲಾಗುವುದಿಲ್ಲ. ಅಮ್ಮ ಬೇಜಾರು ಮಾಡಿಕೊಂಡರೆ ನನಗೆ ಅಳು ಬಂದುಬಿಡುತ್ತದೆ.


ನಿಮ್ಮ ವರ್ಕ್‌ಔಟ್‌, ಡಯೆಟ್‌ ಬಗ್ಗೆ ಹೇಳಿ?

ಮನೆಯಲ್ಲೇ 20 ನಿಮಿಷ ಸೂರ್ಯ ನಮಸ್ಕಾರ ಮಾಡು­ತ್ತೇನೆ. ಟೆರೇಸ್‌ ಮೇಲೆ ವಾಕಿಂಗ್‌ ಮಾಡುತ್ತೇನೆ. ವಿಶೇಷ ಡಯೆಟ್‌ ಅಂತೇನೂ ಮಾಡುವುದಿಲ್ಲ. ಮನೆಯೂಟವನ್ನೇ ಮಾಡುತ್ತೇನೆ. ನಮ್ಮ ಸಾಂಪ್ರದಾಯಕ ಆಹಾರಕ್ಕಿಂತ ಉತ್ತಮ ಡಯಟ್‌ ಬೇರೆ ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲೇ ಕೆಲ ಲಿಮಿಟ್‌ ಹಾಕಿಕೊಂಡಿದ್ದೇನೆ. ಅನ್ನ ಕಡಿಮೆ ಮಾಡಿ ಚಪಾತಿ, ಮುದ್ದೆ ಹೆಚ್ಚು ತಿನ್ನುವುದು. ಹಣ್ಣು- ತರಕಾರಿ ಹೆಚ್ಚು ತಿನ್ನುತ್ತೇನೆ. ಎಣ್ಣೆಯಲ್ಲಿ ಕರಿದ ಆಹಾರ ಕಡಿಮೆ ತಿನ್ನುತ್ತೇನೆ. ನನಗೆ ದುರಭ್ಯಾಸ ಎಂದರೆ ಸ್ವೀಟ್‌ ಮತ್ತು ತುಪ್ಪ ತಿನ್ನುವುದು. ಈಗ ಅದನ್ನೂ ಕಡಿಮೆ ಮಾಡುತ್ತಿದ್ದೇನೆ. ಕೆಲವೊಮ್ಮೆ ಬೆಲ್ಲ ಕಡಿದು ಸಮಾಧಾನ ಮಾಡಿಕೊಳ್ಳುತ್ತೇನೆ.

ಅದಿತಿ ಸುಂದರವಾಗಿ ಕಾಣುವ ರಹಸ್ಯ ಏನು?
ಹೆಚ್ಚು ಹೆಚ್ಚು ಹಣ್ಣು ತಿನ್ನುತ್ತೇನೆ. ನಾನು ಐಬ್ರೋ ಮಾಡಿಸಿಕೊಳ್ಳಲು ಮಾತ್ರ ಪಾರ್ಲರ್‌ಗೆ ಹೋಗುವುದು. ಉಳಿದಂತೆ, ಮನೆಯಲ್ಲೇ ಹಣ್ಣುಗಳ ಪ್ಯಾಕ್‌ ತಪ್ಪದೇ ಬಳಸುತ್ತೇನೆ. ಕಡಲೇ ಹಿಟ್ಟಿನಲ್ಲಿ ಮುಖ ತೊಳೆಯುತ್ತೇನೆ. ಬಾದಾಮಿ ತೈಲ ಮತ್ತು ಆಲಿವ್‌ ತೈಲವನ್ನು ಬಿಡುವಿದ್ದಾಗಲೆಲ್ಲಾ ಹಚ್ಚಿಕೊಳ್ಳುತ್ತೇನೆ. ದಿನದಲ್ಲಿ ಇಂತಿಷ್ಟು ಸಮಯವನ್ನು ಚರ್ಮ ಮತ್ತು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಇಟ್ಟರೆ ಯಾರಾದರೂ ಚಂದ ಕಾಣಬಹುದು.

ನಿಮ್ಮ ಸಾಹಿತ್ಯಾಸಕ್ತಿ ಕುರಿತು ಹೇಳ್ತೀರಾ?
ನನಗೆ ಸಾಹಿತ್ಯಾಸಕ್ತಿ ಬಂದಿದ್ದು ಅಮ್ಮನಿಂದ. ನಾನು ಎಸ್‌.ಎಲ್‌. ಭೈರಪ್ಪನವರ ಅಭಿಮಾನಿ. ಅವರ “ಧರ್ಮಸೆರೆ’, “ವಂಶವೃಕ್ಷ’ ತುಂಬಾ ಇಷ್ಟ. ಪೂರ್ಣಚಂದ್ರ ತೇಜಸ್ವಿಯವರ “ಪ್ಯಾಪಿಲಾನ್‌’ ಮತ್ತು ಇತರ ಪುಸ್ತಕಗಳನ್ನೂ ತುಂಬಾ ಸಲ ಓದಿದ್ದೇನೆ. ನನಗೆ ನ್ಯೂಸ್‌ ಓದುವ ಅಭ್ಯಾಸ ಕೂಡ ಇದೆ. ಬರಿ ಹೆಡ್ಡಿಂಗ್‌ ಮಾತ್ರವಲ್ಲ, ಪೂರ್ತಿ ಸುದ್ದಿಯನ್ನೇ ಓದುತ್ತೇನೆ.

ತಮ್ಮ ನನ್ನ ಬೆಸ್ಟ್‌ ಫ್ರೆಂಡ್‌
ನನಗೂ, ತಮ್ಮನಿಗೂ ಕೇವಲ ಒಂದೂವರೆ ವರ್ಷದ ವಯಸ್ಸಿನ ಅಂತರ. ಅವನು ನನ್ನ ಬೆಸ್ಟ್‌ ಫ್ರೆಂಡ್‌. ಅವನು ನನ್ನನ್ನು ತಾಯಿ ಥರಾ ಟ್ರೀಟ್‌ ಮಾಡುತ್ತಾನೆ. ಇವತ್ತಿಗೂ ನನ್ನ ಕೈಯಿಂದ ತಲೆ ಬಾಚಿಸಿಕೊಳ್ಳುತ್ತಾನೆ. ಅವನ ಬಟ್ಟೆ ಬರೆಗಳನ್ನು ನಾನು ಓಕೆ ಮಾಡಬೇಕು. ನಾವಿಬ್ಬರೂ ಜಗಳ ಮಾಡಿದ್ದೇ ನನಗೆ ನೆನಪಿಲ್ಲ.

ನಾನು ಕನ್ನಡ ಮೀಡಿಯಂ ಹುಡ್ಗಿ!
ನನ್ನ ಅಪ್ಪ, ಹೊಳಲ್ಕೆರೆ ಬಳಿಯ “ಶಿವಗಂಗಾ’ ಎಂಬ ಹಳ್ಳಿಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಕನ್ನಡ ಮೀಡಿಯಂನಲ್ಲೇ ನನ್ನ ಶಿಕ್ಷಣ ನಡೆಯಿತು. ಪಕ್ಕಾ ಹಳ್ಳಿ ಹುಡುಗಿ ಥರ ತಲೆಗೆ ಎಣ್ಣೆ ಹಚ್ಚಿ ಎರಡು ಜಡೆ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ. ಹಳ್ಳಿ ಮಕ್ಕಳು ಮಾಡುವ ಎಲ್ಲಾ ಚೇಷ್ಟೆಗಳನ್ನೂ ನಾನು ಮಾಡಿದ್ದೇನೆ. 10ನೇ ತರಗತಿಗೆ ಬಂದಾಗಲೇ ನಾನು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿದ್ದು. ಪಬ್ಲಿಕ್‌ ಪರೀಕ್ಷೆ ಬೇರೆ. ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ ಕನ್ನಡದ ಮೇಲೆ ಚೆನ್ನಾಗಿ ಹಿಡಿತ ಇದ್ದಿದ್ದರಿಂದ ಇಂಗ್ಲಿಷ್‌ ಬೇಗ ಕಲಿತೆ. ಯಾರಿಗೂ ಕಡಿಮೆ ಇಲ್ಲದಂತೆ ಸರಾಗವಾಗಿ ಇಂಗ್ಲಿಷ್‌ ಮಾತಾಡುತ್ತೇನೆ. ನಾನು ಎಂಜಿನಿಯರಿಂಗ್‌, ಎಂ.ಬಿ.ಎಯಲ್ಲಿ ರ್‍ಯಾಂಕ್‌ ತೆಗೆದುಕೊಂಡಿದ್ದೀನಿ. ಕನ್ನಡ ಮೀಡಿಯಂ ಕಲಿಕೆಗೆ ಯಾವತ್ತೂ ತೊಡಕು ಅನ್ನಿಸಿಲ್ಲ…

ರೀಲಲ್ಲ, ರಿಯಲ್‌ ಕಣ್ಣೀರು!
“ತೋತಾಪುರಿ’ ಚಿತ್ರದ ಆಡಿಷನ್‌ನಲ್ಲಿ ಅತ್ತುಕೊಂಡು ಡೈಲಾಗ್‌ ಹೇಳಬೇಕಿತ್ತು. ಆಗ ನನ್ನ ಬಾಲ್ಯ, ಕಾಲೇಜಿನ ಮೊದಲ ದಿನಗಳು ಎಲ್ಲವನ್ನೂ ಮನಸ್ಸಿಗೆ ತಂದುಕೊಂಡೆ. ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದು ಮನಸ್ಸಿಗೆ ಬಂದು ನಿಜವಾಗಿ ಅಳು ಬಂತು. ಆಡಿಷನ್‌ನಲ್ಲಿ ನಿಜವಾಗಿಯೂ ಅತ್ತಿದ್ದೇನೆ.

ಕುಟುಂಬದ ಸಪೋರ್ಟ್‌ ಇಲ್ಲದೇ ಈ ಫೀಲ್ಡ್‌ಗೆ ಬರಬೇಡಿ…
ಸಿನಿಮಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳನ್ನು ಅಗೌರವದಿಂದ ನಡೆಸಿಕೊಳ್ಳುತ್ತಾರೆ. ಇಲ್ಲಿ ಮಹಿಳೆಯರಿಗೆ ಉತ್ತಮ ವಾತಾವರಣ ಇಲ್ಲ… ಹಾಗಂತ ತುಂಬಾ ಜನ ನನಗೆ ಹೇಳಿದ್ದರು. ಆದರೆ, ಈವರೆಗೂ ನನಗೆ ಅಂಥ ಯಾವುದೇ ಕಹಿ ಅನುಭವ ಆಗಿಲ್ಲ. ಏಕೆಂದರೆ, ನನ್ನ ಕೆಲಸದಲ್ಲಿ ಅಪ್ಪ- ಅಮ್ಮ ಇಬ್ಬರೂ ಇನ್‌ ವಾಲ್ವ್ ಆಗುತ್ತಾರೆ. ಕಥೆ ಕೇಳುವಾಗ, ಸಂಭಾವನೆ ಮಾತನಾಡು ವಾಗ ಅಪ್ಪ ಇರುತ್ತಾರೆ. ಪ್ರತಿದಿನ ಸೆಟ್‌ಗೆ ಹೋಗುವಾಗ ಜತೆಯಲ್ಲಿ ಅಮ್ಮ ಇರುತ್ತಾರೆ. ಎಲ್ಲರಿಗೂ ಅಪ್ಪ- ಅಮ್ಮನನ್ನು ಹೆಮ್ಮೆಯಿಂದ ಪರಿಚಯಿಸುತ್ತೇನೆ. ಸಿನಿಮಾ ಆಗಲಿ, ಧಾರಾವಾಹಿಯಾಗಲಿ ಈ ಕ್ಷೇತ್ರಕ್ಕೆ ಬರಲು ಆಸಕ್ತಿ ಇರುವ ಹುಡುಗಿಯರಿಗೆ ನನ್ನದೊಂದು ಕಿವಿ ಮಾತು… ಪೋಷಕರ ಬೆಂಬಲವಿಲ್ಲದೇ ನೀವು ಇಲ್ಲಿಗೆ ಬರಬೇಡಿ. ಬಂದಮೇಲೆ ತಂದೆ- ತಾಯಿಯನ್ನು ಹೆಮ್ಮೆಯಿಂದ ಎಲ್ಲರಿಗೂ ಪರಿಚಯಿಸಿ.

Advertisement

Udayavani is now on Telegram. Click here to join our channel and stay updated with the latest news.

Next