Advertisement

ಸಿಸಿ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

09:57 AM Jul 27, 2020 | Suhan S |

ಬಾಗಲಕೋಟೆ: ಬೀಳಗಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್‌ನ ಸಿದ್ದಾರೂಢ ಬಡಾವಣೆಯ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಚಾಲನೆ ನೀಡಿದರು.

Advertisement

ಲೋಕೋಪಯೋಗಿ ಇಲಾಖೆಯ ವತಿಯಿಂದ ಬಡಾವಣೆ ರಸ್ತೆ ಅಭಿವೃದ್ಧಿ ಯೋಜನೆ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ದೇಶ, ರಾಜ್ಯ, ಜಿಲ್ಲೆಯಾದ್ಯಂತ ಕೋವಿಡ್ ವೈರಸ್‌ ದಾಳಿಗೆ ನಲುಗಿದ್ದು, ಅದನ್ನು ಎದುರಿಸುವ ಜತೆಗೆ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುವುದು ಅನಿವಾರ್ಯವಾಗಿದೆ ಎಂದರು. ಬೀಳಗಿ ಮತಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿಯಿಂದ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ಹಲವಾರು ರಸ್ತೆಗಳ ಹಾಗೂ ಮೂಲ ಸೌಕರ್ಯ ಗಳನ್ನು ಒದಗಿಸಿಕೊಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಿದ್ದಾರೂಢ ಮಠದಿಂದ ಮುಖ್ಯ ರಸ್ತೆವರೆಗೆ ರಸ್ತೆ ನಿರ್ಮಿಸಲಾಗುವುದು ಎಂದರು.

ಕೋವಿಡ್ ವೈರಸ್‌ ತಡೆಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕಾಗಿದ್ದು, ಕೈ ಶುಚಿಗೊಳಿಸುವುದರ ಜತೆಗೆ ಸಾಮಾಜಿಕ ಅಂತರ ಕಾಯ್ದು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅವಶ್ಯವಿದ್ದಾಗ ಮಾತ್ರ ಹೊರಗಡೆ ಬರಬೇಕು. ಇದರಿಂದ ತಮ್ಮ ಕುಟುಂಬ ಸಂರಕ್ಷಿಸುವ ಜತೆಗೆ ಸಾಮಾಜಿಕ ಕಳಕಳಿ ಹೊಂದಬೇಕು ಎಂದರು. ವೃದ್ಧರು, ಚಿಕ್ಕ ಮಕ್ಕಳನ್ನು ಸಾಧ್ಯವಾದಷ್ಟು ಹೊರಗಡೆ ಸಂಚರಿಸದಂತೆ ಗಮನ ಹರಿಸಬೇಕು ಎಂದು ತಿಳಿಸಿದರು. ಜಿಪಂ ಸದಸ್ಯ ಹೂವಪ್ಪ ರಾಠೊಡ, ಎಪಿಎಂಸಿ ಸದಸ್ಯ ಶ್ರೀಶೈಲ ಗೌರಿ, ಪ್ರಮುಖರಾದ ಮಹೇಶ ಮೇಟಿ, ಶಂಭಾಜಿ ಕೊಕಾಟೆ, ಕುಬೆರಪ್ಪ ನೀಲಣ್ಣವರ, ಯಡಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರ ಚಲವಾದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next