Advertisement

ಆಂಧ್ರಕ್ಕೆ ಸಿಬಿಐ ಪ್ರವೇಶ ನಿಷೇಧ!

06:45 AM Nov 17, 2018 | Team Udayavani |

ಹೊಸದಿಲ್ಲಿ/ಕೋಲ್ಕತಾ: ಸಿಬಿಐ ಮುಖ್ಯಸ್ಥರ ನಡುವಿನ ತಿಕ್ಕಾಟ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಲ ಸರಕಾರಗಳು ಸಿಬಿಐ ಅಧಿಕಾರಿಗಳನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿಷೇಧಿಸಿವೆ. ಅಂದರೆ, ಈ ಎರಡೂ ರಾಜ್ಯಗಳಲ್ಲಿ  ಸಿಬಿಐ ಅಧಿಕಾರಿಗಳು ಯಾವುದೇ ರೀತಿಯ ದಾಳಿ ನಡೆಸಲು ಸಾಧ್ಯವಿಲ್ಲ. ಸಿಬಿಐಯಲ್ಲಿ ನಡೆಯುತ್ತಿರುವ ಒಳಜಗಳಗಳಿಂದಾಗಿ ನಾವು ತನಿಖಾ ಸಂಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇವೆ. ಹೀಗಾಗಿ ಅನುಮತಿಯನ್ನು ಹಿಂಪಡೆದು ಕೊಂಡಿದ್ದೇವೆ ಎಂದು ನಾಯ್ಡು ಹೇಳಿದ್ದಾರೆ. ಇದು ಬಿಜೆಯೇತರ ಮೈತ್ರಿಯೊಂದನ್ನು ರಚಿಸುವ ಪ್ರಯತ್ನದಲ್ಲಿರುವ ನಾಯ್ಡು ಕೇಂದ್ರದ ವಿರುದ್ಧ ಆರಂಭಿ ಸಿರುವ ಸಮರ ಎಂದೇ ಹೇಳಲಾಗುತ್ತಿದೆ.

Advertisement

ವಿಶೇಷವೆಂದರೆ ನಾಯ್ಡು ಅವರ ಈ ನಿರ್ಧಾರಕ್ಕೆ  ಬೆಂಬಲ ನೀಡಿರುವ ಪ. ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದಾಳಿ ನಡೆಸುವ ಮತ್ತು ತನಿಖೆ ನಡೆಸುವ ಸಾಮಾನ್ಯ ಅನುಮತಿಯನ್ನು ವಾಪಸ್‌ ಪಡೆದಿದ್ದಾರೆ. ಈ ಹಿಂದೆ ಸಿಬಿಐ ಬಳಸಿ ಆಂಧ್ರದಲ್ಲಿ  ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ನಾಯ್ಡು ಆರೋಪಿಸಿದ್ದರು. ವಿಪಕ್ಷ ನಾಯಕ ವೈ.ಎಸ್‌. ಜಗನ್ಮೋಹನ್‌ ರೆಡ್ಡಿ ಜತೆ ಸೇರಿಕೊಂಡು ಬಿಜೆಪಿ ಟಿಡಿಪಿ ವಿರುದ್ಧ ಕುಕೃತ್ಯಗಳನ್ನು ನಡೆಸುತ್ತಿದೆ. ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಆಂಧ್ರ ಸರಕಾರದ ಈ ಕ್ರಮವನ್ನು ವಿರೋಧಿಸಿ ಸಿಬಿಐ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಸಾಧ್ಯತೆಯಿದೆ. ಬಿಜೆಪಿ ಕೂಡ ನಾಯ್ಡು ಅವರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.

ಸದ್ಯ ವಿವಾದಕ್ಕೀಡಾಗಿರುವ ಮಾಂಸ ರಫ್ತುದಾರ ಮೊಯೀನ್‌ ಖುರೇಶಿ ಹಾಗೂ ಉದ್ಯಮಿ ಸನಾ ಸತೀಶ್‌ ಬಾಬು ಪ್ರಕರಣಗಳು ದಿಲ್ಲಿಯಲ್ಲಿ ದಾಖಲಾಗಿವೆ. ಅವರು ಆಂಧ್ರದವರೇ ಆಗಿದ್ದರೂ ಪ್ರಕರಣ ದಿಲ್ಲಿಯಲ್ಲಿ ದಾಖಲಾಗಿರುವುದರಿಂದ ಸಿಬಿಐ ತನಿಖೆ ಮುಂದುವರಿಸಲು ಯಾವುದೇ ಸಮಸ್ಯೆಯಿಲ್ಲ. ಸದ್ಯ ಆಂಧ್ರದಲ್ಲಿ ಯಾವುದೇ ಪ್ರಮುಖ ಪ್ರಕರಣಗಳು ನಡೆಯುತ್ತಿಲ್ಲ. ಹೀಗಾಗಿ ಸಿಬಿಐಗೆ ಸದ್ಯಕ್ಕೆ ಈ ಅನುಮತಿ ಹಿಂಪಡೆಯುವಿಕೆಯಿಂದ ಸಮಸ್ಯೆಯಿಲ್ಲ.

ಏನಿದು ಅನುಮತಿ?
ದಿಲ್ಲಿ ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಶ್‌ಮೆಂಟ್‌ ಕಾಯ್ದೆ 1946 ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ರಾಜ್ಯಗಳಿಗೆ ತೆರಳಿ ತನಿಖೆ ನಡೆಸಲು ಆ ರಾಜ್ಯಗಳು ಸಿಬಿಐಗೆ ಲಿಖೀತ ಅನುಮತಿ ನೀಡಬೇಕು. ಕಳೆದ ಆ.3ರಂದು ಇದೇ ರೀತಿ ಆಂಧ್ರದ ಸರಕಾರವು ಈ ಅನುಮತಿಯನ್ನು ನವೀಕರಿಸಿತ್ತು. ಆದರೆ ಈಗ ಈ ಅನುಮತಿಯನ್ನು ಆಂಧ್ರ ಸರಕಾರ ಹಿಂಪಡೆದಿದೆ. ಇದರಿಂದಾಗಿ ಪ್ರತಿ ಬಾರಿ ಸಿಬಿಐ ಅಧಿಕಾರಿ ಆಂಧ್ರಕ್ಕೆ ತನಿಖೆಗಾಗಿ ತೆರಳುವಾಗ ಆಂಧ್ರ ಸರಕಾರದ ಅನುಮತಿ ಕೋರಬೇಕಾಗುತ್ತದೆ. ಈ ಹಿಂದೆ ಒಟ್ಟಾರೆ ಅನುಮತಿ ನೀಡಿದ್ದರಿಂದ, ಪ್ರತಿ ಬಾರಿ ಸಿಬಿಐ ಅಧಿಕಾರಿ ಆಂಧ್ರಕ್ಕೆ ಕಾಲಿಡುವ ಮುನ್ನ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿರುತ್ತಿರಲಿಲ್ಲ. ಅಷ್ಟೇ ಅಲ್ಲ, ದಿಲ್ಲಿ ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಶ್‌ಮೆಂಟ್‌ ಕಾಯ್ದೆ 1946ರ ಪರಿಚ್ಛೇದ 6ರಲ್ಲೂ ರಾಜ್ಯಗಳ ಅನುಮತಿ ಇಲ್ಲದೇ ಕೇಂದ್ರೀಯ ತನಿಖಾ ಸಂಸ್ಥೆ ರಾಜ್ಯವನ್ನು ಪ್ರವೇಶಿಸುವಂತಿಲ್ಲ ಎಂದು ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next