Advertisement

Caste census: ವರದಿ ಸಲ್ಲಿಕೆಗೆ ನಿಗದಿಯಾಗದ ಸಮಯ- ಹೆಗ್ಡೆ ಅವಧಿ ಮತ್ತೆ ವಿಸ್ತರಣೆ ಸಾಧ್ಯತೆ

11:43 PM Jan 24, 2024 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿ ಬಹುತೇಕ ಸಿದ್ಧ ಗೊಂಡಿದೆ. ಆದರೆ ಸದ್ಯಕ್ಕೆ ಅದು ಸರಕಾರಕ್ಕೆ ಸಲ್ಲಿಕೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರ ಅವಧಿ ಮತ್ತೂಮ್ಮೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ.

Advertisement

ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್‌ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೂಂದೆಡೆ ಅಧಿವೇಶನಕ್ಕೂ ಮೊದಲೇ ವರದಿ ಸ್ವೀಕಾರಗೊಂಡರೆ, ವಿಪಕ್ಷಗಳಿಗೆ ಅನಾಯಾಸವಾಗಿ ಆಹಾರವಾಗಲಿದೆ. ಒಂದು ವೇಳೆ ಈಗ ಇದರಿಂದ ಪಾರಾದರೆ, ಲೋಕಸಭಾ ಚುನಾವಣೆ ಮುಗಿಯುವವರೆಗೂ ಇದು ನೇಪಥ್ಯಕ್ಕೆ ಸರಿಯಲಿದೆ. ಈ ಮಧ್ಯೆ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರ ಅವಧಿ ಇದೇ ಜ. 31ಕ್ಕೆ ಪೂರ್ಣಗೊಳ್ಳಲಿದೆ. ಈ ಇಕ್ಕಟ್ಟಿನಿಂದ ಪಾರಾಗಲು ಸರಕಾರ ಮತ್ತೂಮ್ಮೆ ಅಧ್ಯಕ್ಷರ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ನವೆಂಬರ್‌ 25ಕ್ಕೆ ಜಯಪ್ರಕಾಶ್‌ ಹೆಗ್ಡೆ ಅಧಿಕಾರಾ ವಧಿ ಪೂರ್ಣಗೊಂಡಿತ್ತು. ನ. 24ರಂದು ಎರಡು ತಿಂಗಳ ಮಟ್ಟಿಗೆ ಅಂದರೆ, ಜ. 31ರವರೆಗೆ ಮರುನೇಮಕ ಮಾಡಿ ಆದೇಶ ಹೊರಡಿಸಿತ್ತು.

ಸಮಯ ಕೇಳಿದ್ದೇವೆ, ಸಿಎಂ ಬ್ಯುಸಿ ಇದ್ದಾರೆ
ಈ ಬಗ್ಗೆ “ಉದಯವಾಣಿ’ ಜತೆಗೆ ಮಾತನಾಡಿದ ಜಯಪ್ರಕಾಶ್‌ ಹೆಗ್ಡೆ, ವರದಿ ಅಂತಿಮಗೊಂಡಿದ್ದು, ಸಲ್ಲಿಕೆಗಾಗಿ ಮುಖ್ಯಮಂತ್ರಿಯಲ್ಲಿ ಸಮಯ ಕೇಳಿದ್ದೇವೆ, ಬಜೆಟ್‌ ಸಿದ್ಧತೆಯಲ್ಲಿ ಅವರು ವ್ಯಸ್ತರಾಗಿದ್ದಾರೆ. ಸರಕಾರಕ್ಕೆ ನಾವು ವರದಿ ಕೊಡಲಿದ್ದು, ಆ ವರದಿಯನ್ನು ಸರಕಾರ ಸಚಿವ ಸಂಪುಟದ ಮುಂದಿಡಲಿದೆ. ವರದಿ ಕೊಡುವುದು ಮಾತ್ರ ನಮ್ಮ ಕೆಲಸ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next