Advertisement
ಮಹಾರಾಷ್ಟ್ರದಿಂದ ಭೀಮಾ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿ ಭೀಮಾ ತೀರದ ಅಫಜಲಪುರ, ಜೇವರ್ಗಿ, ಚಿತ್ತಾಪುರ ಮತ್ತು ಕಲಬುರಗಿ ತಾಲೂಕಿನ 126ಕ್ಕೂ ಅಧಿಕ ಗ್ರಾಮಗಳು ಹಾಗೂ ಕಾಗಿಣಾ ಹಿನ್ನೀರಿನ ಶಹಾಬಾದ್, ಕಾಳಗಿ, ಚಿತ್ತಾಪುರ 22 ಗ್ರಾಮಗಳಿಗೆ ಜಲ ಕಂಟಕ ಎದುರಾಗಿತ್ತು. ಜನತೆ ಭಾರಿ ಮಳೆಯಿಂದ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಸೇರಿ ಕೆಲ ಗ್ರಾಮಗಳು ಜಲಾವೃತಗೊಂಡಿದ್ದವು. ಮಳೆ ಮತ್ತು ನೆರೆಯಿಂದ ನಿರಾಶ್ರಿತರಾದ ಜನರಿಗಾಗಿ ಅ.13ರಿಂದ ಒಟ್ಟು 160 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಇದೀಗ ಕಳೆದ ಮೂರು ದಿನಗಳಿಂದ ಪ್ರವಾಹದ ನೀರು ಕಡಿಮೆಯಾಗಿದ್ದರಿಂದ ಜನರು ಮನೆಗಳಿಗೆ ಮರಳುತ್ತಿದ್ದಾರೆ. ಇದೇ ನೆಪದಲ್ಲಿ ಗುರುವಾರದಿಂದ ಕಾಳಜಿ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಶುಕ್ರವಾರದ ವೇಳೆ ಬಹುತೇಕ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು.
Related Articles
Advertisement
ಅಫಜಲಪುರ ತಾಲೂಕಿನಲ್ಲಿ ಅರ್ಧಕ್ಕೆ ಅರ್ಧ ಕಾಳಜಿ ಕೇಂದ್ರಗಳು ಸ್ಥಗಿತಗೊಳಿಸಲಾಗಿದೆ. ತಾಲೂಕಿನಲ್ಲಿ ಒಟ್ಟಾರೆ 48 ಗ್ರಾಮಗಳಿಗೆ ಪ್ರವಾಹದ ನೀರು ಹೊಕ್ಕು, ಹತ್ತು ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ತಾಲೂಕಿನಾದ್ಯಂತ 25 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈಗ 14 ಕಾಳಜಿ ಕೇಂದ್ರಗಳು ಕಾರ್ಯ ಪ್ರಾರಂಭ ಇವೆ. ಹಲವು ಗ್ರಾಮಗಳಲ್ಲಿ ಪ್ರವಾಹ ಕುಸಿತವಾಗಿದ್ದು, ದಸರಾ ಹಬ್ಬ ಇದೆ ಎಂದು ಜನರೇ ಕಾಳಜಿ ಕೇಂದ್ರಗಳಿಂದ ಹೋಗಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು
ಹತ್ತು ಸಾವಿರ ಪರಿಹಾರ ಜಮೆ : ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಪ್ರಾಥಮಿಕ ವರದಿ ಪ್ರಕಾರ 10,796 ಮನೆಗಳಿಗೆ ನೀರು ನುಗ್ಗಿ ಬಟ್ಟೆ-ಪಾತ್ರೆ ನಷ್ಟವಾಗಿದೆ. 3,628 ಮನೆಗಳು ಭಾಗಶಃ ಮನೆಗಳು ಹಾನಿಯಾಗಿವೆ. 65 ಮನೆಗಳು ಸಂಪೂರ್ಣ ಮನೆ ನೆಲಸಮವಾಗಿವೆ ಎಂಬುವುದು ಜಿಲ್ಲಾಡಳಿತದ ಅಂಕಿ-ಅಂಶ. ಚಿತ್ತಾಪುರದಲ್ಲಿ ಸುಮಾರು 500, ಜೇವರ್ಗಿಯಲ್ಲಿ312, ಶಹಾಬಾದ್ನಲ್ಲಿ 260 ಕುಟುಂಬಗಳಿಗೆ ಈಗಾಗಲೇ ಸರ್ಕಾರದಿಂದ ಪರಿಹಾರದ ಹಣ ಜಮೆ ಮಾಡಲಾಗಿದೆ. ಉಳಿದವರಿಗೂ ಹಣ ಜಮೆ ಮಾಡಲಾಗುತ್ತಿದೆ. ಫಲಾನುಭವಿಗಳ ದಾಖಲೆಗಳು ಮತ್ತು ಬ್ಯಾಂಕ್ ಖಾತೆ ತಾಳೆ ಮಾಡುವ ಕಾರ್ಯಪ್ರಗತಿಯಲ್ಲಿ ಇದೆ ಎಂದು ಆಯಾ ತಾಲೂಕಿನ ತಹಶೀಲ್ದಾರ್ಗಳು ಮಾಹಿತಿ ನೀಡಿದ್ದಾರೆ.