Advertisement

Belthangady ಧಾರವಾಡದಲ್ಲಿ ಕ್ಯಾನ್ಸರ್‌ ಘಟಕ, ಫಾರ್ಮಸಿ ಕಾಲೇಜು

11:03 PM Oct 24, 2023 | Team Udayavani |

ಬೆಳ್ತಂಗಡಿ: ಮೈಸೂರಿನಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ಹೊಸ ವಸ್ತುಸಂಗ್ರಹಾಲಯ, ಉಡುಪಿಯಲ್ಲಿ ಆಯುರ್ವೇದ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣ, ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ಮತ್ತು ಫಾರ್ಮಸಿ ಕಾಲೇಜು ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಧರ್ಮಸ್ಥಳದಲ್ಲಿ ಅ. 24ರಂದು ನೆರವೇರಿದ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಸಮಾರಂಭದಲ್ಲಿ ಅವರು ಮಾತನಾಡಿ ಹೊಸ ಯೋಜನೆಗಳನ್ನು ಪ್ರಕಟಿಸಿದರು.

ಧರ್ಮಸ್ಥಳದಲ್ಲಿ ಮೂರು ಹೊಸ ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗುವುದು. ರಜತಾದ್ರಿ ವಸತಿಗೃಹಕ್ಕೆ 200 ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಅಳಿವಿನಂಚಿನಲ್ಲಿರುವ ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.

ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲ ಕೆಲಸಗಳು ವೇಗದ ಗತಿಯಲ್ಲಿ ನಡೆಯುತ್ತಿವೆ. ಸ್ಫೂರ್ತಿಯ ಚಿಲುಮೆಯಾದ ಶ್ರದ್ಧಾ ಅಮಿತ್‌, ಶ್ರೇಯಸ್‌ ಕುಮಾರ್‌, ನಿಶ್ಚಲ್‌, ಸಾಕೇತ ಶೆಟ್ಟಿ, ಶ್ರುತಾ ಜಿತೇಶ್‌ ಮತ್ತು ಮೈತ್ರಿ ನಂದೀಶ್‌ ಅವರು ಬಹಳ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಕಾರ್ಯಕರ್ತರು ಮತ್ತು ಸಿಬಂದಿಯ ನಿಷ್ಠೆ ಮತ್ತು ಕಾರ್ಯತತ್ಪರತೆಯಿಂದ ತನ್ನ ಎಲ್ಲ ಯೋಜನೆಗಳು ಮತ್ತು ಯೋಚನೆಗಳು ಯಶಸ್ವಿಯಾಗುತ್ತಿರುವುದಕ್ಕೆ ಸಂತೋಷ ಮತ್ತು ತೃಪ್ತಿ ವ್ಯಕ್ತಪಡಿಸಿದ ಹೆಗ್ಗಡೆಯವರು ಇದರ ಕೀರ್ತಿ ಮತ್ತು ಯಶಸ್ಸನ್ನು ಶ್ರೀ ಮಂಜುನಾಥ ಸ್ವಾಮಿ ಮತ್ತು ಧರ್ಮದೇವತೆಗಳ ಸಾನ್ನಿಧ್ಯಕ್ಕೆ ಅರ್ಪಿಸುವುದಾಗಿ ಹೇಳಿದರು.

Advertisement

ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ವಿಸ್ತರಣೆಯಲ್ಲಿ ಪ್ರೊ| ಎಸ್‌. ಪ್ರಭಾಕರ್‌ ಅವರ ಸಲಹೆ ಮತ್ತು ಸಹಕಾರವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ| ನ. ವಜ್ರಕುಮಾರ್‌, ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಮತ್ತು ಇತ್ತೀಚೆಗೆ ನಿಧನರಾದ ಕಟ್ಟಡ ಕಾಮಗಾರಿ ವಿಭಾಗದ ಗೋಪಾಲ್‌ ಮೆನನ್‌ ಅವರ ಸೇವೆಯನ್ನು ಸ್ಮರಿಸಿದ ಹೆಗ್ಗಡೆಯವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಶಾಸಕ ಕೆ. ಹರೀಶ್‌ ಪೂಂಜ ಮಾತನಾಡಿ, ಹೆಗ್ಗಡೆಯವರ ಬಹುಮುಖೀ ಸಮಾಜಸೇವೆಯಿಂದಾಗಿ ಬೆಳ್ತಂಗಡಿ ತಾಲೂಕು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಹೆಗ್ಗಡೆಯವರ ಎಲ್ಲ ಯೋಚನೆಗಳು ಹಾಗೂ ಯೋಜನೆಗಳು ಆದರ್ಶ ಮತ್ತು ಅನುಕರಣೀಯವಾಗಿವೆ ಎಂದು ಹೇಳಿ ಅಭಿನಂದಿಸಿದರು.

ವಿಧಾನಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌ ಮಾತನಾಡಿ ಹೆಗ್ಗಡೆಯವರು ದೃಢಸಂಕಲ್ಪದಿಂದ ಮಾಡುತ್ತಿರುವ ಸೇವಾಕಾರ್ಯಗಳು ಸಾರ್ವತ್ರಿಕ ಮಾನ್ಯತೆ ಮತ್ತು ಗೌರವ ಹೊಂದಿವೆ ಎಂದು ಹೆಗ್ಗಡೆಯವರು ಅಭಿನಂದಿಸಿದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌. ಸುಪ್ರಿಯಾ ಹರ್ಷೇಂದ್ರ ಕುಮಾರ್‌. ಡಿ. ರಾಜೇಂದ್ರ ಕುಮಾರ್‌ಮತ್ತು ನೀತಾ ರಾಜೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಮತ್ತು ಅಮಿತ್‌ ಉಪಸ್ಥಿತರಿದ್ದರು. ಊರಿನ ನಾಗರಿಕರು, ಅಭಿಮಾನಿಗಳು ಮತ್ತು ಭಕ್ತರಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ ನೆರವೇರಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್‌ ವಂದಿಸಿದರು. ಎಸ್‌ಡಿಎಂ ಸನಿವಾಸ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುನಿಲ್‌ ಪಂಡಿತ್‌ ಕಾರ್ಯಕ್ರಮ ನಿರ್ವಹಿಸಿದರು.

ಹೈನುಗಾರಿಕೆ ಅಭಿವೃದ್ಧಿ
ತಮ್ಮ ಸಂಸದರ ನಿಧಿಯಿಂದ 2.50 ಕೋಟಿ ರೂ. ಅನುದಾನವನ್ನು ಬೀದರ್‌ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು. ಹಾಲು ಮತ್ತು ಹಣ್ಣು ನಿತ್ಯ ಆದಾಯ ಕೊಡುವ ಮೂಲಗಳಾಗಿದ್ದು ಇವುಗಳ ಉತ್ಪಾದನೆಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next