Advertisement

ಪರೀಕ್ಷಾ ಕೇಂದ್ರ ರದ್ದತಿ; ವಿದ್ಯಾರ್ಥಿಗಳ ಪ್ರತಿಭಟನೆ

02:36 PM Mar 22, 2022 | Team Udayavani |

ಮೂಡಲಗಿ: ಪಟ್ಟಣದ ಎಮ್‌ಇಎಸ್‌ ಕಾಲೇಜಿನ ಬಿಎ ಪದವಿ ವಿದ್ಯಾರ್ಥಿಗಳ ಮಾ.22ರಿಂದ ನಡೆಯುವ ಪರೀಕ್ಷೆಗಳ ಸ್ಥಳೀಯ ಕೇಂದ್ರವನ್ನು ರದ್ದು ಮಾಡಿ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣಕ್ಕೆ ವರ್ಗಾವಣೆ ಮಾಡಿದ ಹಿನ್ನೆಲೆ ವಿದ್ಯಾರ್ಥಿಗಳು ಸೋಮವಾರ ಸಂಜೆ ನಾಲ್ಕು ಗಂಟೆಯಿಂದ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಕೆಎಂಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮಧ್ಯ ಪ್ರವೇಶಿಸಿದ್ದರಿಂದ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ರಾತ್ರಿ 9 ಗಂಟೆಗೆ ಹಿಂಪಡೆದರು.

Advertisement

ಸೋಮವಾರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು ಬಿಎ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಎಮ್‌ಇಎಸ್‌ ಕಾಲೇಜಿನ ಬಿಎ ವಿದ್ಯಾರ್ಥಿಗಳು, ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆಗೆ ನಡೆಸಿ, ಪರೀಕ್ಷಾ ಕೇಂದ್ರದ ವರ್ಗಾವಣೆ ಆದೇಶವನ್ನು ರದ್ದು ಮಾಡಬೇಕೆಂದು ಆಗ್ರಹಿಸಿ, ಕುಲಪತಿಗಳ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿನಿ ಮೇಘಾ ಗುಡ್ಲಿ ಮಾತನಾಡಿ, ತಾಲೂಕಿನ ದೂರದ ಹಳ್ಳಿಗಳ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪಟ್ಟಣದ ಎಮ್‌ಇಎಸ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಇರುವುದರಿಂದ ಏಕಾಏಕಿ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಿದ ಪರಿಣಾಮ ವಿದ್ಯಾರ್ಥಿಗಳು ಹಾಗೂ ವಸತಿ ನಿಲಯದಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಕ್ಕೆ ತಲುಪಲು ಸಮಸ್ಯೆಯಾಗುವುದರಿಂದ ಕೂಡಲೇ ವರ್ಗಾವಣೆ ಮಾಡಿರುವ ಆದೇಶವನ್ನು ರದ್ದು ಮಾಡಿ, ಮೊದಲು ನಡೆಯುವ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ನಡೆಸಲು ಆದೇಶ ನೀಡಬೇಕೆಂದು ಆಗ್ರಹಿಸಿದರು.

ಎಬಿವಿಪಿ ಬೆಳಗಾವಿ ವಿಭಾಗದ ಸಹಸಂಚಾಲಕ ಮಲ್ಲು ಮುಕುಂದ ಮಾತನಾಡಿ, ಮಾ.22ರಂದು ನಡೆಯುವ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವನ್ನು ದಿಢೀರನೆ ವರ್ಗಾವಣೆ ಮಾಡಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ದೂರದ ವಿದ್ಯಾರ್ಥಿಗಳು ಮೊದಲೇ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದ್ದು, ಇಂತಹ ಸಂದರ್ಭದಲ್ಲೇ ಪರೀಕ್ಷಾ ಕೇಂದ್ರವನ್ನು ವರ್ಗಾವಣೆ ಮಾಡಿದ್ದರಿಂದ ವಿದ್ಯಾರ್ಥಿಗಳ ಬಾಳು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ವರ್ಗಾವಣೆ ಆದೇಶ ಹಿಂಪಡೆಯುವವರೆಗೂ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಮೂಡಲಗಿ ತಹಶೀಲ್ದಾರ್‌ ಡಿ.ಜಿ ಮಹಾತ್‌ ಅವರು ವಿದ್ಯಾರ್ಥಿಗಳ ಪ್ರತಿಭಟನೆ ವಿಷಯವನ್ನು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಗಮನಕ್ಕೆ ತಂದ ಹಿನ್ನೆಲೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು ಮಾ.22 ಹಾಗೂ 23ರಂದು ನಡೆಯುವ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು.

Advertisement

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಆರ್‌ ಪಿ ಸೋನವಾಲ್ಕರ, ಎಬಿವಿಪಿ ಕಾರ್ಯಕರ್ತರಾದ ಬಸವರಾಜ ಜೋಡಟ್ಟಿ, ಮಹಾದೇವ ನವಣಿ, ಗಿರೀಶ ಬಳಿಗಾರ, ಬಸವರಾಜ ಕೋಣಿ, ಗುರು ಹಿರೇಮಠ, ಹಣಮಂತ ಗುರವ್‌, ಸುಜಾತಾ ಪಟ್ಟಣಶೆಟ್ಟಿ, ಗಾಯಿತ್ರಿ ಸಲಭನ್ನವರ, ಗಂಗುಬಾಯಿ ಚಿಮ್ಮಡಿ, ಈಶ್ವರಿ ದಂಡಪ್ಪನ್ನವರ, ಅನ್ನಪೂರ್ಣ ಮಂಡರ ಹಾಗೂ ಅನೇಕ ಕಾರ್ಯಕರ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next