Advertisement

Kaikamba: ಕಾರ್ಮಿಕರಿಗೆ ಅನ್ಯಾಯ ವಿರೋಧಿಸಿ ಆ. 5ಕ್ಕೆ ಸಿಎಂ ಮನೆಗೆ ಚಲೋ

02:36 PM Jul 30, 2024 | Team Udayavani |

ಕೈಕಂಬ: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕುಪ್ಪೆಪದವು ಘಟಕದ ಸಮಾವೇಶವು ಕುಪ್ಪೆಪದವು ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಗಂಗಾಧರ್‌ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಘಟಕದ ಕುಪ್ಪೆಪದವು ವಲಯ ಕಾರ್ಯದರ್ಶಿ ವಸಂತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ಮಂಡಳಿಯಲ್ಲಿ ಆಗುತಿರುವ ಭ್ರಷ್ಟಾಚಾರ ಹಾಗೂ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಯೋಗೀಶ್‌ ಜಪ್ಪಿನಮೊಗರು ಮಾತನಾಡಿ, ಮಂಡಳಿಯ ತಂತ್ರಾಂಶದಲ್ಲಿ ಪದೇ ಪದೇ ತಾಂತ್ರಿಕ ತೊಂದರೆಗಳು ಉಂಟಾಗುತ್ತಿರುವುದರಿಂದ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ, ಹೆರಿಗೆ, ಪಿಂಚಣಿ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಅಲ್ಲದೆ ಅರ್ಜಿ ಸಲ್ಲಿಸಿದ ಸಾವಿರಾರು ಫಲನುಭವಿಗಳಿಗೆ ಧನಸಹಾಯ ಪಾವತಿ ಸರಿಯಾಗಿ ಆಗುತ್ತಿಲ್ಲ. ಶೈಕ್ಷಣಿಕ ಧನಸಹಾಯ ಶೇ. 60ರಿಂದ 80 ಕಡಿತ ಮಾಡಿರುವುದರಿಂದ ಸಾವಿರಾರು ಬಡ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಎದುರಾಗಿದೆ ಎಂದರು.

ಕಾರ್ಮಿಕ ಕಲ್ಯಾಣ ಮಂಡಳಿ ರಚನೆಗಾಗಿ ಹೋರಾಟ ನಡೆಸಿದ ಕಾರ್ಮಿಕ ಸಂಘಟನೆಗಳನ್ನು ಕಾರ್ಮಿಕ ಇಲಾಖೆಯ ಸಚಿವರು, ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೂರವಿಟ್ಟಿದ್ದಾರೆ. ಕಲ್ಯಾಣ ಮಂಡಳಿ ಸಭೆ ನಡೆಸದೆ ಬೇಕಾಬಿಟ್ಟಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಕಾರ್ಮಿಕರು ಸಲ್ಲಿಸಿದ ಮನವಿ ಮತ್ತು ನಡೆಸಿದ ಹೋರಾಟಕ್ಕೂ ಕಿವಿಗೋಡುತ್ತಿಲ್ಲ ಈ ಹಿನ್ನೆಲೆಯಲ್ಲಿ ಆಗಸ್ಟ್‌ 5ರಂದು ಬೆಂಗಳೂರಿನಲ್ಲಿ ನಡೆಯುವ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮದಲ್ಲಿ ಹೆಚ್ಚಿನ ಕಟ್ಟಡ ಕಾರ್ಮಿಕರು ಭಾಗವಹಿಸಬೇಕೆಂದು ಹೇಳಿದರು.

ಕಾರ್ಮಿಕ ಮುಖಂಡ ಸದಾಶಿವ ದಾಸ್‌ ಮಾತನಾಡಿದರು. ಈ ಸಂದರ್ಭ 2023-24 ಸಾಲಿನ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ, ಕಾರ್ಯದರ್ಶಿಯಾಗಿ ಗಣೇಶ್‌, ಕೋಶಾ ಧಿಕಾರಿಯಾಗಿ ರಾಘವರವರನ್ನು ಮತ್ತು 18 ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು.

Advertisement

ಕುಪ್ಪೆಪದವು ವಲಯಾಧ್ಯಕ್ಷ ದಿನೇಶ್‌ ಇರುವೈಲು, ಮುಚ್ಚಾರು ಸಮಿತಿ ಅಧ್ಯಕ್ಷ ಆನಂದ ದೇವಾಡಿಗ, ಕಾರ್ಯದರ್ಶಿ ರವೀಂದ್ರ ಶೆಟ್ಟಿಗಾರ್‌, ಮಿಜಾರು ಘಟಕದ ಅಧ್ಯಕ್ಷ ಪುತ್ತು ಗೌಡ, ಕೋಶಾಧಿಕಾರಿ ಜನಾರ್ಧನ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಘಟಕದ ಕಾರ್ಯದರ್ಶಿ ಗಣೇಶ್‌ ಕಾಪಿಕಾಡು ಸ್ವಾಗತಿಸಿ, ವರದಿ ಮಂಡಿಸಿದರು. ಕೋಶಾಧಿಕಾರಿ ಇಬ್ರಾಹಿಂ ಲೆಕ್ಕಪತ್ರ ಮಂಡಿಸಿದರು. ರಾಘವ ವಂದಿಸಿದರು.

ನೈಜ ಕಟ್ಟಡ ಕಾರ್ಮಿಕರು ಬಲಿಪಶು

ರಾಜ್ಯದಲ್ಲಿ 2007ರಿಂದ ಅಸ್ತಿತ್ವದಲ್ಲಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ 19 ಸೌಲಭ್ಯಗಳನ್ನು ಘೋಷಿಸಿದೆ. ಇದರಲ್ಲಿ 11 ಸೌಲಭ್ಯಗಳು ಮಾತ್ರವೇ ಜಾರಿಯಾಗಿವೆ. ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯ, ಅಪಘಾತ, ಸಹಜ ಮರಣ, ಹೆರಿಗೆ ಸಂಧರ್ಭ ದೊರೆಯುವ ಸೌಲಭ್ಯಗಳು ಜಾರಿಯಲ್ಲಿವೆ. ಇತ್ತೀಚೆಗೆ ಕಲ್ಯಾಣ ಮಂಡಳಿಯು ಬೋಗಸ್‌ ಕಾರ್ಡ್‌ ನಿಯಂತ್ರಣಕ್ಕಾಗಿ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇದು ಸ್ವಾಗತಾರ್ಹ ಆದರೆ ಬೋಗಸ್‌ ಕಾರ್ಡ್‌ ನಿಯಂತ್ರಣದ ನೆಪದಲ್ಲಿ ಸಾವಿರಾರು ನೈಜ ಕಟ್ಟಡ ಕಾರ್ಮಿಕರು ಬಲಿಪಶುವಾಗುತ್ತಿದ್ದಾರೆ. ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ ಎಂದು ಯೋಗೀಶ್‌ ಜಪ್ಪಿನಮೊಗರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next