Advertisement

ವೈಯಕ್ತಿಕ ಸಿಟ್ಟಿಗೆ ಬೆದರಿಕೆ ಕರೆ!

12:35 PM Aug 30, 2018 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ ಉಡುಪಿ ಮೂಲದ ಆರೋಪಿಯನ್ನು ಕೊನೆಗೂ ಏರ್‌ಪೋರ್ಟ್‌ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿ ಆದಿತ್ಯ ರಾವ್‌ (34) ಬಂಧಿತ ಆರೋಪಿ. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಅರ್ಜಿ ಹಾಕಿದ್ದು, ಕೆಲಸ ಸಿಗದಿರುವ ಹಿನ್ನೆಲೆಯಲ್ಲಿ ನೊಂದುಕೊಂಡಿದ್ದ. ಬಳಿಕ ಟಾಯ್ಲೆಟ್‌ಗೆ ಹೋಗುವ ವೇಳೆ ಲಗೇಜ್‌ ಇಡುವ ಸ್ಥಳದಲ್ಲಿ ಶುಲ್ಕ ಕೇಳಲಾಗಿತ್ತು.

ಅದು ಆತನಿಗೆ ಇನ್ನಷ್ಟು ಸಿಟ್ಟು ಹೆಚ್ಚಿಸಿ, ಬೆದರಿಕೆ ಕರೆ ಮಾಡಿದ್ದಾಗಿ ಆದಿತ್ಯ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದ ಆರೋಪಿ, ಒಮ್ಮೆ ರೈಲ್ವೆ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದಾನೆ ಎಂದು ಏರ್‌ಪೋರ್ಟ್‌ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಮಣಿಪಾಲ ಮೂಲದ ಆರೋಪಿ ಆದಿತ್ಯನ ತಂದೆ ನಿವೃತ್ತ ಬ್ಯಾಂಕ್‌ ಉದ್ಯೋಗಿಯಾಗಿದ್ದು, ಸಹೋದರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಬಿಇ ಮೆಕಾನಿಕಲ್‌ ಎಂಜಿನಿಯರ್‌ ಹಾಗೂ ಎಂಬಿಎ ಪದವಿ ಪಡೆದಿರುವ ಆರೋಪಿ ಅವಿವಾಹಿತ. 7-8 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಈತ ಪಿಜಿಯಲ್ಲಿ ವಾಸವಾಗಿದ್ದ.

ಒಂದೂವರೆ ತಿಂಗಳ ಹಿಂದೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಅರ್ಜಿ ಪರಿಶೀಲಿಸಿದ ಅಧಿಕಾರಿಗಳು ಅಫಿಡವಿಟ್‌ ತರಲು ಸೂಚಿಸಿದ್ದರು. ಅದರಂತೆ ಅಫಿಡವಿಟ್‌ ಸಲ್ಲಿಸಿದ್ದ. ಆದರೆ, ಕೆಲಸ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ಆರೋಪಿ, ತನಗೆ ಅನಗತ್ಯ ತೊಂದರೆ ಕೊಟ್ಟ ಅಧಿಕಾರಿಗಳಿಗೆ ಬುದ್ದಿ ಕಲಿಸಬೇಕೆಂದು ಬೆದರಿಕೆ ಕರೆ ಮಾಡಿದ್ದಾನೆ ಎನ್ನಲಾಗಿದೆ.

Advertisement

ಆ.20ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕರೆ ಮಾಡಿ ವಿಮಾನ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಬಾಂಬ್‌ ಇಟ್ಟಿದ್ದೇನೆ ಎಂದಿದ್ದ. ಕೆಲ ಹೊತ್ತಿನ ಬಳಿಕ ಪಾರ್ಕಿಂಗ್‌ಗೆ ಹೋಗುವ ಸ್ಥಳದಲ್ಲಿ ಬಾಂಬ್‌ ಇಟ್ಟಿದ್ದು, 11 ಗಂಟೆಗೆ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದ.

ಆ.27ರಂದು ತನ್ನ ಮೊಬೈಲ್‌ ನಂಬರ್‌ನಿಂದಲೇ ಏರ್‌ಏಷ್ಯಾ ಕೌಂಟರ್‌ ನಂಬರ್‌ಗೆ ಫೋನ್‌ ಮಾಡಿ ಕೊಚ್ಚಿ ಹಾಗೂ ಹೈದರಾಬಾದ್‌ ವಿಮಾನದಲ್ಲಿ ಬಾಂಬ್‌ ಇಟ್ಟಿದ್ದೇನೆ ಎಂದಿದ್ದ. ಕೆಲ ಹೊತ್ತಿನ ಬಳಿಕ ಮತ್ತೂಮ್ಮೆ ಕರೆ ಮಾಡಿ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದ ಎಂದು ಪೊಲೀಸರು ತಿಳಿಸಿದರು.

ಲಗೇಜ್‌ ಇಡೋಕೆ ದುಡ್ಡು!: ಕೆಲ ದಿನಗಳ ಹಿಂದೆ ರೈಲು ನಿಲ್ದಾಣಕ್ಕೆ ಬಂದಿದ್ದ ಆರೋಪಿ ಶೌಚಾಲಯಕ್ಕೆ ಹೋಗಲು ತನ್ನ ಬ್ಯಾಗ್‌ನ್ನು ಲಗೇಜ್‌ ರೂಮ್‌ನಲ್ಲಿ ಇಡಲು ಹೋಗಿದ್ದ. ಈ ವೇಳೆ ಕೊಠಡಿ ಸಿಬ್ಬಂದಿ ಹಣ ಪಾವತಿಸಬೇಕೆಂದು ಹೇಳಿದ್ದರು. ಇದಕ್ಕೆ ಆಕ್ಷೇಪಿಸಿದ ಆದಿತ್ಯ ಕೇವಲ 10 ನಿಮಿಷಕ್ಕೆ ಹತ್ತಾರು ರೂ. ಪಾವತಿಸಬೇಕಾ ಎಂದು ಪ್ರಶ್ನಿಸಿದಲ್ಲದೆ ಗಲಾಟೆ ಮಾಡಿಕೊಂಡಿದ್ದ.

ಇದರಿಂದ ಅಸಮಾಧಾನಗೊಂಡಿದ್ದ ಆರೋಪಿ ಆ.27ರಂದು ರೈಲ್ವೆ ನಿಲ್ದಾಣದ ನಿಯಂತ್ರಣ ಕೊಠಡಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕರೆ ಮಾಡಿ ನಿಲ್ದಾಣದ ಪಾರ್ಸ್‌ಲ್‌ ಕೊಠಡಿಗೆ ಬಾಂಬ್‌ ಇಟ್ಟಿದ್ದೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಕರೆ ಸ್ಥಗಿತಗೊಳಿಸಿದ್ದ ಎಂದು ಪೊಲೀಸರು ತಿಳಿಸಿದರು.

ಕಳ್ಳತನ ಆರೋಪ: ಇದಕ್ಕೂ ಮೊದಲು ಆರೋಪಿ ಆದಿತ್ಯ ಜಯನಗರದ ಖಾಸಗಿ ಇನ್‌ಶ್ಯೂರೆನ್ಸ್‌ ಕಂಪನಿಯಲ್ಲಿ ಸೆಲ್ಸ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಸಹೋದ್ಯೋಗಿಯ ಲ್ಯಾಟ್‌ಟಾಪ್‌ ಕಳವು ಮಾಡಿ ಸಿಕ್ಕಿ ಬಿದ್ದಿದ್ದು, ಕೆಲಸದಿಂದ ವಜಾ ಮಾಡಿದ್ದರು. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೂಂದೆಡೆ ತಾನೂ ವಾಸವಾಗಿದ್ದ ಪಿಜಿಯೊಂದರಲ್ಲಿ ಲ್ಯಾಪ್‌ಟಾಪ್‌ಗ್ಳನ್ನು ಕಳವು ಮಾಡಿದ್ದ. ಈ ಸಂಬಂಧ ಸುದ್ದಗುಂಟೆ ಪಾಳ್ಯ ಪೊಲೀಸರು ಕಳವು ಪ್ರಕರಣ ದಾಖಲಿಸಿ ಬಂಧಿಸಿದ್ದರು.

ನನಗೆ ಬೇಕಿತ್ತು ಮಾಡಿದ್ದೇನೆ ಅಷ್ಟೇ!: ಆರೋಪಿ ಆದಿತ್ಯ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಎರಡೆರಡು ಪದವಿ ಪಡೆದಿರುವ ಈತ ಸುಲಲಿತವಾಗಿ ಇಂಗ್ಲಿಷ್‌ ಮಾತನಾಡುತ್ತಾನೆ. ಕಳವು, ಹುಸಿ ಬಾಂಬ್‌ ಕರೆ ಕುರಿತು ಪ್ರಶ್ನಿಸಿದರೆ, ನನ್ನ ಜೀವನಕ್ಕೆ ಬೇಕಿತ್ತು ಅದಕ್ಕೆ ಲ್ಯಾಪ್‌ಟಾಪ್‌ ಕಳವು ಮಾಡಿ ಮಾರಾಟ ಮಾಡಿದ್ದೆ. ಕೆಲಸ ಕೊಡದಕ್ಕೆ, ಅವಮಾನ ಮಾಡಿದಕ್ಕೆ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದೇನೆ ಎಂದಷ್ಟೇ ಹೇಳುತ್ತಾನೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾನೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next