Advertisement

SC: ಕಲ್ಕತ್ತಾ ಹೈಕೋರ್ಟ್‌ ಜಡ್ಜ್ V/s ಜಡ್ಜ್: ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

01:05 AM Jan 28, 2024 | Team Udayavani |

ಹೊಸದಿಲ್ಲಿ: ಕಲ್ಕತ್ತಾ ಹೈಕೋರ್ಟ್‌ ನಲ್ಲಿ ಎದ್ದಿರುವ ಅತ್ಯಂತ ಅಪರೂ­ಪದ ಜಡ್ಜ್ ವರ್ಸಸ್‌ ಜಡ್ಜ್ ಪ್ರಕರಣ ಸಂಬಂಧ ಶನಿವಾರ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಪಶ್ಚಿಮ ಬಂಗಾಲದ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳಲ್ಲಿ ಎಂಬಿಬಿಎಸ್‌ ಅಭ್ಯರ್ಥಿಗಳ ಪ್ರವೇಶ ಮತ್ತು ಮೀಸಲು ಕೆಟಗರಿ ಪ್ರಮಾಣಪತ್ರ ವಿತರಣೆ­ಯಲ್ಲಿ ನಡೆದ ಅವ್ಯವಹಾರ­ಗಳ ಕುರಿತ ವಿಚಾರಣೆಗೇ ತಡೆಯಾಜ್ಞೆ ನೀಡಿದೆ.

Advertisement

ಶನಿವಾರ ವಿಶೇಷ ವಿಚಾರಣೆ ನಡೆಸಿದ ಸಿಜೆಐ ಡಿ.ವೈ. ಚಂದ್ರಚೂಡ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ, ಅವ್ಯವಹಾರ ಕುರಿತು ಪ.ಬಂಗಾಲ ಹೈಕೋರ್ಟ್‌ನ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠ ನೀಡಿದ್ದ ಆದೇಶಗಳಿಗೆ ತಡೆ ತಂದು, ಪ.ಬಂಗಾಲ ಸರಕಾರ ಮತ್ತು ಮೂಲ ಅರ್ಜಿ­ದಾರರಿಗೆ ನೋಟಿಸ್‌ ಜಾರಿ ಮಾಡಿತು. ಜತೆಗೆ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿತು.

ವೈದ್ಯಕೀಯ ಕಾಲೇಜು ಪ್ರವೇಶಾತಿಯಲ್ಲಿ ಅವ್ಯವಹಾರ ಸಂಬಂಧ ಇತ್ತೀಚೆಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನ್ಯಾ| ಅಭಿಜಿತ್‌ ಗಂಗೋಪಾಧ್ಯಾಯ ಅವರ ಏಕಸದಸ್ಯ ಪೀಠ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಬಂಗಾಲ ಸರಕಾರವು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಸೌಮೆನ್‌ ಸೇನ್‌, ಉದಯ್‌ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ, ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿತು.

ಇದರಿಂದ ಕ್ರುದ್ಧರಾದ ನ್ಯಾ| ಅಭಿಜಿತ್‌ ಅವರು, ವಿಭಾಗೀಯ ಪೀಠದ ವಿರುದ್ಧ ವಾಗ್ಧಾಳಿ ನಡೆಸಿದ್ದಲ್ಲದೆ, ನ್ಯಾ| ಸೌಮೆನ್‌ ಸೇನ್‌ ಪಕ್ಷವೊಂದರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಜತೆಗೆ, ವಿಭಾಗೀಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್‌ ಮರುಪರಿಶೀಲಿಸುವುದು ಉತ್ತಮ ಎಂದು ಟಿಪ್ಪಣಿ ಬರೆದರು. ಹೀಗೆ ಆರಂಭವಾದ ಜಡ್ಜ್ ವರ್ಸಸ್‌ ಜಡ್ಜ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next