Advertisement

ನೇಮಕದ ಹಿಂದೆ ಲೆಕ್ಕಾಚಾರ: ವಿಧಾನಸಭೆ, ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ರಾಜ್ಯಪಾಲರ ನೇಮಕ

01:23 AM Feb 13, 2023 | Team Udayavani |

ಹೊಸದಿಲ್ಲಿ: ರವಿವಾರ ಒಟ್ಟು 12 ರಾಜ್ಯಗಳಿಗೆ ಹೊಸ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ಲೆಫ್ಟಿನೆಂಟ್‌ ಗವರ್ನರ್‌ ನೇಮಕ ನಡೆದಿರುವುದರ ಹಿಂದೆ ಬಿಜೆಪಿಯ “ರಾಜಕೀಯ’ ಲೆಕ್ಕಾಚಾರ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.

Advertisement

ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಹಾಗೂ ಮುಂದಿನ ವರ್ಷದ ಲೋಕಸಭೆ ಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡೇ ಈ ನೇಮಕಗಳು ನಡೆದಿವೆ ಎಂಬ ಮಾತುಗಳು ಕೇಳಿಬಂದಿವೆ. ರಾಜಕೀಯ ಲಾಭ, ಅಲ್ಪಸಂಖ್ಯಾಕರು ಮತ್ತು ದಲಿತರಿಗೆ ಮಣೆ, ದಕ್ಷಿಣ ರಾಜ್ಯಗಳತ್ತ ಗಮನ, ಪಕ್ಷದೊಳಗಿನ ಆಂತರಿಕ ಕಚ್ಚಾಟ ಶಮನ ಸಹಿತ ವಿವಿಧ ಲೆಕ್ಕಾಚಾರಗಳೊಂದಿಗೆ ಬಿಜೆಪಿ “ಗವರ್ನರ್‌ ದಾಳ’ ಉರುಳಿಸಿದೆ.

ಮೇಘಾಲಯ, ನಾಗಾಲ್ಯಾಂಡ್‌: ಪ್ರಸಕ್ತ ತಿಂಗಳ ಅಂತ್ಯದಲ್ಲೇ ಮೇಘಾಲಯ, ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಎರಡೂ ರಾಜ್ಯಗಳು ರಾಜಕೀಯ ಅಸ್ಥಿರತೆಯ ಇತಿಹಾಸ ಹೊಂದಿರುವ ಕಾರಣ, ಚುನಾವಣೆ ಮುಗಿ ದೊಡನೆ ನಡೆಯುವ ರಾಜಕೀಯ ಮೇಲಾಟಗಳ ವೇಳೆ ರಾಜ್ಯಪಾಲರ ಪಾತ್ರ ನಿರ್ಣಾಯಕವಾಗಿರುತ್ತದೆ. ಇದೇ ಕಾರಣಕ್ಕಾಗಿ ರಾಜಭವನದಲ್ಲಿ ಅನುಭವಿಗಳಾದ ಫ‌ಗು ಚೌಹಾಣ್‌, ಲಾ ಗಣೇಶನ್‌ರನ್ನು ನೇಮಕ ಮಾಡಲಾಗಿದೆ.

ರಾಜಸ್ಥಾನ: ಸದ್ಯದಲ್ಲೇ ರಾಜಸ್ಥಾನದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜಸ್ಥಾನದ ವಿಪಕ್ಷ ನಾಯಕ ಗುಲಾಬ್‌ ಚಂದ್‌ ಕಟಾರಿಯಾ ಅವರು ಬಿಜೆ ಪಿಯ ಸಿಎಂ ಆಕಾಂಕ್ಷಿಯೂ ಹೌದು. ಅವರನ್ನು ಈಗ ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಮೂಲಕ ಕೇಂದ್ರ ಸರಕಾರವು, ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಉರುಳಿಸಿದೆ.

ಮಹಾರಾಷ್ಟ್ರ: ಇನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರ ರಾಜೀನಾಮೆ ಬೆನ್ನಲ್ಲೇ, ಅವರ ಜಾಗಕ್ಕೆ ಝಾರ್ಖಂಡ್‌ ರಾಜ್ಯಪಾಲ ರಮೇಶ್‌ ಬೈಸ್‌ ರನ್ನು ನೇಮಕ ಮಾಡಲಾಗಿದೆ. ಮಹಾರಾಷ್ಟ್ರವು ರಾಜ ಕೀಯವಾಗಿ ಬಿಜೆಪಿಗೆ ಬಹಳ ಪ್ರಮುಖ ರಾಜ್ಯ ವಾಗಿದ್ದು, 2019ರ ಚುನಾವಣೆಯಲ್ಲಿ ಶಿವಸೇನೆ  ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ 23 ಸೀಟುಗಳಲ್ಲಿ ಗೆದ್ದಿತ್ತು. ಈಗಾಗಲೇ “ಗುಜರಾತಿ-ಮಾರ್ವಾಡಿ ಹೇಳಿಕೆ, ಶಿವಾಜಿ ಕುರಿತು ಆಕ್ಷೇಪಾರ್ಹ ಮಾತು ಸಹಿತ ವಿವಾದಾತ್ಮಕ ಹೇಳಿಕೆಗಳ ಮೂಲಕ ಕೋಶಿ  ಯಾರಿ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದರು. ಚುನಾವಣೆ ಸಮೀಪಿಸುತ್ತಿರುವಾಗ ಯಾವುದೇ ವಿವಾದ ಸೃಷ್ಟಿಸದ ಶಾಂತ ವ್ಯಕ್ತಿಯೇ ರಾಜ್ಯಪಾಲರ ಹುದ್ದೆ  ಯಲ್ಲಿರಬೇಕು ಎಂದು ಬೈಸ್‌ರನ್ನು ಈ ಹುದ್ದೆಗೆ ನೇಮಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

Advertisement

ದಲಿತ, ಅಲ್ಪಸಂಖ್ಯಾಕರತ್ತ ಒಲವು: ಉತ್ತರಪ್ರದೇಶ ಬಿಜೆಪಿ ಉಪಾಧ್ಯಕ್ಷರಾದ ಲಕ್ಷ್ಮಣ ಆಚಾರ್ಯ ಅವರು ಈಗ ಸಿಕ್ಕಿಂ ರಾಜ್ಯಪಾಲರು. ವಾರಾಣಸಿ ಮೂಲದ ಬುಡ ಕಟ್ಟು ಜನಾಂಗದ ಅವರು ಪರಿಶಿಷ್ಟ ಜಾತಿಗೆ ಸೇರಿದ್ದು, ಪ್ರಧಾನಿ ಮೋದಿಗೆ ಆಪ್ತರೂ ಹೌದು. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಉನ್ನತ ಹುದ್ದೆಗಳನ್ನು ನೀಡುವ ಮೂಲಕ ಆದ್ಯತೆ ನೀಡುತ್ತಿದ್ದೇವೆ ಎಂದು ಬಿಜೆಪಿ ಹೇಳಿಕೊಂಡು ಬರುತ್ತಿದೆ. ಈಗ ಲಕ್ಷ್ಮಣರನ್ನು ರಾಜ್ಯ ಪಾಲರನ್ನಾಗಿ ಆಯ್ಕೆ ಮಾಡುವ ಮೂಲಕ ದಲಿತ ಪರ ನಿಲುವಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಲ್ಲದೇ ಶುಕ್ಲಾ ಹಾಗೂ ಲಕ್ಷ್ಮಣ ಆಯ್ಕೆ ಹಿಂದೆ 2024ರ ಲೋಕಸಭೆ ಚುನಾವಣೆಯ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

ಇನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ| ನಜೀರ್‌ ಅವರನ್ನು ಆಂಧ್ರಪ್ರದೇಶ ಗವರ್ನರ್‌ ಆಗಿ ನೇಮಕ ಮಾಡುವ ಮೂಲಕ ಅಲ್ಪಸಂಖ್ಯಾಕರಿಗೂ ಉನ್ನತ ಹುದ್ದೆ ನೀಡುವ ಮೂಲಕ, “ಸಬ್‌ಕಾ ಸಾಥ್‌, ಸಬ್‌ಕಾ ವಿಶ್ವಾಸ್‌’ ವಾಗ್ಧಾನವನ್ನು ಪೂರೈಸಿದ್ದೇವೆ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ.

ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ರಾಜ್ಯ ಮತ್ತು ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದರ ಜತೆಗೆ ಕೆಲವೊಂದು ಮೂಲ ಸೌಕರ್ಯ ಯೋಜನೆಗಳಿಗೆ ಅನು ಮತಿ ನೀಡಿರುವುದಕ್ಕೆ ಪರಿಸರ ಸಂಘಟನೆಗಳ ವತಿ ಯಿಂದ ಆಕ್ಷೇಪವೂ ವ್ಯಕ್ತವಾಗಿದೆ, ಇದೇ ಕಾರಣಕ್ಕೆ ಹಾಲಿ ಲೆ| ಗವರ್ನರ್‌ ಆರ್‌.ಕೆ.ಮಾಥುರ್‌ ಅವರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ ಎನ್ನಲಾಗಿದೆ.

ಆಂತರಿಕ ತಿಕ್ಕಾಟಕ್ಕೆ ಮುಕ್ತಿ
ದಕ್ಷಿಣ ರಾಜ್ಯಗಳನ್ನು ತೆಕ್ಕೆಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ ಪ್ರಸ್ತುತ ಕಣ್ಣು ನೆಟ್ಟಿರುವುದು ತಮಿಳುನಾಡು ಮೇಲೆ. ಝಾರ್ಖಂಡ್‌ ರಾಜ್ಯಪಾಲರಾಗಿ ನೇಮಕಗೊಂಡಿರುವ ಸಿ.ಪಿ.ರಾಧಾಕೃಷ್ಣನ್‌ ಅವರು ಬಿಜೆಪಿಯ ತಮಿಳು ನಾಡು ಘಟಕದ ಅಧ್ಯಕ್ಷರೂ ಆಗಿದ್ದವರು. ಅವರಿಗೆ ಹಾಲಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಎಂದರೆ ಅಷ್ಟಕ್ಕಷ್ಟೆ. ಅಣ್ಣಾಮಲೈ ಅವರ ಕಾರ್ಯ  ವೈಖರಿ ಬಗ್ಗೆ ರಾಧಾಕೃಷ್ಣನ್‌ಗೆ ಅಸಮಾಧಾನವಿದೆ. ಆದರೆ ಬಿಜೆಪಿ ಹೈಕಮಾಂಡ್‌ಗೆ ಅಣ್ಣಾಮಲೈ ಬಗ್ಗೆ ಒಲವಿದೆ. ಹೀಗಾಗಿ ಪಕ್ಷ ದೊಳಗೆ ಆಂತರಿಕ ಕಚ್ಚಾಟವನ್ನು ಆರಂಭದಲ್ಲೇ ಚಿವುಟಿ ಹಾಕುವ ಉದ್ದೇಶದಿಂದಲೇ ರಾಧಾ ಕೃಷ್ಣನ್‌ರಿಗೆ ರಾಜ್ಯಪಾಲರ ಸ್ಥಾನ ಕೊಡಲಾಗಿದೆ.

ನಿಷ್ಠೆಗೆ ಬಹುಮಾನ
ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕ ಗೊಂಡಿರುವ ಶಿವ ಪ್ರತಾಪ್‌ ಶುಕ್ಲಾ ಅವರು ಎಬಿವಿಪಿ, ಆರೆಸ್ಸೆಸ್‌ ಸದಸ್ಯರಾಗಿ ದ್ದವರು. ಮೋದಿ ಸರಕಾರದಲ್ಲಿ ಹಣಕಾಸು ಖಾತೆ ಸಹಾಯಕ ಸಚಿವರಾಗಿ, ರಾಜ್ಯಸಭೆಯಲ್ಲಿ ಬಿಜೆಪಿ ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉತ್ತರಪ್ರದೇಶದವರಾದ ಶುಕ್ಲಾ ಪಕ್ಷದಲ್ಲಿ ಬ್ರಾಹ್ಮಣ ಸಮುದಾಯದ ಪ್ರಮುಖರೂ ಹೌದು. 2022ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಬ್ರಾಹ್ಮಣ ಮತಗಳನ್ನು ಸೆಳೆಯಲು ರೂಪಿಸಿದ್ದ 21 ಸದಸ್ಯರ ಸಮಿತಿಯಲ್ಲಿ ಶುಕ್ಲಾ ಪಕ್ಷದ ಸಮನ್ವಯಕಾರನಾಗಿಯೂ ಕೆಲಸ ಮಾಡಿದ್ದರು. ಅವರ ಪಕ್ಷ ನಿಷ್ಠೆಗೆ ಪ್ರತಿಯಾಗಿ ಈ ಹುದ್ದೆ ನೀಡಿ ಗೌರವಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next