Advertisement

ಸಂಪುಟ ರಚನೆ ಪ್ರಕ್ರಿಯೆ ಮತ್ತೆ ಮುಂದಕ್ಕೆ

01:44 AM Aug 08, 2019 | Lakshmi GovindaRaj |

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ತಲೆದೋರಿರುವುದು ಹಾಗೂ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಅಕಾಲಿಕ ನಿಧನದಿಂದಾಗಿ ಸಂಪುಟ ರಚನೆ ಸಂಬಂಧ ವರಿಷ್ಠರೊಂದಿಗೆ ಚರ್ಚೆ ಸಾಧ್ಯವಾಗದ ಕಾರಣ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ರಾಜ್ಯಕ್ಕೆ ವಾಪಸಾದರು.

Advertisement

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಕಾಣಿಸಿಕೊಂಡು ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಮೊದಲಿಗೆ ರಕ್ಷಣೆ ಹಾಗೂ ಸ್ಪಂದನಾ ಕಾರ್ಯಗಳತ್ತ ಗಮನ ಹರಿಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಹಾಗಾಗಿ ಬುಧವಾರ ತರಾತುರಿಯಲ್ಲಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಿದ ಯಡಿಯೂರಪ್ಪ ಅವರು, ಬಳಿಕ ಬೆಳಗಾವಿಗೆ ತೆರಳಿ ಪ್ರಗತಿ ಪರಿಶೀಲನೆ ನಡೆಸಿ ತುರ್ತಾಗಿ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ನಡುವೆ ಪ್ರತಿಪಕ್ಷ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಾಕ್ಸಮರ ಆರಂಭಿಸಿದ್ದು, ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿಲ್ಲ ಎಂದು ದೂರಿವೆ. ಹಾಗಾಗಿ, ಎರಡು ದಿನ ಬೆಳಗಾವಿ ಸೇರಿದಂತೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ, ರಕ್ಷಣಾ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಯಡಿಯೂರಪ್ಪ ಮುಂದಾಗಿದ್ದಾರೆ. ಹಾಗಾಗಿ, ಸಂಪುಟ ರಚನೆ ಇನ್ನಷ್ಟು ದಿನ ವಿಳಂಬವಾಗಲಿದ್ದು, ಮುಂದಿನ ವಾರ ಸಂಪುಟ ರಚನೆಯಾಗುವ ನಿರೀಕ್ಷೆ ಇದೆ.

ಸಂಪುಟ ರಚನೆ ಸಂಬಂಧ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪಗೆ ವರಿಷ್ಠರೊಂದಿಗೆ ಈ ಕುರಿತು ಚರ್ಚಿಸಲು ಸಾಧ್ಯವಾಗಲಿಲ್ಲ. ಬುಧವಾರ ಮಧ್ಯಾಹ್ನ 12 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಯಡಿಯೂರಪ್ಪ ಅವರು ಭೇಟಿಯಾಗಿ ಚರ್ಚಿಸಬೇಕಿತ್ತು. ಆದರೆ, ಮಂಗಳವಾರ ರಾತ್ರಿ ಸುಷ್ಮಾ ಸ್ವರಾಜ್‌ ಅವರ ಅಕಾಲಿಕ ನಿಧನದಿಂದ ಅಮಿತ್‌ ಶಾ ಅವರ ಪೂರ್ವ ಯೋಜಿತ ಕಾರ್ಯಕ್ರಮಗಳು ಬಹುತೇಕ ಏರು ಪೇರಾದವು.

ಸಾಧ್ಯವಾಗದ ಚರ್ಚೆ: ಅಮಿತ್‌ ಶಾ ಅವರ ಭೇಟಿ ಸಾಧ್ಯವಾಗಿದ್ದರೆ ಸಂಪುಟ ರಚನೆ ಕುರಿತು ಚರ್ಚಿಸಿ ಅಂತಿಮವಾಗುವ ನಿರೀಕ್ಷೆ ಇತ್ತು. ಆದರೆ, ಚರ್ಚೆ ನಡೆಸಲು ಸಾಧ್ಯವಾಗದ ಕಾರಣ ಸಂಪುಟ ರಚನೆ ಪ್ರಕ್ರಿಯೆ ಹಾಗೆಯೇ ಉಳಿದಂತಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಮೊದಲಿಗೆ ಅತ್ತ ಗಮನ ಹರಿಸಬೇಕು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಸಂಪುಟ ರಚನೆ ಬಗ್ಗೆ ಚರ್ಚಿಸುವುದು ಸೂಕ್ತ ಎಂದು ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬರಿಗೈನಲ್ಲಿ ವಾಪಾಸ್ಸಾಗುವಂತಾಯಿತು. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟ ಯಡಿಯೂರಪ್ಪ ಅವರು, ಸಂಜೆ 5ರ ಹೊತ್ತಿಗೆ ಡಾಲರ್ ಕಾಲೋನಿ ನಿವಾಸ ತಲುಪಿದರು. ಸಂಜೆ 5.45ರ ಹೊತ್ತಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಕ್ಷಣಾ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.

ಆಕಾಂಕ್ಷಿಗಳಲ್ಲಿ ತಳಮಳ: ಬಿಜೆಪಿ ಸರ್ಕಾರ ರಚನೆಯಾಗಿ 13 ದಿನಗಳಾದರೂ ಸಂಪುಟ ರಚನೆಯಾಗದ ಕಾರಣ ಸಚಿವಾಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಯಾಗಿದೆ. ವಿಶ್ವಾಸಮತ ಸಾಬೀತುಪಡಿಸಿದ ನಂತರ ಕೆಲವೇ ದಿನಗಳಲ್ಲಿ ಸಂಪುಟ ರಚನೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಸಚಿವಾಕಾಂಕ್ಷಿಗಳಿದ್ದರು. ಆದರೆ 10 ದಿನ ಕಳೆದರೂ ಸಂಪುಟ ರಚನೆಗೆ ವರಿಷ್ಠರಿಂದ ಹಸಿರು ನಿಶಾನೆ ಸಿಗದ ಕಾರಣ ತಮಗೆ ಸಂಪುಟದಲ್ಲಿ ಅವಕಾಶ ಸಿಗುವುದೋ, ಇಲ್ಲವೋ ಎಂಬ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಜತೆಗೆ, ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ದಿನಾಂಕ, ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ವರಿಷ್ಠರ ನಡೆ ಸಚಿವಾಕಾಂಕ್ಷಿಗಳಲ್ಲಿ ಇನ್ನಷ್ಟು ಒತ್ತಡ ಸೃಷ್ಟಿಸಿದೆ ಎನ್ನಲಾಗಿದೆ.

ಕೆಲ ದಿನಗಳ ಬಳಿಕ ದೆಹಲಿಗೆ: ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಹಾಗೂ ಸುಷ್ಮಾ ಸ್ವರಾಜ್‌ ಅವರ ನಿಧನದ ಹಿನ್ನೆಲೆಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಕೆಲ ದಿನಗಳ ಬಳಿಕ ದೆಹಲಿಗೆ ಭೇಟಿ ನೀಡಿ ಚರ್ಚೆ ನಡೆಸುವುದಾಗಿ ಯಡಿಯೂರಪ್ಪನವರ ನೇತೃತ್ವದ ನಿಯೋಗವೇ ತಿಳಿಸಿತು. ಇದಕ್ಕೆ ಹೈಕಮಾಂಡ್‌ ಸಮ್ಮತಿಸಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಇಲ್ಲವೇ ಮುಂದಿನ ವಾರದಲ್ಲಿ ಯಡಿಯೂರಪ್ಪ ನೇತೃತ್ವದ ನಿಯೋಗ ಮತ್ತೂಮ್ಮೆ ವರಿಷ್ಠರ ಭೇಟಿಗೆ ದೆಹಲಿ ಯಾತ್ರೆ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ತಲೆದೋರಿರುವ ಹಿನ್ನೆಲೆಯಲ್ಲಿ ಮೊದಲಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ. ನಂತರ ಸಂಪುಟ ರಚನೆ ಬಗ್ಗೆ ಚರ್ಚಿಸೋಣ ಎಂದು ವರಿಷ್ಠರು ಸೂಚಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿಯವರು ಸೇರಿದಂತೆ ಎಲ್ಲ ಸಂಸದರು, ಶಾಸಕರಿಗೆ ಆಯಾ ಕ್ಷೇತ್ರಗಳಲ್ಲಿ ಇರುವಂತೆ ಸೂಚನೆ ನೀಡಿದ್ದೇನೆ. ಆ.10 ಇಲ್ಲವೇ 11ಕ್ಕೆ ಮತ್ತೆ ದೆಹಲಿಗೆ ತೆರಳಲಿದ್ದೇನೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next