Advertisement

ಭತ್ತ ಸೇರಿ 14 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

12:51 AM Jun 20, 2024 | Team Udayavani |

ಹೊಸದಿಲ್ಲಿ: ಮಂಗಳವಾರ ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ನೇತೃತ್ವದ ಸರಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 2024-25ನೇ ಸಾಲಿಗೆ ಭತ್ತ, ರಾಗಿ, ಜೋಳ, ತೊಗರಿ ಬೇಳೆ ಸೇರಿ 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಹೆಚ್ಚಿಸಲು ತೀರ್ಮಾನಿಸಿದೆ.

Advertisement

ತೊಗರಿ ಬೇಳೆಗೆ 550 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದ್ದು, ಒಟ್ಟು ಬೆಂಬಲ ಬೆಲೆ 7,550 ರೂ.ಗೆ ಏರಿಕೆಯಾಗಿದೆ. ಹರಿಯಾಣ, ಮಹಾರಾಷ್ಟ್ರ, ಝಾರ್ಖಂಡ್‌ ಮತ್ತು ದಿಲ್ಲಿ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎನ್ನಲಾಗಿದೆ.

ಜೂ. 9ರಂದು ಪ್ರಧಾನಿಯಾಗಿ 3ನೇ ಬಾರಿಗೆ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ 2ನೇ ಬಾರಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸಾಮಾನ್ಯ ಭತ್ತದ ಎಂಎಸ್‌ಪಿ 117 ರೂ. ಏರಿಕೆಯೊಂದಿಗೆ ಪ್ರತೀ ಕ್ವಿಂಟಾಲ್‌ಗೆ 2,300 ರೂ.ಗಳಾದರೆ, ಎ ಗ್ರೇಡ್‌ ಭತ್ತದ ಎಂಎಸ್‌ಪಿ ಹೆಚ್ಚಳದಿಂದಾಗಿ 2,320 ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದರು.

ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (ಸಿಎಸಿಪಿ) ಶಿಫಾರಸಿನ ಅನುಸಾರ ಎಂಎಸ್‌ಪಿಯನ್ನು ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಕನಿಷ್ಠ ಬೆಂಬಲ ಬೆಲೆಯು ಉತ್ಪಾದನ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಇರಬೇಕು ಎಂದು ಸರಕಾರವು ಸ್ಪಷ್ಟವಾದ ನೀತಿ ನಿರ್ಧಾರವನ್ನು 2018ರ ಬಜೆಟ್‌ನಲ್ಲಿ ಘೋಷಿಸಿತ್ತು. ಅಲ್ಲದೆ ಇತ್ತೀಚೆಗೆ ಉತ್ಪಾದನಾ ವೆಚ್ಚವೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಿಎಸಿಪಿ ನೀಡಿದ ವೈಜ್ಞಾನಿಕ ಶಿಫಾರಸಿನ ಅನುಸಾರ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಯಾವ ಬೆಳೆಗೆ ಎಷ್ಟು “ಬೆಂಬಲ’ ಹೆಚ್ಚಳ?

ಬೆಳೆ ಎಂಎಸ್‌ಪಿ (ಪ್ರತೀ ಕ್ವಿಂಟಾಲ್‌) ಸಾಮಾನ್ಯ ಭತ್ತ 117 ರೂ., ಹೈಬ್ರಿಡ್‌ ಬಿಳಿಜೋಳ 191 ರೂ., ಸಜ್ಜೆ 125 ರೂ., ರಾಗಿ 444 ರೂ., ಮೆಕ್ಕೆಜೋಳ 135 ರೂ., ತೊಗರಿಬೇಳೆ 550 ರೂ.ಹೆಸರುಬೇಳೆ 124 ರೂ., ಉದ್ದಿನಬೇಳೆ 450 ರೂ., ನೆಲಗಡಲೆ 406 ರೂ., ಸೂರ್ಯಕಾಂತಿ 520 ರೂ., ಸೋಯಾಬೀನ್‌(ಹಳದಿ) 292 ರೂ., ಎಳ್ಳು 632 ರೂ., ಹುಚ್ಚೆಳ್ಳು 983 ರೂ., ಹತ್ತಿ 501 ರೂ.

Advertisement

Udayavani is now on Telegram. Click here to join our channel and stay updated with the latest news.

Next