Advertisement

ಒಂದು ವಾರದೊಳಗೆ ಮರಳು ಸಮಸ್ಯೆ ಇತ್ಯರ್ಥ: ಬಿ.ವೈ. ರಾಘವೇಂದ್ರ

09:08 PM Aug 16, 2019 | Team Udayavani |

ಬೈಂದೂರು: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಹಲವು ತಿಂಗಳುಗಳಿಂದ ಮರಳು ಸಮಸ್ಯೆ ವ್ಯಾಪಕವಾಗಿದೆ. ಜಿಲ್ಲಾಡಳಿತ ಕಾನೂನಿನ ಕಾರಣ ನೀಡಿ ಸಮಜಾಯಿಸುತ್ತಿದೆ. ಹೀಗಾದರೆ ಮಳೆಯಲ್ಲಿ ಮನೆ ಕಳೆದುಕೊಂಡವರು ಕಟ್ಟಡ ನಿರ್ಮಿಸುವುದಾದರು ಹೇಗೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುವುದಾದರು ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಒಂದು ವಾರದೊಳಗೆ ರಾಜ್ಯ ಸರಕಾರದ ಸಹಕಾರದಲ್ಲಿ ಮರಳು ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಅವರು ಬೈಂದೂರು ರೋಟರಿ ಭವನದಲ್ಲಿ ನಡೆದ ಸಂಸದರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅಧಿಕಾರಿಗಳು ರೈತರ ಕುರಿತು ಸ್ವಲ್ಪ ಧಾರಾಳತನ ತೋರಿಸಬೇಕು. ಕಾನೂನುಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಬಾರದು. ಬದಲಾಗಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು ಎಂದರು.

ನರೇಗಾ ಯೋಜನೆಯಲ್ಲಿ ಈಗಾಗಲೇ ಉಡುಪಿ ಜಿಲ್ಲೆಯಿಂದ ಕೇವಲ 60 ಕೋಟಿ ರೂ. ಪ್ರಸ್ತಾವನೆ ಹೋಗಿದೆ. ನೆರೆ ಹಾವಳಿಯಿಂದ ಉಂಟಾದ ಅವಘಡಗಳ ಕಾಮಗಾರಿಗಳಿಗೂ ಕಾನೂನು ಚೌಕಟ್ಟಿನಲ್ಲಿ ಬಳಸಿಕೊಳ್ಳಬೇಕು. ಸ್ವದೇಶ್‌ ದರ್ಶನ ಯೋಜನೆಯಲ್ಲಿ ಸೋಮೇಶ್ವರ ಪ್ರಗತಿಗೆ ಅವಕಾಶ ಪರಿಗಣಿಸಲಾಗುವುದು. ಕೆ.ಎಸ್‌.ಆರ್‌.ಟಿ.ಸಿ. ಬಸ್ಸು ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಇದರ ಜತೆಗೆ ಬಸ್‌ ಡಿಪೋ ಕೂಡ ಮಂಜೂರು ಮಾಡುವ ಚಿಂತನೆಯಿದೆ.

ಇದರಿಂದಾಗಿ ಗ್ರಾಮೀಣ ಭಾಗಗಳಿಗೆ ಉತ್ತಮ ಬಸ್‌ ಸೇವೆ ದೊರೆಯಲಿದೆ. ಅಗ್ನಿಶಾಮಕ ದಳ, ನ್ಯಾಯಾಲಯ, ಮಿನಿ ವಿಧಾನಸೌಧ ನಿರ್ಮಾಣದ ಕುರಿತು ಸಂಬಂಧಪಟ್ಟ ಇಲಾಖೆಯಿಂದ ತಕ್ಷಣ ಪ್ರಕ್ರಿಯೆ ಪೂರೈಸಿ ರಾಜ್ಯ ಸರಕಾರದ ಅನುದಾನ ಮಂಜೂರು ಮಾಡಿಸಿಕೊಡಲಾಗುವುದು ಎಂದರು.

ಮಾತ್ರವಲ್ಲದೆ ನೆರೆ ಹಾವಳಿ ಇನ್ನಿತರ ಸಮಸ್ಯೆಗಳಿಗೆ ಬೈಂದೂರಿನಲ್ಲಿ ಆಗಬೇಕಾಗಿರುವ ಕಾಮಗಾರಿಗಳು ಪ್ರತ್ಯೇಕ ವಿಂಗಡಿಸಲು ಸಹಾಯಕ ಕಮಿಷನರ್‌ರವರಿಗೆ ಸೂಚಿಸಿದರು. ಐ.ಟಿ.ಐ. ಸ್ವಂತ ಕಟ್ಟಡ, ಕ್ರೀಡಾಂಗಣ, ಒಳಾಂಗಣ ಕ್ರಿಡಾಂಗಣ ಮತ್ತು ಪೆವಿಲಿಯನ್‌ ಈಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ತಾಲೂಕು ಆಸ್ಪತ್ರೆಗಳನ್ನು ನಿರ್ಮಿಸು ವುದು, ವಂಡ್ಸೆ ಸಬ್‌ಸ್ಟೇಷನ್‌ ಮಂಜೂರಾತಿ ಮಾಡಲಾಗುವುದು, ಸಮುದ್ರ ಕೊರೆತ ಹಾಗೂ ಕಾಮಗಾರಿಗಳಿಗೆ 200 ಲಕ್ಷ ರೂ. ಅಂದಾಜು ಪಟ್ಟಿ ಇಲಾಖೆ ಸಿದ್ಧಪಡಿಸಿದೆ. ಇದರ ವಿವರ ಪಡೆದು ಸಾದ್ಯತೆ ಆಧಾರದಲ್ಲಿ ಪರಿಗಣಿಸಲಾಗುವುದು ಎಂದರು. ಮಾತ್ರವಲ್ಲದೆ ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಿ ರಾಜ್ಯ ಸರಕಾರದಿಂದ ಗರಿಷ್ಟ ಅನುದಾನ ನೀಡುವುದಾಗಿ ತಿಳಿಸಿದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಬೈಂದೂರು ಕ್ಷೇತ್ರದಲ್ಲಿ ಯಾವುದೇ ಕಾಮಗಾರಿಯನ್ನು ಕಳಪೆಯಾಗಲು ಬಿಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು.ವಾರಾಯಿ ಬಲದಂಡೆ ಯೋಜನೆಗೆ 78 ಕೋಟಿ ರೂ. ಹಾಗೂ ಸುಬ್ಟಾರಡಿ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ. ಮಂಜೂರಾಗಿದೆ. ಸಂಸದರ ಸಹಕಾರದೊಂದಿಗೆ ಬೈಂದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸುತ್ತೇನೆ ಎಂದರು.

ಈ ಸಂದರ್ಭ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಣ್ಣ, ಜಂಟಿ ಕಾರ್ಯದರ್ಶಿ ರಂಗಪ್ಪ ಐ.ಎ.ಎಸ್‌., ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ರೂಪೇಶ್‌, ಕುಂದಾಪುರ ತಹಶೀಲ್ದಾರ ತಿಪ್ಪೇಸ್ವಾಮಿ, ಕುಂದಾಪುರ ಡಿ.ವೈ.ಎಸ್‌.ಪಿ. ದಿನೇಶ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ತಹಶೀಲ್ದಾರ್‌ ಬಿ.ಪಿ. ಪೂಜಾರ್‌ ಸ್ವಾಗತಿಸಿದರು. ಕುಂದಾಪುರ ಸಹಾಯಕ ಕಮಿಷನರ್‌ ಮಧುಕೇಶ್ವರ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಸಾಕಾರಗೊಳ್ಳಲಿದೆ
ಬೈಂದೂರು ಅಭಿವೃದ್ಧಿ ಕನಸು
ಬೈಂದೂರಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಂಸದರ ಆಸಕ್ತಿ ಹಾಗೂ ಅಧಿಕಾರಿಗಳಿಂದ ಪಡೆದ ಮಾಹಿತಿಗಳು ಬೈಂದೂರು ತಾಲೂಕು ಅಭಿವೃದ್ಧಿಯ ಕನಸು ಸಾಕಾರಗೊಳ್ಳುವ ಸೂಚನೆ ನೀಡಿದಂತಿದೆ. ಪ್ರತಿಯೊಂದು ಇಲಾಖೆಯಿಂದ ವಿವರವಾದ ಮಾಹಿತಿ ಪಡೆದು ಯಾವುದೇ ಕಾರಣಕ್ಕೂ ಇಲಾಖೆಯ ಪ್ರಕ್ರಿಯೆಗಳು ತಟಸ್ಥಗೊಳ್ಳಬಾರದು. ಬೆಂಗಳೂರಿನಲ್ಲಿ ಬೈಂದೂರು ಕ್ಷೇತ್ರದ ಸಮಸ್ಯೆಗಳಿಗಾಗಿ ಸಹಕರಿಸಲು ವಿಶೇಷ ಅಧಿಕಾರಿಗಳಿದ್ದಾರೆ.ಇವರನ್ನು ಸಂಪರ್ಕಿಸಿ. ಯಾವುದೇ ಹಂತದಲ್ಲಿ ಕಚೇರಿ ಕಾರಣಗಳಿಂದ ಕಡತಗಳ ವಿಲೇವಾರಿಗೆ ಹಿನ್ನೆಡೆಯಾದರೆ ತನ್ನನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next