Advertisement

ಉಪ ಚುನಾವಣೆ: ಸುಗಮ ಮತದಾನಕ್ಕೆ ಸಕಲ ವ್ಯವಸ್ಥೆ

03:18 PM Oct 27, 2021 | Team Udayavani |

ಹಾವೇರಿ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅ. 30ರಂದು ಮತದಾನ ನಡೆಯಲಿದ್ದು, ಸುಗಮ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಬಹಿರಂಗ ಪ್ರಚಾರಕ್ಕೆ ಅ. 27ರಂದು ಸಂಜೆ 7ಕ್ಕೆ ತೆರೆ ಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅ. 30ರಂದು ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಎಕ್ಸಿಟ್‌ ಪೋಲ್‌ ನಿರ್ಬಂಧಿಸಲಾಗಿದೆ ಮತ್ತು ಮತದಾನ ಸಮೀಕ್ಷೆಯನ್ನು ಪ್ರಚುರ ಪಡಿಸುವಂತಿಲ್ಲ. ಮತದಾನ ಮುಕ್ತಾಯದ 48 ಗಂಟೆ ಪೂರ್ವದ ಅವಧಿಯಲ್ಲಿ ಮತದಾನ ಕುರಿತ ಅಭಿಪ್ರಾಯ ಸಮೀಕ್ಷೆ(ಒಪಿನಿಯನ್‌ ಪೋಲ್‌) ನಿರ್ಬಂಧಿಸಲಾಗಿದೆ ಎಂದರು.

ಮತದಾನ ಮುಕ್ತಾಯದ ಹಿಂದಿನ 72 ಗಂಟೆಗಳ ಅವಧಿ-ನಿಶ್ಯಬ್ದ ಅವಧಿ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಚುನಾವಣಾ ಪ್ರಚಾರ, ಬಹಿರಂಗ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ. ಆದರೆ ಮನೆ ಮನೆ ಪ್ರಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ ಒಂದು ಗುಂಪಿನಲ್ಲಿ ಐದು ಜನರಿಗಿಂತ ಹೆಚ್ಚು ಜನರು ಒಟ್ಟಾಗಿ ಮನೆ ಮನೆ ಪ್ರಚಾರ ಮಾಡುವಂತಿಲ್ಲ. ಈ ನಿಯಮ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ. ಚುನಾವಣಾ ನಿಯಮಗಳ ಜೊತೆಗೆ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದರು.

ತಾರಾ ಪ್ರಚಾರಕರು ಸೇರಿದಂತೆ ರಾಜಕೀಯ ಮುಖಂಡರು ಸೇರಿದಂತೆ ರಾಜಕೀಯ ಉದ್ದೇಶಕ್ಕಾಗಿ ಕ್ಷೇತ್ರಕ್ಕೆ ಆಗಮಿಸಿದ ಹೊರಗಿನವರು ಅ. 27ರಂದು ಸಂಜೆ 7ರ ಬಳಿಕ ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ. ಆದರೆ ಈ ಷರತ್ತು ಅಭ್ಯರ್ಥಿಗಳಿಗೆ ಹಾಗೂ ಅಧಿಕೃತ ಏಜೆಂಟರುಗಳಿಗೆ ಅನ್ವಯಿಸುವುದಿಲ್ಲ. ಪಕ್ಷದ ವಾಹನಗಳನ್ನು ಬಳಸುವಂತಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಮತ ಪ್ರಚಾರ ಮಾಡುವಂತಿಲ್ಲ. ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಮತ ಕೇಳುವಹಾಗಿಲ್ಲ. ಧ್ವನಿವರ್ಧಕ ಬಳಸುವಂತಿಲ್ಲ ಎಂದು ತಿಳಿಸಿದರು.

ಮದುವೆಗೆ ಅನುಮತಿ ಕಡ್ಡಾಯ

Advertisement

72 ತಾಸಿನ ಅವಧಿಯಲ್ಲಿ ಮತ ಕ್ಷೇತ್ರದ ವ್ಯಾಪ್ತಿಯೋಳಗೆ ಹಾಗೂ ಮತ ಕ್ಷೇತ್ರದ ಐದು ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ಕ್ಷೇತ್ರ ಚುನಾವಣಾಧಿಕಾರಿ(ಆರ್‌ಒ)ಗಳಿಂದ ಅನುಮತಿ ಕಡ್ಡಾಯವಾಗಿದೆ. ಮದುವೆ ಹೊರತುಪಡಿಸಿದಂತೆ ಯಾವುದೇ ರಾಜಕೀಯ ಪಕ್ಷಗಳು ಗುಂಪು ಭೋಜನ ಏರ್ಪಡಿಸುವುದನ್ನು ನಿಷೇಧಿಸಿದೆ ಎಂದು ತಿಳಿಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲ ರೀತಿಯ ವಾಹನಗಳನ್ನು ಕಡ್ಡಾಯ ತಪಾಸಣೆಗೆ ಒಳಪಡಿಸಲಾಗಿದೆ. ಗಡಿಭಾಗದಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌, ಅಬಕಾರಿ, ಸೆಕ್ಟರ್‌ ಅಧಿಕಾರಿಗಳ ತಂಡಗಳು ವ್ಯಾಪಕ ಗಸ್ತು ನಡೆಸಲಿವೆ ಎಂದರು.

ಅಭ್ಯರ್ಥಿಗೆ ಎರಡು ವಾಹನ ಮಾತ್ರ

ಓರ್ವ ಅಭ್ಯರ್ಥಿಗೆ ಎರಡು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ವಾಹನ ಚಾಲಕ ಸೇರಿದಂತೆ ಒಂದು ವಾಹನದಲ್ಲಿ ಮೂರು ಜನರಿಗೆ ಮಾತ್ರ ಓಡಾಡಲು ಅವಕಾಶವಿದೆ. ಅಭ್ಯರ್ಥಿ ಹೆಸರಿಗೆ ಅನುಮತಿ ಪಡೆದ ವಾಹನದಲ್ಲಿ ಅಭ್ಯರ್ಥಿ ಅಲ್ಲದೆ ಬೇರೆಯವರು ಬಳಸುವಂತಿಲ್ಲ. ಮತದಾನ ದಿನ ಮತ್ತು ಮತ ಎಣಿಕೆ ದಿನ ವೀಕ್ಷಣೆ ಅಥವಾ ಮೇಲ್ವಿಚಾರಣೆಗಾಗಿ ಯಾವುದೇ ರಾಜಕೀಯ ಪಕ್ಷಗಳು ಹೆಲಿಕಾಪ್ಟರ್‌ ಹಾಗೂ ಏರ್‌ ಕ್ಯಾಪ್ಟರ್‌ ಬಳಸುವಂತಿಲ್ಲ ಎಂದರು.

ಮತಗಟ್ಟೆಗೆ ಮತದಾರರನ್ನು ವಾಹನದಲ್ಲಿ ಕರೆದುಕೊಂಡು ಬರುವುದು ಹಾಗೂ ಮನೆಗೆ ವಾಹನದಲ್ಲಿ ಡ್ರಾಪ್‌ ಮಾಡುವುದನ್ನು ನಿರ್ಬಂಧಿಸಲಾಗಿದೆ. ಮತಗಟ್ಟೆಯ 100 ಮೀಟರ್‌ ಅಂತರದೊಳಗೆ ಪ್ರಚಾರ ಮಾಡುವಂತಿಲ್ಲ. 200 ಮೀಟರ್‌ ವ್ಯಾಪ್ತಿಯ ಹೊರಗೆ ರಾಜಕೀಯ ಪಕ್ಷದ ಚುನಾವಣೆ ಬೂತ್‌ ಸ್ಥಾಪಿಸಬಹುದು. ಮತಗಟ್ಟೆಯ 100 ಮೀಟರ್‌ ವ್ಯಾಪ್ತಿಯೊಳಗೆ ಮೊಬೈಲ್‌ ಫೋನ್‌, ಕಾಡಲೆಸ್‌ ಫೋನ್‌ ನಿಷೇಧಿಸಲಾಗಿದೆ. ರಾಜಕೀಯ ಪೋಸ್ಟ್‌, ಬ್ಯಾನರ್‌, ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವಂತಿಲ್ಲ. ಮತದಾರರಿಗೆ ಪಕ್ಷದ ಚಿಹ್ನೆ, ಹೆಸರು ಇರುವ ಮತದಾರರ ಚೀಟಿ ನೀಡುವಂತಿಲ್ಲ. ಮತಗಟ್ಟೆ ವ್ಯಾಪ್ತಿಯಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ| ಎನ್‌. ತಿಪ್ಪೇಸ್ವಾಮಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next