ಮಂಗಳೂರು: ಶುಕ್ರವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿ ನಡೆದ ದರೋಡೆ ಕೃತ್ಯ ಮಂಗಳೂರು ಆಸುಪಾಸಿನ ತಂಡವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ ಸ್ಥಳೀಯ ಪರಿಸರದ ಹಲವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ತನಿಖೆಗೆ ಹೊರರಾಜ್ಯಕ್ಕೆ ತೆರಳುವ ಅಗತ್ಯ ಕಂಡುಬಂದಿಲ್ಲ. ವಾಹನದ ಗುರುತು ಪತ್ತೆ ಮಾಡುವ ಕೆಲಸವೂ ನಡೆದಿದೆ. ದರೋಡೆ ಕೋರರನ್ನು ಶೀಘ್ರ ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಜನರ ನಡುವೆ ಮರೆಯಾಗಿದ್ದ ದರೋಡೆಕೋರರ ಕಾರುದರೋಡೆ ಕೃತ್ಯ ನಡೆದ ಕೆಲವೇ ಹೊತ್ತಿನಲ್ಲಿ ಪದ್ಮನಾಭ ಕೋಟ್ಯಾನ್ ಅವರ ಕಾರ್ಮಿಕರ ಮೂಲಕ ಅವರ ಸಂಬಂಧಿಕರು, ಸ್ನೇಹಿತರಿಗೆ ಮಾಹಿತಿ ಹೋಗಿತ್ತು.
“ಧಣಿಗಳಿಗೆ ಕೆಲವರು ಹೊಡೆಯುತ್ತಿದ್ದಾರೆ’ ಎಂದಷ್ಟೇ ಕಾರ್ಮಿಕರು ಮಾಹಿತಿ ರವಾನಿಸಿದ್ದರು. ಅದರಂತೆ ನೂರಕ್ಕೂ ಅಧಿಕ ಮಂದಿ ಕೋಟ್ಯಾನ್ ಅವರ ಮನೆಯ ಕಡೆಗೆ ಧಾವಿಸಿದ್ದರು. ಆ ವೇಳೆ ದರೋಡೆಕೋರರ ಕಾರು ಸಾಗಿತ್ತು. ಆದರೆ ಅದು ದರೋಡೆಕೋರರು ಆಗಮಿಸಿದ್ದ ಕಾರು ಎಂಬುದು ಬರುತ್ತಿದ್ದವರ ಅರವಿಗೆ ಬಂದಿರಲಿಲ್ಲ. ದರೋಡೆಕೋರರು ಬಾಡಿಗೆ ಕಾರು ಬಳಸಿರುವ ಸಾಧ್ಯತೆ ಇದೆ ಹೇಳ ಲಾಗುತ್ತಿದೆ. ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಪದ್ಮನಾಭ ಕೋಟ್ಯಾನ್ ಆಸ್ಪತ್ರೆಯಿಂದ ಬಿಡುಗಡೆ
ಚೂರಿ ಇರಿತ ಮತ್ತು ದರೋಡೆ ಕೋರರೊಂದಿಗೆ ಉರುಳಾಟದ ಸಂದರ್ಭ ಗಾಯ ೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪದ್ಮನಾಭ ಕೋಟ್ಯಾನ್ ಅವರು ರವಿವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಅದೇ ಪರಿಸರದಲ್ಲಿ ನಾಲ್ಕು ದಿನಗಳ ಮೊದಲೂ ಕಳವು
ದರೋಡೆ ನಡೆದ ನಾಲ್ಕು ದಿನಗಳ ಮೊದಲು ಅದೇ ಪರಿಸರದ ದೈವಸ್ಥಾನವೊಂದರಲ್ಲಿ ಕಳವು ನಡೆದಿತ್ತು ಎಂದು ತಿಳಿದುಬಂದಿದೆ.