ಬೆಂಗಳೂರು: ಉದ್ಯಮಿಗೆ ಸಿನಿಮಾ ನಿರ್ಮಿಸುವುದಾಗಿ 40 ಲಕ್ಷ ರೂ. ವಂಚಿಸಿದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಶೋಕನಗರ ಠಾಣೆ ಪೊಲೀಸರು ಸದ್ಯದಲ್ಲೇ ಕೋರ್ಟ್ಗೆ ಬಿ-ರಿಪೋರ್ಟ್ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
34 ವರ್ಷದ ಉದ್ಯಮಿಯೊಬ್ಬರು ನೀಡಿದ ದೂರಿನ ಅನ್ವಯ ಅಶೋಕನಗರ ಠಾಣೆಯಲ್ಲಿ ದಿವ್ಯಶ್ರೀ, ದಿಲೀಪ್ ಹಾಗೂ ರವಿಕುಮಾರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕುಟುಂಬ ಎಂಬ ಆ್ಯಪ್ ಮೂಲಕ ಉದ್ಯಮಿಗೆ ದಿವ್ಯಶ್ರೀ 2021ರಲ್ಲಿ ಪರಿಚಿತರಾಗಿದ್ದಾರೆ. ಆಕೆ ತಾನು ಚಲನಚಿತ್ರ ರಂಗದಲ್ಲಿ ತೊಡಗಿಸಿಕೊಂಡಿದ್ದು ಸಿನಿಮಾವೊಂದನ್ನು ನಿರ್ಮಿಸುತ್ತಿರುವುದಾಗಿ ನಂಬಿಸಿದ್ದಾಳೆ. ಬಳಿಕ ಸಂಕಷ್ಟದ ನೆಪವೊಡ್ಡಿ 4.25 ಲಕ್ಷ ರೂ.ಗಳನ್ನು ಉದ್ಯಮಿಯಿಂದ ಪರಿಚಯಸ್ಥರೊಬ್ಬರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು, ಹಲವು ವರ್ಷ ಕಳೆದರೂ ಉದ್ಯಮಿಗೆ ಹಿಂದಿರುಗಿಸಿರಲಿಲ್ಲ. ಸಾಲ ವಾಪಸ್ ಕೊಡುವಂತೆ ಕೇಳಿದಕ್ಕೆ ಕಾವ್ಯಾ ಲೈಂಗಿಕ ಕ್ರಿಯೆಗೆ ಪ್ರೇರೇಪಿಸಿ, ಆಕೆ ಜತೆಗಿನ ತನ್ನ ಖಾಸಗಿ ದೃಶ್ಯಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣ ಹಾಕುವುದಾಗಿ ಬ್ಲ್ಯಾಕ್ಮೇಲ್ ಮಾಡಿ, ಹೀಗೆ ತನ್ನನ್ನು ಹನಿಟ್ರ್ಯಾಪ್ ಮಾಡಿ 40 ಲಕ್ಷ ರೂ. ಸುಲಿಗೆ ಮಾಡಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದರು.
ಪ್ರಕರಣದಲ್ಲಿ ಯುವತಿ ವಿರುದ್ಧ ಯಾವುದೇ ಸಾಕ್ಷ್ಯಕಂಡು ಬಂದಿಲ್ಲ. ಜತೆಗೆ ಹನಿಟ್ರ್ಯಾಪ್ ನಡೆದಿಲ್ಲ. ಇದೊಂದು ಸುಳ್ಳು ಕೇಸ್ ಎಂಬುದು ತಿಳಿದು ಬಂದಿರುವ ಕಾರಣ ಬಿ-ರಿಪೋರ್ಟ್ ಸಲ್ಲಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.