Advertisement

ಮದ್ಯದ ಬಿಲ್‌ ಪಾವತಿಗೆ ಜಗಳ ರೌಡಿಶೀಟರ್‌ನ ಬರ್ಬರ ಕೊಲೆ

12:41 PM May 22, 2017 | Team Udayavani |

ಬೆಂಗಳೂರು: ಮದ್ಯ ಸೇವಿಸಿದ ಬಿಲ್‌ ಪಾವತಿಸುವ ವಿಚಾರದಲ್ಲಿ ಸ್ನೇಹಿತರ ನಡುವೆ ನಡೆದ ಜಗಳ, ರೌಡಿಶೀಟರ್‌ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಚಂದ್ರಾಲೇಔಟ್‌ನ ಗಂಗೊಂಡನ ಹಳ್ಳಿಯ ಬಾರ್‌ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

Advertisement

ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯ ರೌಡಿಶೀಟರ್‌ ಅರುಣ (26) ಅಲಿಯಾಸ್‌ ವಾಲೆ ಕೊಲೆಯಾದವ. ಈತನನ್ನು ಹತ್ಯೆಗೈದ ಆರ್‌.ಆರ್‌.ನಗರದ ರೌಡಿಶೀಟರ್‌ ಅರುಣ್‌ಕುಮಾರ್‌ ಅಲಿಯಾಸ್‌ ತ್ಯಾಪೆ ಹಾಗೂ ಆತನ ಸಹಚರರಿಗಾಗಿ ಶೋಧ ಕಾರ್ಯ ನಡೆ ಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರುಣ ಶನಿವಾರ ರಾತ್ರಿ ಗಂಗೊಂಡನ ಹಳ್ಳಿಯಲ್ಲಿರುವ ರವಿ ಬಾರ್‌ನಲ್ಲಿ ಸಂಜೆ 4 ಗಂಟೆಯಿಂದಲೇ ನಾಲ್ವರು ಸ್ನೇಹಿತರ ಜತೆ ಮದ್ಯ ಸೇವಿಸಿದ್ದು, ಕುಡಿದಿದ್ದ ಮದ್ಯದ ಬಿಲ್‌ 5 ಸಾವಿರ ರೂ. ದಾಟಿತ್ತು. ತಡರಾತ್ರಿ ಬಿಲ್‌ ಪಾವತಿಸುವ ವಿಚಾರವಾಗಿ ಸ್ನೇಹಿತರ ನಡುವೆಯೇ ಗಲಾಟೆಯಾಗಿದೆ.

ಆ ವೇಳೆ ಆರೋಪಿ ಅರುಣ್‌ ಕುಮಾರ್‌ ಮತ್ತು ಬೆಂಬ ಲಿಗರು ರೌಡಿಶೀಟರ್‌ ಅರುಣ್‌ಗೆ ಬಿಲ್‌ ಪಾವತಿಸುವಂತೆ ತಾಕೀತು ಮಾಡಿದ್ದರು. ಆದರೆ, ಬಿಲ್‌ ಪಾವತಿ ಮಾಡಲು ಆತ ನಿರಾಕರಿಸಿದ್ದರಿಂದ ಅರುಣ್‌ ಜತೆ ಜಗಳಕ್ಕಿಳಿದ ಆರೋಪಿಗಳು, ಬಾರ್‌ನ ವಸ್ತುಗಳನ್ನು ಚೆಲ್ಲಾ ಪಿಲ್ಲಿ ಮಾಡಿ, ಅರುಣ್‌ ಮೇಲೆ ಗ್ಯಾಸ್‌ ಸಿಲಿಂಡರ್‌ ಬಿಸಾಡಿ ದಾಂಧಲೆ ನಡೆದಿದ್ದಾರೆ.

ನಂತರ ಅಡುಗೆ ಮನೆಯಲ್ಲಿ ಬಳಸುವ ಕುರ್ಪಿಯಿಂದ (ಅಡುಗೆ ಮಾಡುವ ಸಲಕರಣೆ) ಅರುಣ್‌ ತಲೆಗೆ ಹೊಡೆದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಅರುಣ್‌ ಸ್ಥಳದಲ್ಲೇ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯಾದ ಅರುಣ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ರೌಡಿ ಶೀಟರ್‌ ಆಗಿದ್ದು, ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next