Advertisement

92ರ ವಸಂತಕ್ಕೆ ಹೆಜ್ಜೆಯನ್ನಿರಿಸಿದ “ಬಂಟ ಕುಲಭೂಷಣ’ಎಂ.ಡಿ.ಶೆಟ್ಟಿ

03:33 PM Jun 16, 2019 | Vishnu Das |

ಮುಂಬಯಿ: ಕರ್ಮಭೂಮಿ ಮರಾಠಿ ಮಣ್ಣಿನಲ್ಲಿ ಸಂಘಟನಾ ಚತುರರಾಗಿ ಸಮರ್ಥ ನಾಯಕತ್ವದ ಚುಕ್ಕಾಣಿ ಹಿಡಿದ “ಬಂಟ ಕುಲಭೂಷಣ’, ಹಿರಿಯ ಕನ್ನಡಿಗ ತುಳು-ಕನ್ನಡಿಗರ ನೆಚ್ಚಿನ ಎಂ. ಡಿ. ಶೆಟ್ಟಿ’ ಅವರು ಜೂ. 14ರಂದು 91 ವಸಂತಗಳನ್ನು ಪೂರೈಸಿ ತೊಂಬತ್ತೆರಡರತ್ತ ಹೆಜ್ಜೆಯನ್ನಿರಿಸಿದರು.
ಇತ್ತೀಚೆಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಬೃಹತ್‌ ಸಹಾಯ ಮೇಳದಲ್ಲಿ ಸಂಘದ ವತಿಯಿಂದ ಅವರನ್ನು ಶಾಲು ಹೊದೆಸಿ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಗಣ್ಯಾಥಿಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ತನಗೆ ದೊರೆತ ಪ್ರಶಸ್ತಿಯ ಮೊತ್ತವನ್ನು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಮೂಲಕ ಆರ್ಥಿಕವಾಗಿ ಸಮಾಜ ಬಾಂಧವರಿಗೆ ನೀಡಿದ ಎಂ. ಡಿ. ಶೆಟ್ಟಿ ಅವರ ಮಾನವೀಯ ಗುಣ ಅನುಕರಣೀಯವಾಗಿದೆ.

Advertisement

ಇವರು ಗಂಭೀರ್ಯವುಳ್ಳವರಾಗಿದ್ದರೂ ಅಷ್ಟೇ ಸರಳ ಸಜ್ಜನಿಕೆಗೆ ಪಾತ್ರರಾಗಿದ್ದಾರೆ. ಧರ್ಮನಿಷ್ಠರೂ, ಶಿಸ್ತಿನ ಶಿಪಾಯಿಯೂ ಆಗಿರುವ ಎಂಡಿ ಬದುಕು ಶೈಲಿಯನ್ನು ಭಿನ್ನವಾಗಿ ರೂಢಿಸಿಕೊಂಡವರು. ಯುವಕರು, ಯುವೋದ್ಯಮಿಗಳಿಗೆ ಅಪಾರ ಪ್ರೋತ್ಸಾಹ ನೀಡಿ ವಿಶೇಷವಾಗಿ ಹೊಟೇಲು ಉದ್ಯಮಕ್ಕೆ ಅಪೂರ್ವ ರೀತಿಯ ಬೆಂಬಲ ನೀಡಿದರು. ತುಳು ಕನ್ನಡ-ಮರಾಠಿಗರ ಸಮನ್ವಯಕ, ಪ್ರಭಾವಿ ನಾಯಕ ಇವರಾಗಿದ್ದಾರೆ. ಕರ್ಮಭೂಮಿ ಮಹಾರಾಷ್ಟ್ರದಲ್ಲಿ ಒಟ್ಟಾರೆ ತುಳು-ಕನ್ನಡ ಮರಾಠಿಗರ ಬಾಂಧವ್ಯ ಬೆಸೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಾಡಿನ ಹಲವಾರು ಸ್ವಾತಂತ್ರÂ ಹೋರಾಟಗಾರ, ಪತ್ರಕರ್ತ, ರಾಜಕಾರಣಿಗಳಂತಹ ದಿಗ್ಗಜರೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿರುವ ಇವರು, 1973ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಇಂದಿರಾ ಬ್ರಿಗೇಡ್‌ ಇದರ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡರು. 1977ರಲ್ಲಿ ವಿಶ್ವದ ಹೆಸರಾಂತ ಬಂಟ ಸಮಾಜದ ಸಂಸ್ಥೆಯಾದ ಬಂಟ್ಸ್‌ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಚುನಾಯಿತರಾಗಿ ಸಂಸ್ಥೆಯನ್ನು ಪ್ರತಿಷ್ಠಿತ ಮಟ್ಟಕ್ಕೆ ಬೆಳಿಸಿ ಇಂದಿಗೂ ಬಂಟ ಸಮಾಜದ ಹಿರಿಯ ಮುತ್ಸದ್ಧಿ ಆಗಿಯೇ ಉಳಿದಿದ್ದಾರೆ.

ಸಮಸ್ಯೆಗಳನ್ನು ಮಟ್ಟ ಹಾಕುವಲ್ಲಿ ಎಂ. ಡಿ. ಶೆಟ್ಟಿ ಅವರು ಎತ್ತಿದ ಕೈ. ಸರ್ವರಲ್ಲೂ ಅತ್ಮೀಯರಾಗಿ, ಸೇವೆಯಲ್ಲಿ ಎಲ್ಲರನ್ನೂ ಉಬ್ಬೇರಿಸುವಂತೆ ಮಾಡಿದ ನಿಷ್ಠಾವಂತ ಧುರೀಣರು. ತಮ್ಮ ಜೀವನದ ಒಂಭತ್ತು ದಶಕಗಳ ಬಹುರಂಗಿತ ಬದುಕಿನಲ್ಲಿ ತಾವು ಕಂಡ ಏರುಪೇರುಗಳು ಅದೆಷ್ಟೇ ಆಗಿದ್ದರೂ ಇಂದಿಗೂ ಸಮಾಜ ಸೇವೆಯಲ್ಲಿ ಉತ್ಸುಕರಾಗಿದ್ದಾರೆ. ಆಹಾರ್‌ ಸಂಸ್ಥೆಯ ಎರಡು ಕಾಲಾವಧಿಗೆ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದರಲ್ಲದೆ ಹೊಟೇಲು ಉದ್ಯಮಿಗಳ ಒಕ್ಕೂಟವನ್ನು ಕೇವಲ ಮುಂಬಯಿಯಲ್ಲೇ ಕಾರ್ಯಗತಗೊಳಿಸದೆ ಇಡೀ ಮಹಾರಾಷ್ಟ್ರ ರಾಜ್ಯದಲ್ಲಿ ವ್ಯಾಪಿಸುವ ನಿಟ್ಟಿನಲ್ಲಿ ಫೆಡರೇಶನ್‌ ಆಫ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್ಸ್‌ ಮಹಾರಾಷ್ಟ್ರ ಇದರ ಸಂಸ್ಥಾಪಕ ಅಧ್ಯಕ್ಷರಾಗಿ, ಬಂಟ್ಸ್‌ ನ್ಯಾಯ ಮಂಡಳಿ ಅಧ್ಯಕ್ಷರಾಗಿ ದುಡಿದ ಧುರೀಣ.

ಬಂಟ ನ್ಯಾಯ ಮಂಡಳಿಗೆ ಇಂದಿಗೂ ಮಾರ್ಗದರ್ಶನ, ನಿರ್ದೇಶನ ನೀಡುತ್ತಾ ಕೌಟುಂಬಿಕ ಕಲಹಗಳು, ವಿಚ್ಛೇದನ, ಉದ್ಯಮ ಸಮಸ್ಯೆ, ಇನ್ನಿತರ ತಕರಾರುಗಳನ್ನು ಬಗೆಹರಿಸಿ ಸಾಮರಸ್ಯದ ಬಾಳಿಗೆ ಪ್ರೇರಕ ಶಕ್ತಿಯಾಗಿರುವ ಅವರು ತಮ್ಮ ಅನಾರೋಗ್ಯದ ಸಂದರ್ಭವನ್ನು ಮರೆತು ತಮ್ಮವರೆಣಿಸಿದವರಿಗೆ ಸದಾ ಫೋನಾಯಿಸಿ ಯೋಗಕ್ಷೇಮ ವಿಚಾರಿಸುವ ಅವರ ಜ್ಞಾಪಕಶಕ್ತಿ ಅತ್ಯಾದ್ಭುತವಾದುದು. ತನ್ನ ಬದುಕಿನ ಶಿಸ್ತು, ನೀತಿ, ನಿಯಮ, ಸಂಸ್ಕೃತಿ, ಸಂಸ್ಕಾರ, ಧರ್ಮಗಳನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾ ಸಾಮಾಜಿಕ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿ ಸುಧಾರಿಸಲು ಸಮುದಾಯ ಸಂಘಟನೆಗಳೊಂದಿಗೆ ತನ್ನನ್ನು ತೊಡಗಿಸಿಕೊಳ್ಳುತ್ತಿರುವುದು ಇದರರಿಗೆ ಮಾದರಿಯಾಗಿದೆ. ದಕ್ಷ ನಡೆಯ ಸಾಧನೆಯನ್ನೇ ಜೀವನವಾಗಿಸಿ, ಪ್ರಾಮಾಣಿಕತೆಯನ್ನೇ ಮೇಲ್ಪಂಕ್ತಿಯಾಗಿರಿಸಿ, ಸಂಘಟನಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿ, ಸೇವೆಯನ್ನೇ ಪ್ರವೃತ್ತಿಯಾಗಿರಿಸಿ ಪ್ರಾಮಾಣಿಕ ಸೇವೆಯೊಂದಿಗೆ ಲಕ್ಷಾಂತರ ಜನತೆಯ ಹೃನ್ಮನಗಳಲ್ಲಿ ನೆಲೆಯಾಗಿರುವ ಎಂ. ಡಿ. ಶೆಟ್ಟಿ ಅವರ ಬದುಕು ಇತರರಿಗೆ ದಾರಿದೀಪವಾಗಿದೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವಾರು ಗಣ್ಯರು ಅವರನ್ನು ಭೇಟಿಯಾಗಿ ಅಭಿನಂದಿಸಿ ಶುಭಹಾರೈಸಿದ್ದಾರೆ.

Advertisement

ಕಾಪು ಸನಿಹದ ಮುಳೂರು ಇಲ್ಲಿನ ಪ್ರತಿಷ್ಠಿತ ಮನೆತನದಲ್ಲಿ ದಂಪತಿ ಸುಪುತ್ರನಾಗಿ 1928ರ ಜೂ. 14 ರಂದು ಜನಿಸಿದ ಎಂ. ಡಿ. ಶೆಟ್ಟಿ ಅವರು ಹದಿನೈದರ ವಯಸ್ಸಿನಲ್ಲಿ ಮುಂಬಯಿಗೆ ವಲಸೆ ಬಂದು ಪ್ರಸ್ತುತ ಉದ್ಯಮಿಯಾಗಿ, ಸಮಾಜ ಸೇವಕರಾಗಿ, ಅಪ್ರತಿಮ ಸಾಧಕರಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರಿಗೂ ಅಕ್ಕರೆಯ “ಎಂಡಿ’ ಆಗಿಯೇ ಪರಿಚಿತರಾಗಿರುವ ಇವರು, ಹೊಟೇಲ್‌ ಉದ್ಯಮ ನಂಬಿ ಬದುಕಿರುವ ಕಾರ್ಮಿಕ ಬಂಧುಗಳಿಗೆ, ಮಾಲಿಕರಿಗೆ, ನಂಬಿಗಸ್ಥರಿಗೆ ಪ್ರೇರಣೆಯಾದವರು. ಪ್ರಾಮಾಣಿಕ‌ರನ್ನು ಆದರದಿಂದ ಸ್ವಾಗತಿಸುವ ಸಹೃದಯಿ. ಬಂಟತನದಲ್ಲಿ ಅತೀವ ಪ್ರೇಮ ಇರಿಸಿದ್ದರೂ ಜಾತಿಮತ ಬೇಧಗಳಿಂದ ದೂರವಿದ್ದು ಮಾನವೀಯತೆಯ ಅಮೂಲ್ಯ ಭಾಗವಾಗಿ ಬೆಳೆದವರು. ಆದ್ದರಿಂಲೇ ತುಳುಕನ್ನಡಿಗ, ಮರಾಠಿಗರ ಸಾರ್ವಭೌಮರಾಗಿ ಇಂದು ಎಲ್ಲರಿಗೂ ಚಿರಪರಿಚಿತರು.

Advertisement

Udayavani is now on Telegram. Click here to join our channel and stay updated with the latest news.

Next