Advertisement

ಬೆಂಗಳೂರಿಗೆ ಬಂಪರ್‌

10:01 AM Feb 03, 2020 | Lakshmi GovindaRaj |

ಬೆಂಗಳೂರು: ಸಂಚಾರ ದಟ್ಟನೆಯಿಂದ ಕಂಗೆಟ್ಟಿರುವ ಉದ್ಯಾನ ನಗರಿಗೆ ನಿರ್ಮಲಾ ಸೀತಾರಾಮನ್‌ “ಸುಗಮ ಹಾದಿ’ ತೋರಿಸಿದ್ದಾರೆ. ಬೆಂಗಳೂರು ಸಬ್‌ ಅರ್ಬನ್‌ಗೆ ವಿಶೇಷ ಒತ್ತು ನೀಡಿದ್ದಲ್ಲದೇ, ಚೆನ್ನೈ-ಬೆಂಗಳೂರಿಗೆ ಎಕ್ಸ್‌ಪ್ರೆಸ್‌ ವೇ ಘೋಷಿಸಿದ್ದಾರೆ.

Advertisement

ಬೆಂಗಳೂರು ಜನರ ಬಹು ದಿನಗಳ ಬೇಡಿಕೆಯಾಗಿದ್ದ “ಮೆಟ್ರೋ ಮಾದರಿ’ಯ ಸಬ್‌ ಅರ್ಬನ್‌ ರೈಲು ಯೋಜನೆಗೆ ಆಸಕ್ತಿ ತೋರಿದ್ದು, 18,600 ಕೋಟಿ ರೂ.ಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಪೈಕಿ ಶೇ.20ರಷ್ಟು ನುದಾನವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಇನ್ನುಳಿದ ಶೇ.60ರಷ್ಟು ಹಣವನ್ನು “ಅನ್ಯ’ರ ನೆರವು ಒದಗಿಸುವ ಹೊಣೆಯನ್ನು ವಿತ್ತ ಸಚಿವೆ ಹೊತ್ತಿದ್ದಾರೆ.

ಈ ಯೋಜನೆ ಅನುಷ್ಠಾನದಿಂದ ಬೆಂಗಳೂರು ಹಾಗೂ ಸುತ್ತಲಿನ ನಗರಗಳ ಜನತೆಗೆ ಅನುಕೂಲವಾಗಲಿದೆ. ಜತೆಗೆ ಬಹು ಚರ್ಚಿತ ಬೆಂಗಳೂರು-ಚೆನ್ನೈ ನಡುವೆ ಎಕ್ಸ್‌ಪ್ರೆಸ್‌ ವೇ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರಿನ ಹೊಸಕೋಟೆಯಿಂದ ಚೆನ್ನೈನ ರಿಂಗ್‌ ರೋಡ್‌ಗೆ ಸಂಪರ್ಕ ಕಲ್ಪಿಸುವ 262 ಕಿಮೀ ದೂರದ ಈ ಯೋಜನೆ ನುಷ್ಠಾನಗೊಂಡರೆ ಉಭಯ ನಗರಗಳ ಸಂಚರ ಅವಧಿ ನಾಲ್ಕು ಗಂಟೆ ತಗ್ಗಲಿದೆ.

18 ಸಾವಿರ ಕೋಟಿ ಮೊತ್ತದ ಈ ಯೋಜನೆಗೆ 2600 ಹೆಕ್ಟೆರ್‌ ಭೂ ಸ್ವಾಧೀನವಾಗಲಿದ್ದು, ಕರ್ನಾಟಕದಲ್ಲೇ 800 ಹೆಕ್ಟೆರ್‌ ಭೂಸ್ವಾಧೀನವಾಗಲಿದೆ. ಈ ಪೈಕಿ ಸುಮಾರು 76 ಕಿಮೀ ಹಸಿರು ಪರಿಸರ ವಲಯವಿದ್ದು, ಕಳೆದ 9 ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದತ್ತು. ಸಿಲಿಕಾನ್‌ ಸಿಟಿಗೆ ಚೆನ್ನೈನಿಂದ ಆಗಮಿಸುವ ಹಾಗೂ ಬೆಂಗಳೂರಿನಿಂದ ಚೆನ್ನೈಗೆ ತೆರಳುವ ಪ್ರಯಾಣಿಕರು, ವ್ಯಾಪಾರ ವಹಿವಾಟಿಗೆ ಇದು ವರದಾನವಾಗಲಿದೆ.

ದೆಹಲಿ-ಮುಂಬೈ ಹಾದಿ 2023ಕ್ಕೆ ಪೂರ್ಣ: ಬಹು ನಿರೀಕ್ಷಿತ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ಇನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ದೇಶದ ಅತಿ ದೊಡ್ಡ ಎಕ್ಸ್‌ಪ್ರೆಸ್‌ ವೇ ಇದಾಗಿದ್ದು, ಈ ಯೋಜನೆ ಪೂರ್ಣಗೊಂಡರೆ ದೇಶದ ರಾಜಧಾನಿಯಿಂದ ವಾಣಿಜ್ಯ ನಗರಿಗೆ ಕೇವಲ 12 ಗಂಟೆಯಲ್ಲಿ ಸಂಪರ್ಕ ಕಲ್ಪಿಸಬಹುದು. ಗುಜರಾತ್‌, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ ರಾಜ್ಯಗಳಿಗೆ ಇದು ಅನುಕೂಲವಾಗಲಿದ್ದು, 2023ಕ್ಕೆ ಯೋಜನೆ ಪೂರ್ಣಗೊಳಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಉಲ್ಲೇಖೀಸಿದ್ದಾರೆ.

Advertisement

ಹಳಿ ಬಳಿ ಸೋಲಾರ್‌ ಘಟಕ: ಸೋಲಾರ್‌ ವಿದ್ಯುತ್‌ಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ರೈಲು ಹಳಿಗಳ ಬಳಿ ಸೋಲಾರ ಘಟಕ ಸ್ಥಾಪಿಸಲು ನಿರ್ಧರಿಸಿದೆ. ರೈಲ್ವೆ ಇಲಾಖೆಯ ಜಾಗದಲ್ಲೇ ಹಳಿಯ ಬಳಿ ಈ ಘಟಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ರೈಲು ವಿದ್ಯುದ್ದೀಕರಣ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳಿಗೆ ಇದನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ.

ಪ್ರವಾಸೋದ್ಯಮಕ್ಕೆ ತೇಜಸ್‌ ಸ್ಪರ್ಷ: “ಹಳಿಗಳ ಮೇಲೆ ಪ್ರವಾಸೋದ್ಯಮ’ ಅಭಿವೃದ್ಧಿಯತ್ತ ಕಣ್ಣು ಹಾಯಿಸಿರುವ ಕೇಂದ್ರ ಸರ್ಕಾರ, ವಿವಿಧ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲು “ಸುಸಜ್ಜಿತ ತೇಜಸ್‌’ ರೈಲು ಮೊರೆ ಹೋಗಿದೆ. ಅಲ್ಲದೇ ತೇಜಸ್‌ ಸೂಪರ್‌ ಫಾಸ್ಟ್‌ ರೈಲು ಸೇವೆಯನ್ನು ಮಿತಿಯನ್ನು ಸಡಿಲಿಸಿ, ಎಲ್ಲ ರಾಜ್ಯಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದ್ದು, ಇದರಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲ ಕಲ್ಪಿಸಲಾಗಿದೆ.

150 ರೈಲುಗಳಿಗೆ ಖಾಸಗಿ ಸಹಭಾಗಿತ್ವ: ರೈಲು ಸೇವೆಯಲ್ಲಿ ಪರಿಣಾಮಕಾರಿ ಬದಲಾವಣೆಗೆ ಖಾಸಗಿ ಸಹಭಾಗಿತ್ವದ ಅಸ್ತ್ರ ಪ್ರಯೋಗಿಸಿರುವ ರೈಲ್ವೆ ಇಲಾಖೆ, 150ಕ್ಕೂ ರೈಲುಗಳನ್ನು ಪಿಪಿಪಿ ಮಾದರಿಯಲ್ಲಿ ಓಡಿಸಲು ನಿರ್ಧರಿಸಿದೆ. ಅಲ್ಲದೇ ನಾಲ್ಕು ನಿಲ್ದಾಣಗಳನ್ನು ಸಹ ಖಾಸಗಿ ಸಹಭಾಗಿತ್ವದಲ್ಲಿ ಪುನರ್‌ ಅಭಿವೃದ್ಧಿ ಮಾಡಲು ಸಜ್ಜಾಗಿದೆ.

ಮುಂಬೈ-ಅಹ್ಮದಾಬಾದ್‌ ರೈಲು ಇನ್ನೂ ಸ್ಪೀಡ್‌!: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಬಂದ ಬಳಿಕ ಕುಂಟುತ್ತಾ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಕನಸಿನ ಮುಂಬೈ-ಅಹ್ಮದಾಬಾದ್‌ ಹೈಸ್ಪೀಡ್‌ ರೈಲು ಯೋಜನೆಗೆ ನಿರ್ಮಲಾ ಸೀತಾರಾಮನ್‌ ಮತ್ತಷ್ಟು ಒತ್ತು ನೀಡಿದ್ದಾರೆ. 1.10 ಲಕ್ಷ ಕೋಟಿ ಬೃಹತ್‌ ಮೊತ್ತದ ಈ ಯೋಜನೆಗೆ ಜಪಾನ್‌ ತಾಂತ್ರಿಕ ಹಾಗೂ ಆರ್ಥಿಕ ಸಾಥ್‌ ನೀಡಿದೆ.

2017ರಲ್ಲೇ ಯೋಜನೆ ಆರಂಭವಾಗಿದ್ದರೂ ಇನ್ನೂ ಮೂರ್ತರೂಪ ಬಂದಿಲ್ಲ. 508 ಕಿಮೀ ಅಂತರದ ಸಂಪರ್ಕ ಕಲ್ಪಿಸುವ ರೈಲು ಪ್ರತಿ ಗಂಟೆಗೆ 350 ಕಿಮೀ ಸಂಚರಿಸಲಿದೆ. ಈ ಯೋಜನೆ ಪೂರ್ಣಗೊಂಡರೆ ಕೇವಲ 2 ಗಂಟೆಯಲ್ಲಿ ಉಭಯ ನಗರಗಳ ಸಂಪರ್ಕ ಕಲ್ಪಿಸಲಿದೆ. 2023ಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ.

ಮೂಲ ಸೌಕರ್ಯಕ್ಕೆ ಏನು?: ಮೂಲ ಸೌಕರ್ಯ ವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ವೆಚ್ಚ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶೀಘ್ರವೇ ರಾಷ್ಟ್ರೀಯ ಲಾಜಿಸ್ಟಿಕ್‌ ಪಾಲಿಸಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದ್ದು, ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿರಲಿದೆ. ಏಕಗವಾಕ್ಷಿ ಇ-ಲಾಜಿಸ್ಟಿಕ್‌ ಮಾರ್ಕೆಟ್‌ ಸೃಜಿಸಲು ಉದ್ದೇಶಿಸಲಾಗಿದೆ.

ಕೌಶಲ್ಯಾಭಿವೃದ್ಧಿ ಅವಕಾಶಗಳ ಬಗ್ಗೆ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ ವಿಶೇಷ ಒತ್ತು ನೀಡಲಿದೆ. ಯುವ ಎಂಜಿನಿಯರ್‌, ಮ್ಯಾನೇಜ್‌ಮೆಂಟ್‌ ಪದವೀಧರರು ಹಾಗೂ ರ್ಥಶಾಸ್ತ್ರಜ್ಞರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಸರ್ಕಾದರ ಮೂಲಸೌಕರ್ಯ ವೃದ್ಧಿ ಸಂಸ್ಥೆಗಳು ಸ್ಟಾರ್ಟ್‌ಅಪ್‌ಗ್ಳ ಮೂಲಕ ಯುವ ಜನತೆಯನ್ನು ಬಳಸಿಕೊಳ್ಳು ಯೋಜನೆ ರೂಪಿಸಲಾಗಿದೆ. ಸಾರಿಗೆ ಸೌಕರ್ಯಕ್ಕೆ 1.7 ಲಕ್ಷ ಕೋಟಿ ಖರ್ಚು ಮಾಡಲು ಯೋಜಿಸಲಾಗಿದೆ.

ರೈಲ್ವೆ ಬಂಡವಾಳ ವೆಚ್ಚಕ್ಕೆಷ್ಟು?: ರೈಲ್ವೆ ಇಲಾಖೆಗೆ ನಿರ್ಮಲಾ ಸೀತಾರಾಮನ್‌ ವಿಶೇಷ ಪ್ರೀತಿ ತೋರಿದ್ದಾರೆ. ಬಜೆಟ್‌ನಲ್ಲಿ 70 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದರೆ, 1.61 ಲಕ್ಷ ಕೋಟಿ ಬಂಡವಾಳ ವೆಚ್ಚಕ್ಕೆ ತೆಗೆದಿರಿಸಿದ್ದಾರೆ. ಕಳೆದ ಸಾಲಿಗಿಂತ ಶೇ.3ರಷ್ಟು ಹೆಚ್ಚುವರಿ ಅನುದಾನ ನೀಡಿದ್ದಾರೆ. ಈ ಪೈಕಿ ಹೊಸ ಹಳಿ ನಿರ್ಮಾಣಕ್ಕೆ 12 ಸಾವಿರ ಕೋಟಿ, ಗೇಜ್‌ ಪರಿವರ್ತನೆಗೆ 2250 ಕೋಟಿ, ಹಳಿ ಡಬ್ಲಿಂಗ್‌ಗೆ 700 ಕೋಟಿ, ಸಿಗ್ನಲ್‌ ನಿರ್ವಹಣೆ ಹಾಗೂ ಮೇಲ್ದರ್ಜೆಗೆರಿಸಲು 1650 ಕೋಟಿ,

ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲು 2725 ಕೋಟಿ ಮೀಸಲರಿಸಲಾಗಿದೆ. ಪ್ರಯಾಣಿಕರ ಸಂಚಾರದಿಂದ 61 ಸಾವಿರ ಕೋಟಿ, ಸರಕು ಸಾಗಣೆಯಿಂದ 1.47 ಲಕ್ಷ ಕೋಟಿ ಹಾಗೂ ಆರ್‌ಆರ್‌ಬಿಯಿಂದ ಶೇ.9.5ರಷ್ಟು ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಅಲ್ಲದೇ ರೈಲ್ವೆ ಸಿಬ್ಬಂದಿ ಸಂಬಳ ಹಾಗೂ ಇತರೆ ಸೌಕರ್ಯಕ್ಕೆ 92,993 ಕೋಟಿ ಮೀಸಲಿರಿಸಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಇದರಲ್ಲಿ 6000 ಕೋಟಿ ಹೆಚ್ಚಳವಾಗಿದೆ.

550 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ: ರೈಲು ನಿಲ್ದಾಣಗಳಲ್ಲಿ “ಉಚಿತ ವೈಫೈ’ ಸೇವೆ ಇನ್ನಷ್ಟು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದ್ದು, ದೇಶದ ವಿವಿಧೆಡೆಯ 550 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡಲು ನಿರ್ಧರಿಸಿದೆ.

11 ಸಾವಿರ ಹಳಿಗಳ ವಿದ್ಯುದೀಕರಣ: ಹಳಿಗಳ ವಿದ್ಯುದೀಕರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ 27 ಸಾವಿರ ಕಿಮೀ ಹಳಿಗಳ ವಿದ್ಯುದೀಕರಣಗೊಳಿಸಲು ನಿರ್ಧರಿಸಿದೆ.

ನವೀಕರಿಸಬಹುದಾದ ಇಂಧನ “ಪವರ್‌’ ಫ‌ುಲ್‌: ವಿದ್ಯುತ್‌ ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಬಲ ನೀಡಲು 23 ಸಾವಿರ ಕೋಟಿ ರೂ. ನೀಡಲಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ಛಕ್ತಿ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಆದ್ಯತೆ ನೀಡಲಾಗಿದೆ.

ತಕ್ಷಣಕ್ಕೆ ಬಜೆಟ್‌ ನೋಡಿದರೆ ತೃಪ್ತಿದಾಯಕ ಎನಿಸುತ್ತದೆ. ಆದರೂ ಆರ್ಥಿಕತೆ ಎತ್ತುವಲ್ಲಿ ಯಾವುದೇ ಪ್ರಬಲ, ಆಶಾದಾಯಕ ಯೋಜನೆಗಳು ಇಲ್ಲದೇ ಇರುವುದು ನಿರಾಶೆ ಮೂಡಿಸಿದೆ. ಡಿಡಿಟಿಯಲ್ಲಿ ವಿನಾಯಿತಿಗಳನ್ನು ರದ್ದುಪಡಿಸುವುದು ತೆರಿಗೆದಾರರಿಗೆ ಕೊಟ್ಟ ದೊಡ್ಡ ಹೊಡೆತ ಮತ್ತು ಅವರ ಗ್ರಾಹಕರ ಕೊಳ್ಳುವ ಶಕ್ತಿಯನ್ನು ಕುಂದಿಸುತ್ತದೆ.
-ಕಿರಣ್‌ ಮಜುಂದಾರ್‌ ಶಾ, ಉದ್ಯಮಿ

ಎಂಎಸ್‌ಎಂಇಗಳಿಗೆ ಉತ್ತೇಜನೆ ನೀಡುವ ಉದ್ದೇಶದಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಇನ್‌ ವಾಯ್ಸ ಫೈನಾನ್ಸಿಂಗ್‌, ರಫ್ತು ಉತ್ತೇಜನಕ್ಕಾಗಿ ವಿಮಾ ರಕ್ಷಣೆ, ರಫ್ತು ಉತ್ಪನ್ನಗಳ ಮೇಲಿನ ತೆರಿಗೆ ಹಾಗೂ ಎಲೆಕ್ಟ್ರಾನಿಕ್‌ ಉಪಕರಣ ಉತ್ಪಾದನೆ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಬಜೆಟ್‌ ಅನ್ನು ಕಾಸಿಯಾ ಸ್ವಾಗತಿಸುತ್ತದೆ.
-ಆರ್‌.ರಾಜು, ಕಾಸಿಯಾ ಅಧ್ಯಕ್ಷ

ಆರ್ಥಿಕ ಮತ್ತು ಸಾಮಾಜಿಕ ವಲಯದ ದೃಷ್ಟಿಯಲ್ಲಿ ಇದು ಅತ್ಯಂತ ಪ್ರಮುಖ ಬಜೆಟ್‌. ನೀರಿನ ಅಭಾವ ಇರುವ 100 ಜಿಲ್ಲೆಗಳಿಗೆ ಪರ್ಯಾಯ ಕ್ರಮ, ಸೋಲಾರ್‌ ಪಂಪ್‌ ಯೋಜನೆಗಳಂಥ ಯೋಜನೆಗಳಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಈ ಬಜೆಟ್‌ ಕುರಿತು ತೃಪ್ತಿ ಇದೆ.
-ಜೆಡಿಯು

ಸರ್ಕಾರದ ಬಳಿ ಅತ್ಯಂತ ಕಡಿಮೆ ಸಂಪನ್ಮೂಲಗಳಿವೆ. ಬಂಡವಾಳ ಹೂಡಿಕೆದಾರರು ಆರ್ಥಿಕ ಹಿಂಜರಿತ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಂಡವಾಳ ಹೂಡಿಕೆ ಹೇಗೆ ಸಾಧ್ಯ ಎಂಬುದು ಊಹಿಸಲೂ ಅಸಾಧ್ಯ.
-ಸಚಿನ್‌ ಪೈಲಟ್‌, ರಾಜಸ್ಥಾನ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next